ಜೆಡಿಎಸ್ ಸೇರ್ತಿನಿ ಅಂತ ಯಾವ ಮುಠ್ಠಾಳ ಹೇಳಿದ? ಈಶ್ವರಪ್ಪ ಕೆಂಡ
Recommended Video
ಕೊಪ್ಪಳ, ಅಕ್ಟೋಬರ್ 17: ಮಾಜಿ ಉಪಮುಖ್ಯಮಂತ್ರಿ ಬಿಜೆಪಿ ಕೆ.ಎಸ್ ಈಶ್ವರಪ್ಪ ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿ ಸೋಮವಾರ ಚರ್ಚೆಗೆ ಬಂದಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಈಶ್ವರಪ್ಪ, 'ಇದು ಮುಟ್ಟಾಳತನದ ಪರಮಾವಧಿ. ನಾನು ಜೆಡಿಎಸ್ ಗೆ ಹೋಗ್ತೀನಿ ಎನ್ನುವುದು ಯಾರೋ ಮುಠ್ಠಾಳರು ಹೇಳಿರೋ ಮಾತು,' ಎಂದು ಕಿಡಿ ಕಾರಿದ್ದಾರೆ.
ಗಂಗಾವತಿಯ ಆನೆಗೊಂದಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಈಶ್ವರಪ್ಪ, "ನನ್ನ ಉಸಿರು ಬಿಜೆಪಿ, ನನ್ನ ತಾಯಿ ಬಿಜೆಪಿ. ಸಾಯುವವರೆಗೂ ಬಿಜೆಪಿಯಲ್ಲಿರುತ್ತೇನೆ. ನಾನು ಜೆಡಿಎಸ್ ಗೆ ಹೋಗ್ತೀನಿ ಅಂತ ಹೇಳಿದವರನ್ನು ನಿಮಾನ್ಸ್ ಗೆ ಸೇರಿಸಬೇಕು. ಯಡಿಯೂರಪ್ಪ ನಾನು ಅಣ್ಣ ತಮ್ಮ ಇದ್ದಂತೆ ಅಂತ," ತಮ್ಮ ಎಂದಿನ ಡೈಲಾಗ್ ಬಿಟ್ಟಿದ್ದಾರೆ.
ಅದ್ದೂರಿ ವಜ್ರಮಹೋತ್ಸವ ಅಗತ್ಯವಿಲ್ಲ
ವಿಧಾನಸೌಧ ವಜ್ರಮಹೋತ್ಸವ ಅದ್ಧೂರಿಯಾಗಿ ಆಚರಣೆ ಮಾಡೋ ಅಗತ್ಯವಿಲ್ಲ. ಕಡಿಮೆ ಖರ್ಚಿನಲ್ಲೆ ವಜ್ರಮಹೋತ್ಸವ ಮಾಡಬಹುದು. ಶಾಸಕರು ಬಂಗಾರ ಕಿಟ್ ತಗೊಂಡರೆ ಅದು ಮೂರ್ಖತನದ ಕೆಲಸ. ಬಿಜೆಪಿ ಶಾಸಕರು ಒಂದು ಗುಲಗುಂಜಿ ಬಂಗಾರ ತಗೋಳೋದಿಲ್ಲ. ಬಂಗಾರ ಹಂಚುವ ಯೋಚನೆಯಿದ್ದರೆ ಕೈಬಿಡಿ ಅಂತ ಸಭಾಪತಿಯವರಿಗೆ ಮನವಿ ಮಾಡುತ್ತೇನೆ ಎಂದು ಈಶ್ವರಪ್ಪ ಸ್ಪಷ್ಟಪಡಿಸಿದರು.
ಕಲಾಪದಲ್ಲಿ ಶಾಸಕರ ಗೈರು ಹಾಜರಿ ತಪ್ಪಿಸೋಕೆ ಅನ್ನಭಾಗ್ಯ ಜಾರಿ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, "ಅನ್ನಕ್ಕಾಗದಷ್ಟು ಬಡವರು ಶಾಸಕರಾಗಿಲ್ಲ. ವಿಧಾನಸೌಧದಲ್ಲಿ ಅನ್ನತಿಂದು ಮನೆಗೆ ಹೋಗಿ ಮಲಗಿಕೊಂಡ್ರೆ ಏನು ಮಾಡೋದು? ಅಂಥ ಶಾಸಕರು ಯಾಕೆ ಬೇಕು? ಅನ್ನ ಕೊಡುವುದರಿಂದ ಗೈರು ಹಾಜರಿ ತಪ್ಪಿಸೋಕೆ ಆಗೋಲ್ಲ," ಎಂದು ಅಭಿಪ್ರಾಯಪಟ್ಟರು.