ಕೊರೊನಾ ಪರಿಹಾರ 5000 ರೂ. ಪಡೆಯಲು ಶಿಕ್ಷಕರು ಏನು ಮಾಡಬೇಕು?
ಬೆಂಗಳೂರು, ಆ. 03: ಕೊರೊನಾ ಸಂಕಷ್ಟಕ್ಕೆ ಒಳಗಾಗಿರುವ ಖಾಸಗಿ ಶಾಲಾ ಶಿಕ್ಷಕರಿಗೆ ಸರ್ಕಾರ ಸಂತಸದ ಸುದ್ದಿ ನೀಡಿದೆ. ಶಿಕ್ಷಣ ಸಂಸ್ಥೆಗಳ ಹೋರಾಟ, ಖಾಸಗಿ ಶಿಕ್ಷಕರು ಕೆಲಸ ತೊರೆದು ತರಕಾರಿ ಮಾರಲು ಇಳಿದ ಘಟನೆಗಳ ಪ್ರತಿಫಲವಾಗಿ ಕೊನೆಗೂ ಕೊರೊನಾ ಪರಿಹಾರ ಪ್ಯಾಕೇಜ್ ಅನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ತಿಂಗಳಾಂತ್ಯಕ್ಕೆ ಪ್ರತಿ ಖಾಸಗಿ ಶಾಲಾ ಶಿಕ್ಷಕ, ಶಿಕ್ಷಕಿಗೆ ತಲಾ ಐದು ಸಾವಿರ ರೂ. ಪರಿಹಾರ ಹಣವನ್ನು ಸರ್ಕಾರ ನೀಡಲಿದೆ. ಈ ಪರಿಹಾರ ಪಡೆಯಬೇಕಾದರೆ ಕಡ್ಡಾಯವಾಗಿ ಖಾಸಗಿ ಶಾಲಾ ಶಿಕ್ಷಕರು ಈ ಕೆಳಗಿನ ನಿಯಮ ಪಾಲಿಸಬೇಕು. ಶಿಕ್ಷಣ ಇಲಾಖೆ ಈ ಕುರಿತು ಸ್ಪಷ್ಟ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಒಂದೂವರೆ ವರ್ಷದಿಂದ ಖಾಸಗಿ ಶಾಲೆಗಳು ತೆರೆದಿಲ್ಲ. ಅರ್ಧ ವೇತನ ನಂಬಿ ಆನ್ಲೈನ್ ತರಗತಿ ಮಾಡಿದ ಖಾಸಗಿ ಶಾಲಾ ಶಿಕ್ಷಕರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಬಹುತೇಕರು ಶಿಕ್ಷಕ ವೃತ್ತಿಗೆ ತಿಲಾಂಜಲಿ ನೀಡಿ ಅನ್ಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಅದರಲ್ಲೂ ನರೇಗಾ ಕೆಲಸ, ತರಕಾರಿ ಮರಾಟ ಮಾಡಿ ರಾಜ್ಯದಲ್ಲಿ ಸುದ್ದಿಯಾಗಿದ್ದರು. ಎಲ್ಲಾ ವರ್ಗಕ್ಕೂ ಕೊರೊನಾ ಪರಿಹಾರ ಪ್ಯಾಕೇಜ್ ನೀಡಿದ್ದ ಸರ್ಕಾರ ಮಾತ್ರ ಖಾಸಗಿ ಶಾಲಾ ಶಿಕ್ಷಕರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ.
ಹೀಗಾಗಿ ಖಾಸಗಿ ಶಾಲಾ ಶಿಕ್ಷಕರು ಬೀದಿಗೆ ಇಳಿದು ಹೋರಾಟ ನಡೆಸಿದರು. ಕ್ಯಾಮ್ಸ್ ಸೇರಿದಂತೆ ಖಾಸಗಿ ಶಾಲಾ ಶಿಕ್ಷಕರ ಸಂಘಟನೆಗಳು ಪ್ರತಿಭಟನೆ ಮಾಡಿ ಸರ್ಕಾರದ ಗಮನ ಸೆಳೆದಿದ್ದವು. ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಶಿಕ್ಷಕರನ್ನು ''ಕೊರೊನಾ ವಾರಿಯರ್ಸ್'' ಎಂದು ಪರಿಗಣಿಸಿ ಪರಿಹಾರ ಘೋಷಣೆ ಮಾಡುವಂತೆ ಮನವಿ ಮಾಡಿದ್ದರು.
ಸಿಎಂ ಕೊಟ್ಟ ಕೊರೊನಾ ಪ್ಯಾಕೇಜ್ ಬಿಡುಗಡೆ
ಖಾಸಗಿ ಶಾಲಾ ಶಿಕ್ಷಕರ ಮನವಿಗೆ ಸ್ಪಂದಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಾಸಗಿ ಶಾಲಾ ಶಿಕ್ಷಕರನ್ನು ಸಹ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿದರು. ಅಲ್ಲದೇ ಮೊದಲ ಆದ್ಯತೆಯಲ್ಲಿ ಲಸಿಕೆ ಕೊಡುವ ಜತೆಗೆ ತಲಾ ಐದು ಸಾವಿರ ರೂ. ಪರಿಹಾರ ಘೋಷಣೆ ಮಾಡಿದರು. ಪರಿಹಾರದ ಮೊತ್ತ ಕ್ರೋಢೀಕರಿಸುವ ವಿಚಾರವಾಗಿ ಗೊಂದಲ ಏರ್ಪಟ್ಟಿತ್ತು. ಅಂತಿಮವಾಗಿ ಶಿಕ್ಷಣ ಹಕ್ಕು ಕಾಯ್ದೆ ಅಡಿ ಖಾಸಗಿ ಶಾಲೆಗಳಿಗೆ ಬಿಡುಗಡೆ ಮಾಡಬೇಕಿರುವ ಹಣದಲ್ಲಿ ಒಂದು ಭಾಗವನ್ನು ಕಡಿತ ಮಾಡಿ ಖಾಸಗಿ ಶಾಲಾ ಶಿಕ್ಷಕರಿಗೆ ಪರಿಹಾರ ನೀಡಲು ಶಿಕ್ಷಣ ಇಲಾಖೆ ಪ್ರಸ್ತಾವನೆ ಸಲ್ಲಿಸಿತು. ಇದಕ್ಕೆ ಖಾಸಗಿ ಶಾಲಾ ಆಡಳಿತ ಮಂಡಗಳು ವಿರೋಧ ವ್ಯಕ್ತಪಡಿಸಿದ್ದವು. ಅಂತು ಕಷ್ಟದಲ್ಲಿರುವ ಖಾಸಗಿ ಶಾಲಾ ಶಿಕ್ಷಕರಿಗೆ ತಲಾ ಐದು ಸಾವಿರ ರೂ. ಕೊರೊನಾ ಪರಿಹಾರ ಹಣ ಹತ್ತು ಸಾವಿರ ಲಕ್ಷ ರೂ. ಬಿಡುಗಡೆ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಪರಿಹಾರಕ್ಕಾಗಿ ಶಿಕ್ಷಕರು ಏನು ಮಾಡಬೇಕು
ರಾಜ್ಯದ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ 1.72,945 ಖಾಸಗಿ ಶಾಲಾ ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಗೆ ಪರಿಹಾರ ಸಿಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಈ ಪರಿಹಾರ ಹಣ ನೊಂದಾಯಿತ ಖಾಸಗಿ ಶಾಲಾ ಶಿಕ್ಷಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆಯಾಗಲಿದೆ. ಆದರೆ ಶಿಕ್ಷಕರು ಕಡ್ಡಾಯವಾಗಿ ಕೆಲಸ ಮಾಡುವ ಶಾಲೆಯ ಸ್ಯಾಟ್ಸ್ ನಲ್ಲಿ ನೋಂದಣಿ ಮಾಡಿರಬೇಕು. ಜತೆಗೆ ಆಧಾರ್ ಕಾರ್ಡ್ ಲಿಂಕ್ ಹೊಂದಿರುವ ಬ್ಯಾಂಕ್ ವಿವರಗಳನ್ನು ನಮೂದಿಸಿರಬೇಕು. ಅಂತಹ ಶಿಕ್ಷಕರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಪಾವತಿಯಾಗಲಿದೆ. ನೋಂದಣಿ ಮಾಡದ ಶಿಕ್ಷಕರು ತಮ್ಮ ಶಾಲಾ ಆಡಳಿತ ಮಂಡಳಿ ಗಮನಕ್ಕೆ ತಂದು ಆ. 06 ರೊಳಗೆ ಪ್ರಕ್ರಿಯೆ ಮುಗಿಸಲು ಶಿಕ್ಷಣ ಇಲಾಖೆ ಗಡುವು ನೀಡಿದೆ. ಈ ಕುರಿತು ಎಲ್ಲಾ ಶಾಲೆಗಳ ಪ್ರಸ್ತಾವನೆಗಳನ್ನು ಆಯಾ ಶಾಲೆಯ ಮುಖ್ಯ ಶಿಕ್ಷಕರು ಪರಿಶೀಲಿಸಿ ಅರ್ಜಿ ಸಲ್ಲಿಸಬೇಕು. ಜತೆಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಕುರಿತು ಕ್ರಮ ವಹಿಸಲು ಸೂಚಿಸಲಾಗಿದೆ.
ಸಮಸ್ಯೆ ಪರಿಹರಿಸದೇ ಪರಿಹಾರ ವಿತರಣೆ
ರಾಜ್ಯದಲ್ಲಿ ಬಹುತೇಕ ಖಾಸಗಿ ಶಾಲೆಗಳಲ್ಲಿ ಸ್ಯಾಟ್ಸ್ ನಲ್ಲಿ ಶಿಕ್ಷಕರ ದಾಖಲಾತಿ ಪ್ರಕ್ರಿಯೆ ಮುಗಿಸಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಸ್ಯಾಟ್ಸ್ ನಿರ್ವಹಣೆ ಮಾಡಿಲ್ಲ. ಬಹುತೇಕ ಶಾಲಾ ಶಿಕ್ಷಕರು ಒಂದಡೆಯಿಂದ ಮತ್ತೊಂದು ಕಡೆಗೆ ವರ್ಗಾವಣೆಯಾಗಿದ್ದಾರೆ. ಇಂತಹವರ ಹೆಸರನ್ನು ಸ್ಯಾಟ್ಸ್ ನಲ್ಲಿ ಸೇರಿಸಲು ಶಿಕ್ಷಣ ಇಲಾಖೆ ಅವಕಾಶವೇ ನೀಡಿಲ್ಲ. ಹೀಗಾಗಿ ಸಾವಿರಾರು ಶಿಕ್ಷಕರು ಕೊರೊನಾ ಪ್ಯಾಕೇಜ್ ಪಡೆಯಲಾಗದೇ ಪರದಾಡುವಂತಾಗಿದೆ. ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದ ಅನೇಕ ಶಿಕ್ಷಕರು ಈ ಪರಿಹಾರ ಪಡೆಯಲಾಗುತ್ತಿಲ್ಲ.
ಕೊರೊನಾ ಹಿನ್ನೆಲೆಯಲ್ಲಿ ಬಹುತೇಕ ಶಾಲಾ ಶಿಕ್ಷಕರು ಶಾಲೆ ತೊರೆದಿದ್ದಾರೆ. ಇನ್ನೂ ಕೆಲವರು ಬೇರೆ ಶಾಲೆಗಳಿಗೆ ಸೇರಿದ್ದು, ಕೆಲವರು ಎರಡು- ಮೂರು ಕಡೆ ಸ್ಯಾಟ್ಸ್ ನಲ್ಲಿ ನೋಂದಣಿ ಮಾಡಿಸಿದ್ದಾರೆ. ಇನ್ನೂ ಕೆಲವರು ಸ್ಯಾಟ್ಸ್ ನಲ್ಲಿ ನೋಂದಣಿಯೇ ಆಗಿಲ್ಲ. ನೊಂದಣಿ ಮಾಡಲು ಅವಕಾಶವನ್ನು ಸಹ ಬಿಟ್ಟಿಲ್ಲ. ಹೀಗಾಗಿ ಖಾಸಗಿ ಶಾಲಾ ಶಿಕ್ಷಕರಿಗೆ ಪರಿಹಾರ ನೀಡುವಲ್ಲಿ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಸರಿಪಡಿಸದೇ ಇದೀಗ ತರಾತುರಿಯಲ್ಲಿ ಪರಿಹಾರ ಹಣ ಖಾಸಗಿ ಶಾಲಾ ಶಿಕ್ಷಕರ ಖಾತೆಗೆ ಜಮೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ.
ಹೆಚ್ಚುವರಿ ಶಿಕ್ಷಕರು ಇದ್ದರೂ ಪರಿಹಾರವಿಲ್ಲ
ಖಾಸಗಿ ಶಾಲಾ ಶಿಕ್ಷಕರಿಗೆ ತ್ವರಿತವಾಗಿ ಕೊರೊನಾ ಪರಿಹಾರ ಪ್ಯಾಕೇಜ್ ಬಿಡುಗಡೆ ಮಾಡುವ ಸಂಬಂಧ ಶಾಲಾ ವಾರು ಅನುಮೋದನೆ ನೀಡುವ ಅಧಿಕಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನೀಡಲಾಗಿದೆ. ಶೇ. 100 ರಷ್ಟು ಖಾಸಗಿ ಶಾಲಾ ಶಿಕ್ಷಕರ ದತ್ತಾಂಶ ಪರಿಶೀಲಿಸಿ ಅನುಮೋದನೆ ನೀಡಿದ ಬಳಿಕ ಖಾಸಗಿ ಶಾಲಾ ಶಿಕ್ಷಕರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಹಣ ವರ್ಗಾವಣೆಯಾಗಲಿದೆ. ಕೆಲವು ಖಾಸಗಿ ಶಾಲೆಗಳಲ್ಲಿ ಕಡಿಮೆ ವಿದ್ಯಾರ್ಥಿಗಳು ಇದ್ದಾರೆ. ಅಲ್ಲಿ ಶಿಕ್ಷಕರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಅಂತಹ ಶಾಲೆಯ ಶಿಕ್ಷಕರು ಸಹ ಪರಿಹಾರ ಪಡೆಯಲಾಗುತ್ತಿಲ್ಲ. ಈ ಬಗ್ಗೆ ತಲೆದೋರಿರುವ ಸಮಸ್ಯೆಗಳನ್ನು ಇಲಾಖೆಯ ಗಮನಕ್ಕೆ ತರಲಾಗಿದೆ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಇನ್ನೂ ಯಾವುದೇ ರೀತಿಯ ಸ್ಪಷ್ಟನೆ ಬಂದಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
Recommended Video