ಹಿರಿಯ ಮುತ್ಸದ್ದಿ ಎಸ್ಸೆಂ ಕೃಷ್ಣ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ?
Recommended Video
ಬೆಂಗಳೂರು, ನವೆಂಬರ್ 27 : ಸರಿಯಾಗಿ 24ನೇ ಮಾರ್ಚ್ ರಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ವಿದೇಶಾಂಗ ಸಚಿವ, ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು ಭಾರತೀಯ ಜನತಾ ಪಕ್ಷವನ್ನು ಸೇರಿ ಒಂದು ವರ್ಷವಾಗಲಿದೆ.
ಕೃಷ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ನಲವತ್ತು ವರ್ಷಗಳ ಸೇವೆಯನ್ನು ಸಲ್ಲಿಸಿ ಅನಿವಾರ್ಯ ಕಾರಣದಿಂದಾಗಿ ಬಿಜೆಪಿಯನ್ನು ಸೇರುವ ಮುನ್ನ, ಅವರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರನ್ನು ದೆಹಲಿಯಲ್ಲಿ ಭೇಟಿ ಮಾಡಿದಾಗ, ಅಮಿತ್ ಶಾ ಅವರು ಒಂದು ಮಾತನ್ನು ಹೇಳಿದ್ದರು.
ಎಸ್ಎಂ ಕೃಷ್ಣ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ: ಅಮಿತ್ ಶಾ
"ದೇಶದಲ್ಲಿ ಬದಲಾವಣೆಯ ಸಮಯ ಬಂದಿದೆ. ಎಸ್ ಎಂ ಕೃಷ್ಣ ಅವರ ಸೇರ್ಪಡೆಯಿಂದ ಬಿಜೆಪಿಗೆ ಆನೆಬಲ ಬಂದಂತಾಗಿದೆ. ಭಾರತೀಯ ಜನತಾ ಪಕ್ಷ ಅವರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳಲಿದೆ. ಅವರ ಅಪಾರ ರಾಜಕೀಯ ಜ್ಞಾನದ ಲಾಭವನ್ನು ಬಿಜೆಪಿ ಪಡೆಯಲಿದೆ" ಎಂದು ಅಮಿತ್ ಶಾ ಸಾರಿದ್ದರು.
ಮೋದಿ ಆದರ್ಶಗಳಿಗೆ ಮರುಳಾಗಿ ಬಿಜೆಪಿ ಸೇರಿದೆ: ಎಸ್ಸೆಂ ಕೃಷ್ಣ
ಆದರೆ, 85 ವರ್ಷ ವಸಂತ ಋತುಗಳನ್ನು ಕಂಡಿರುವ, ಕನ್ನಡ ನಾಡಿನ ಹಿರಿಯ ಮುತ್ಸದ್ದಿ, ಅಪಾರ ರಾಜಕೀಯ ಜ್ಞಾನವುಳ್ಳ ಎಸ್ಸೆಂ ಕೃಷ್ಣ ಅವರು ಈಗ ಎಲ್ಲಿದ್ದಾರೆ? ಭಾರತೀಯ ಜನತಾ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರಾ? ಅಮಿತ್ ಶಾ ಅವರು ಹೇಳಿದಂತೆ, ಅವರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳುತ್ತಿದೆಯಾ?
ಕೃಷ್ಣ ಅವರ ಪ್ರಸ್ತುತಿ ಎಂದೂ ಅಪ್ರಸ್ತುತವಲ್ಲ
ಈ ಪ್ರಶ್ನೆಗಳಿಗೆ ಕೃಷ್ಣ ಅವರಿಂದ ಉತ್ತರ ಕಂಡುಕೊಳ್ಳುವುದು ಕಷ್ಟದ ಕೆಲಸವಾದರೂ, ಸದ್ಯದ ರಾಜಕೀಯ ಚಟುವಟಿಕೆಗಳನ್ನು ಕೂಲಂಕಷವಾಗಿ ಗಮನಿಸಿದಾಗ ಉತ್ತರ ಕಂಡುಕೊಳ್ಳುವುದು ಅಂತಹ ಕಷ್ಟದ ಕೆಲಸವೇನಲ್ಲ. ಬಿಜೆಪಿಯಲ್ಲಿ ಕೃಷ್ಣ ಅವರ ಪ್ರಸ್ತುತಿ ಎಂದೂ ಅಪ್ರಸ್ತುತವಾಗಲಾರದು ಎಂಬುದನ್ನು ಬಿಜೆಪಿಯ ರಾಷ್ಟ್ರ ಮತ್ತು ಕರ್ನಾಟಕದ ನಾಯಕರು ಅರಿತುಕೊಳ್ಳಬೇಕು.
ಕೃಷ್ಣ ಅವರ ಮನಸ್ಸಿಗೆ ಇನ್ನೂ ವಯಸ್ಸಾಗಿಲ್ಲ
ಕೃಷ್ಣ ಅವರ ದೇಹಕ್ಕೆ ವಯಸ್ಸಾಗಿದ್ದರೂ ಮನಸ್ಸಿಗೆ ಇನ್ನೂ ವಯಸ್ಸಾಗಿಲ್ಲ. ಕರ್ನಾಟಕ ಕಂಡ ಅತ್ಯಂತ ಪ್ರಬುದ್ಧ ರಾಜಕಾರಣಿಗಳಲ್ಲಿ ಕೃಷ್ಣರೂ ಒಬ್ಬರು. ಅವರು ಬಿಜೆಪಿಯ ಪರಿವರ್ತನಾ ಯಾತ್ರೆಗಳಲ್ಲಿ, ಕ್ಷೇತ್ರಕ್ಷೇತ್ರಗಳ ಪ್ರಚಾರದಲ್ಲಿ ಮೊದಲಿನಷ್ಟು ಸಕ್ರಿಯವಾಗಿ ಭಾಗವಹಿಸಲಾರರು. ಅವರಿಂದ ನಿರೀಕ್ಷಿಸುವುದು ಕೂಡ ಅಷ್ಟೊಂದು ಸಮಂಜಸವಲ್ಲ.
ಪರಿವರ್ತನಾ ಯಾತ್ರೆಯ ಮೊದಲ ದಿನ ಕೃಷ್ಣ ಅಲ್ಲಿರಲಿಲ್ಲ
ಅಮಿತ್ ಶಾ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದಾಗ ಅವರನ್ನು ಸ್ವಾಗತಿಸಲು ಕೃಷ್ಣ ಬಂದಿದ್ದು ಹೊರತುಪಡಿಸಿದರೆ ಪಕ್ಷದ ಸಭೆಗಳಲ್ಲಿ ಅವರು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಯಡಿಯೂರಪ್ಪನವರ 75 ದಿನಗಳ ಪರಿವರ್ತನಾ ಯಾತ್ರೆ ಬೆಂಗಳೂರಿನಲ್ಲಿ ಆರಂಭವಾದಾಗಲಾದರೂ ಕೃಷ್ಣ ಅವರು ಅಲ್ಲಿರಬೇಕಿತ್ತು. ಕಪ್ಪು ಕನ್ನಡಕ ಧರಿಸಿ ಅಭಿಮಾನಿಗಳನ್ನು ಹುರಿದುಂಬಿಸಬೇಕಿತ್ತು. ಅವರನ್ನು ಏಕೆ ಆಹ್ವಾನಿಸಲಾಗಿರಲಿಲ್ಲ ಎಂಬುದು ಇಂದಿಗೂ ಚಿದಂಬರ ಪ್ರಶ್ನೆಯಾಗಿದೆ.
ಉಪ ಚುನಾವಣೆಯಲ್ಲಿ ಸೋತಿದ್ದು ಧಕ್ಕೆಯುಂಟಾಯಿತೆ
ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭೆ ಉಪ ಚುನಾವಣೆಯ ಸಂದರ್ಭದಲ್ಲಿ ಪ್ರಚಾರಗಳಲ್ಲಿ ಅವರು ಸಕ್ರೀಯವಾಗಿ ಭಾಗವಹಿಸಿದ್ದರು. ಬಿಜೆಪಿಗೆ ಗೆಲುವು ತಂದುಕೊಡುವಲ್ಲಿ ಅವರು ವಿಫಲರಾಗಿರುವುದು ಅವರ ವರ್ಚಸ್ಸು ಕುಂದಾಯಿತಾ? ಅಥವಾ ಇನ್ನು ನನ್ನಿಂದಾಗುವುದಿಲ್ಲ ಎಂದು ಅವರೇ ಕಣದಿಂದ ಹಿಂದೆ ಸರಿದುಕೊಂಡರಾ?
ಮಂಡ್ಯದಲ್ಲಿ ಕೃಷ್ಣ ಪ್ರಭಾವ ಅಲ್ಲಗಳೆಯುವಂತಿಲ್ಲ
ಏನೇ ಆದರೂ, ಮಂಡ್ಯ ಮತ್ತು ಮೈಸೂರು ವಿಭಾಗದಲ್ಲಿ ಕೃಷ್ಣ ಅವರಿಗಿರುವ ಪ್ರಭಾವವನ್ನು ಇನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ. ಪ್ರಸ್ತುತ ಒಳಜಗಳಗಳಿಂದಾಗಿ ಕಾಂಗ್ರೆಸ್ ಛಿದ್ರಛಿದ್ರವಾಗಿದೆ. ಈ ಸಮಯದಲ್ಲಿ ಎಸ್ಸೆ ಕೃಷ್ಣ ಅವರನ್ನು ಬಳಸಿಕೊಂಡರೆ ಕಾಂಗ್ರೆಸ್ ಮತ್ತು ಜೆಡಿಎಸ್ ಹಿಡಿತವನ್ನು ಸಡಿಲಿಸಲು ಬಿಜೆಪಿಗೆ ಸಾಧ್ಯವಾಗಬಹುದೇನೋ. ಬಿಜೆಪಿ ಹೈಕಮಾಂಡ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತದಾ?
ಸಿದ್ಧಾರ್ಥ ಅವರ ಮೇಲಿನ ಐಟಿ ದಾಳಿ
ಇದೆಲ್ಲಕ್ಕಿಂತ ಮಿಗಿಲಾಗಿ, ಇತ್ತೀಚೆಗೆ ಅವರ ಅಳಿಯ ಸಿದ್ಧಾರ್ಥ್ ಅವರ ಮೇಲೆ ನಡೆದ ಐಟಿ ದಾಳಿ ಕೃಷ್ಣ ಅವರನ್ನು ಜರ್ಝರಿತರನ್ನಾಗಿ ಮಾಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಈ ಹಿನ್ನೆಲೆಯಲ್ಲಿ ಅವರು ರಾಜಕೀಯದ ಸಹವಾಸವೇ ಬೇಡ ಎಂದು ತೆರೆಮರೆಗೆ ಸರಿದಿರಲೂಬಹುದು. ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿವೆ. ಈ ಸಂದರ್ಭದಲ್ಲಾದರೂ ಕೃಷ್ಣ ಅವರು ಪಾಂಚಜನ್ಯವನ್ನು ಊದುತ್ತಾರಾ?