ಸದಾ ಗೌಡ್ರ ಗದ್ದಲ; ಬಿಜೆಪಿಯ 'ಬಿಸಿ ತುಪ್ಪ' ಯತ್ನಾಳ ಯಾರು?
ಬೆಂಗಳೂರು, ಮಾರ್ಚ್ 8: ಸದಾ ಒಂದಿಲ್ಲ ಒಂದು ವಿವಾದಾತ್ಮಕ ಹೇಳಿಕೆ ನೀಡುವ ಬಿಜೆಪಿ ಮುಖಂಡ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೆ ವಿವಾದದ ಬಿರುಗಾಳಿ ಎಬ್ಬಿಸಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಅವರ ಬಗ್ಗೆ ಯತ್ನಾಳ ಆಡಿರುವ 'ಪಾಕ್ ಏಜೆಂಟ್' ಮಾತು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಳೆದ ವಾರ ವಿಜಯಪುರದಲ್ಲಿ ಯತ್ನಾಳ ದೇಶಪ್ರೇಮ ಮೆರೆಯಲು ಮುಂದಾಗಿ, ದೇಶದ ಸ್ವಾತ್ರಂತ್ರ್ಯಕ್ಕಾಗಿ ಹೋರಾಡಿದ್ದ ಹಿರಿಯ ಜೀವಕ್ಕೆ ಅವಹೇಳನಕಾರಿಯಾಗಿ ಮಾತನಾಡಿದ್ದರು. "ಬೆಂಗಳೂರಿನಲ್ಲಿ ಮುದುಕ ಒಬ್ಬ ಇದಾನೆ, ದೊರೆಸ್ವಾಮಿ ಅಂತ. ಆತ ಪಾಕಿಸ್ತಾನ್ ಏಜೆಂಟ್ ಇದ್ದಂತೆ' ಎಂದು ಮಾಧ್ಯಮಗಳ ಎದುರು ಹೇಳಿದ್ದರು.
ದೊರೆಸ್ವಾಮಿ ನಕಲಿ ಸ್ವಾತಂತ್ರ್ಯ ಹೋರಾಟಗಾರ ಎಂದು ಪುನರುಚ್ಚರಿಸಿದ ಯತ್ನಾಳ್
ಯತ್ನಾಳ ಯಾವಾಗಲೂ ವಿವಾದಾತ್ಮಕ ಹೇಳಿಕೆ ನೀಡುತ್ತಾ ಆಗಾಗ ಗಮನ ಸೆಳೆಯುತ್ತಿರುತ್ತಾರೆ ಎಂಬುದನ್ನು ಅವರನ್ನು ಹತ್ತಿರದಿಂದ ಬಲ್ಲವರ ಅನಿಸಿಕೆ. ಈ ಸಾರಿ ದೊರೆಸ್ವಾಮಿ ಅವರ ಬಗ್ಗೆ ಯತ್ನಾಳ ಆಡಿರುವ ಮಾತು ಅವರಿಗೇ ಮುಳುವಾಗುತ್ತಿದೆ ಎನ್ನಲಾಗಿದೆ. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಾಳಯ, ಪ್ರಗತಿಪರ ಚಿಂತಕರು, ದೊರೆಸ್ವಾಮಿ ಅಭಿಮಾನಿಗಳು ಯತ್ನಾಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯತ್ನಾಳರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು, ಹಾಗಾದರೆ ಸಾಕಷ್ಟು ಪ್ರಕರಣಗಳನ್ನು ಅನುಭವಿಸುತ್ತಿರುವ ಯತ್ನಾಳ ಎಂತಹ ದೇಶಭಕ್ತ? ಎಂದು ಪ್ರಶ್ನಿಸುತ್ತಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ ಯಾರು? ಅವರು ರಾಜಕೀಯ ಜೀವನದ ಹಾದಿ ಏನು? ಎಂಬುದರ ಬಗ್ಗೆ ಲೇಖನ ಇಲ್ಲಿದೆ....
ಸಹಕಾರಿ ಕ್ಷೇತ್ರದಿಂದ ರಾಜಕೀಯಕ್ಕೆ
ಮೂಲತಃ ವಿಜಯಪುರ ಜಿಲ್ಲೆಯ ಯತ್ನಾಳದವರಾದ 55 ವರ್ಷದ ಬಸನಗೌಡ ರಾಮನಗೌಡ ಪಾಟೀಲ, ಯತ್ನಾಳ ಅವರು ಡಿಸೆಂಬರ್ 13, 1963 ರಂದು ಜನಿಸಿದ್ದಾರೆ. ಶ್ರೀಮಂತ ಕೃಷಿ ಕುಟುಂಬದ ಹಿನ್ನೆಲೆಯಿಂದ ಬಂದ ಇವರು, ಧಾರವಾಡ ಹಾಗೂ ವಿಜಯಪುರದಲ್ಲಿ ಶಿಕ್ಷಣ ಪೂರೈಸಿ ಬಿ.ಕಾಂ ಪದವಿ ಪಡೆದಿದ್ದಾರೆ. ಶೈಲಜಾ ಪಾಟೀಲ ಪತ್ನಿ. ಇಬ್ಬರು ಗಂಡು ಮಕ್ಕಳು ಇವರಿಗಿದ್ದಾರೆ. ಸಹಕಾರಿ ಬ್ಯಾಂಕ್, ಸಹಕಾರಿ ಸಕ್ಕರೆ ಕಾರ್ಖಾನೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಆರ್ ಎಸ್ ಎಸ್ ಹಿನ್ನೆಲೆಯಿರುವ ಯತ್ನಾಳ ಅವರು, ಉತ್ತರ ಕರ್ನಾಟಕದ ಬಿಜೆಪಿ ಮುಖಂಡ, ಲಿಂಗಾಯತ ನಾಯಕ ಎಂದು ಗುರುತಿಸಿಕೊಳ್ಳುತ್ತಾರೆ.
ವಾಜಪೇಯಿ ಸರ್ಕಾರದಲ್ಲಿ ಮಂತ್ರಿ
ಸಹಕಾರಿ ಕ್ಷೇತ್ರದಿಂದ ತಮ್ಮ ರಾಜಕೀಯ ಜೀವನಕ್ಕೆ ಪಾದಾರ್ಪಣೆ ಮಾಡಿದ ಯತ್ನಾಳ, 1994 ರಲ್ಲಿ ವಿಜಯಪುರ ನಗರದ ಶಾಸಕರಾಗಿ ಮೊದಲ ಬಾರಿಗೆ ಆಯ್ಕೆಯಾದರು. 1999 ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದ ಸಂಸದರಾದರು. ಅಂದಿನ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಯ ಸರ್ಕಾರದಲ್ಲಿ ರೈಲ್ವೆ ಇಲಾಖೆ ಹಾಗೂ ಜವಳಿ ಇಲಾಖೆಯ ರಾಜ್ಯ ಸಚಿವರಾಗಿ ಕೆಲಸ ಮಾಡಿದ್ದರು. 2004 ರಲ್ಲಿ ಎರಡನೇ ಬಾರಿ ಲೋಕಸಭಾ ಸದಸ್ಯರಾಗಿದ್ದರು.
'ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಪಾಕಿಸ್ತಾನ್ ಏಜೆಂಟ್' ಅಂತೆ!
ಬಿಜೆಪಿಯಿಂದ ಉಚ್ಚಾಟನೆ
2008 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಿಂದ ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರವಾಯಿತು. ಆಗ ಬಿಜೆಪಿ ಮುಖಂಡರು ಯತ್ನಾಳ್ ಅವರನ್ನು 'ಸೈಡ್ಲೈನ್' ಮಾಡಲು ನೋಡಿದ್ದರಿಂದ ಅವರು ಬಹಿರಂಗವಾಗಿ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಬಹಿರಂಗವಾಗಿ ಟೀಕಿಸಲು ಶುರು ಮಾಡಿದರು. 2008 ರಲ್ಲಿ ವಿಜಯಪುರ ನಗರ ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದರಿಂದ ದೇವರ ಹಿಪ್ಪರಗಿ ವಿಧಾನಸಭೆಯಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ಪುನಃ ಬಿಜೆಪಿ ನಾಯಕರ ವಿರುದ್ಧ ಮನಬಂದಂತೆ ಹೇಳಿಕೆ ನೀಡುವ ಮೂಲಕ 2011 ರಲ್ಲಿ ಬಿಜೆಪಿಯಿಂದ ಉಚ್ಚಾಟನೆಯಾಗಿ ಜೆಡಿಎಸ್ ಸೇರಿದ್ದರು.
ಜೆಡಿಎಸ್ ಬಿಟ್ಟು ಮತ್ತೆ ಬಿಜೆಪಿಗೆ
ಜೆಡಿಎಸ್ ಸೇರಿದ ನಂತರ ವಿಜಯಪುರ ವಿಧಾನಸಭಾ ಕ್ಷೇತ್ರದಿಂದ 2013 ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಯತ್ನಾಳ ಅವರು ಆ ಚುನಾವಣೆಯಲ್ಲಿ ಸೋಲುಣ್ಣುತ್ತಾರೆ. ಅಷ್ಟೊತ್ತಿಗೆ ಮೆತ್ತಗಾಗಿದ್ದ ಯತ್ನಾಳ ಅವರು 2013 ರಲ್ಲಿ ವಿಧಾನ ಪರಿಷತ್ನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿ ಜಯ ಸಾಧಿಸುತ್ತಾರೆ. 2018ರ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದ ಯತ್ನಾಳ, ಮತ್ತೆ ಯಡಿಯೂರಪ್ಪ, ಬಿಜೆಪಿ ಮುಖಂಡರನ್ನು ಹೊಗಳುತ್ತಾ ಬಂದರು. ರಾಜ್ಯಸಭೆ ಚುನಾವಣೆಯಲ್ಲಿ ಸಹಾಯ ಮಾಡುವ ನೆಪದಲ್ಲಿ ಯತ್ನಾಳಗೆ ಬಿಜೆಪಿ ಬಾಗಿಲು ತೆರೆಯಿತು. 2018 ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ನಗರ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾದರು.
18 ಕ್ರಿಮಿನಲ್ ಪ್ರಕರಣಗಳಿವೆ
ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದರಲ್ಲಿ ಸಿದ್ಧಹಸ್ತರಾಗಿರುವ ಯತ್ನಾಳ ವಿರುದ್ದ ಹಲವು ಪ್ರಕರಣಗಳು ಇವೆ. ಪ್ರಚೋದನೆ, ಬೆದರಿಕೆ, ಕೋಮು ಸೌಹಾರ್ಧತೆ ಕದಡುವಿಕೆ ಸೇರಿದಂತೆ ಕಳೆದ 15 ವರ್ಷಗಳ ಅವಧಿಯಲ್ಲಿ 18 ಕ್ರಿಮಿನಲ್ ಪ್ರಕರಣಗಳಿವೆ. ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಅಪಿಡಿವಿಟ್ನಲ್ಲಿ ಈ ಮಾಹಿತಿ ಇದೆ. 2008 ರಲ್ಲಿ 5, 2013 ರಲ್ಲಿ 7 ಹಾಗೂ 2018 ರಲ್ಲಿ 6 ಪ್ರಕರಣಗಳು ಯತ್ನಾಳ ಮೇಲೆ ದಾಖಲಾಗಿದ್ದವು.
ಹೇಳುವುದನ್ನು ನೇರವಾಗಿ ಹೇಳುತ್ತಾರೆ
ಬಸನಗೌಡ ಅವರಿಗೆ ಪ್ರಚಾರ ತೆಗೆದುಕೊಳ್ಳುವುದು ಚೆನ್ನಾಗಿ ಗೊತ್ತಿದೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಹೀಗಾಗಿಯೇ ಅವರು ಸದಾ ಒಂದಿಲ್ಲ ಒಂದು ವಿವಾದಾತ್ಮ ಹೇಳಿಕೆ ನೀಡುವುದು ಎಂದು ಕೆಲವರು ಆರೋಪಿಸುತ್ತಾರೆ. ಆದರೆ, ಯತ್ನಾಳ ಹೇಳುವುದನ್ನು ನೇರವಾಗಿ ಹೇಳುವ ಮನುಷ್ಯ. ಹೀಗಾಗಿಯೇ ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ನೆರೆ ಬಂದಾಗ ಕೇಂದ್ರ ಸರ್ಕಾರ ಸ್ಪಂದಿಸಲಿಲ್ಲವೆಂದು ನೇರವಾಗಿ ಪ್ರಧಾನಿ ಹಾಗೂ ಅಮಿತ್ ಶಾ ವಿರುದ್ಧ ಹರಿಹಾಯ್ದಿದ್ದರು. ಇದು ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿತ್ತು. ಈಗ ದೊರೆಸ್ವಾಮಿ ಅವರ ವಿರುದ್ಧ ಬಾಯಿ ಹರಿಬಿಡುವ ಮೂಲಕ ಬಿಜೆಪಿಗೆ ಮಗ್ಗಲು ಮುಳ್ಳಾಗಿ ಪರಿಣಮಿಸಿದ್ದಾರೆ.