ಕರ್ನಾಟಕ ಸಿಎಂ ರೇಸಿನಲ್ಲಿರುವ ಕಪ್ಪು ಕುದುರೆ ಯಾರು?
ಬೆಂಗಳೂರು, ಜು. 26: ಕಣ್ಣೀರಿನ ಭಾವುಕ ಪದಗಳೊಂದಿಗೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ನೂತನ ಸಿಎಂ ಆಗುವ ವರೆಗೂ ಹಂಗಾಮಿ ಸಿಎಂ ಆಗಿ ಮುಂದುವರೆಯಲಿದ್ದಾರೆ. ಯಡಿಯೂರಪ್ಪ ಅವರ ವಿರೋಧ ಕಟ್ಟಿಕೊಳ್ಳದೇ, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬಲ್ಲ ಸಮರ್ಥ ನಾಯಕನ ಶೋಧದಲ್ಲಿ ತೊಡಗಿರುವ ಕೇಂದ್ರ ನಾಯಕರು ಯಾರನ್ನು ಆಯ್ಕೆ ಮಾಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಈವರೆಗೂ ಮುನ್ನೆಲೆಗೆ ಬರದ ನಾಯಕನನ್ನು ಸಿಎಂ ಮಾಡಿ ರಾಜಕೀಯ ಲೆಕ್ಕಾಚಾರಗಳನ್ನು ಉಲ್ಟಾ ಮಾಡಲು ವರಿಷ್ಠರು ಮುಂದಾಗಿದ್ದಾರೆ. ಕರ್ನಾಟಕ ಸಿಎಂ ವಿಚಾರದಲ್ಲಿ ಕೇಂದ್ರ ವರಿಷ್ಠರ ಅಸಲಿ ಲೆಕ್ಕಾಚಾರ ಏನು ?
ಅನಿರೀಕ್ಷಿತ ತೀರ್ಮಾನ ಏನಿರುತ್ತ?: ಚುನಾವಣೆ ಇರಲೀ, ಸರ್ಕಾರ ರಚನೆ ಇರಲಿ ಅನಿರೀಕ್ಷಿತ ನಿರ್ಧಾರ ಕೈಗೊಂಡು ಪರಿಸ್ಥಿತಿಯನ್ನು ತಹಬಂದಿಗೆ ತೆಗೆದುಕೊಳ್ಳುವಲ್ಲಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರದ್ದು ಎತ್ತಿದ ಕೈ. ಇಂತಹ ನಿರ್ಧಾರ ರಾಜ್ಯದ ವಿಚಾರದಲ್ಲಿ ತೆಗೆದುಕೊಂಡರೂ ಅಚ್ಚರಿ ಪಡಬೇಕಿಲ್ಲ. ಕೇಂದ್ರ ಸಚಿವೆಯಾಗಿ ಇತ್ತೀಚೆಗೆ ಪ್ರಮಾಣ ವಚನ ಸ್ವೀಕರಿಸಿದ ಶೋಭಾ ಕರಂದ್ಲಾಜೆಯನ್ನು ಸಿಎಂ ಅಭ್ಯರ್ಥಿ ಎಂದು ಕೇಂದ್ರ ವರಿಷ್ಠರು ಸೂಚಿಸಿದರೂ ಅಚ್ಚರಿ ಪಡಬೇಕಿಲ್ಲ.
ವರಿಷ್ಠರ ಆಲೋಚನೆ ಸಮೀಪ ಯಾರು?
ರಾಜ್ಯದಲ್ಲಿ ಈ ಹಿಂದೆ ಯಡಿಯೂರಪ್ಪ ಪಕ್ಷ ತ್ಯಜಿಸಿದಾಗ ಎದುರಾದ ಪರಿಸ್ಥಿತಿ ಪುನಃ ಮರುಕಳಿಸಬಾರದು. ರಾಜ್ಯದಿಂದ ಬಿಜೆಪಿ ಪಕ್ಷದಿಂದ 25 ಲೋಕಸಭಾ ಸದಸ್ಯರು ಆಯ್ಕೆಯಾಗಿದ್ದಾರೆ. ಸದ್ಯ ಕರ್ನಾಟಕದಲ್ಲಿ ಬಿಜೆಪಿ ಆಡಳಿತ ಬಗ್ಗೆ ಎದ್ದಿರುವ ಬೇಸರ, ಅಸಮಧಾನವನ್ನು ತೊಡೆದು ಹಾಕಬೇಕು. ಯಡಿಯೂರಪ್ಪ ಅವರು ಅಪಸ್ವರ ಏಳದಂತೆ ಪರಿಸ್ಥಿತಿಯನ್ನು ನಿಬಾಯಿಸಬೇಕು. ಇದರ ಜತೆಗೆ ವೈಯಕ್ತಿಕವಾಗಿ ಯಾವುದೇ ಭ್ರಷ್ಟಾಚಾರದ ಆರೋಪ ಇರಬಾರದು. ಇಂಥ ಅರ್ಹತೆಯುಳ್ಳ ನಾಯಕನ ಹುಡುಕಾಟದಲ್ಲಿ ತೊಡಗಿದ್ದಾರೆ. ಬಹುಶಃ ಈಗಾಗಲೇ ಹೆಸರು ಅಂತಿಮಗೊಳಿಸಿದ ಬಳಿಕವೇ ಯಡಿಯೂರಪ್ಪ ಅವರ ರಾಜೀನಾಮೆಗೆ ಸೂಚನೆ ನೀಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಕೇಂದ್ರ ವರಿಷ್ಠರು ಸೂಚಿಸುವ ಸಿಎಂ ಆಗುವ ಕಪ್ಪು ಕುದುರೆ ಯಾರು ಎಂಬುದು ಮಾತ್ರ ಕುತೂಹಲ ಕೆರಳಿಸಿದೆ. ಕೇಂದ್ರ ವರಿಷ್ಠರ ಅನಿರೀಕ್ಷಿತ ಲೆಕ್ಕಾಚಾರ ನೋಡುತ್ತಿದ್ದರೆ ಮುನ್ನೆಲೆಗೆ ಬಂದಿರುವ ಎಲ್ಲಾ ಹೆಸರು ಬದಿಗೆ ಸರಿಸಿ ಹೊಸಬರನ್ನು ನೇಮಿಸಿ ಅಚ್ಚರಿ ಮೂಡಿಸಿದರೂ ವಿಶೇಷವೇನಲ್ಲ.
ಜೋಶಿಗೆ ಸಿಎಂ ಹುದ್ದೆ ಇಷ್ಟವಿಲ್ಲ
ಬಿಜೆಪಿ ಪಕ್ಷದ ಮೂಲಗಳ ಪ್ರಕಾರ ರಾಜ್ಯದಲ್ಲಿ ಈ ಪರಿಸ್ಥಿತಿಯಲ್ಲಿ ಸಿಎಂ ಆಗಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇಷ್ಟವಿಲ್ಲ ಎಂದೇ ಹೇಳಲಾಗುತ್ತಿದೆ. ಲಿಂಗಾಯತ ಸಮುದಾಯವನ್ನು ವಿರೋಧ ಕಟ್ಟಿಕೊಂಡು ಸಿಎಂ ಸ್ಥಾನ ಅಲಂಕರಿಸಿದರೆ, ಮುಂದಿನ ಚುನಾವಣೆಯಲ್ಲಿ ಪಕ್ಷ ಸೋಲಬಹುದು. ಅದರ ನೈತಿಕ ಹೊಣೆ ಹೊರಬೇಕು. ಲಿಂಗಾಯತ ಸಮುದಾಯವನ್ನು ಎದುರು ಹಾಕಿಕೊಂಡರೆ ತನ್ನ ಗೆಲವೇ ಕಷ್ಟವಾಗಬಹುದು. ಹೀಗಾಗಿ ನಿಷ್ಕಳಂಕ ವ್ಯಕ್ತಿತ್ವದಿಂದ ರಾಜಕಾರಣಕ್ಕೆ ಸೀಮಿತವಾಗಬೇಕು ಎನ್ನುವ ಲೆಕ್ಕಾಚಾರ ಜೋಶಿ ಅವರದ್ದು. ಹೀಗಾಗಿ ಸಿಎಂ ಹುದ್ದೆಗೆ ಉತ್ಸುಕತೆ ತೋರಿಸುತ್ತಿಲ್ಲ. ನಾನು ಸಿಎಂ ರೇಸ್ ನಲ್ಲಿಲ್ಲ ಎಂದೇ ಹೇಳಿಕೆ ನೀಡುತ್ತಿರವುದು ಇಲ್ಲಿ ಗಮನಾರ್ಹ.
ಹೊಸ ನಾಯಕರ ಹೆಸರು
ಯಡಿಯೂರಪ್ಪ ರಾಜೀನಾಮೆ ನೀಡಿದರೂ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿಲ್ಲ. ಇದರ ನಡುವೆ ಅರವಿಂದ ಬೆಲ್ಲದ್, ಬಸವರಾಜ ಬೊಮ್ಮಾಯಿ, ಸಿ.ಎಂ. ಉದಾಸಿ, ಸಂತೋಷ್, ಸಿ.ಟಿ. ರವಿ, ಅಶ್ವತ್ಥ್ ನಾರಾಯಣ ಅನೇಕರ ಹೆಸರು ಚರ್ಚೆ ಆಗುತ್ತಿದೆ. ಈ ಎಲ್ಲಾ ಹೆಸರುಗಳನ್ನು ಬದಿಗೆ ಸರಿಸಿ ಹೊಸ ಹೆಸರನ್ನು ಸೂಚಿಸಿದರೂ ಅಚ್ಚರಿ ಪಡಬೇಕಿಲ್ಲ. ಆದರೆ, ಮುಂದಿನ ಎರಡು ವರ್ಷ ಸಮರ್ಥ ಆಡಳಿತ ನೀಡುವ ಜತೆಗೆ ಆಂತರಿಕ ಭಿನ್ನಮತವನ್ನು ಶಮನ ಮಾಡಬೇಕು. ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ನಾಯಕರು ತೆಗೆದುಕೊಳ್ಳುವ ತೀರ್ಮಾನ ಅಚ್ಚರಿಗೆ ಕಾರಣವಾಗಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಯಾಗುತ್ತಿರುವ ವಿಚಾರ.
ದೊಡ್ಡ ಸವಾಲುಗಳ ಸರಣಿ
ರಾಜ್ಯದಲ್ಲಿ ಸಿಎಂ ಕುರ್ಚಿ ಮಾತ್ರ ಬದಲಾಗಲ್ಲ. ಸಮರ್ಥ ಆಡಳಿತ ನೀಡದ ಆರೋಪಕ್ಕೆ ಗುರಿಯಾಗಿರುವ ಸಚಿವ ಆರ್. ಅಶೋಕ್, ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಸೇರಿದಂತೆ ಅನೇಕರಿಗೆ ಕೊಕ್ ಕೊಡಲಾಗುತ್ತದೆ. ಕೇವಲ ಯಡಿಯೂರಪ್ಪ ಮಾತ್ರವಲ್ಲ, ಅಧಿಕಾರ ಕಳೆದುಕೊಳ್ಳಲಿರುವ ಸಚಿವರ ಭಿನ್ನಮತವೂ ಸ್ಫೋಟಿಸಲಿದೆ. ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಭಯ, ಅತಿವೃಷ್ಠಿ ಜತೆಗೆ ದಕ್ಷ ಆಡಳಿತ ನೀಡಬೇಕು. ಈ ಎಲ್ಲಾ ಅರ್ಹತೆಗಳು ಇರುವ ನಾಯಕ ಯಾರು ಎಂಬುದು ಬಿಜೆಪಿ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆದರೆ, ಇದರಲ್ಲಿ ಕೇಂದ್ರ ಬಿಜೆಪಿ ವರಿಷ್ಠರು ಎಡವಿದರೆ ಪಕ್ಷಕ್ಕೆ ಆಗುವ ಹಾನಿ ಯಾರೂ ಸರಿಪಡಿಸಲಾರರು. ಹೀಗಾಗಿ ಬಿಜೆಪಿ ವರಿಷ್ಠರು ಸಿಎಂ ಆಯ್ಕೆ ವಿಚಾರದಲ್ಲಿ ಇಡುತ್ತಿರುವ ಹೆಜ್ಜೆ ಮರ್ಮ ಯಾರಿಗೂ ಗೊತ್ತಾಗುತ್ತಿಲ್ಲ.
ಯಡಿಯೂರಪ್ಪ ಕಾದು ನೋಡುವ ತಂತ್ರ
ಮುಖ್ಯಮಂತ್ರಿ ಹುದ್ದೆಗೆ ಯಡಿಯೂರಪ್ಪ ಯಾರ ಹೆಸರನ್ನು ಪ್ರಸ್ತಾಪಿಸಿಲ್ಲ. ಈ ಹಿಂದೆ ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಆಗಿ ಸೂಚಿಸಿ ಬೆನ್ನಿಗೆ ಚೂರಿ ಹಾಕಿಸಿಕೊಂಡ ಯಡಿಯೂರಪ್ಪ ಈ ಸಲ ಮೌನಕ್ಕೆ ಶರಣಾಗಿದ್ದಾರೆ. ಕೇಂದ್ರ ವರಿಷ್ಠರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ತೆಗೆದುಕೊಳ್ಳಲಿ ಎಂದು ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ. ಸಿಎಂ ಬದಲಾವಣೆ ಜತೆಗೆ ಸಚಿವ ಸಂಪುಟದ ಬದಲಾವಣೆಯಿಂದ ಎದುರಾಗುವ ಸವಾಲು, ಭಿನ್ನಮತದಲ್ಲೂ ಮೂಗು ತೂರಿಸದೇ ಯಡಿಯೂರಪ್ಪ ಮೌನಕ್ಕೆ ಶರಣಾಗಲಿದ್ದಾರೆ. ಹೀಗಾಗಿ ನೂತನ ಸಿಎಂ ಆಗಲಿರುವ ಕಪ್ಪು ಕುದುರೆಗೆ ಸವಾಲುಗಳ ಸರಮಾಲೆಯೇ ಎದುರು ನಿಲ್ಲಲಿದೆ.
Recommended Video