ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ಸಿಎಂ ಪಟ್ಟ ತಪ್ಪಿದ್ದೇಕೆ?
ಬೆಂಗಳೂರು, ಫೆ.21- ರಾಜಕೀಯವಾಗಿ ನನ್ನನ್ನು ಬೆಳೆಸಿದ್ದು, ರಾಮಕೃಷ್ಣ ಹೆಗಡೆ ಅವರೇ ಹೊರತು ದೇವೇಗೌಡರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕರ ಭವನದ ಆವರಣದಲ್ಲಿ ಕುಳಿತು ಹೇಳಿದ್ದು ಎಲ್ಲರಿಗೂ ಗೊತ್ತಿರಬಹುದು. ರಾಜಕೀಯವಾಗಿ ಸಿದ್ದರಾಮಯ್ಯ ಅವರ ಗುರು ಯಾರು? ಎಂಬ ಪ್ರಶ್ನೆ ಈಗ ಮತ್ತೊಮ್ಮೆ ಎದ್ದಿದೆ.
ಸಿದ್ದರಾಮಯ್ಯ ಅವರು ಮೇಲಕ್ಕೇರಿದ್ದು ನನ್ನಿಂದಲೇ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆದರೆ, ಹೀಗೆ ದೇವೇಗೌಡರು ಹೇಳಿದ್ದು ಇದೇ ಮೊದಲಲ್ಲ.
ಕರ್ನಾಟಕದ 'ಕಿಂಗ್ ಮೇಕರ್' ದೇವೇಗೌಡ
ಆಗಾಗ ಈ ರೀತಿ ಹೇಳಿ ಸಿದ್ದರಾಮಯ್ಯ ಅವರನ್ನು ರೊಚ್ಚಿಗೆಬ್ಬಿಸುತ್ತಿರುತ್ತಾರೆ. ಇದಕ್ಕೆ ಪ್ರತಿಯಾಗಿ ಸಿದ್ದರಾಮಯಯ್ಯ ಕೂಡಾ ತಮ್ಮ ಹಳೆ ದಿನಗಳನ್ನು ನೆನೆದು ಪ್ರತಿಕ್ರಿಯಿಸುತ್ತಿರುತ್ತಾರೆ.
ಉಭಯ ಸದನಗಳ ಸದಸ್ಯರ ಜೊತೆ ಲೋಕಾಭಿರಾಮವಾಗಿ ಮಾತನಾಡುತ್ತಾ ಸಿದ್ದರಾಮಯ್ಯ ಅವರು, 'ನನ್ನನ್ನು ಹೋರಾಟಕ್ಕೆ ತಂದವರು ಪ್ರೊ. ನಂಜುಂಡಸ್ವಾಮಿ ಅವರು. ರಾಜಕೀಯವಾಗಿ ಬೆಳೆಸಿದ್ದು, ರಾಮಕೃಷ್ಣ ಹೆಗಡೆಯವರು. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನನ್ನನ್ನು ಕಾವಲು ಸಮಿತಿ ಅಧ್ಯಕ್ಷರನ್ನಾಗಿ, ನಂತರ ಸಚಿವನನ್ನಾಗಿ ನೇಮಕ ಮಾಡಿದರು ಎಂದರು. ಅನಿವಾರ್ಯವಾಗಿ ಮೈಸೂರಿಗೆ ಬಂದು, ಆಕಸ್ಮಿಕವಾಗಿ, ಸ್ನೇಹಿತರ ಒತ್ತಾಯಕ್ಕಾಗಿ ಚುನಾವಣೆಗೆ ನಿಂತು ಗೆದ್ದು ಬಂದ ಕುರುಬರ ಕಿಂಗ್ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಬೆಳೆಸಿ, ಬಳಸಿಕೊಂಡಿದ್ದು ರಾಜಕೀಯ ಮುತ್ಸದ್ಧಿ ಎಚ್ .ಡಿ ದೇವೇಗೌಡ.
ಸಿದ್ದರಾಮಯ್ಯ ಅವರು ಹೇಳಿದ್ದೇನು?
ರೈತ ಸಂಘ ಹಾಗೂ ಕನ್ನಡಪರ ಹೋರಾಟದಿಂದ ನಾನು ಎರಡು ಬಾರಿ ಸ್ವಂತ ಬಲದಿಂದ ವಿಧಾನಸಭೆ ಪ್ರವೇಶ ಮಾಡಿದೆ. ಅಲ್ಲಿಯವರೆಗೂ ದೇವೇಗೌಡರು ಯಾರು ಎಂದೇ ನನಗೆ ತಿಳಿದಿರಲಿಲ್ಲ. ಇಂಥ ಸನ್ನಿವೇಶದಲ್ಲಿ ಗೌಡರು ನನ್ನನ್ನು ರಾಜಕೀಯಕ್ಕೆ ಕತೆ ತಂದಿದ್ದು ಹೇಗೆ? ಅವರ ಹಂಗಿನಿಂದ ನಾನೇನು ರಾಜಕೀಯವಾಗಿ ಬೆಳೆದಿಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ಸ್ವಸಾಮರ್ಥ್ಯದಿಂದ ಬೆಳೆದು ಬಂದಿದ್ದೇನೆ. ಯಾರೇ ಜನರ ನಡುವೆ ಹೋರಾಟ ನಡೆಸಿ ಬಂದರೂ ಅವರು ಉತ್ತಮ ರಾಜಕಾರಣಿಯಾಗುತ್ತಾನೆ. ಒಳ್ಳೆಯ ಆಡಳಿತವನ್ನು ನೀಡುತ್ತಾನೆ
ಸಿದ್ದರಾಮಯ್ಯ ಸಿಎಂ ಆಗುವುದನ್ನು ತಪ್ಪಿಸಿದ್ದು ಯಾರು?
2004ರಲ್ಲಿ ಮುಖ್ಯಮಂತ್ರಿ ಆಗುವ ಕನಸು ಇನ್ನೇನು ಈಡೇರಿತು ಎನ್ನುವಷ್ಟರಲ್ಲಿ ಸೋನಿಯಾ ಗಾಂಧಿ ಅವರ ಜತೆ ಮೀಟಿಂಗ್ ಮಾಡಿದ ದೇವೇಗೌಡರು, ಧರ್ಮ ಸಿಂಗ್ ಅವರು ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಎಂದು ಬಿಟ್ಟರು. ಇದಕ್ಕೂ ಮುನ್ನ ಚುನಾವಣೆ ಕಾಲದಿಂದ ಆಯ್ಕೆಯಾಗುವ ತನಕ ಸಿದ್ದರಾಮಯ್ಯ ಅವರೆ ನಮ್ಮ ಸಿಎಂ ಅಭ್ಯರ್ಥಿ ಎಂಬಂತೆ ದೇವೇಗೌಡರು ಬಿಂಬಿಸಿದ್ದರು. ಸಿದ್ದರಾಮಯ್ಯ ಅವರು ಕೂಡಾ ಭ್ರಮೆಯಲ್ಲಿದ್ದರು. ವಾಸ್ತವಕ್ಕೆ ಬರುವಷ್ಟರಲ್ಲಿ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಬೇಕಾಯಿತು. ಈ ವಿವಾದ ಅಂದಿಗೆ ಮುಗಿಯಲಿಲ್ಲ. ಇಂದಿಗೂ ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ಬೇಸರವಿದೆ.
ನೇರ ನಡೆ-ನುಡಿಯ ರಾಜಕಾರಣಿ ಸಿದ್ದರಾಮಯ್ಯ
1996ರಿಂದಲೇ ಸಿಎಂ ಕನಸು ಹೊತ್ತಿದ್ದ ಸಿದ್ದರಾಮಯ್ಯ
1996 ಹಾಗೂ 2004ರಲ್ಲಿ ಶಾಸಕರ ಬೆಂಬಲವಿದ್ದರೂ ನನ್ನನ್ನು ಮುಖ್ಯಮಂತ್ರಿಯಾಗಲು ದೇವೇಗೌಡರು ಬಿಡಲಿಲ್ಲ. ಕೊನೆಗೆ, ಕುಟುಂಬ ರಾಜಕೀಯ, ಸ್ವಜನಪಕ್ಷಪಾತದ ಹೊರೆ ಹೊತ್ತಿದ್ದ ದೇವೇಗೌಡರು ನನ್ನನ್ನು ಪಕ್ಷದಿಂದಲೇ ಹೊರ ಹಾಕಿದರು. ಇದೇನು ಅವರಿಗೆ ಹೊಸದಲ್ಲ, ರಾಮಕೃಷ್ಣ ಹೆಗ್ಡೆ ಅವರಿಗೂ ಇದೇ ರೀತಿ ಮಾಡಿದರು ಎಂದು ಸಿದ್ದರಾಮಯ್ಯ ಬಹು ಹಿಂದೆ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ದೇವೇಗೌಡ, ಸಿದ್ದರಾಮಯ್ಯರ ಬ್ರಹ್ಮದ್ವೇಷಿ ಆರೋಪ
ರಾಮಕೃಷ್ಣ ಹೆಗಡೆ ಮತ್ತು ನನ್ನ ನಡುವೆ ರಾಜಕೀಯ ಭಿನಾಭಿಪ್ರಾಯಗಳಿತ್ತು ನಿಜ. ಅದರ ಬಗ್ಗೆ ಮುಕ್ತವಾಗಿ ಚರ್ಚಿಸಲು ನಾನು ಸದಾ ಸಿದ್ಧ. ರಾಜಕೀಯ ವಿಷಯವಾಗಿ ನಾನು ಹಾಗೂ ಹೆಗಡೆ ಮುಕ್ತವಾಗಿ ಚರ್ಚಿಸುತ್ತಿದ್ದೆವು. ನಾನು ಎಂದಿಗೂ ರಾಮಕೃಷ್ಣ ಹೆಗಡೆ ಅವರನ್ನು ವೈಯಕ್ತಿಕವಾಗಿ ದ್ವೇಷಿಸಿಲ್ಲ. ದ್ವೇಷ ಮಾಡುವ ಆಲೋಚನೆಯೂ ಬರಲಿಲ್ಲ. ಆದರೆ, ನಮ್ಮಿಬ್ಬರ ನಡುವಿನ ಅಂತರ ಹೆಚ್ಚಲು ಅನೇಕರು ಕಾರಣರಾದರು. ನಮ್ಮಿಬ್ಬರ ನಡುವಿನ ಬಾಂಧವ್ಯದ ಬಗ್ಗೆ ಬಹಳಷ್ಟು ಜನರು ತಪ್ಪಾಗಿ ಭಾವಿಸಿದರು. ಈಗಲೂ ಅನೇಕರಿಗೆ ಇದೇ ಭಾವನೆ ಇದೆ. ನಾನು ಬ್ರಾಹ್ಮಣ ಸಮುದಾಯದ ಬಗ್ಗೆ ದ್ವೇಷ ಇಟ್ಟುಕೊಂಡಿಲ್ಲ. ಬ್ರಾಹ್ಮಣ ಸಮುದಾಯದ ಬಗ್ಗೆ ಅಪಾರ ಗೌರವವಿದೆ ಎಂದು ದೇವೇಗೌಡರು ಬಹು ಹಿಂದೆ ಸ್ಪಷ್ಟಪಡಿಸಿದ್ದಾರೆ. ಇದೆ ರೀತಿ ಸಿದ್ದರಾಮಯ್ಯ ಕೂಡಾ ಬ್ರಹ್ಮದ್ವೇಷಿ ಎಂಬ ಆರೋಪ ಹೊತ್ತುಕೊಂಡಿದ್ದಾರೆ.
ಎಚ್ ಡಿ ಕುಮಾರಸ್ವಾಮಿ ಅವರ ಸಮಜಾಯಿಷಿ
ದೇವೇಗೌಡರು ಹಾಗೂ ಸಿದ್ದರಾಮಯ್ಯ ಅವರ ನಡುವಿನ ಜಟಾಪಟಿ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ, 2008ರ ಬಿಜೆಪಿ ಜತೆಗಿನ ಮೈತ್ರಿ ಸರ್ಕಾರದ ಸಿಎಂ ಎಚ್ .ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರನ್ನು ಬೆಳೆಸಿದ್ದು ರಾಮಕೃಷ್ಣ ಹೆಗ್ಡೆ ಅವರು ಅಲ್ಲ, ದೇವೇಗೌಡರು ಅಲ್ಲ, ಅವರನ್ನು ಬೆಳೆಸಿದ್ದು ಜನತಾ ಪರಿವಾರ. ಜನತಾ ಪರಿವಾರದ ಅಸಂಖ್ಯ ಕಾರ್ಯಕರ್ತರ ಶ್ರಮದ ಫಲವೇ ಅವರನ್ನು ಈ ಸ್ಥಾನಕ್ಕೆ ತಂದಿದೆ. ಇದಕ್ಕೆ ಸಿದ್ದರಾಮಯ್ಯ ಅವರು ಋಣಿಯಾಗಿರಬೇಕು ಎಂದಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ತಪ್ಪಿಸಲು ನಾನು ಕೂಡಾ ಕಾರಣ ಎಂದು ಎಚ್ಡಿಕೆ ಹೇಳಿದ್ದನ್ನು ಮರೆಯುವಂತಿಲ್ಲ.