ಪ್ರತಿಪಕ್ಷದ ನಾಯಕನ ಹುದ್ದೆ: ಸಿದ್ದರಾಮಯ್ಯನ ಮುಂದಿದೆ ಮುಳ್ಳಿನ ಹಾದಿ
Recommended Video
ಹಾಲೀ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಯಾರೆಂದು ಇನ್ನೂ ಅಧಿಕೃತವಾಗಿ ಘೋಷಣೆಯಾಗಬೇಕಷ್ಟೇ. ಮೇಲ್ನೋಟಕ್ಕೆ CLP (ಕಾಂಗ್ರೆಸ್ ಲೆಜೆಸ್ಲೇಟಿವ್ ಪಾರ್ಟಿ) ಮುಖಂಡರಾಗಿರುವ ಸಿದ್ದರಾಮಯ್ಯನವರೇ ವಿರೋಧ ಪಕ್ಷದ ನಾಯಕರು ಆಗಬಹುದು ಎನ್ನುವ ಲೆಕ್ಕಾಚಾರವಿದ್ದರೂ, ಅವರ ಹಾದಿ ಅಷ್ಟು ಸುಗುಮವಾಗಿಲ್ಲ.
ಹದಿನಾಲ್ಕು ಶಾಸಕರನ್ನು ಅನರ್ಹಗೊಳಿಸಿದ ನಂತರ, ಕಾಂಗ್ರೆಸ್ಸಿನ ಸದ್ಯದ ಬಲ 66ಕ್ಕೆ ಇಳಿದಿದೆ. ಅನರ್ಹಗೊಂಡ ಶಾಸಕರ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಯಬೇಕಾಗಿರುವುದರಿಂದ, ಈ ಎಲ್ಲಾ ಕ್ಷೇತ್ರಗಳಲ್ಲಿನ ಫಲಿತಾಂಶ ಕಾಂಗ್ರೆಸ್ ಪಾಲಿಗೆ ಮಹತ್ವದ್ದು. ಹಾಗಾಗಿ, ಹೈಕಮಾಂಡ್ ಅಳೆದುತೂಗಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.
ಸಮಾಜವಾದಿ ಗುರುವಿನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಸಿದ್ದರಾಮಯ್ಯ, ರಮೇಶ್ ಕುಮಾರ್
ಆದರೆ, ನಾವಿಕನಿಲ್ಲದ ದೋಣಿಯಂತೆ, ಎಐಸಿಸಿ ಅಧ್ಯಕ್ಷ ಹುದ್ದೆ ಖಾಲಿಬಿದ್ದು ಎಷ್ಟೋ ದಿನಗಳಾದವು. ಹಾಗಾಗಿ, ಕಾಂಗ್ರೆಸ್ ವರಿಷ್ಠರ ಮಾತು ಇಲ್ಲಿ ನಡೆಯುತ್ತದೋ ಅಥವಾ ಸಿದ್ದರಾಮಯ್ಯನವರ ಮಾತೇ ಗೆಲ್ಲುತ್ತದೋ ಎನ್ನುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಯಡಿಯೂರಪ್ಪ ಜನಾದೇಶದಿಂದ ಮುಖ್ಯಮಂತ್ರಿಯಾಗಿಲ್ಲ: ಸಿದ್ದರಾಮಯ್ಯ
ಶಾಸಕಾಂಗ ಪಕ್ಢದ ನಾಯಕರೇ ಬಹುತೇಕ ವಿರೋಧ ಪಕ್ಷದ ನಾಯಕರಾಗುವ ಸಾಧ್ಯತೆಯಿದ್ದರೂ, ಆ ಸಂಪ್ರದಾಯಕ್ಕೆ ತಿಲಾಂಜಲಿ ಇಡಬೇಕೆಂದು ನಾಲ್ವರು ಬೇಡಿಕೆಯಿಟ್ಟಿದ್ದಾರೆ ಎನ್ನುವ ಮಾತು ಚಾಲ್ತಿಯಲ್ಲಿದೆ. ಜೊತೆಗೆ, ಈ ಸಂಬಂಧ ಇವರ ಲಾಬಿಯೂ ಮುಂದುವರಿದಿದೆ ಎನ್ನುವ ಮಾತು ಕೇಳಿಬರುತ್ತಿದೆ. ಸಿದ್ದರಾಮಯ್ಯ ಹೊರತಾಗಿ, ಪ್ರತಿಪಕ್ಷದ ನಾಯಕನ ಹುದ್ದೆಗೆ ಪ್ರಯತ್ನಿಸುತ್ತಿರುವವರು ಯಾರು? ಮುಂದೆ ಓದಿ..
ದೇವೇಗೌಡ್ರು, ಸಿದ್ದರಾಮಯ್ಯ ವಿರುದ್ದ ದೂರನ್ನು ಎಐಸಿಸಿ ವರಿಷ್ಠರಲ್ಲಿ ನೀಡಿದ್ದರು
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಅಧಿಕಾರದ ಅವಧಿಯಲ್ಲಿ ಅತೃಪ್ತರ ಅಪಸ್ವರ ಏಳುತ್ತಲೇ ಇದ್ದಿದ್ದರಿಂದ, ಹಲವು ಬಾರಿ ದೇವೇಗೌಡ್ರು, ಸಿದ್ದರಾಮಯ್ಯ ವಿರುದ್ದ ದೂರನ್ನು ಎಐಸಿಸಿ ವರಿಷ್ಠರಲ್ಲಿ ನೀಡಿದ್ದರು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಜೊತೆಗೆ, ಅನರ್ಹಗೊಂಡ ಕಾಂಗ್ರೆಸ್ ಶಾಸಕರಲ್ಲಿ ಹಲವರು ಸಿದ್ದರಾಮಯ್ಯ ಹಿಂಬಾಲಕರಾಗಿದ್ದವರು ಎನ್ನುವುದೂ ಗೌಪ್ಯವಾಗಿ ಏನೂ ಉಳಿದಿರಲಿಲ್ಲ. ಈ ಅಂಶ, ಸಿದ್ದರಾಮಯ್ಯನವರಿಗೆ ತಿರುಗುಬಾಣವಾಗಲಿದೆಯೇ ಎನ್ನುವುದೂ ಇಲ್ಲಿ ಪ್ರಶ್ನೆ.
ಎಐಸಿಸಿ ವರಿಷ್ಠರಿಗೆ ಮತ್ತು ಅಹಮದ್ ಪಟೇಲ್ ಅವರಿಗೆ ಡಿಕೆಶಿ ಆಪ್ತ
ಜಲಸಂಪನ್ಮೂಲ ಖಾತೆಯ ಸಚಿವರಾಗಿದ್ದ ಡಿ ಕೆ ಶಿವಕುಮಾರ್ ಅವರ ಹೆಸರೂ ಮಂಚೂಣಿಯಲ್ಲಿ ಕೇಳಿಬರುತ್ತಿದೆ. ಎಐಸಿಸಿ ವರಿಷ್ಠರಿಗೆ ಮತ್ತು ಅಹಮದ್ ಪಟೇಲ್ ಅವರಿಗೆ ಡಿಕೆಶಿ ಆಪ್ತರಾಗಿರುವುದರಿಂದ, ಮತ್ತು, ಪಕ್ಷದ ಮೇಲಿನ ಇವರ ನಿಯತ್ತನ್ನು ಪರಿಗಣಿಸಿ, ಹೈಕಮಾಂಡ್ ಇವರಿಗೆ ಆ ಹುದ್ದೆಯನ್ನು ನೀಡಿದರೂ ನೀಡಬಹುದು.
ಪ್ರಭಾವೀ ನಾಯಕ, ಹಿರಿಯ ಮುಖಂಡ ಎಚ್ ಕೆ ಪಾಟೀಲ್ ಅವರ ಹೆಸರೂ ಚಾಲ್ತಿಯಲ್ಲಿ
ಉತ್ತರ ಕರ್ನಾಟಕ ಮೂಲದ ಪ್ರಭಾವೀ ನಾಯಕ, ಹಿರಿಯ ಮುಖಂಡ ಎಚ್ ಕೆ ಪಾಟೀಲ್ ಅವರ ಹೆಸರೂ ಚಾಲ್ತಿಯಲ್ಲಿದೆ. ಸಮ್ಮಿಶ್ರ ಸರಕಾರದ ಅಧಿಕಾರದ ಅವಧಿಯಲ್ಲಿ ಇವರಿಗೆ ಯಾವುದೇ ಸಚಿವ ಸ್ಥಾನಮಾನ ನೀಡಿರಲಿಲ್ಲ. ಇದರಿಂದ ಇವರು ಬೇಸರಿಸಿಕೊಂಡಿದ್ದರೂ ಕೂಡಾ. ಕೊನೆಗೆ, ಕಾಂಗ್ರೆಸ್, ಲೋಕಸಭಾ ಚುನಾವಣಾ ಪ್ರಚಾರ ಸಮಿತಿಯ ಉಸ್ತುವಾರಿಯನ್ನು ಇವರಿಗೆ ನೀಡಿತ್ತು. ಇವರು ಹೆಸರು ಕೂಡಾ ಪ್ರತಿಪಕ್ಷದ ನಾಯಕನ ಹುದ್ದೆಗೆ ಕೇಳಿಬರುತ್ತಿದೆ.
ಲಿಂಗಾಯತ ಸಮುದಾಯದ ಪ್ರಭಾವೀ ಮುಖಂಡ ಎಂ ಬಿ ಪಾಟೀಲ್
ಕಾಂಗ್ರೆಸ್ಸಿನ ಲಿಂಗಾಯತ ಸಮುದಾಯದ ಪ್ರಭಾವೀ ಮುಖಂಡ ಎಂ ಬಿ ಪಾಟೀಲ್ ಕೂಡಾ ಈ ಹುದ್ದೆಯ ಆಕಾಂಕ್ಷಿ ಎನ್ನುವ ಸುದ್ದಿಯಿದೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಾರದಿರಲು, ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವೂ ಒಂದು ಕಾರಣ ಎಂದು ಹೇಳಲಾಗುತ್ತಿತ್ತು. ಹೀಗಾಗಿ, ಈ ಸಮದಾಯಕ್ಕೆ ಪ್ರತಿಪ್ರಕ್ಷದ ನಾಯಕನ ಸ್ಥಾನ ನೀಡಿ, ಸಮುದಾಯದ ವಿಶ್ವಾಸಗಳಿಸುವ ಕೆಲಸಕ್ಕೆ ಕಾಂಗ್ರೆಸ್ ಮುಂದಾದರೂ ಆಗಬಹುದು.
ಡಾ. ಪರಮೇಶ್ವರ್ ಕೂಡಾ ಈ ಸ್ಥಾನದ ಆಕಾಂಕ್ಷಿಗಳಲೊಬ್ಬರು
ಇನ್ನು, ಡಾ. ಪರಮೇಶ್ವರ್ ಕೂಡಾ ಈ ಸ್ಥಾನದ ಆಕಾಂಕ್ಷಿಗಳಲೊಬ್ಬರು ಎಂದು ಹೇಳಲಾಗುತ್ತಿದೆ. ಸಿದ್ದರಾಮಯ್ಯ ಮತ್ತು ಪರಮೇಶ್ವರ ನಡುವಿನ ತಣ್ಣಗಿನ ಶೀತಲ ಸಮರದ ಇತಿಹಾಸ ಇಂದು ನಿನ್ನೆಯದಲ್ಲ. ಆದರೆ, ಪ್ರತೀಬಾರಿ ಸಿದ್ದರಾಮಯ್ಯನವರು ಮೇಲುಗೈ ಸಾಧಿಸುತ್ತಿದ್ದದ್ದೂ ಗೊತ್ತಿರುವ ವಿಚಾರ. ಈಗ, ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಪರಮೇಶ್ವರ್ ಕೂಡಾ ಪ್ರಯತ್ನಿಸುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.