ಯಾರಿವರು ಪೊಗರು ಸಿನಿಮಾ ವಿರುದ್ದ ತೊಡೆತಟ್ಟಿದ ಸಚ್ಚಿದಾನಂದ ಮೂರ್ತಿ
ಬೆಂಗಳೂರು, ಫೆ 24: ಕಳೆದೆರಡು ದಿನಗಳಿಂದ ಸುದ್ದಿಯಲ್ಲಿರುವುದು ಪೊಗರು ಸಿನಿಮಾ, ಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಕೆಟ್ಟದ್ದಾಗಿ ಬಿಂಬಿಸಿದ್ದಕ್ಕಾಗಿ ನಡೆಯುತ್ತಿರುವ ಪ್ರತಿಭಟನೆ, ಚಿತ್ರತಂಡದ ಕ್ಷಮಾಪಣೆ, ಧೃವ್ ಸರ್ಜಾ ಅಭಿಮಾನಿಗಳಿಂದ ಫಿಲಂ ಚೇಂಬರ್ ಮುಂದೆ ಪ್ರತಿಭಟನೆ.
ಈ ಎಲ್ಲಾ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನು ಹೊಂದಿರುವ ಮಂಡಳಿಯ ಅಧ್ಯಕ್ಷರಾಗಿದ್ದರೂ, ತಮ್ಮ ಸಮುದಾಯದ ಪರವಾಗಿ ಸಮರ್ಥವಾಗಿ ನಿಂತ ವ್ಯಕ್ತಿಯೆಂದರೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಅವರು.
ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಸರ್ಕಾರದ ಸಹಕಾರ: ಸುರೇಶ್ ಕುಮಾರ್
ಜಾತಿನಿಂದನೆ ಯಾವರೀತಿ ಬೇಕಾದರೂ ತಿರುಗಿ ಬೀಳಬಹುದು ಎನ್ನುವುದರ ಸ್ಯಾಂಪಲ್ ಪೊಗರು ಚಿತ್ರತಂಡಕ್ಕೆ ಆಗಿದೆ. ಚಿತ್ರ ಬಿಡುಗಡೆಯಾದ ಮರುದಿನದಿಂದಲೇ ಚಿತ್ರದಲ್ಲಿನ ಆಕ್ಷೇಪಾರ್ಹ ದೃಶ್ಯಗಳ ಬಗ್ಗೆ ಅಪಸ್ವರ ಕೇಳಲಾರಂಭಿಸಿತು. ಕೂಡಲೇ, ಸಮುದಾಯದ ಪರವಾಗಿ ನಿಂತು, ಆಗಿರುವ ತಪ್ಪಿಗೆ ಚಿತ್ರತಂಡದಿಂದ ಬೇಷರತ್ ಕ್ಷಮೆಯಾಚಿಸುವಲ್ಲಿ ಸಚ್ಚಿದಾನಂದ ಯಶಸ್ವಿಯಾದರು.
ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿವಿಧ ಕಾರ್ಯಕ್ರಮಗಳಿಗೆ ಬಿಎಸ್ ವೈ ಚಾಲನೆ
ಆ ಸಮುದಾಯದಲ್ಲಿ ಹಲವು ಪ್ರಬಾವೀ ರಾಜಕಾರಣಿಗಳು, ಸಚಿವರು, ವಾಣಿಜ್ಯೋದ್ಯಮಿಗಳಿದ್ದರೂ, ಎಲ್ಲಕ್ಕಿಂತ ಹೆಚ್ಚಾಗಿ ರಾಜ್ಯ ಸೆನ್ಸಾರ್ ಮಂಡಳಿಯಲ್ಲಿ ಬ್ರಾಹ್ಮಣ ಸಮುದಾಯದವರೊಬ್ಬರು ಸದಸ್ಯೆಯಾಗಿದ್ದರೂ ಸಮುದಾಯವನ್ನು ಒಗ್ಗೂಡಿಸಿದ್ದು ಸಚ್ಚಿದಾನಂದ ಮೂರ್ತಿಯವರು. ಜೊತೆಗೆ, ತಮ್ಮ ಸಮುದಾಯದ ತಂಟೆಗೆ ಬರಬೇಡಿ ಎನ್ನುವ ಸಂದೇಶವನ್ನು ಕಳುಹಿಸಲೂ ಅವರು ಯಶಸ್ವಿಯಾಗಿದ್ದಾರೆ. ಸಚ್ಚಿದಾನಂದ ಅವರ ಪ್ರೊಫೈಲ್ ಹೀಗಿದೆ:
ಬಾಲ್ಯದಿಂದಲೇ ಆರ್ ಎಸ್ ಎಸ್ ಕಾರ್ಯಕರ್ತರು
ಸುಂದರಮ್ಮ ಮತ್ತು ಶ್ಯಾಮಣ್ಣ ಅವರ ಮೂರನೇ ಪುತ್ರರಾಗಿರುವ ಸಚ್ಚಿದಾನಂದ ಅವರು ಹುಟ್ಟಿದ್ದು ಹಾಸನ ಜಿಲ್ಲೆ, ಬೇಲೂರು ತಾಲೂಕಿನ ಹಳೇಬೀಡಿನಲ್ಲಿ. ಹಾಸನ ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಕೆಲಸ ಅರಸಿ 1978ರಲ್ಲಿ ಬೆಂಗಳೂರಿಗೆ ಬರುವ ಸಚ್ಚಿದಾನಂದ ಅವರು ಬಾಲ್ಯದಿಂದಲೇ ಆರ್ ಎಸ್ ಎಸ್ ಕಾರ್ಯಕರ್ತರು. 1978 ರಿಂದ 1984ರ ಅವಧಿಯಲ್ಲಿ ಆಂಧ್ರ ಸ್ಟೀಲ್, ಕ್ಯಾಪ್ ಸ್ಟೀಲ್, ಬರೂಕ್ಕಾ ಸ್ಟೀಲ್ ಮತ್ತು ಬೃಂದಾವನ ಸ್ಟೀಲ್ ನಲ್ಲಿ ಕಾರ್ಮಿಕ ಮುಖಂಡರೂ ಆಗಿದ್ದವರು.
ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆ
ಇದಾದ ನಂತರ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿ ಬೆಂಗಳೂರು ಉತ್ತರ, ವರ್ತೂರು ಕ್ಷೇತ್ರದ ಉಪಾಧ್ಯಕ್ಷರೂ ಆಗುತ್ತಾರೆ. ಬೆಂಗಳೂರು ಮಹಾನಗರ ಸಂಘಟನಾತ್ಮಕ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನೂ ಅಲಂಕರಿಸುತ್ತಾರೆ. ಅಲ್ಲಿಂದ, ರಾಜ್ಯ ಬಿಜೆಪಿಯ ವಕ್ತಾರರಾಗಿ ಬಡ್ತಿ ಪಡೆಯುವ ಸಚ್ಚಿದಾನಂದ ಅವರು 2012ರಲ್ಲಿ ಸರಕಾರೀ ಒಡೆತನದ ಕಿಯೋನಿಕ್ಸ್ ಸಂಸ್ಥೆಯ ಅಧ್ಯಕ್ಷರಾಗುತ್ತಾರೆ.
ಮೋದಿ ಮತ್ತು ಅಮಿತ್ ಶಾ ಕರ್ನಾಟಕದ ಕಾರ್ಯಕ್ರಮ
ಇದಾದ ನಂತರ ಪಕ್ಷದ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸುವ ಇವರು ಪ್ರಧಾನಿ ಮೋದಿ ಮತ್ತು ಬಿಜೆಪಿಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರ ಕರ್ನಾಟಕದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸುತ್ತಾರೆ. ಸಕ್ರಿಯ ರಾಜಕೀಯದ ಜೊತೆಗೆ ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಸಚ್ಚಿದಾನಂದಮೂರ್ತಿಯವರು ಜುಲೈ 2020ರಲ್ಲಿ ಕರ್ನಾಟಕ ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು.
ಯಡಿಯೂರಪ್ಪನವರಿಗೆ ಒತ್ತಡಹಾಕಿ ಯೋಜನೆ ಜಾರಿ
ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸಮುದಾಯಕ್ಕೆ ಸರಕಾರದಿಂದ ಜಾತಿ, ಆದಾಯ ಪ್ರಮಾಣಪತ್ರ ಕೊಡಿಸುವ ಪದ್ದತಿಗೆ ನಾಂದಿ ಹಾಡುತ್ತಾರೆ. ಅಲ್ಲದೇ, ಸಮುದಾಯದ ಪುರೋಹಿತ ವೃತ್ತಿಯ ಹುಡುಗನನ್ನು ಮದುವೆಯಾದರೆ ಬಾಂಡ್ ನೀಡುವುದು ಮತ್ತು ತೀರಾ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಸದಸ್ಯೆಯರ ಮದುವೆಗೆ ತಲಾ 25 ಸಾವಿರ ನೀಡುವ ಸ್ಕೀಂ ಅನ್ನು ಸಿಎಂ ಯಡಿಯೂರಪ್ಪನವರಿಗೆ ಒತ್ತಡಹಾಕಿ ಯೋಜನೆ ಜಾರಿಗೊಳಿಸುವಲ್ಲೂ ಸಚ್ಚಿದಾನಂದ ಯಶಸ್ವಿಯಾಗಿದ್ದಾರೆ.
Recommended Video
ನಿರ್ದೇಶಕ ನಂದ ಕಿಶೋರ್ ಜೊತೆಗೆ ಪತ್ರಿಕಾಗೋಷ್ಠಿ
ಪೊಗರು ಚಿತ್ರದ ನಿರ್ದೇಶಕ ನಂದ ಕಿಶೋರ್ ಜೊತೆಗೆ ಪತ್ರಿಕಾಗೋಷ್ಠಿಯಲ್ಲಿ ಸಚ್ಚಿದಾನಂದಮೂರ್ತಿಯವರು ಒತ್ತಿಒತ್ತಿ ಒಂದು ಮಾತನ್ನು ಹೇಳುತ್ತಾರೆ. "ಸಮುದಾಯದ ಹೋರಾಟಕ್ಕೆ ಎಲ್ಲರೂ ಒಗ್ಗೂಡಿದ್ದಕ್ಕೆ ಧನ್ಯವಾದ"ಎಂದು. ಹೌದು, ಈ ವಿಚಾರದಲ್ಲಿ ವಿಪ್ರ ಸಮುದಾಯವನ್ನು ಒಗ್ಗೂಡಿಸಿದ್ದು ಸಚ್ಚಿದಾನಂದಮೂರ್ತಿಯವರು.