"ಬಿಜೆಪಿ ಸರ್ಕಾರದ ಇಂಜಿನ್ ಆನ್ ಆಗಿಲ್ಲ; ಟೇಕಾಫ್ ಯಾವಾಗ?"
ಬೆಂಗಳೂರು, ಆಗಸ್ಟ್ 27 : "ಸರ್ಕಾರದ ಇಂಜಿನ್ ಇನ್ನೂ ಆನ್ ಆಗಿಲ್ಲ. ಟೇಕ್ ಆಫ್ ಆಗುವುದು ಇನ್ನು ಯಾವಾಗಲೋ?. ಸರ್ಕಾರ ತನ್ನ ಕೆಲಸ ಆರಂಭಿಸುವುದು ಯಾವಾಗ?" ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಲೇವಡಿ ಮಾಡಿದರು.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, "ಬಿಜೆಪಿಯವರ ಭ್ರಷ್ಟಾಚಾರ, ಅನಾಚಾರ, ಪಕ್ಷಪಾತ ಜನರ ಮುಂದೆ ಇದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಇಂತಹದೇ ಸ್ಥಿತಿ ಬರುತ್ತದೆ ಎಂದು ನಾವು ಹಿಂದಿನಿಂದಲೂ ಹೇಳುತ್ತಲೇ ಬಂದಿದ್ದೆವು' ಎಂದರು.
3 ಉಪ ಮುಖ್ಯಮಂತ್ರಿಗಳಿಗೆ ಹೈಕಮಾಂಡ್ ಖಡಕ್ ಸಂದೇಶ!
"ಪ್ರವಾಹ ಪರಿಸ್ಥಿತಿಯಿಂದ ರಾಜ್ಯದ ಲಕ್ಷಾಂತರ ಜನರು ನಿರ್ಗತಿಕರಾಗಿದ್ದಾರೆ. ಸಂತ್ರಸ್ತರ ಪುನರ್ವಸತಿಗೆ ತುರ್ತು ಪರಿಹಾರ ಕಲ್ಪಿಸದ ರಾಜ್ಯ ಸರ್ಕಾರದ ವಿರುದ್ಧ ಮತ್ತು ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸದ ಕೇಂದ್ರ ಸರ್ಕಾರದ ವಿರುದ್ಧ ಸದನದ ಒಳಗೂ, ಹೊರಗೂ ಹೋರಾಟ ಮಾಡಲಾಗುವುದು" ಎಂದು ತಿಳಿಸಿದರು.
ಕೊನೆಗೂ ಅಧಿಕೃತ : ಕರ್ನಾಟಕಕ್ಕೆ 3 ಉಪಮುಖ್ಯಮಂತ್ರಿಗಳು
"ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಹಿರಿಯರನ್ನು ಸಂಪುಟ ರಚನೆ ವೇಳೆ ಕಡೆಗಣಿಸಲಾಗಿದೆ. ಸಿಎಂ ಆಗಿದ್ದಂತಹ ಜಗದೀಶ್ ಶೆಟ್ಟರ್ ಸಚಿವ ಸ್ಥಾನವನ್ನು ಒಪ್ಪಿಕೊಳ್ಳಬಾರದಿತ್ತು. ಇದು ಅವರ ಘನತೆಗೆ ತಕ್ಕುದಾದ ಸ್ಥಾನವಲ್ಲ" ಎಂದು ಹೇಳಿದರು.
ಇಂತಹ ಸರ್ಕಾರ
"ಇಂಥ ಬೇಜವಾಬ್ದಾರಿ ಸರ್ಕಾರ ಇರುವವರೆಗೂ ರಾಜ್ಯಕ್ಕೆ ಒಳ್ಳೆಯದಾಗುವುದಿಲ್ಲ. ಇನ್ನು 6 ತಿಂಗಳಲ್ಲಿ ಇನ್ನು ಏನೆಲ್ಲಾ ಅವಾಂತರಗಳನ್ನು ಈ ಸರ್ಕಾರದಿಂದ ನೋಡಬೇಕಾಗುತ್ತದೊ. ಇಂಥ ಸರ್ಕಾರ ಇರುವುದಕ್ಕಿಂತ ತೊಲಗುವುದು ಒಳ್ಳೆಯದು. ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ ಅದನ್ನು ಎದುರಿಸಲು ಕಾಂಗ್ರೆಸ್ ಸಿದ್ಧವಾಗಿದೆ" ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಕಾಂಗ್ರೆಸ್ನಿಂದ ಹೋರಾಟ
"ಸಿಎಂ ಯಡಿಯೂರಪ್ಪ ಹೇಳಿರುವಂತೆ ಪ್ರವಾಹದಿಂದ ನಷ್ಟವಾಗಿರುವ 50,000 ಕೋಟಿ ರೂ. ಹಣವನ್ನು ಕೇಂದ್ರ ಬಿಡುಗಡೆ ಮಾಡಿಲ್ಲ. 5,000 ಕೋಟಿ ರೂ. ಮಧ್ಯಂತರ ಪರಿಹಾರ ನೀಡಿಲ್ಲ. ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿಲ್ಲ. ನರೇಂದ್ರ ಮೋದಿ ನೆರೆ ಸಮೀಕ್ಷೆಗೆ ಆಮಿಸಿಲ್ಲ. ಇದರ ವಿರುದ್ಧ ಬೆಂಗಳೂರಿನಲ್ಲಿ ಆಗಸ್ಟ್ 29 ರಂದು ಹೋರಾಟ ಮಾಡಲಾಗುವುದು" ಎಂದು ಹೇಳಿದರು.
ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ
"ಸಿಎಂ ಯಡಿಯೂರಪ್ಪ ಅವರು ಯೋಗ, ಯೋಗ್ಯತೆ ಮೇಲೆ ಸಚಿವ ಸ್ಥಾನ ಹಂಚಿಕೆ ಮಾಡಿದ್ದಾರೆ. 18 ಮಂದಿ ಸಚಿವರಲ್ಲಿ 10 ಮಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಕ್ರಿಮಿನಲ್ ಅಪರಾಧ ಹಿನ್ನೆಲೆಯುಳ್ಳವರನ್ನೇ ಯಡಿಯೂರಪ್ಪ ಅವರು ಸಂಪುಟಕ್ಕೆ ತೆಗೆದುಕೊಂಡಿದ್ದಾರೆ. ಇದೇ ಕರ್ನಾಟಕ ಬಿಜೆಪಿ ಸರ್ಕಾರದ ನೈಜ ಸಾಮರ್ಥ್ಯ ಅಲ್ಲವೇ?" ಎಂದು ಪ್ರಶ್ನಿ ಮಾಡಿದರು.
ಭ್ರಷ್ಟ ಸರ್ಕಾರಕ್ಕೆ ಅಭಿನಂದನೆಗಳು
"ಇಂಥ ಪಕ್ಷ ದ್ರೋಹಿಗಳನ್ನು ಸಂಪುಟಕ್ಕೆ ಸೇರಿಸಿಕೊಂಡ, ಕ್ರಿಮಿನಲ್ ಹಿನ್ನೆಲೆಯವರಿಗೆ ಸಚಿವ ಸ್ಥಾನ ಹಂಚಿದ, ಸಿಎಂ ಯಡಿಯೂರಪ್ಪ ಅವರಿಗೂ, ಸರ್ಕಾರಕ್ಕೆ ಇಂಥ ಸಲಹೆ ನೀಡಿದ ಬಿಜೆಪಿ ಕರ್ನಾಟಕದ ನಾಯಕರಿಗೂ, ಇಂಥವರನ್ನ ಸಂಪುಟಕ್ಕೆ ಸೇರಿಸಿಕೊಳ್ಳಲು ಸಮ್ಮತಿ ನೀಡಿದ ಬಿಜೆಪಿ ಪಕ್ಷದ ಹೈಕಮಾಂಡ್ಗೂ ಭ್ರಷ್ಟ ಸರ್ಕಾರಕ್ಕೂ ಅಭಿನಂದನೆಗಳು" ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.