ಸಿದ್ದು ಬಜೆಟ್ ಬಗ್ಗೆ ಐಟಿ ಸಚಿವ ಎಸ್.ಆರ್.ಪಾಟೀಲ ಹೇಳಿದ್ದೇನು?
ಬೆಂಗಳೂರು,ಮಾರ್ಚ್,19: ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ 2016-17ನೇ ಸಾಲಿನ ಬಜೆಟ್ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದ್ದು ದೂರದೃಷ್ಟಿಯಿಂದ ಕೂಡಿದೆ ಎಂದು ಐಟಿ ಸಚಿವ ಎಸ್.ಆರ್.ಪಾಟೀಲ ಹೇಳಿದ್ದಾರೆ.
ಕಳೆದ ಸಾಲಿನಲ್ಲಿ 72,597 ಕೋಟಿ ರೂ. ಇದ್ದ ರಾಜ್ಯದ ಯೋಜನಾ ಗಾತ್ರ ಈ ಬಾರಿ 85,375 ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಯೋಜನಾ ಗಾತ್ರ ಶೇಕಡಾ 17.6 ಹೆಚ್ಚಳವಾಗಿದ್ದು ಇದೊಂದು ದಾಖಲೆಯಾಗಿದೆ. ಇದರಿಂದಾಗಿ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ದೊರೆಯಲಿದೆ ಎಂದರು.[ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ಸಿದ್ದರಾಮಯ್ಯ]
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಬಜೆಟ್ ನಲ್ಲಿ ಕೃಷಿ, ಕೈಗಾರಿಕೆ, ಕೌಶಲ್ಯ ಅಭಿವೃದ್ಧಿ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಕೌಶಲ್ಯ ಅಭಿವೃದ್ಧಿಗಾಗಿ ಪ್ರತ್ಯೇಕ ಇಲಾಖೆ ಸೃಜಿಸಿರುವುದು ಮುಖ್ಯಮಂತ್ರಿಗಳ ದೂರದೃಷ್ಟಿಗೆ ಉದಾಹರಣೆಯಾಗಿದೆ.[ಮಹಿಳೆ, ಮಕ್ಕಳು, ವಿಕಲಚೇತನರ ಕಡೆ ಚಿತ್ತ ಹರಿಸಿದ ಸಿದ್ದು ಬಜೆಟ್]
ಕೈಗಾರಿಕೆ ಮತ್ತು ಪ್ರವಾಸೋದ್ಯಮ ಮೂಲಸೌಕರ್ಯ ಅಭಿವೃದ್ಧಿಗಾಗಿ ಅನೇಕ ಉತ್ತೇಜಕ ಕ್ರಮಗಳನ್ನು ಬಜೆಟ್ ನಲ್ಲಿ ಪ್ರಕಟಿಸಿ ಈ ಎರಡು ಇಲಾಖೆಗಳ ತ್ವರಿತ ಪ್ರಗತಿಗೆ ಮುನ್ನುಡಿ ಬರೆದಿದ್ದಾರೆ. ಇದು ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಪ್ರಗತಿಗೆ ಕಾರಣವಾಗಲಿದೆ. ರಾಜ್ಯದ ನೀರಾವರಿ ಯೋಜನೆಗಳಿಗಾಗಿ 14,477 ಕೋಟಿ ರೂ.ಗಳನ್ನು ಒದಗಿಸಿರುವುದು ಸಂತೋಷಕರ ವಿಷಯ ಎಂದರು.
ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಕ್ಷೇತ್ರಗಳ ಬೆಳವಣಿಗೆಗೂ ಮುಖ್ಯಮಂತ್ರಿಗಳು ಅನೇಕ ಉತ್ತೇಜನಕಾರಿ ಯೋಜನೆಗಳನ್ನು ಘೋಷಿಸಿದ್ದು, ಇದರಿಂದ ಮುಂಬರುವ ವರ್ಷದಲ್ಲಿ ಕೃಷಿ ಉತ್ಪಾದನೆಯಲ್ಲಿ ಗಮನಾರ್ಹ ಏರಿಕೆಯನ್ನು ನಿರೀಕ್ಷಿಸಬಹುದಾಗಿದೆ.[ಕರೆಂಟ್ ಕೈ ಕೊಟ್ಟರೂ ವಿದ್ಯುತ್ ಕ್ಷೇತ್ರಕ್ಕೆ ಹಲವು ಕೊಡುಗೆ]
ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ ಮತ್ತು ಐಹೊಳೆ ಹಾಗೂ ಮುಚಖಂಡಿಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಲಾಗಿದೆ. ಅದೇ ರೀತಿ ವಿಜಯಪುರ ಹಾಗೂ ಬೀದರ್ ನಲ್ಲಿ ಬೆಳಕಿಗೆ ಬಂದಿರುವ ಪ್ರಾಚೀನ ನೀರು ಸರಬರಾಜು ವ್ಯವಸ್ಥೆಯನ್ನು ಪುನರುತ್ಥಾನಗೊಳಿಸಿ ಪ್ರವಾಸಿ ತಾಣಗಳನ್ನಾಗಿ ರೂಪಿಸಲು ಕಾರ್ಯಕ್ರಮ ರೂಪಿಸಿರುವುದು ಅತ್ಯಂತ ಸ್ವಾಗತಾರ್ಹ ಎಂದರು.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆ ಬಗ್ಗೆ ಹೇಳುವುದಾದರೆ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೂ ಅನುದಾನ (222 ಕೋಟಿ ರೂ.) ಗಣನೀಯವಾಗಿ ಏರಿಕೆಯಾಗಿದೆ.[ಸಿದ್ದರಾಮಯ್ಯ ಬಜೆಟ್ಟಿನಲ್ಲಿ ಐಟಿ-ಬಿಟಿಗೆ ಏನು ಗಿಟ್ಟಿಲ್ಲ!]
* ಬಾಗಲಕೋಟೆಯಲ್ಲಿ ಜೈವಿಕ ತಂತ್ರಜ್ಞಾನದ ಹೊಸ ಉದ್ದಿಮೆಗಳ ಬೆಳವಣಿಗೆಗೆ ಒಂದು ಹೋಸ ಇನ್ಕ್ಯುಬೇಟರ್ ಸ್ಥಾಪಿಸಲಾಗುವುದು.
* ಬೆಂಗಳೂರು, ಶಿವಮೊಗ್ಗ, ಕಲಬುರ್ಗಿ ಹಾಗೂ ಬಾಗಲಕೋಟೆ ಐಟಿ ಪಾರ್ಕ್ ಗಳಲ್ಲಿ ಕಿಯೋನಿಕ್ಸ್ ಸಂಸ್ಥೆ ಮೂಲಕ ಇನ್ಕ್ಯುಬೇಟರ್ ಮತ್ತು ಇನ್ಸ್ಟ್ರುಮೆಂಟೇಶನ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
* ವಿಜಯಪುರ, ಬೆಳಗಾವಿ ಮತ್ತು ಬೀದರಿನಲ್ಲಿ ಹೊಸ ಐಟಿ ಪಾರ್ಕಿಗೆ ಇನ್ಕ್ಯುಬೇಟರ್ ನ್ನು ನಿರ್ಮಿಸಲಾಗುವುದು. ವಿಜಯಪುರದಲ್ಲಿ ಕಿರುತಾರಾಲಯ ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿಗಳು ತಮ್ಮ ಬಜೆಟ್ ನಲ್ಲಿ ಘೋಷಣೆ ಮಾಡಿದ್ದು ಅದಕ್ಕಾಗಿ ನಾನು ಅವರನ್ನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವ ಎಸ್.ಆರ್.ಪಾಟೀಲ ಬಜೆಟ್ ಬಗ್ಗೆ ಹೇಳಿದ್ದಾರೆ.[ಕರ್ನಾಟಕ ಬಜೆಟ್ 2016-17, ಮುಖ್ಯಾಂಶಗಳು]