ಇಂದು ಒಕ್ಕಲಿಗರು, ಅಂದು ಲಿಂಗಾಯತರು: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?
ಅದು ಅಕ್ಟೋಬರ್ 15, 2011. ತಮ್ಮದೇ ಸರಕಾರ ಅಧಿಕಾರದಲ್ಲಿದ್ದಾಗಲೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜೈಲು ಪಾಲಾದರು. ಅವರನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿತ್ತು. ಅಂದೂ ಕೂಡ ಬೆಂಗಳೂರು ಭಾರೀ ಪ್ರತಿಭಟನೆಗೆ ಸಾಕ್ಷಿಯಾಗಿತ್ತು.
ಇದಾದ ಸುಮಾರು ಎಂಟು ವರ್ಷಗಳಲ್ಲಿ ಕಾಂಗ್ರೆಸ್ಸಿನ ಹಿರಿಯ ಮುಖಂಡ ಡಿ. ಕೆ. ಶಿವಕುಮಾರ್ ಬಂಧನವಾಗಿದೆ. ಈಗಲೂ ಭಾರೀ ಪ್ರತಿಭಟನೆ ನಡೆಯುತ್ತಿದೆ. ವ್ಯತ್ಯಾಸ ಏನಂದರೆ, ಅಂದು ಪ್ರತಿಭಟನೆಯ ಮುಂಚೂಣಿಯಲ್ಲಿದ್ದವರು ಲಿಂಗಾಯತ ಮುಖಂಡರು, ಇಂದು ಒಕ್ಕಲಿಗ ನಾಯಕರು ಹೋರಾಟದ ನಾಯಕತ್ವ ವಹಿಸಿದ್ದಾರೆ.
ಅಂದೂ ಲಿಂಗಾಯತ ಮಠಾಧೀಶರೂ ಯಡಿಯೂರಪ್ಪನವರಿಗೆ ಬೆಂಬಲ ನೀಡಿದ್ದರು. ಈಗ ಒಕ್ಕಲಿಗ ಸಂಸ್ಥಾನದ ಪೀಠಾಧಿಪತಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಇಲ್ಲಿ ಯಾರು ಸರಿ, ಯಾರು ತಪ್ಪು ಎನ್ನುವುದಕ್ಕಿಂತ ರಾಜ್ಯರ ಎರಡು ಬಲಿಷ್ಠ ಜಾತಿಗಳು ಹಾಗೂ ಅವು ಮುಖ್ಯವಾಹಿನಿ ರಾಜಕಾರಣದ ವಿಚಾರ ಬಂದಾಗ ಸ್ಪಂದಿಸುವ ರೀತಿಯಲ್ಲಿರುವ ಸಾಮಾನ್ಯತೆ ಗಮನಾರ್ಹ.
ಡಿಕೆಶಿ ಬಂಧನಕ್ಕೆ ಒಕ್ಕಲಿಗ ಟಚ್: ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಬಿಜೆಪಿ ಮಾಸ್ಟರ್ ಪ್ಲಾನ್
ಇಲ್ಲಿ, ಯಾವ ಕಾರಣಕ್ಕಾಗಿ ಆಯಾಯ ಸಮುದಾಯದ ಮುಖಂಡರ ಬಂಧನವಾಗಿದೆ ಎನ್ನುವುದಕ್ಕಿಂತ, ತಮ್ಮ ಸಮುದಾಯದ ನಾಯಕ ಎನ್ನುವ 'ರಾಜಕಾರಣ' ಅಂದೂ ಇತ್ತು, ಈಗಲೂ ಇದೆ. ಹಾಗಾಗಿ, ಸಮುದಾಯವನ್ನು ಎಳೆದು ತರಬೇಡಿ ಎಂದು ಹೇಳುವ ಮೊದಲು, ರಾಜ್ಯದ ಮೂರೂ ಪಕ್ಷಗಳ ಮುಖಂಡರು ತಮ್ಮತಮ್ಮ ಆತ್ಮಸಾಕ್ಷಿಯನ್ನು ಒಮ್ಮೆ ಮುಟ್ಟಿಕೊಳ್ಳುವುದು ಲೇಸು. ಈ ವಿಚಾರದ ಬಗ್ಗೆ ಸ್ವಲ್ಪ ಸವಿಸ್ತಾರವಾಗಿ ಹೇಳುವುದಾದರೆ...
ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಯಡಿಯೂರಪ್ಪ
ಈ ವಿಚಾರದ ಬಗ್ಗೆ ಸ್ವಲ್ಪ ಸವಿಸ್ತಾರವಾಗಿ ಹೇಳುವುದಾದರೆ, ರಾಜ್ಯದ ಮಾಸ್ ಲೀಡರ್ ಗಳಲ್ಲಿ ಒಬ್ಬರೆಂದು ಮತ್ತು ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ಯಡಿಯೂರಪ್ಪ. ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಶರಣಾಗತರಾದರು. ಅವರನ್ನು ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.
ಸಿದ್ದಗಂಗಾ ಮಠದ ಪೀಠಾಧಿಪತಿಗಳಾದ ಡಾ. ಶಿವಕುಮಾರ ಸ್ವಾಮೀಜಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೆರೆಮನೆವಾಸ ಅನುಭವಿಸುತ್ತಿದ್ದ ಯಡಿಯೂರಪ್ಪನವರನ್ನು ನೋಡಲು, ಪ್ರಮುಖವಾಗಿ ಆ ಸಮುದಾಯದ ಸ್ವಾಮೀಜಿಗಳು, ಮುಖಂಡರು ತಂಡೋಪತಂಡವಾಗಿ ಪರಪ್ಪನ ಅಗ್ರಹಾರಕ್ಕೆ ಬಂದಿದ್ದರು. ಇಡೀ ರಾಜ್ಯವೇ ನಡೆದಾಡುವ ದೇವರು ಎಂದು ಪೂಜಿಸುವ, ಶಿವೈಕ್ಯರಾಗಿರುವ ಸಿದ್ದಗಂಗಾ ಮಠದ ಪೀಠಾಧಿಪತಿಗಳಾದ ಡಾ. ಶಿವಕುಮಾರ ಸ್ವಾಮೀಜಿಯವರೂ, ಹಾರ ಹಿಡಿದುಕೊಂಡು ಬಂದು, ಯಡಿಯೂರಪ್ಪನವರ ಬೆನ್ನುತಟ್ಟಿ ಸಾಂತ್ವನ ಮಾಡಿ ಹೋಗಿದ್ದರು.
ಈಗ, ಡಿ.ಕೆ.ಶಿವಕುಮಾರ್ ಅವರ ಸರದಿ
ಇದಾದ ಮೇಲೆ, ಯಡಿಯೂರಪ್ಪ ಜೈಲಿನಿಂದ ಮತ್ತು ಆ ಕೇಸಿನಿಂದಲೂ ಹೊರಬಂದರು ಎನ್ನುವುದೆಲ್ಲಾ ಈಗ ಇತಿಹಾಸ. ಈಗ, ಡಿ.ಕೆ.ಶಿವಕುಮಾರ್ ಅವರ ಸರದಿ. ಅಕ್ರಮ ಹಣ ವರ್ಗಾವಣೆ ವಿಚಾರದಲ್ಲಿ ಅವರ ಬಂಧನವಾಗಿದೆ. ಹಳೇ ಮೈಸೂರು ಭಾಗದ ಒಕ್ಕಲಿಗ ಸಮುದಾಯದ ಮುಖಂಡರು ಮತ್ತು ಮಠಗಳು ಬಂಧನದ ವಿರುದ್ದ ರಸ್ತೆಗಿಳಿದ್ದಾರೆ.
ಡಿಕೆಶಿ ಮತ್ತೊಬ್ಬ ಸಿದ್ಧಾರ್ಥ ಆಗಬಾರದು, ಬೆಂಬಲ ನೀಡಿ: ನಂಜಾವಧೂತ ಸ್ವಾಮೀಜಿ
ಆದಿಚುಂಚನಗಿರಿ ಮಠದ ಶ್ರೀಗಳಾದ ನಿರ್ಮಲಾನಂದ ಶ್ರೀಗಳು
ಒಕ್ಕಲಿಗ ಮಹಾಸಂಸ್ಥಾನದ, ಆದಿಚುಂಚನಗಿರಿ ಮಠದ ಶ್ರೀಗಳಾದ ನಿರ್ಮಲಾನಂದ ಶ್ರೀಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಅಂದು ಯಡಿಯೂರಪ್ಪ ಬಂಧನವಾದಾಗ ಹೊಸೂರು ರಸ್ತೆ ಹೇಗೆ ಬ್ಲಾಕ್ ಆಗಿತ್ತೋ, ಈಗಲೂ ಅದೇ ಸಮಸ್ಯೆ. ಡಿಕೆಶಿ ವಿರುದ್ದ ಇಡಿ ಕುಣಿಕೆ ಬಿಗಿಯಾಗಬಹುದು ಎನ್ನುವ ಸುಳಿವಿನ ನಡುವೆ ಈ ಪ್ರತಿಭಟನೆ ನಡೆಯುತ್ತಿದೆ ಎನ್ನುವುದಕ್ಕಿಂತ, ಸಮುದಾಯದ ಶಕ್ತಿಪ್ರದರ್ಶನ ಮುಖ್ಯವಾಗಿದ್ದರೋ ಆಗಿರಬಹುದು.
ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?
ಹಾಗಾಗಿ, ಯಾವುದೇ ಪ್ರಕರಣದಲ್ಲಿ ಮುಖಂಡರ ಬಂಧನವಾದಾಗ, ತಮ್ಮ ಸಮುದಾಯ ಎನ್ನುವುದು ಎಲ್ಲರಿಗೂ ಮುಖ್ಯವಾಗುತ್ತೆ ಎನ್ನುವುದಕ್ಕೆ ಅಂದಿನ ಮತ್ತು ಇಂದಿನ ಘಟನೆಗಳೇ ಜ್ವಲಂತ ಉದಾಹರಣೆ. ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎನ್ನುವ ಹಾಗೇ, ತಪ್ಪೋ ಸರಿಯೋ ಅದನ್ನು ನಿರ್ಧರಿಸಲು, ಕೋರ್ಟ್ ಇದೆ ಎನ್ನುವ ನಿರ್ಧಾರಕ್ಕೆ ಪೀಠಾಧಿಪತಿಗಳು, ಮುಖಂಡರು, ಜನಸಾಮಾನ್ಯರು ಬಂದರೆ ಹೊಸೂರು ರಸ್ತೆಯೂ ಬಂದ್ ಆಗುತ್ತಿರಲಿಲ್ಲ, ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಯುವುದೂ ತಪ್ಪುತ್ತಿತ್ತು. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?