ಪ್ರಧಾನಿ ಮೋದಿಯೇ ಖುದ್ದು ನೀಡಿದ್ದ ಭರ್ಜರಿ ಆಫರ್: ಸ್ಪೋಟಕ ರಹಸ್ಯ ಬಹಿರಂಗ ಪಡಿಸಿದ ಕುಮಾರಸ್ವಾಮಿ
ರಾಜ್ಯದ ಎರಡು ಅಸೆಂಬ್ಲಿಗೆ ಉಪಚುನಾವಣೆ ದಿನಾಂಕ ಘೋಷಣೆಯಾದ ನಂತರ ರಾಜಕೀಯ ಚಟುವಟಿಗೆಗಳು ವೇಗ ಪಡೆದುಕೊಂಡಿವೆ. ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿಟ್ಟಿರುವ ಜೆಡಿಎಸ್, ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುವುದು ಎನ್ನುವ ಸಂದೇಶವನ್ನು ರವಾನಿಸಿದೆ.
ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಶಿರಾ ಕ್ಷೇತ್ರವನ್ನು ಮತ್ತೆ ಉಳಿಸಿಕೊಳ್ಳುವಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಾರ್ಯಪೃವುತ್ತರಾಗಿದ್ದು, ಕ್ಷೇತ್ರಕ್ಕೆ ಭೇಟಿ ನೀಡಿ, ಸಾರ್ವಜನಿಕರನ್ನು ಮತ್ತು ಸ್ಥಳೀಯ ಮುಖಂಡರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ.
ಉಪಚುನಾವಣೆಗೆ ಡೇಟ್ ಫಿಕ್ಸ್ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಜಂಘಾಬಲಕ್ಕೆ ಭಾರೀ ಹೊಡೆತ!
ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವ ಶಿರಾ ಕ್ಷೇತ್ರಕ್ಕೆ ಅವರ ಕುಟುಂಬದವರಿಗೇ ಟಿಕೆಟ್ ನೀಡಿ, ಅನುಕಂಪಗಿಟ್ಟಿಸಿಕೊಳ್ಳುವ ಲೆಕ್ಕಾಚಾರದಲ್ಲಿರುವ ಜೆಡಿಎಸ್, ಸದ್ಯದಲ್ಲೇ ಅಭ್ಯರ್ಥಿಯ ಹೆಸರನ್ನು ಬಹಿರಂಗ ಪಡಿಸಲಿದೆ.
ಕ್ಷೇತ್ರದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಎದುರಾದಾಗ, ಪ್ರಧಾನಿ ಮೋದಿಯೇ ಖುದ್ದು ಫೋನ್ ಮಾಡಿ, ನೀಡಿದ್ದ ಆಫರ್ ಬಗ್ಗೆ ಇದೇ ಮೊದಲ ಬಾರಿಗೆ ಹೇಳಿಕೆಯನ್ನು ನೀಡಿದ್ದಾರೆ.
ಉಪಚುನಾವಣೆ: ಡಿ.ಕೆ.ಶಿವಕುಮಾರ್ ಹೇಳಿದ ಅಚ್ಚರಿಯ ಅಭ್ಯರ್ಥಿ ಇವರೇನಾ?
ಸಿಎಂ ಆಗಬೇಕೆಂದು ನಮ್ಮ ತಂದೆಯ ಮನೆಬಾಗಿಲಿಗೆ ಬಂದರು
ತಾನು ಯಾಕೆ ಮುಖ್ಯಮಂತ್ರಿಯಾದೆ ಎನ್ನುವುದರ ಬಗ್ಗೆ ಮತ್ತೆ ಸ್ಪಷ್ಟ ಪಡಿಸಿರುವ ಕುಮಾರಸ್ವಾಮಿ, "ನಾನೇನು ಸಿಎಂ ಹುದ್ದೆ ಬಯಸಿದವನಲ್ಲ. ಕಾಂಗ್ರೆಸ್ ನವರು ಕುಮಾರಸ್ವಾಮಿಯೇ ಸಿಎಂ ಆಗಬೇಕೆಂದು ನಮ್ಮ ತಂದೆಯ ಮನೆಬಾಗಿಲಿಗೆ ಬಂದರು. ಆ ಹುದ್ದೆಯನ್ನು ಸ್ವೀಕರಿಸಿದರೆ ಏನೇನು ಕಷ್ಟ ಅನುಭವಿಸಬೇಕು ಎನ್ನುವುದರ ಅರಿವು ನನಗಿತ್ತು. ಆದರೆ, ರೈತರಿಗೆ ನನ್ನಿಂದ ಸಹಾಯವಾಗ ಬೇಕು ಎನ್ನುವ ಕಾರಣಕ್ಕಾಗಿ ಮುಖ್ಯಮಂತ್ರಿಯಾದೆ" ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಸಮ್ಮಿಶ್ರ ಸರಕಾರದ ಅವಧಿಯಲ್ಲಿ ನಾನು ಗುಮಾಸ್ತನಂತೆ ಕೆಲಸ ಮಾಡಿದೆ
"ನಿಜ ಹೇಳಬೇಕೆಂದರೆ, ಸಮ್ಮಿಶ್ರ ಸರಕಾರದ ಅವಧಿಯಲ್ಲಿ ನಾನು ಗುಮಾಸ್ತನಂತೆ ಕೆಲಸ ಮಾಡಿದೆ. ಎಲ್ಲಾ ಕಷ್ಟವನ್ನು ಸಹಿಸಿಕೊಂಡು ಬಂದೆ, ಅದೆಲ್ಲಾ ರೈತರ ಸಾಲಮನ್ನಾಕ್ಕಾಗಿ. ಅಸಲಿಗೆ, ಕಳೆದ ಚುನಾವಣೆಯಲ್ಲಿ ನಮಗೆ ಕಡಿಮೆ ಸೀಟ್ ಬಂದಿದ್ದರಿಂದ, ಸಕ್ರಿಯ ರಾಜಕಾರಣ ತೊರೆಯೋಣ ಎನ್ನುವ ನಿರ್ಧಾರಕ್ಕೆ ಬಂದಿದ್ದೆ. ಪ್ರಧಾನಿ ಮೋದಿಯೂ ನನಗೆ ಫೋನ್ ಮಾಡಿದ್ದರು"ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಪ್ರಧಾನಿ ಮೋದಿಯವರೇ ಖುದ್ದಾಗಿ ಫೋನ್ ಮಾಡಿದ್ದರು
ನನಗೆ ಬಿಜೆಪಿಯಿಂದಲೂ ಫೋನ್ ಬಂದಿತ್ತು. ಪ್ರಧಾನಿ ಮೋದಿಯವರೇ ಖುದ್ದಾಗಿ ಫೋನ್ ಮಾಡಿದ್ದರು. ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ. ಬಿಜೆಪಿ ನಿಮಗೆ ಸಂಪೂರ್ಣ ಬೆಂಬಲ ಕೊಡಲಿದೆ. ಐದು ವರ್ಷ ಯಾರೂ ನಿಮ್ಮನ್ನು ಟಚ್ ಮಾಡೋಕೆ ಆಗುವುದಿಲ್ಲ ಎನ್ನುವ ಭರವಸೆಯನ್ನು ನೀಡುತ್ತೇನೆಂದು ಪ್ರಧಾನಿಗಳು ಹೇಳಿದ್ದರು"ಎನ್ನುವ ಹೇಳಿಕೆಯನ್ನು ಕುಮಾರಸ್ವಾಮಿ ನೀಡಿದ್ದಾರೆ.
Recommended Video
ಸತ್ಯನಾರಾಯಣ ನಿಧನದ ಸುದ್ದಿಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ
ಶಿರಾ ಕ್ಷೇತ್ರದಲ್ಲಿ ಮತ್ತೆ ಚುನಾವಣೆ ನಡೆಯುತ್ತಿದೆ. ಸತ್ಯನಾರಾಯಣ ಅವರ ನಿಧನದ ಸುದ್ದಿಯನ್ನು ನಮಗಿನ್ನೂ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ, ಉಪಚುನಾವಣೆ ಎದುರಿಸಬೇಕಾಗಿದೆ. ನನ್ನ ರಾಜಕೀಯ ಜೀವನ ನೀವು ಕೊಡುವ ಜನಾದೇಶದ ಮೇಲಿದೆ. ಹಾಲು ಕೊಡುತ್ತೀರೋ, ವಿಷ ಉಣಿಸುತ್ತೀರೋ ಎನ್ನುವುದು ನಿಮಗೆ ಬಿಟ್ಟ ವಿಚಾರ"ಎಂದು ಕುಮಾರಸ್ವಾಮಿ ಶಿರಾ ಜನತೆಗೆ ಮನವಿ ಮಾಡಿದ್ದಾರೆ.