SSLC ಪರೀಕ್ಷೆ ಬರೆದವರಿಗೆ ಎದುರಾಗಲಿದೆಯಾ ಸಮಸ್ಯೆ?
ಬೆಂಗಳೂರು, ಜು. 23: ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾಗುತ್ತಿರುವುದರಿಂದ ಪಿಯುಸಿ ಸೇರಲು ಎಲ್ಲರಿಗೂ ಪ್ರವೇಶ ಸಿಗುತ್ತದೆಯಾ? ಎಂಬ ದೊಡ್ಡ ಆತಂಕ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಗೆ ಈಗ ಎದುರಾಗಿದೆ. ಪಿಯುಸಿ ಪರೀಕ್ಷೆಯಿಲ್ಲದೆ ಎಲ್ಲರೂ ಪಾಸ್ ಆಗಿರುವುದರಿಂದ ಅವರೆಲ್ಲರಿಗೂ ಪದವಿ ಶಿಕ್ಷಣಕ್ಕೆ ಪ್ರವೇಶ ಸಿಗುವುದು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಅದೇ ಪರಿಸ್ಥಿತಿ ಎಸ್ಎಸ್ಎಲ್ಸಿ ಪಾಸ್ ಆಗುವ ವಿದ್ಯಾರ್ಥಿಗಳಿಗೂ ಎದುರಾಗಬಹುದಾ? ಎಂಬ ಆತಂಕ ಪಾಲಕರಲ್ಲಿದೆ.
ಕಳೆದ ಎಲ್ಲ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಸಲ ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. ಅದರೊಂದಿಗೆ ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗುವುದು ಎಂದು ಈಗಾಗಲೇ ರಾಜ್ಯ ಶಿಕ್ಷಣ ಇಲಾಖೆ ಘೋಷಣೆ ಮಾಡಿದೆ. ಹೀಗಾಗಿ ಕನಿಷ್ಟ 8.5 ಲಕ್ಷ ವಿದ್ಯಾರ್ಥಿಗಳು ಈ ಸಲ ಎಸ್ಎಸ್ಎಲ್ಸಿ ಮುಗಿಸಿ ಹೊರಗೆ ಬರಲಿದ್ದಾರೆ. ಅವರೆಲ್ಲರಿಗೂ ಪಿಯುಸಿಗೆ ಪ್ರವೇಶ ಕೊಡಿಸುವ ಮಹತ್ವದ ಜವಾಬ್ದಾರಿ ರಾಜ್ಯ ಶಿಕ್ಷಣ ಇಲಾಖೆ ಮೇಲಿದೆ.
ಈ ಸಲ ಪಿಯುಸಿ ಪರೀಕ್ಷೆ ಇಲ್ಲದ್ದರಿಂದ ಎಲ್ಲರೂ ಪಾಸ್ ಆಗಿದ್ದಾರೆ. ಅವರೆಲ್ಲರಿಗೂ ಪದವಿ ಶಿಕ್ಷಣದ ವ್ಯವಸ್ಥೆ ಮಾಡಬೇಕಾದ ಸವಾಲು ಉನ್ನತ ಶಿಕ್ಷಣ ಇಲಾಖೆಗೆ ಎದುರಾಗಿದೆ. ಅದೇ ರೀತಿ ಪರೀಕ್ಷೆ ಬರೆದವವರೂ ಸೇರಿದಂತೆ ಸೇರಿದಂತೆ ಹಿಂದೆ ಎಸ್ಎಸ್ಎಲ್ಸಿ ಸಪ್ಲಿಮೆಂಟರಿ ಪರೀಕ್ಷೆ ಎದುರಿಸಿ ಉತ್ತೀರ್ಣರಾದವರಿಗೂ ಪಿಯುಸಿ ಪ್ರವೇಶ ಸಿಗಬೇಕಾಗಿದೆ. ಹೀಗಾಗಿ ಎಲ್ಲರಿಗೂ ಪಿಯುಸಿ ಪ್ರವೇಶ ಸಿಗುತ್ತದೆಯಾ? ಎಂಬ ಆತಂಕ ಸಹಜವಾಗಿಯೆ ವಿಧ್ಯಾರ್ಥಿಗಳ ಪಾಲಕರನ್ನು ಕಾಡುತ್ತಿದೆ.
SSLC ಪರೀಕ್ಷೆ ಬರೆದವರಿಗೆ PUC?
ಪಿಯುಸಿ ಪರೀಕ್ಷೆ ರದ್ದುಗೊಳಿಸಿದ್ದ ರಾಜ್ಯ ಶಿಕ್ಷಣ ಇಲಾಖೆ ಅಚ್ಚರಿ ಎಂಬಂತೆ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸಿದೆ. ಆದರೆ ಪರೀಕ್ಷೆ ನಡೆಸಿದರೂ ಯಾರನ್ನೂ ನಪಾಸ್ ಮಾಡುವುದಿಲ್ಲ ಎಂದು ಪರೀಕ್ಷೆಗೂ ಮೊದಲೇ ಭರವಸೆ ಕೊಟ್ಟಿದೆ. ಹೀಗಾಗಿ ಈ ಸಲ ಪರೀಕ್ಷೆಗೆ ಹಾಜರಾಗಿರುವ ಎಲ್ಲ ವಿಧ್ಯಾರ್ಥಿಗಳು ಪಾಸ್ ಆಗಲಿದ್ದಾರೆ. ಅವರೆಲ್ಲರಿಗೂ ಪಿಯುಸಿ ಪ್ರವೇಶ ಒದಗಿಸುವ ಜವಾಬ್ದಾರಿ ಕೂಡ ಸರ್ಕಾರದ ಮೇಲಿದೆ.
ಆಗಸ್ಟ್ ತಿಂಗಳಿನಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಈಗಾಗಲೇ ತಿಳಿಸಿದ್ದಾರೆ. ಆಗಸ್ಟ್ ಮೊದಲ ವಾರದಲ್ಲಿ ಎಸ್ಎಸ್ಎಲ್ಸಿ ಫಲಿತಾಂಶ ಬಂದ ನಂತರ ಸರ್ಕಾರಕ್ಕೆ ನಿಜವಾದ ಸವಾಲು ಎದುರಾಗಲಿದೆ. ಈ ವರ್ಷ ಸುಮಾರು ಎಂಟೂವರೆ ಲಕ್ಷ ವಿಧ್ಯಾರ್ಥಿಗಳಿಗೆ ಪಿಯು ಪ್ರವೇಶ ಅಗತ್ಯವಾಗಿದೆ. ಅವರೆಲ್ಲರಿಗೂ ಪ್ರವೇಶ ಸಿಗಲಿದೆಯಾ? ಅದಕ್ಕೆ ಶಿಕ್ಷಣ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ.
ಆತಂಕ ಬೇಡ ಎಂದ ಸುರೇಶ್ ಕುಮಾರ್
ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಆತಂಕ ಬೇಡ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಭರವಸೆ ಕೊಟ್ಟಿದ್ದಾರೆ. ಯಾವುದೇ ವಿದ್ಯಾರ್ಥಿಗೂ ತೊಂದರೆಯಾಗದಂತೆ ಎಲ್ಲರಿಗೂ ಪ್ರಥಮ ಪಿಯುಸಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪಿಯು ಕಾಲೇಜುಗಳಲ್ಲಿ ಒಟ್ಟಾರೆ 12 ಲಕ್ಷ ಸೀಟುಗಳು ಲಭ್ಯವಿವೆ. ಜಿಲ್ಲಾವಾರು ಅಂಕಿ ಅಂಶಗಳನ್ನು ಸಂಗ್ರಹಿಸಿದ್ದು, ಅದಕ್ಕಾಗಿ ಅಧಿಕಾರಿಗಳ ಸಮನ್ವಯ ವ್ಯವಸ್ಥೆ ರೂಪಿಸಲಾಗುತ್ತಿದೆ. ಯಾವುದೇ ವಿದ್ಯಾರ್ಥಿಗೂ ಪಿಯು ಪ್ರವೇಶಕ್ಕೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ. ಯಾವುದೇ ಶಿಕ್ಷಣ ಸಂಸ್ಥೆಗಳು ಪಿಯುಸಿ ಸೀಟು ಹೆಚ್ಚಳದ ಪ್ರಸ್ತಾವನೆಯನ್ನು ಸಲ್ಲಿಸಿದರೆ, ಅವರ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಸುರೇಶ್ ಕುಮಾರ್ ಭರವಸೆ ಕೊಟ್ಟಿದ್ದಾರೆ.
ಪಿಯುಸಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳು ಸೇರಿದಂತೆ ವಿದ್ಯಾರ್ಥಿಗಳಿಗೆ ಐಟಿಐ ಹಾಗೂ ಜೆಒಸಿ ತರಗತಿಗಳಿಗೂ ಪ್ರವೇಶ ಸಿಗಲಿದೆ. ಈ ವರ್ಷದಿಂದ ಜೆಒಸಿಯನ್ನೂ ಕೂಡ ಪಿಯುಸಿಗೆ ಸಮಾನ ಎಂದು ಪರಿಗಣಿಸಿ ಸರ್ಕಾರ ಆದೇಶ ಮಾಡಿದೆ. ಹೀಗಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಎಲ್ಲ ವಿಧ್ಯಾರ್ಥಿಗಳಿಗೂ ಮುಂದಿನ ಶಿಕ್ಷಣಕ್ಕೆ ಅವಕಾಶ ಸಿಗಲಿದೆ.
ಕಳೆದ ವರ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು
ಭಾಷಾ 1 ವಿಷಯಕ್ಕೆ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದ 8,19,694 ವಿದ್ಯಾರ್ಥಿಗಳ ಪೈಕಿ 8,16,544 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರಲ್ಲಿ 3150 ಮಕ್ಕಳು ಗೈರು ಹಾಜರಾಗಿಯಾಗಿದ್ದು, ಶೇಕಡಾ 99.62 ಹಾಜರಾತಿ ಇದೆ. ಕಳೆದ ವರ್ಷ ಮಕ್ಕಳ ಪರೀಕ್ಷಾ ಹಾಜರಾತಿ ಶೇಕಡಾ 98.41ರಷ್ಟಿತ್ತು. ಭಾಷಾ 2 ವಿಷಯಕ್ಕೆ 8,27,988 ಅಭ್ಯರ್ಥಿಗಳು ನೊಂದಾಯಿಸಿಕೊಂಡಿದ್ದು ಅವರಲ್ಲಿ 8,24,686 ಅಭ್ಯರ್ಥಿಗಳು ಹಾಜರಾಗಿದ್ದರು. 3302 ಮಕ್ಕಳು ಪರೀಕ್ಷೆಗೆ ಗೈರು ಹಾಜರಾಗಿದ್ದು ಒಟ್ಟಾರೆ ಶೇಕಡಾ 99.6 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಕಳೆದ ವರ್ಷ ಇದು ಶೇಕಡಾ 98.47 ರಷ್ಟು ಇತ್ತು.
ಭಾಷಾ 3 ವಿಷಯದ ಪರೀಕ್ಷೆಯನ್ನು ಬರೆಯಲು 8,17,640 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದರು ಅವರಲ್ಲಿ 8,14,538 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 3102 ಮಕ್ಕಳು ಗೈರು ಹಾಜರಾಗಿದ್ದಾರೆ. ಆ ಮೂಲಕ ಒಟ್ಟಾರೆ ಶೇಕಡಾ 99.62 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಇದು ಕಳೆದ ವರ್ಷ ಶೇಕಡಾ 98.47ರಷ್ಟಿತ್ತು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
SSLC ಫಲಿತಾಂಶದ ನಂತರ PUC ಪ್ರವೇಶ
"ಬರುವ ಆಗಸ್ಟ್ 10ನೇ ತಾರಿಖಿನೊಳಗೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲು ಪ್ರಾಥಮಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದ ನಂತರ ಎಲ್ಲರಿಗೂ ಪ್ರವೇಶ ಕಲ್ಪಿಸಲಾಗುತ್ತದೆ. ಕಳೆದ ವರ್ಷಕ್ಕಿಂತ ಈ ವರ್ಷ ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಶೇಕಡಾವಾರು ಹಾಜರಾತಿಯೂ ಸಹ ಈ ಸಲ ಹೆಚ್ಚಾಗಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳ ಮುಂದಿನ ಅಧ್ಯಯನಕ್ಕೆ ಅವಕಾಶ ಮಾಡಿ ಕೊಡಲಾಗುತ್ತಿದೆ" ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇನ್ನು ಶಾಲೆಗಳನ್ನು ಆರಂಭಿಸುವ ಕುರಿತು ಸಚಿವ ಸುರೇಶ್ ಕುಮಾರ್ ಸ್ಪಷ್ಟತೆ ಕೊಟ್ಟಿದ್ದಾರೆ. "ಶಾಲೆ ಆರಂಭಿಸುವ ಇಲಾಖೆ ರಚಿಸಿರುವ ಟಾಸ್ಕ್ ಫೋರ್ಸ್ ತನ್ನ ಹಂತದಲ್ಲಿ ಸವಿವರವಾಗಿ ಚರ್ಚಿಸಿದೆ. ಈ ಕುರಿತಂತೆ ಮುಂದಿನ ದಿನಗಳಲ್ಲಿ ಸಭೆ ಸೇರಿ ಎಲ್ಲ ಆಯಾಮಗಳನ್ನು ಅವಲೋಕಿಸಿ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು" ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. ಹೀಗಾಗಿ ಕಳೆದ ಒಂದೂವರೆ ವರ್ಷಗಳಿಂದ ಕುಂಠಿತಗೊಂಡಿರುವ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವ ಲಕ್ಷಣಗಳಿವೆ.