ವಾರಾಂತ್ಯ ಕರ್ಫ್ಯೂ ವೇಳೆ ಯಾವುದಕ್ಕೆಲ್ಲಾ ಅವಕಾಶವಿದೆ; ಆರ್ ಅಶೋಕ್ ಸ್ಪಷ್ಟನೆ
ಬೆಂಗಳೂರು, ಏಪ್ರಿಲ್ 23: ರಾಜ್ಯದಲ್ಲಿ ಕೊರೊನಾ ಹರಡುವಿಕೆ ತಡೆಗಟ್ಟಲು ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೂ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಕಂದಾಯ ಸಚಿವ ಆರ್.ಅಶೋಕ್ ಕರ್ಫ್ಯೂ ಕುರಿತು ಮಾಹಿತಿ ನೀಡಿದ್ದಾರೆ.
ವಾರಾಂತ್ಯ ಕರ್ಪ್ಯೂ ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಿಗ್ಗೆ 6 ರವರೆಗೆ ಇರುತ್ತದೆ. ಕರ್ಫ್ಯೂ ವೇಳೆ ಯಾರೆಲ್ಲಾ ಓಡಾಡಬಹುದು ಎಂಬುದರ ಕುರಿತು ಕಂದಾಯ ಇಲಾಖೆಯಿಂದ ಆದೇಶ ಹೊರಡಿಸಿದ್ದೇವೆ. ತುರ್ತು ಸೇವೆ ಒದಗಿಸುವರು ಓಡಾಡಬಹುದಾಗಿದೆ. ತುರ್ತು ಸೇವೆ ಒದಗಿಸುವ ಕಂಪನಿಗಳು ಕಾರ್ಯನಿರ್ವಹಣೆ ಮಾಡಲು ಅವಕಾಶವಿದೆ. ಟೆಲಿಕಾಂ, ಇಂಟರ್ ನೆಟ್ ಸೇವೆ ನೀಡುವವರಿಗೂ ಅವಕಾಶವಿದೆ ಎಂದು ಮಾಹಿತಿ ನೀಡಿದ್ದಾರೆ. ಮುಂದೆ ಓದಿ...
ಆಸ್ಪತ್ರೆಗೆ ಹೋಗುವವರಿಗೆ ಅವಕಾಶ
ರೋಗಿಗಳು ಹಾಗೂ ಅವರ ಸಹಾಯಕರು ಕರ್ಫ್ಯೂ ವೇಳೆ ಓಡಾಡಬಹುದಾಗಿದೆ. ಲಸಿಕೆ ಪಡೆಯುವ ನಾಗರಿಕರು ಓಡಾಡಬಹುದು. ಆಸ್ಪತ್ರೆಗೆ ತೆರಳಲು ಅವಕಾಶವಿದೆ. ವಾರಾಂತ್ಯ ಕಟ್ಟಡ ನಿರ್ಮಾಣ ಕಾರ್ಯಕ್ಕೆ ನಿರ್ಬಂಧ ಹೇರಲಾಗಿದೆ. ಕಾಮಗಾರಿ ಎರಡು ದಿನ ಸಂಪೂರ್ಣ ಬಂದ್ ಆಗಲಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ; ಯಡಿಯೂರಪ್ಪ
ಯಾವ ಅಂಗಡಿಗಳು ತೆರೆಯಬಹುದು?
ದಿನಸಿ, ಹಣ್ಣು, ತರಕಾರಿ, ಮಾಂಸದ ಅಂಗಡಿ ತೆರೆಯಬಹುದು. ಅದು ಕೂಡ ಬೆಳಗ್ಗೆ 6 ರಿಂದ 10ರವರೆಗೆ ಮಾತ್ರ ತೆರೆಯಬಹುದಾಗಿದೆ. ರೆಸ್ಟೋರೆಂಟ್ ನವರು ಪಾರ್ಸೆಲ್ ಕೊಡಬಹುದು. ಬೇರೆ ಜಿಲ್ಲೆ, ರಾಜ್ಯಕ್ಕೆ ಹೋಗುವವರಿಗೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ಅವರು ಸಾರ್ವಜನಿಕ ಟ್ಯಾಕ್ಸಿ, ಆಟೋ ಬಳಸಬಹುದಾಗಿದೆ. ರೈಲು, ಫ್ಲೈಟ್ ಟಿಕೆಟ್ ತೋರಿಸಬೇಕು ಎಂದು ಹೇಳಿದ್ದಾರೆ.
ಮದುವೆ, ಅಂತ್ಯಕ್ರಿಯೆಗೆ ಅವಕಾಶ
ಮದುವೆ ಮಾಡಲು ಅವಕಾಶ ನೀಡಲಾಗಿದ್ದು, ಮದುವೆಗೆ ಐವತ್ತು ಮಂದಿ, ಅಂತ್ಯಕ್ರಿಯೆಗೆ 20 ಜನ ಸೇರಲು ಮಾತ್ರ ಅವಕಾಶವಿದೆ. ಸಿನಿಮಾ, ಜಿಮ್, ಸ್ಟೇಡಿಯಂ, ಬಾರ್ ಎಲ್ಲವೂ ಮುಚ್ಚಿರುತ್ತದೆ. ಇವ್ಯಾವುದನ್ನೂ ತೆರೆಯುವಂತಿಲ್ಲ. ರಾಜಕೀಯ, ಧಾರ್ಮಿಕ ಸೇವೆಗಳ ನಿಷೇಧವಿದೆ. ಮಸೀದಿ, ಚರ್ಚ್, ದೇಗುಲಗಳನ್ನು ಬಂದ್ ಮಾಡಲಾಗಿದೆ. ಆದರೆ ಪೂಜಾರಿ, ಮೌಲ್ವಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕರ್ನಾಟಕ; ಕುಟುಂಬದ ಜಾಗದಲ್ಲೇ ಮೃತ ಕೊರೊನಾ ರೋಗಿಗಳ ಅಂತ್ಯಸಂಸ್ಕಾರಕ್ಕೆ ಒಪ್ಪಿಗೆ
ಶವಸಂಸ್ಕಾರಕ್ಕೆ ವ್ಯವಸ್ಥೆ
ಹಳ್ಳಿಗಳಲ್ಲೂ ಶವಸಂಸ್ಕಾರ ಮಾಡಬಹುದು. ಇದಕ್ಕೆ ಪಿಡಿಇಗಳಿಂದ ಅನುಮತಿ ಪಡೆಯಬೇಕು. ಕೋವಿಡ್ ಇದ್ದ ಶವಗಳನ್ನೂ ದಫನ್ ಮಾಡಬಹುದು. ಸದ್ಯಕ್ಕೆ ತಾವರಕೆರೆಯಲ್ಲಿ ಶವಸಂಸ್ಕಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕಟ್ಟಿಗೆಯಲ್ಲಿ 50 ಶವ ಸುಡಲು ಅವಕಾಶ ಕಲ್ಪಿಸಲಾಗಿದೆ. ಸುಮಾರು 30 ಲೋಡ್ ಕಟ್ಟಿಗೆ ತರಿಸಲಾಗಿದೆ. ಇಂದು 30 ಲೋಡ್ ಕಟ್ಟಿಗೆ ಬರಲಿದೆ. ನೀರಿಗಾಗಿ ಬೋರ್ ವೆಲ್ ಹಾಕಲಾಗಿದೆ. ಆಂಬುಲೆನ್ಸ್ ನಿಲ್ಲಲು ಟೆಂಟ್ ಹಾಕಿದ್ದೇವೆ. ಬಂದ ಜನರು ಕೂರಲು ಚೇರ್ ಹಾಕಿಸಿದ್ದೇವೆ. ಯಾರು ಮೊದಲು ಬರ್ತಾರೆ ಅವರಿಗೆ ಮೊದಲ ಅವಕಾಶ. ಏಕಕಾಲದಲ್ಲಿ 25 ಶವಗಳನ್ನ ಸುಡಬಹುದು. ಬೂದಿ, ಇನ್ನಿತರ ವೇಸ್ಟೇಜ್ ಸಂಗ್ರಹಕ್ಕೆ ಹಳ್ಳ ತೋಡಲಾಗಿದೆ. ಎರಡು ರಿಸರ್ವ್ ವ್ಯಾನ್ ಪೊಲೀಸರ ಭದ್ರತೆಯಿದೆ. ಹೀಗಾಗಿ ನಾಳೆಯಿಂದ ಶವ ಸುಡಲು ಸಮಸ್ಯೆಯಾಗಲ್ಲ.
ಮತ್ತೊಂದು ಕಡೆ 50 ಎಕರೆ ಭೂಮಿ ಗುರುತಿಸಿದ್ದೇವೆ. ಅಲ್ಲಿ ಸೋಮವಾರದಿಂದ ಶವ ಸುಡಲು ವ್ಯವಸ್ಥೆಯಾಗಲಿದೆ. ಬೇರೆ ಜಿಲ್ಲೆಗಳಲ್ಲೂ ಶವ ಸಂಸ್ಕಾರಕ್ಕೆ ಸೂಚಿಸಿದ್ದೇವೆ. ಗೋಮಾಳ ಭೂಮಿಯಲ್ಲಿ ಸಂಸ್ಕಾರಕ್ಕೆ ಅವಕಾಶ ನೀಡಲಾಗಿದೆ. ಈಗಾಗಲೇ ಡಿಸಿಗಳಿಗೆ ಸೂಚಿಸಿದ್ದೇನೆ. ಎರಡು ಮೂರು ದಿನದಲ್ಲಿ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.