ಐಟಿ ದಾಳಿ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ನೀಡಿದ ಬಿಜೆಪಿ ಮುಖಂಡ ಯಾರು?
Recommended Video
ಬೆಂಗಳೂರು, ಮಾರ್ಚ್ 28: ಇಂದು ರಾಜ್ಯದ ಹಲವೆಡೆ ಐಟಿ ಅಧಿಕಾರಿಗಳು ಜೆಡಿಎಸ್-ಕಾಂಗ್ರೆಸ್ ಮುಖಂಡರು ಸಚಿವರು, ಸಂಸದರ ಮೇಲೆ ದಾಳಿ ನಡೆಸಿ ತನಿಖೆ ನಡೆಸಿದ್ದಾರೆ. ಇದಕ್ಕೆ ಮೈತ್ರಿ ನಾಯಕರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಾಂಗ್ರೆಸ್-ಜೆಡಿಎಸ್ ಶಾಸಕರ ಮೇಲೆ ಗುರುವಾರ ಬೆಳಿಗ್ಗೆ ಐಟಿ ದಾಳಿ ಆಗುತ್ತದೆ ಎಂದು ಕುಮಾರಸ್ವಾಮಿ ಅವರು ನಿನ್ನೆಯೇ ಹೇಳಿದ್ದರು. ಕುಮಾರಸ್ವಾಮಿ ಅವರು ದಾಳಿಯ ಬಗ್ಗೆ ಹೇಳಿದ ಕೆಲವೇ ಗಂಟೆಗಳಲ್ಲಿ ಐಟಿ ದಾಳಿ ಪ್ರಾರಂಭವಾಯಿತು. ಕುಮಾರಸ್ವಾಮಿ ಹೇಳಿದ್ದಂತೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅಧಿಕಾರಿಗಳೇ ದಾಳಿಗಳಲ್ಲಿ ಭಾಗವಹಿಸಿದರು. ಕುಮಾರಸ್ವಾಮಿ ಅವರು ಹೇಳಿದಂತೆಯೇ 15 -20 ಕಡೆಗಳಲ್ಲಿ ದಾಳಿ ನಡೆಯಿತು. ಆದರೆ ಇದೆಲ್ಲಾ ಕುಮಾರಸ್ವಾಮಿ ಅವರಿಗೆ ಮುಂಎಯೇ ಹೇಗೆ ಗೊತ್ತಾಯಿತು ಎಂಬುದು ಭಾರಿ ಕುತೂಹಲ ಕೆರಳಿಸಿದೆ.
ಕುಮಾರಸ್ವಾಮಿ ಅವರು ನಿನ್ನೆಯೇ ಹೇಳಿದಂತೆ ಬಿಜೆಪಿಯ ಮುಖಂಡರೊಬ್ಬರು ನನಗೆ ಈ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದಿದ್ದರು. ಕುಮಾರಸ್ವಾಮಿ ಅವರ ಈ ಹೇಳಿಕೆ ಬಿಜೆಪಿ ಒಳಗೆ ಸುಂಟರಗಾಳಿ ಎಬ್ಬಿಸಿದೆ. ಬಿಜೆಪಿಯ ಒಳಗೆ ಇದ್ದುಕೊಂಡೆ ಕುಮಾರಸ್ವಾಮಿಗೆ ಮಾಹಿತಿ ರವಾನಿಸುತ್ತಿರುವ ಆ ಮುಖಂಡ ಯಾರು ಎಂಬುದನ್ನು ಬಿಜೆಪಿ ಪತ್ತೆ ಹಚ್ಚಲು ತನಿಖೆ ಪ್ರಾರಂಭಿಸಿದೆ.
ಬಿಜೆಪಿಯ ದೊಡ್ಡ ನಾಯಕರಿಂದಲೇ ವಿಷಯ ಲೀಕ್
ಐಟಿ ದಾಳಿಗಳಂತಹಾ ದೊಡ್ಡ ಮಟ್ಟದ ವಿಷಯಗಳು ಲೀಕ್ ಮಾಡಬೇಕೆಂದರೆ ಆ ವ್ಯಕ್ತಿ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಹುದ್ದೆಯಲ್ಲಿಯೇ ಇರಬೇಕು, ಅಥವಾ ದೆಹಲಿ ಬಿಜೆಪಿಗೆ ಆಪ್ತನಾಗಿರಬೇಕು, ಬಿಜೆಪಿಯ ಸಾಮಾನ್ಯ ಮುಖಂಡರುಗಳಿಗೆ ಐಟಿ ದಾಳಿಗಳ ಮಾಹಿತಿ ಸಿಗಲು ಸಾಧ್ಯವೇ ಇಲ್ಲ, ಹಾಗಾಗಿ ಆ ದೊಡ್ಡ ತಲೆ ಯಾರಿರಬಹುದು ಎಂಬ ಹುಡುಕಾಟ ಈಗ ಪ್ರಾರಂಭವಾಗಿದೆ.
ಇಬ್ಬರ ಹೆಸರು ಕೇಳಿಬರುತ್ತಿದೆ
ಬಿಜೆಪಿಯಲ್ಲಿ ಈ ರೀತಿಯ ಘಟನೆಗಳು ನಡೆದಾಗ ಅದೇಕೋ ಏನೋ ಆರ್.ಅಶೋಕ್ ಅವರ ಕಡೆಗೆ ಅನುಮಾನದ ದೃಷ್ಟಿ ಬೀರಲಾಗುತ್ತದೆ, ಇದಕ್ಕೆ ಅವರ ಜಾತಿ ಕಾರಣ. ಈ ಬಾರಿಯೂ ಹಾಗೆಯೇ ಆಗುತ್ತಿದೆ. ಆದರೆ ಈ ಬಾರಿ ಅವರ ಜೊತೆಗೆ ಸದಾನಂದಗೌಡ ಅವರ ಹೆಸರೂ ಸಹ ಜೊತೆಗೆ ಕೇಳಿಬರುತ್ತಿದೆ. ಆದರೆ ಇದೆಲ್ಲದ್ದಕ್ಕೂ ಸ್ಪಷ್ಟ ಸಾಕ್ಷ್ಯಗಳಿಲ್ಲ. ಈ ಎರಡೂ ಹೆಸರು ಕೇವಲ ಜಾತಿಯ ಕಾರಣದಿಂದಷ್ಟೆ ಮುಂದಕ್ಕೆ ಬಂದಿವೆ.
ಉದ್ದೇಶಪೂರ್ವಕವಾಗಿ ಹೇಳಿದರಾ ಕುಮಾರಸ್ವಾಮಿ
ಕುಮಾರಸ್ವಾಮಿ ಅವರು ಬಿಜೆಪಿ ಪಕ್ಷದ ಒಳಗೆ ಅನುಮಾನದ ಹೊಗೆ ಆಡಲೆಂದೇ ಬಿಜೆಪಿಯ ನಾಯಕರು ಹೇಳಿದ್ದಾರೆ ಎಂಬ ಹುಸಿ ಬಾಂಬ್ ಹಾಕಿರುವ ಸಾಧ್ಯತೆ ಇದೆ. ಅವರಿಗೆ ಇತರೆ ಮೂಲಗಳಿಂದ ಕುಮಾರಸ್ವಾಮಿ ಅವರಿಗೆ ಮಾಹಿತಿ ದೊರೆತಿದೆ, ಆದರೆ ಅದನ್ನು ಮರೆಮಾಚಿ ಕುಮಾರಸ್ವಾಮಿ ಅವರು ಬಿಜೆಪಿಯಲ್ಲಿ ಅನುಮಾನದ ಅಲೆ ಏಳಲಿ ಎಂದು ಉದ್ದೇಶಪೂರ್ವಕವಾಗಿ ಬಿಜೆಪಿ ಮುಖಂಡನ ಹೆಸರು ಹೇಳಿದ್ದಾರೆ ಎನ್ನಲಾಗಿದೆ.
ಗುಪ್ತಚರ ಇಲಾಖೆ ಕೊಟ್ಟಿತಾ ಮಾಹಿತಿ?
ಗುಪ್ತಚರ ಇಲಾಖೆಯು ಕುಮಾರಸ್ವಾಮಿ ಅವರ ಕೈಕೆಳಗೆ ಕಾರ್ಯನಿರ್ವಹಿಸುತ್ತಿದೆ. ಅದರ ಮೂಲಕ ಕುಮಾರಸ್ವಾಮಿ ಅವರಿಗೆ ಮಾಹಿತಿ ಬಂದಿರಲಿಕ್ಕೂ ಸಾಕು, ಅದನ್ನು ಅವರು ಬಿಜೆಪಿ ಮೇಲೆ ಹಾಕಿರಲಿಕ್ಕೂ ಸಾಕು. ಮತ್ತೊಂದು ವಾದವೆಂದರೆ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರಿಂದಲೇ ಕುಮಾರಸ್ವಾಮಿ ಅವರಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.
ಕುಮಾರಸ್ವಾಮಿ ಅವರಿಗೆ ಸುದ್ದಿ ಮೂಲ ಹೆಚ್ಚು
ಕುಮಾರಸ್ವಾಮಿ ಅವರಿಗೆ ಸುದ್ದಿಮೂಲಗಳು ಬಹಳಷ್ಟಿವೆ ಎಂಬುದರಲ್ಲಿ ಅನುಮಾನವೇ ಇಲ್ಲ, ತಮ್ಮ ಮೂಲಗಳನ್ನು ಬಳಸಿಕೊಂಡು ಎದುರಾಳಿಗಳಿಗೆ ಭಾರಿ ಹಾನಿಯನ್ನು ಈ ಹಿಂದೆಯೂ ಅವರು ಮಾಡಿದ್ದರು, ಸಿದ್ದರಾಮಯ್ಯ ಅವರ ಉಬ್ಲೋ ವಾಚಿನ ಪ್ರಕರಣ ನೆನಪಿಸಿಕೊಳ್ಳಬಹುದು, ಅದನ್ನು ಹೊರತೆಗೆದದ್ದು ಕುಮಾರಸ್ವಾಮಿ ಅವರೇ.
ಐಟಿ ಅಧಿಕಾರಿಗಳ ಮೇಲೆಯೇ ಅನುಮಾನ
ಇವೆಲ್ಲವುದರ ಹೊರತಾಗಿ ಐಟಿ ಅಧಿಕಾರಿಗಳ ಬಗ್ಗೆಯೂ ಅನುಮಾನ ಮೂಡುತ್ತದೆ. ಐಟಿ ದಾಳಿಗಳೂ, ವಿಶೇಷವಾಗಿ ಈ ರೀತಿಯ ವಿಐಪಿ, ರಾಜಕಾರಣಿಗಳ ಮೇಲೆ ದಾಳಿ ನಡೆವಾಗ ದಾಳಿಯ ಗುರಿಯ ಬಗ್ಗೆ ಅತಿಯಾದ ಗೌಪ್ಯತೆ ಕಾಪಾಡಿಕೊಳ್ಳಲಾಗುತ್ತದೆ. ಕೇವಲ ಮುಖ್ಯ ಅಧಿಕಾರಿಗಳ ಹೊರತಾಗಿ ಇನ್ನಾರಿಗೂ ಮಾಹಿತಿ ಸಿಗುವುದಿಲ್ಲ, ಆದರೂ ದಾಳಿ ಬಗ್ಗೆ ಕುಮಾರಸ್ವಾಮಿಗೆ ತಿಳಿದಿದ್ದು ಹೇಗೆ ಎನ್ನುವುದು ಆಶ್ಚರ್ಯ.
ಕುಮಾರಸ್ವಾಮಿ ಹೇಳಿದ್ದು ಸತ್ಯವೇ?
ಐಟಿ ಅಧಿಕಾರಿಗಳು ದಾಳಿ ನಡೆಸಬೇಕಾದರೆ, ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡುವುದಿಲ್ಲ, ಸ್ಥಳೀಯ ಪೊಲೀಸರ ನೆರವು ಪಡೆಯುತ್ತಾರಾದರೂ, ಈ ಬಾರಿಯ ದಾಳಿಗೆ ಆ ನೆರವನ್ನೂ ಪಡೆಯಲಾಗಿಲ್ಲ, ಸಿಆರ್ಪಿಎಫ್ ಯೋಧರನ್ನು ಭದ್ರತೆಗೆ ಕರೆತರಲಾಗಿತ್ತು, ಹಾಗಿದ್ದ ಮೇಲೆ ಕುಮಾರಸ್ವಾಮಿ ಅವರು ಹೇಳಿದಂತೆ ಬಿಜೆಪಿ ಮುಖಂಡರಿಂದಲೇ ಮಾಹಿತಿ ಲೀಕ್ ಆಗಿದೆಯೇ ಎಂಬ ಅನುಮಾನ ದಟ್ಟವಾಗುತ್ತದೆ.