ರಾಜ್ಯದಲ್ಲಿ ಮಾಯಾವತಿ ಬರ್ಲಿ, ಬಿಡ್ಲಿ ದೇವೇಗೌಡರಿಗೆ ಆಗ ಬೇಕಾಗಿರುವುದು ಏನು?
ಜಾತಿ ಲೆಕ್ಕಾಚಾರವೇ ಪ್ರಧಾನ ಪಾತ್ರವನ್ನು ವಹಿಸುವ ನಮ್ಮ ವ್ಯವಸ್ಥೆಯಲ್ಲಿ, ಮೋದಿ ಎನ್ನುವ 'ರಾಜಕೀಯ ಶಕ್ತಿಯನ್ನು' ಎದುರಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಷ್ಟೆಲ್ಲಾ ಕಸರತ್ತು ಮಾಡಿಕೊಂಡು, ಮಹಾಮೈತ್ರಿಕೂಟಕ್ಕೆ ಮಾತುಕತೆ ನಡೆಸುತ್ತಿದ್ದರೂ, ಅದು ಇನ್ನೇನು ಗೇರ್ ಬದಲಾಗುತ್ತಿದೆ ಅನ್ನುವಷ್ಟರಲ್ಲಿ ಮತ್ತೆ ನ್ಯೂಟ್ರಲ್ಲಿಗೆ ಬಂದು ಬೀಳುತ್ತಿದೆ.
ಅಖಿಲೇಶ್ ಯಾದವ್, ಶರದ್ ಪವಾರ್, ಮಮತಾ ಬ್ಯಾನರ್ಜಿ, ಮಾಯಾವತಿ ಮುಂತಾದ ಪ್ರಾದೇಶಿಕ ಪಕ್ಷದ ಮುಖಂಡರನ್ನು ಒಂದೇ ಮೈತ್ರಿಕೂಟಕ್ಕೆ ತರಲು ಕಾಂಗ್ರೆಸ್ ಅಧ್ಯಕ್ಷರು ಪಡುತ್ತಿರುವ ಪ್ರಯತ್ನವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ. ಅದಕ್ಕೆ ಲೇಟೆಸ್ಟ್ ಉದಾಹರಣೆ, ಮಾಯಾವತಿ ನೇತೃತ್ವದ ಬಹುಜನ ಸಮಾಜಪಕ್ಷ.
ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನದ ಅಸೆಂಬ್ಲಿ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಹೇಳಿರುವುದು, ರಾಷ್ಟ್ರ ಮಟ್ಟದಲ್ಲಿ ಮಹಾಮೈತ್ರಿಗೆ ಭಾರೀ ಹಿನ್ನಡೆಯಾಗಿದೆ. ಕರ್ನಾಟಕದಲ್ಲೂ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ, ಬಿಎಸ್ಪಿ ಹೇಳಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್-ಮೈತ್ರಿ ಮಾಡಿಕೊಂಡಿತ್ತು.
ಬಿಎಸ್ಪಿಯ ಮಾಯಾವತಿ ಕಾಂಗ್ರೆಸ್ಗೆ 'ಕೈ' ಕೊಟ್ಟಿದ್ದೇಕೆ?
ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ದೇವೇಗೌಡ್ರು, ಆಯಾಯ ರಾಜ್ಯಗಳ ಸ್ಥಳೀಯ ಮುಖಂಡರು, ಅಲ್ಲಿನ ಸಮಸ್ಯೆಗಳು ಮತ್ತು ಆದ್ಯತೆಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ. ಮಹಾಮೈತ್ರಿಯ ಬಗ್ಗೆ ಅಂತಿಮ ತೀರ್ಮಾನ ಸಮಯವೇ ನಿರ್ಧರಿಸಲಿದೆ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ, ಬಿಎಸ್ಪಿ ಸ್ವತಂತ್ರವಾಗಿ ರಾಜ್ಯದಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಬಂದಾಗ, ಮೇಲ್ನೋಟಕ್ಕೆ ಮೂರೂ ಪಕ್ಷಗಳಿಗೆ ಅದರಿಂದ ಅಷ್ಟೇನೂ ಲಾಭ ನಷ್ಟವೇನೂ ಆಗುವುದಿಲ್ಲ. ಆದರೂ, ಕೆಲವೊಂದು ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮತಬ್ಯಾಂಕಿಗೆ ಇದು ಸ್ವಲ್ಪ ಮಟ್ಟಿನ ಪರಿಣಾಮಬೀರಬಹುದು. ಹೀಗಿದೆ, ಒಂದು ಲೆಕ್ಕಾಚಾರ..
ಅಲುಗಾಡುತ್ತಿದ್ದ ಕುಮಾರಸ್ವಾಮಿ ಸರ್ಕಾರಕ್ಕೆ ಟಾನಿಕ್ ಆದ ದೇವೇಗೌಡರ ಟೆಕ್ನಿಕ್
ಬಿಎಸ್ಪಿ ಒಟ್ಟು 18ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿಮಾಡಿಕೊಂಡಿದ್ದ ಬಿಎಸ್ಪಿ ಒಟ್ಟು 18ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಅವು ಯಾವುದೆಂದರೆ, ನಿಪ್ಪಾಣಿ, ಚಿಕ್ಕೋಡಿ-ಸದಲಗ, ರಾಯಭಾಗ್, ಬಾಗಲಕೋಟೆ, ಚಿತ್ತಾಪುರ, ಗುಲ್ಬರ್ಗ ದಕ್ಷಿಣ, ಬೀದರ್, ಶಿರಹಟ್ಟಿ, ಗದಗ, ಹುಬ್ಬಳ್ಳಿ-ಧಾರವಾಡ ಪೂರ್ವ, ಬ್ಯಾಡಗಿ, ಹೊನ್ನಾಳಿ, ಕಾರ್ಕಳ, ಆನೇಕಲ್, ಸುಳ್ಯ, ಕೊಳ್ಳೇಗಾಲ, ಚಾಮರಾಜ ನಗರ, ಗುಂಡ್ಲುಪೇಟೆ.
ಮಾಯಾವತಿ ನಡೆಗೆ ಅಸಲಿ ಕಾರಣ ಬಿಚ್ಚಿಟ್ಟ ಕಾಂಗ್ರೆಸ್ ಮುಖಂಡ
ಹದಿನೆಂಟು ಕ್ಷೇತ್ರಗಳಲ್ಲಿ ಬಿಎಸ್ಪಿ ಗೆದ್ದಿದ್ದು ಒಂದೇ ಕ್ಷೇತ್ರವನ್ನು
ಸ್ಪರ್ಧಿಸಿದ್ದ ಹದಿನೆಂಟು ಕ್ಷೇತ್ರಗಳಲ್ಲಿ ಬಿಎಸ್ಪಿ ಗೆದ್ದಿದ್ದು ಒಂದೇ ಕ್ಷೇತ್ರವನ್ನು ಅದು ಕೊಳ್ಳೇಗಾಲ. ಇನ್ನುಳಿದ ಹದಿನಾರು ಕ್ಷೇತ್ರಗಳಲ್ಲಿ ಆರು ಸಾವಿರ ಮೇಲೆ ಮತ ಬಂದಿರುವ ಕ್ಷೇತ್ರಗಳು ಎರಡು, ಎರಡು ಸಾವಿರ ಮೇಲೆ ಮತ ಬಂದಿರುವ ಕ್ಷೇತ್ರಗಳು ಮೂರು. ಇನ್ನು ಒಂದು ಸಾವಿರಕ್ಕೂ ಕಮ್ಮಿ ಮತಗಳು ಬಂದಿರುವ ಕ್ಷೇತ್ರಗಳು ಒಟ್ಟು ಐದು. ಅಂದರೆ ಕೊಳ್ಳೇಗಾಲ ಹೊರತು ಪಡಿಸಿ, ಮಿಕ್ಕಲ್ಲಾ ಕ್ಷೇತ್ರಗಳಲ್ಲಿ ಬಿಎಸ್ಪಿ ಠೇವಣಿಯನ್ನು ಕಳೆದುಕೊಂಡಿದೆ. ಇದರಲ್ಲಿ ಆನೇಕಲ್, ಸುಳ್ಯ, ಚಾಮರಾಜನಗರಗಳೂ ಸೇರಿವೆ.
ಮಾಯಾವತಿ ಜೊತೆ ಮತ್ತದೇ ಮಿಸ್ಟೇಕ್ ಮಾಡುತ್ತಿರುವ ರಾಹುಲ್ ಗಾಂಧಿ
ಬಹುಜನ ಸಮಾಜ ಪಕ್ಷ ಎಲ್ಲಾ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು
2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷ ಎಲ್ಲಾ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿಗೆ ಹೆಚ್ಚಿನ ಮತ ಬಂದ ಕ್ಷೇತ್ರವೆಂದರೆ ಅದು ಚಾಮರಾಜನಗರ ಕ್ಷೇತ್ರದಲ್ಲಿ ಮಾತ್ರ. ಇಲ್ಲಿ ಪಕ್ಷಕ್ಕೆ 34,846 ಮತಗಳು ಬಂದಿದ್ದವು. ಅದು ಬಿಟ್ಟರೆ, ಹಾಸನ (18,905), ಚಿಕ್ಕೋಡಿ (14,493), ಗುಲ್ಬರ್ಗ (11,428), ರಾಯಚೂರು (12,254), ಬೀದರ್ (15,075), ಮೈಸೂರು (13,637) ಮತ್ತು ಬೆಂಗಳೂರು ಗ್ರಾಮಾಂತರ ( 11,594) ಈ ಕ್ಷೇತ್ರಗಳಲ್ಲಿ ಹತ್ತು ಸಾವಿರದ ಗಡಿ ದಾಟಲು ಬಿಎಸ್ಪಿಗೆ ಸಾಧ್ಯವಾಗಿತ್ತು.
ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯಾದರೆ, ಜೆಡಿಎಸ್ ಡಿಮಾಂಡ್ ಮಾಡುತ್ತಿದೆ ಎನ್ನಲಾಗುತ್ತಿರುವ ಎಂಟು ಕ್ಷೇತ್ರಗಳಲ್ಲಿ, ಸ್ವಲ್ಪ ಮಟ್ಟಿನ ಪ್ರತಿರೋಧ ಬಿಎಸ್ಪಿ ಕಡೆಯಿಂದ ಜೆಡಿಎಸ್ ಪಕ್ಷಕ್ಕೆ ಬರಬಹುದು ಎನ್ನುವುದಾದರೆ ಅದು ಹಾಸನ, ಮೈಸೂರು ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾತ್ರ.
ತಲೆನೋವೇ ಹೊರತು ಲಾಭ ಅನ್ನುವುದು ಅಷ್ಟಕಷ್ಟೆ
ಈ ಅಂಕಿಅಂಶಗಳನ್ನು ಇಟ್ಟುಕೊಂಡು ನೋಡುವುದಾದರೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಎಸ್ಪಿ ಜೊತೆಗೆ ಮೈತ್ರಿಯಿದ್ದರೆ ಜೆಡಿಎಸ್ ಪಕ್ಷಕ್ಕೆ ಇನ್ನಷ್ಟು ತಲೆನೋವೇ ಹೊರತು ಲಾಭ ಅನ್ನುವುದು ಅಷ್ಟಕಷ್ಟೇ. ಯಾಕೆಂದರೆ, ಮೈತ್ರಿ ಮಾಡಿಕೊಂಡರೆ, ಬಿಎಸ್ಪಿ ಜೊತೆ ಸೀಟು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ, ಅದರಿಂದ ಕಾಂಗ್ರೆಸ್ ಜೊತೆಗಿನ ಸೀಟ್ ಲೆಕ್ಕಾಚಾರಕ್ಕೆ ತೊಂದರೆಯಾಗುತ್ತದೆ. ಹಾಗಾಗಿ, ಮಾಯಾವತಿ ಬರಲಿ, ಬಿಡಲಿ.. ರಾಜ್ಯದ ಮಟ್ಟಿಗೆ ಹೇಳುವುದಾದರೆ ದೇವೇಗೌಡರಿಗೆ ಅದರಿಂದ ಏನೂ ಆಗಬೇಕಿಲ್ಲ.