ರೋಷನ್ ಬೇಗ್ ಅಮಾನತಿನ ಹಿಂದಿನ ಬಲವಾದ ಗುಮಾನಿ ಇದೇ!
ರಾಜ್ಯದ ಅಲ್ಪಸಂಖ್ಯಾತ ಸಮುದಾಯದ ಪ್ರಭಾವೀ ಮುಖಂಡರೊಬ್ಬರನ್ನು ಪಕ್ಷದಿಂದ ಅಮಾನತುಗೊಳಿಸಬೇಕೆಂದರೆ, ಅದರೆ ಹಿಂದೆ ಬಲವಾದ ಕಾರಣ ಇರದೇ ಇರುತ್ತಾ? ಅದೂ, ಸತತವಾಗಿ ಗೆದ್ದು ಬರುತ್ತಿರುವ ಜನಪ್ರತಿನಿಧಿಯೊಬ್ಬರನ್ನು!
ಕೇವಲ, ಪಕ್ಷದ ಹಿರಿಯ ಮುಖಂಡರುಗಳನ್ನು ಟೀಕಿಸಿದ ಮಾತ್ರಕ್ಕೆ ಸಸ್ಪೆಂಡ್ ಮಾಡಲು ಸಾಧ್ಯವೇ ಎನ್ನುವುದು ರೋಶನ್ ಬೇಗ್ ವಿಚಾರದಲ್ಲಿ ಚರ್ಚೆಯಾಗುತ್ತಿರುವ ವಿಷಯ. ಮುಂದೆ ಎದುರಾಗಬಹುದಾದ ಸಂಭಾವ್ಯ ಮುಜುಗರವನ್ನು ತಪ್ಪಿಸಲು ಕಾಂಗ್ರೆಸ್ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನುವುದು ಸದ್ಯ ಕೇಳಿ ಬರುತ್ತಿರುವ ಮಾತು.
ಪಕ್ಷ ವಿರೋಧಿ ಚಟುವಟಿಕೆ: ಕಾಂಗ್ರೆಸ್ನಿಂದ ರೋಷನ್ ಬೇಗ್ ಅಮಾನತು
ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ವಯನಾಡ್ ನಲ್ಲಿ ರಾಹುಲ್ ಗಾಂಧಿ ಗೆದ್ದಿದ್ದೇ ಮುಸ್ಲಿಮರ ವೋಟಿನಿಂದ ಎನ್ನುವ ಮಾತನ್ನು ಹೇಳಿದ್ದರು. ಬರೀ ವಯನಾಡ್ ನಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಅಲ್ಪಸಂಖ್ಯಾತರ ಆಯ್ಕೆ ಕಾಂಗ್ರೆಸ್ ಕೂಡಾ ಎನ್ನುವುದು ಈ ಹಿಂದಿನ ಎಲ್ಲಾ ಚುನಾವಣಾ ಅಂಕಿಅಂಶಗಳನ್ನು ತೆಗೆದಾಗ ಗೊತ್ತಾಗುವ ವಿಚಾರ.
ಐಎಂಎ ಹಗರಣಕ್ಕೆ ಸ್ಫೋಟಕ ತಿರುವು ನೀಡಿದ ಸಚಿವರ ಹೇಳಿಕೆ
ಬಹುಕೋಟಿ ಐಎಂಎ ಹಗರಣದಲ್ಲಿ ರಾಜ್ಯದ ಇಬ್ಬರು ಮುಸ್ಲಿಂ ಸಮುದಾಯದ ಮುಖಂಡರ ಹೆಸರು ಕೇಳಿಬರುತ್ತಿದೆ. ಅದರಲ್ಲಿ ಪ್ರಮುಖವಾಗಿ, ಶಿವಾಜಿನಗರ ಶಾಸಕ ರೋಶನ್ ಬೇಗ್ ಪ್ರಮುಖವಾದದ್ದು. ಈ ಹಗರಣವನ್ನು ಈಗಾಗಲೇ ವಿಶೇಷ ತನಿಖಾ ದಳಕ್ಕೆ (SIT) ಸರಕಾರ ವಹಿಸಿದೆ. ಅವಶ್ಯಕತೆ ಬಿದ್ದಲ್ಲಿ ಸಿಬಿಐಗೂ ಮುಂದಿನ ದಿನಗಳಲ್ಲಿ ಕೇಸನ್ನು ವರ್ಗಾಯಿಸಬಹುದು.
ವಿಶೇಷ ಪತ್ರಿಕಾಗೋಷ್ಥಿ ಕರೆದು ರೋಶನ್ ಬೇಗ್ ನೀಡಿದ ಸ್ಪಷ್ಟನೆ
ಐಎಂಎ ಹಗರಣದಲ್ಲಿ ವಿಶೇಷ ಪತ್ರಿಕಾಗೋಷ್ಥಿ ಕರೆದು ರೋಶನ್ ಬೇಗ್ ಈಗಾಗಲೇ ಸ್ಪಷ್ಟನೆಯನ್ನು ನೀಡಿದ್ದಾರೆ. ಬೇಕಾದರೆ ಸಿಬಿಐಗೆ ಈ ಕೇಸನ್ನು ಹ್ಯಾಂಡೋವರ್ ಮಾಡಿ ಎನ್ನುವ ವಿಶ್ವಾಸದ ಮಾತನ್ನೂ ಆಡಿದ್ದಾರೆ. ಆದರೆ, ಅವರ ಸುತ್ತ ಅನುಮಾನದ ಸುಳಿ, ಇನ್ನೂ ಸುತ್ತಾಡುತ್ತಿರುವುದಂತೂ ಸತ್ಯ. ಅದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಬೇರೆ..
ಎಸ್ಐಟಿ ತಾವುದೇ ಸಮಯದಲ್ಲಿ ರೋಶನ್ ಬೇಗ್ ಅವರನ್ನು ತನಿಖೆಗೆ ಒಳಪಡಿಸಬಹುದು.
ಕೆಲವೊಂದು, ಮೂಲಗಳ ಪ್ರಕಾರ ಎಸ್ಐಟಿ ತಾವುದೇ ಸಮಯದಲ್ಲಿ ರೋಶನ್ ಬೇಗ್ ಅವರನ್ನು ತನಿಖೆಗೆ ಒಳಪಡಿಸಬಹುದು. ರೋಷನ್ ಬೇಗ್ ಹಾಗೂ ಐಎಂಎ ಸಂಸ್ಥೆಯ ಮಾಲೀಕ ಮನ್ಸೂರ್ ಖಾನ್ ನಡುವಿನ ವ್ಯಾವಹಾರಿಕ ಸಂಬಂಧದ ಬಗ್ಗೆ ತನಿಖಾ ದಳ ಮಾಹಿತಿ ಕಲೆ ಹಾಕಿದೆ. ಜೊತೆಗೆ, ಬ್ಯಾಂಕ್ ವ್ಯವಹಾರದ ಮೇಲೂ ಇಬ್ಬರ ನಡುವೆ ಬಲವಾದ ಶಂಕೆ ತನಿಖಾ ದಳಕ್ಕೆ ಇರುವುದರಿಂದ ಬೇಗ್ ಅವರನ್ನು ಯಾವುದೇ ಸಮಯದಲ್ಲೂ ವಿಚಾರಣೆಗೆ ಕರೆದರೆ ಆಶ್ಚರ್ಯ ಪಡಬೇಕಾಗಿಲ್ಲ.
ಸಚಿವ ಆರ್ ವಿ ದೇಶಪಾಂಡೆ ನೀಡಿದ ಹೇಳಿಕೆ
ಎರಡು ದಿನಗಳ ಹಿಂದೆ ಸಚಿವ ಆರ್ ವಿ ದೇಶಪಾಂಡೆ ನೀಡಿದ ಹೇಳಿಕೆ ಕೂಡಾ, ಇದೇ ಆಯಾಮದಲ್ಲಿ ಇದ್ದಂಗಿತ್ತು. ಮನ್ಸೂರ್ ಖಾನ್ ಜೊತೆ, ರೋಶನ್ ಬೇಗ್ ನನ್ನನ್ನು ಭೇಟಿಯಾಗಿದ್ದರು. NOC ಸಂಬಂಧ ನನ್ನ ಜೊತೆ ಮಾತುಕತೆಯ ವೇಳೆ, ಮನ್ಸೂರ್ ಬಗ್ಗೆ ಉತ್ತಮ ಮಾತನ್ನು ಬೇಗ್ ಆಡಿದ್ದರು. ಸರಕಾರ ಮನ್ಸೂರ್ ಖಾನ್ ಗೆ ಎನ್ಒಸಿ ನೀಡಿದರೆ, ಬ್ಯಾಂಕ್ ನಿಂದ ಸುಮಾರು ಆರುನೂರು ಕೋಟಿ ರೂಪಾಯಿ ಸಾಲ ಅವರಿಗೆ ದೊರೆಯುತ್ತಿತ್ತು ಎಂದು ದೇಶಪಾಂಡೆ ಹೇಳಿದ್ದರು.
ಶೇ. 80ರಷ್ಟು ಹಣಹೂಡಿರುವುದು ಮುಸ್ಲಿಂ ಸಮುದಾಯದವರು
ಐಎಂಎ ಹಗರಣ ಇಡೀ ಮುಸ್ಲಿಂ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ, ಕಾರಣ ಶೇ. 80ರಷ್ಟು ಅಲ್ಲಿ ಹಣಹೂಡಿರುವುದು ಅದೇ ಸಮುದಾಯದವರು. ಒಂದು ವೇಳೆ, ರೋಶನ್ ಬೇಗ್ ಅವರು ಮುಂದಿನ ದಿನಗಳಲ್ಲಿ ತೀವ್ರ ವಿಚಾರಣೆಗೆ ಒಳಪಟ್ಟರೆ, ಅದರಿಂದ ಇಡೀ ಸಮುದಾಯದ ಕೋಪ ಕಾಂಗ್ರೆಸ್ ಪಕ್ಷದ ಕಡೆ ತಿರುಗಬಹುದು ಎನ್ನುವ ಕಾರಣಕ್ಕಾಗಿ, ರೋಶನ್ ಬೇಗ್ ಅವರನ್ನು ಪಕ್ಷ ಸಸ್ಪೆಂಡ್ ಮಾಡಿರಬಹುದು ಎನ್ನುವುದು ಚರ್ಚೆಯಾಗುತ್ತಿರುವ ವಿಚಾರ.
ಪಕ್ಷ ವಿರೋಧಿ ಚಟುವಟಿಕೆ ಎಂದು ರೋಶನ್ ಬೇಗ್ ಅಮಾನತು ಆಗುವ ಸಾಧ್ಯತೆ ಕಮ್ಮಿ
ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಕೆ ಸಿ ವೇಣುಗೋಪಾಲ್ ಬಗ್ಗೆ ಮಾತನಾಡಿದ್ದಕ್ಕೆ, ಪಕ್ಷ ವಿರೋಧಿ ಚಟುವಟಿಕೆ ಎಂದು ರೋಶನ್ ಬೇಗ್ ಅಮಾನತು ಆಗುವ ಸಾಧ್ಯತೆ ಕಮ್ಮಿ. ಯಾಕೆಂದರೆ, ಹೈಕಮಾಂಡ್ ಲೆವೆಲ್ ನಲ್ಲಿ ಅಹಮದ್ ಪಟೇಲ್ ಜೊತೆ ಬೇಗ್ ಉತ್ತಮ ಸಂಪರ್ಕವನ್ನೇ ಹೊಂದಿದ್ದಾರೆ. ಹಾಗಾಗಿ, ಸಂಭಾವ್ಯ ಭಾರೀ ಮುಜುಗರದಿಂದ ತಪ್ಪಿಸಿಕೊಳ್ಳಲು, ಕಾಂಗ್ರೆಸ್ ತೆಗೆದುಕೊಂಡ ನಿರ್ಧಾರವೇ, ರೋಶನ್ ಬೇಗ್ ಸಸ್ಪೆಂಡ್?