ಕರ್ನಾಟಕ ಚುನಾವಣೆಗೆ ಬಿಜೆಪಿ ಬತ್ತಳಿಕೆಯಿಂದ ವಾಟ್ಸ್ ಅಪ್ ಅಸ್ತ್ರ
ಬೆಂಗಳೂರು, ಆಗಸ್ಟ್ 7: ಸಾಮಾಜಿಕ ಮಾಧ್ಯಮಗಳಾದ ಫೇಸ್ ಬುಕ್ ಮತ್ತು ಟಿಟ್ಟರ್ ಅನ್ನು ರಾಜಕೀಯ ಪಕ್ಷಗಳು ತುಂಬ ಚೆನ್ನಾಗಿ ಬಳಸಿಕೊಳ್ಳುತ್ತಿವೆ. ಪಕ್ಷದ ವಿದ್ಯಮಾನ, ಬೆಳವಣಿಗೆ ಇತರ ಸಂಗತಿಗಳನ್ನು ತಲುಪಿಸಲು ಇವುಗಳು ಉತ್ತಮ ವೇದಿಕೆಗಳಾಗಿವೆ.
ಪ್ರಚಾರಕ್ಕೆ ಬಿಜೆಪಿಯಿಂದ 'ವಾಟ್ಸಾಪ್ ತಂತ್ರ', 5000 ಗ್ರೂಪ್ ರಚನೆ
ಕರ್ನಾಟಕ ಬಿಜೆಪಿಯು ಮುಂಬರುವ ವಿಧಾನಸಭೆ ಚುನಾವಣೆಗೆ ವಾಟ್ಸ್ ಅಪ್ ಅನ್ನು ತುಂಬ ದೊಡ್ಡ ಮಟ್ಟದಲ್ಲಿ ಬಳಸಲು ನಿರ್ಧರಿಸಿದೆ. ಇದೀಗ ವಾಟ್ಸ ಅಪ್ (ಮೊಬೈಲ್ ಸಂಖ್ಯೆ 9483900150) ಮೂಲಕ ಪಕ್ಷದ ಕಾರ್ಯಕರ್ತರು, ಬಿಜೆಪಿ ಬಗ್ಗೆ ಒಲವಿರುವವರು ಈ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡರೆ ನಿತ್ಯವೂ ಪಕ್ಷದ ವಿದ್ಯಮಾನಗಳ ಮಾಹಿತಿ ರವಾನೆ ಆಗುತ್ತವೆ.
ಸಾಮಾಜಿಕ ಮಾಧ್ಯಮಗಳಲ್ಲಿ ಎದುರು ಪಕ್ಷಗಳು ಮಾಡುವ ವಾದಗಳಿಗೆ ಪ್ರತಿಯಾಗಿ ವಾಟ್ಸ್ ಅಪ್ ಮೂಲಕ ಕಳಿಸುವ ಅಂಶಗಳನ್ನು ಬಳಸಿ ಪ್ರತಿವಾದ ಹೂಡಬಹುದು. ಬಿಜೆಪಿ ಸಾಮಾಜಿಕ ಮಾಧ್ಯಮಗಳ ವಿಭಾಗದ ರಾಜ್ಯ ಕನ್ವೀನರ್ ಬಾಲಾಜಿ ಶ್ರೀನಿವಾಸ್ ಈ ಬಗ್ಗೆ ಮಾತನಾಡಿದ್ದಾರೆ.
ಈಗಾಗಲೇ ಸಾವಿರದ ನಾನೂರು ವಾಟ್ಸ್ ಅಪ್ ಗುಂಪುಗಳಿವೆ. ಚುನಾವಣೆ ಬರುವ ಹೊತ್ತಿಗೆ ಇದು ಹಲವು ಪಟ್ಟು ಹೆಚ್ಚಾಗುತ್ತದೆ. ಇದರ ಹೊರತಾಗಿ ಫೇಸ್ ಬುಕ್ ಮತ್ತು ಟ್ವಿಟ್ಟರ್ ಕೂಡ ಬಳಸುತ್ತಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹದಿನೈದು ಮಂದಿಯ ಒಂದು ಸಾಮಾಜಿಕ ಮಾಧ್ಯಮ ತಂಡ ಕಾರ್ಯ ನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.
ಉತ್ತರಪ್ರದೇಶದಲ್ಲಿ ಅನುಸರಿಸಿದ ವಾಟ್ಸ್ ಅಪ್ ಪ್ರಚಾರ ಮಾದರಿಯನ್ನೇ ಕರ್ನಾಟಕದಲ್ಲೂ ಅನುಸರಿಸಲಾಗುತ್ತಿದೆ. "ನಮ್ಮ ಅನುಭವದಿಂದ ಕಲಿತಿರುವುದೇನೆಂದರೆ, ಅಜೆಂಡಾ ನಿಗದಿ ಪಡಿಸುವುದಕ್ಕೆ ಟ್ವಿಟ್ಟರ್ ಉತ್ತಮ. ವೈಯಕ್ತಿಕ ಸಂವಹನಕ್ಕೆ ವಾಟ್ಸ್ ಅಪ್ ಮತ್ತು ಫೇಸ್ ಬುಕ್ ಉತ್ತಮ" ಎನ್ನುತ್ತಾರೆ ಬಿಜಿಪಿಯ ಐಟಿ ವಿಭಾಗದ ರಾಷ್ಟ್ರಮಟ್ಟದ ಜವಾಬ್ದಾರಿ ಹೊತ್ತಿರುವ ಅಮಿತ್ ಮಾಲವೀಯ.
ಒಟ್ಟು ಇನ್ನೂರಾ ಇಪ್ಪತಾಲ್ಕು ಕ್ಷೇತ್ರಗಳ ಪೈಕಿ ನೂರಾ ಐವತ್ತೈದು ಕಡೆ ಸಾಮಾಜಿಕ ಮಾಧ್ಯಮಗಳು ಪರಿಣಾಮ ಬೀರುತ್ತವೆ. ಭಾನುವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಾಮಾಜಿಕ ಮಾಧ್ಯಮ ಸಮಾವೇಶದಲ್ಲಿ ಮೂರು ಸಾವಿರ ಸಾಮಾಜಿಕ ಮಾಧ್ಯಮ ಕಾರ್ಯಕರ್ತರು ಭಾಗವಹಿಸಿದ್ದರು.