ಗುಜರಾತ್ ಚುನಾವಣೆಯಲ್ಲಿ ಜಯ ನಮ್ಮದೇ: ಸಚಿವ ಯು ಟಿ ಖಾದರ್ ಸಂದರ್ಶನ
Recommended Video
ಆಹಾರ ಮತ್ತು ನಾಗರೀಕ ಸರಬರಾಜು ಪೂರೈಕೆ ಇಲಾಖೆ ಖಾತೆಯ ಸಚಿವ ಯು ಟಿ ಖಾದರ್ ಅವರ ಸಂದರ್ಶನದ ಮುಂದುವರಿದ ಭಾಗ. ಗುಜರಾತ್ ನಲ್ಲಿನ ಪ್ರಚಾರ, ಕರಾವಳಿ ಭಾಗದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ, ಕಲ್ಲಡ್ಕ ಪ್ರಭಾಕರ್ ಭಟ್ರ ಶಾಲೆಗೆ ಅನುದಾನ ನಿಲ್ಲಿಸಿರುವ ಬಗ್ಗೆ ಸರಕಾರದ ನಿಲುವು ಏನು ಎನ್ನುವುದನ್ನು ಸಚಿವರು ಸಂದರ್ಶನದಲ್ಲಿ ಹೇಳಿದ್ದಾರೆ.
ಪ್ರ: ಬಿಐಎಸ್ (Bureau of Indian Standard) ಗವರ್ನಿಂಗ್ ಬೋರ್ಡ್ ಸದಸ್ಯರಾಗಿ ನಿಮ್ಮನ್ನು ಕೇಂದ್ರ ಸರಕಾರ ನೇಮಕ ಮಾಡಿದೆ, ದಕ್ಷಿಣಭಾರತದಲ್ಲಿ ನೀವೊಬ್ಬರೇ ಈ ಬೋರ್ಡಿಗೆ ಆಯ್ಕೆಯಾಗಿರುವುದು. ಈ ಜವಾಬ್ದಾರಿಯ ಬಗ್ಗೆ?
ಖಾದರ್: ದೇಶದಲ್ಲಿ ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾದರೂ ಈ ಬೋರ್ಡಿನಿಂದಲೇ ತೆಗೆದುಕೊಳ್ಳಬೇಕು. ಈ ಬೋರ್ಡಿಗೆ ನನ್ನನ್ನು ಸದಸ್ಯರನ್ನಾಗಿ ಮಾಡಿದ್ದಾರೆ. ಇದಕ್ಕೆ ಕೇಂದ್ರ ಸರಕಾರಕ್ಕೆ ಥ್ಯಾಂಕ್ಸ್ ಹೇಳಲು ಬಯಸುತ್ತೇನೆ.
ಹೊನ್ನಾವರ ಶೇಮ್: ಸಚಿವ ಯು ಟಿ ಖಾದರ್ ಸಂದರ್ಶನ
ಮೊನ್ನೆ ನಡೆದ ಸಭೆಯಲ್ಲಿ ಹಲವಾರು ಸಲಹೆಗಳನ್ನು ನೀಡಿದ್ದೇನೆ. ISI, BIS ಮಾರ್ಕ್ ಅನ್ನೋದು ಉತ್ಪನ್ನಗಳಿಗೆ ಮಾತ್ರ ಸಂಬಂಧ ಪಟ್ಟಿರುತ್ತಿತ್ತು. ಇನ್ನು ಮೂಲಸೌಕರ್ಯಕ್ಕೆ ಸಂಬಂಧಪಟ್ಟಂತಹ ಕೆಲಸಗಳಿಗೂ ಐಎಸ್ಐ, ಬಿಐಎಸ್ ಮಾರ್ಕ್ ಇರುವುದು ಕಡ್ಡಾಯವಾಗಲಿದೆ. ದೇಶದಲ್ಲಾಗುತ್ತಿರುವ ಬಹುದೊಡ್ಡ ಬದಲಾವಣೆ ಇದು.
ಪ್ರ: ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ (2013) ದಕ್ಷಿಣಕನ್ನಡ ಮತ್ತು ಉಡುಪಿಯ 11ಕ್ಷೇತ್ರಗಳಲ್ಲಿ 8ಕ್ಷೇತ್ರವನ್ನು ಕಾಂಗ್ರೆಸ್ ಗೆದ್ದಿತ್ತು. ಈಗಿನ ಪರಿಸ್ಥಿತಿ ಹೇಗಿದೆ?
ಖಾದರ್: ನಾವು ಎಂಟಕ್ಕೆ ಎಂಟನ್ನೂ ಉಳಿಸಿಕೊಳ್ಳುತ್ತೇವೆ. ಎಲ್ಲಾ ಭಾಗದ ಜನ, ಎಲ್ಲಾ ಕೋಮಿನ ಜನ ನಮ್ಮನ್ನು ಬೆಂಬಲಿಸುತ್ತಾರೆ. ಇನ್ನೂ ಹೆಚ್ಚಿನ ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ.
ಗುಜರಾತ್ ಪ್ರಚಾರಕ್ಕೆ ಹೋದ ಸಚಿವರು ಏನಂತಾರೆ?
ಗುಜರಾತಿನ ಗ್ರೌಂಡ್ ರಿಯಾಲಿಟಿ
ಪ್ರ: ಗುಜರಾತ್ ನಲ್ಲಿ ಪ್ರಚಾರಕ್ಕೆ ಹೋಗಿದ್ರಿ, ಗ್ರೌಂಡ್ ರಿಯಾಲಿಟಿಯ ಅನುಭವ ನಿಮಗೆ ಆಗಿರಬೇಕು. ಮತದಾರರ ನಾಡಿಮಿಡಿತ ಹೇಗಿದೆ?
ಖಾದರ್: ಆರು ತಿಂಗಳ ಹಿಂದೆ ನಮಗೂ ಅವರಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಜಿಎಸ್ಟಿ, ಅಪನಗದೀಕರಣ ಮುಂತಾದ ನಿರ್ಧಾರಗಳಿಂದ ವ್ಯಾಪಾರಿಗಳು ಕಷ್ಟದಲ್ಲಿದ್ದಾರೆ. ಅಲ್ಲಿನ ಸಿಎಂ ಈಗ ಪ್ರಧಾನಿಯಾಗಿರುವುದರಿಂದ, ಜನರ ಅಪೇಕ್ಷೆಯ ಮಟ್ಟ ಜಾಸ್ತಿಯಿದೆ. ಹದಿನೈದು ವರ್ಷದಿಂದ ಅಲ್ಲಿ ಅಂತಹ ಏನೂ ಅಭಿವೃದ್ದಿ ಅಥವಾ ಜನಪರ ಕೆಲಸ ಅಗಲಿಲ್ಲ. ಜನರು ಈಗ ಬದಲಾವಣೆ ಬಯಸುತ್ತಿದ್ದಾರೆ, ಮತದಾರ ಕಾಂಗ್ರೆಸ್ ನತ್ತ ಮುಖಮಾಡಿದ್ದಾರೆ.
ಗುಜರಾತ್ ಪ್ರವಾಸದ ಬಗ್ಗೆ ಸಚಿವರು ಮಾತು
ಇನ್ನೊಂದು ಗಂಭೀರ ವಿಚಾರವೆಂದರೆ ಪಟೇಲ್ ಸಮುದಾಯ ಬಿಜೆಪಿಯಿಂದ ದೂರವಾಗಿದೆ. ಅವರು ಮೀಸಲಾತಿ ಕೇಳುವುದು ಮಾತ್ರವಲ್ಲ, ಮೀಸಲಾತಿ ಸಂಬಂಧ ಹೋರಾಟದಲ್ಲಿ ಹದಿನಾಲ್ಕು ಜನರನ್ನು ಗುಂಡಿಟ್ಟು ಸಾಯಿಸಲಾಗಿದೆ. ಸತ್ತವರ ಕುಟುಂಬಕ್ಕೆ ಯಾವುದೇ ಪರಿಹಾರವನ್ನೂ ಸರಕಾರ ನೀಡಲಿಲ್ಲ. ಈ ಎಲ್ಲಾ ಕಾರಣಗಳಿಂದ ಜನ ಆಕ್ರೋಶರಾಗಿದ್ದಾರೆ. ಮತದಾರ ಈ ಬಾರಿ ತಮ್ಮ ಹಕ್ಕು ಚಲಾಯಿಸುವ ಮೂಲಕ, ಉತ್ತರ ಕೊಡಲಿದ್ದಾನೆ.
ಕರ್ನಾಟಕದಲ್ಲಿ ಅತಂತ್ರ ಫಲಿತಾಂಶ ಬರಬಹುದಾ?
ಪ್ರ: ಗುಜರಾತ್ ನಲ್ಲಿ ಆರು ತಿಂಗಳ ಹಿಂದೆ ಬಿಜೆಪಿ ಮತ್ತೆ ಗೆಲ್ಲುತ್ತದೆ ಎನ್ನುತ್ತಿದ್ದ ಸಮೀಕ್ಷೆಗಳು ಈಗ ಫೋಟೋ ಫಿನಿಷ್ ಆಗುತ್ತೆ ಎನ್ನುತ್ತಿವೆ. ಕರ್ನಾಟಕದಲ್ಲೂ ಆರು ತಿಂಗಳ ಹಿಂದಿನ ಸಮೀಕ್ಷೆಗೂ, ವಾರದ ಹಿಂದೆ ಹೊರಬಿದ್ದ ಸಮೀಕ್ಷೆಗಳನ್ನು ಅವಲೋಕಿಸಿದರೆ, ಅತಂತ್ರ ಫಲಿತಾಂಶ ಬರಬಹುದು ಎನ್ನುತ್ತಿವೆಯಲ್ಲಾ?
ಖಾದರ್: ಸಮೀಕ್ಷೆಗಳ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ. ಗುಜರಾತಿನ ಸ್ಥಿತಿ ಬೇರೆ, ಇಲ್ಲಿನ ಪರಿಸ್ಥಿತಿ ಬೇರೆ. 15ವರ್ಷದಲ್ಲಿ ಜನಪರ ಕೆಲಸ ಮಾಡದೇ ಇರುವುದರಿಂದ ಅಲ್ಲಿ ಅವರಿಗೆ ಆಡಳಿತ ವಿರೋಧಿ ಅಲೆಯಿದೆ. ಜಿಎಸ್ಟಿ, ಅಪನದೀಕರಣ ಮುಂತಾದ ತಪ್ಪುಗಳನ್ನು ಬಿಜೆಪಿ ಮಾಡಿದೆ. ಅದರ ಎಫೆಕ್ಟ್ ಅವರಿಗೆ, ನಮಗಲ್ಲ. ಇದಕ್ಕಿಂತ ಹೆಚ್ಚಾಗಿ ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಬಿಜೆಪಿ 10ವರ್ಷದಲ್ಲಿ ನಡೆಸಿದ ಆಡಳಿತದಿಂದಾಗಿ ಸರಕಾರಕ್ಕೆ ಕಪ್ಪುಚುಕ್ಕೆಯನ್ನು ತಂದಿದ್ದಾರೆ. ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರಕಾರ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದೆ, ಜನ ಅದನ್ನು ಮೆಚ್ಚಿದ್ದಾರೆ.
ನಾವೇ ಮತ್ತೆ ಅಧಿಕಾರಕ್ಕೆ ಬರುತ್ತೇವೆ
ಜನರಿಗೆ ಮನೆಕಟ್ಟೋಕೆ ಎರಡು ಲಕ್ಷ ಸಾಲ ನೀಡುತ್ತಿದ್ದೇವೆ. ಅನ್ನಭಾಗ್ಯ ನೀಡುತ್ತಿದ್ದೇವೆ. ಬಿಪಿಎಲ್ ಕುಟುಂಬದ ಮಾಸಿಕ ಖರ್ಚುಗಳು ಏನಿರುತ್ತೋ, ಅದರ ಶೇ. 60ರಷ್ಟನ್ನು ಕರ್ನಾಟಕ ಸರಕಾರ ವಹಿಸಿಕೊಂಡಿದೆ. ಮಕ್ಕಳಿಗೆ ಶಿಕ್ಷಣ, ಯೂನಿಫಾರಂ, ಸೈಕಲ್, ಲ್ಯಾಪ್ ಟಾಪ್ ಮುಂತಾದವುಗಳನ್ನು ಸರಕಾರವೇ ನೀಡುತ್ತಿದೆ. ಒಂದು 1.13 ಕೋಟಿ ಕುಟುಂಬ ಇದರ ಲಾಭ ಪಡೆದಿದೆ. ಭ್ರಷ್ಟಾಚಾರವಿಲ್ಲದ, ಸುಭಿಕ್ಷ ಸರಕಾರ ನಮ್ಮದು. ಹತ್ತು ವರ್ಷ ಆಡಳಿತ ಮಾಡಿ, ಜೈಲಿಗೆ ಹೋಗಿ, ಕಿತ್ತಾಡಿಕೊಂಡು, ಯಾವುದೇ ಒಳ್ಳೆ ಯೋಜನೆಯನ್ನು ತರದೇ ಎಲ್ಲವೂ ಇಲ್ಲಿ ಭ್ರಷ್ಟಾಚಾರ ಮಯವಾಗಿತ್ತು. ಜನ ಜೈಲಿಗೆ ಹೋದವರನ್ನು ಮರೆಯುತ್ತಾರೆ, ಅನ್ನ ನೀಡಿದವರನ್ನು ಮರೆಯುವುದಿಲ್ಲ.
ಅತಂತ್ರ ಫಲಿತಾಂಶ ಬಂದರೆ, ಜೆಡಿಎಸ್ ಜೊತೆ ಮೈತ್ರಿ?
ಪ್ರ: ಅತಂತ್ರ ಫಲಿತಾಂಶ ಬಂದರೆ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುತ್ತೀರಾ?
ಖಾದರ್: ಇದನ್ನು ನಮ್ಮ ಹೈಕಮಾಂಡ್ ನಿರ್ಧರಿಸುತ್ತೆ. ಆದರೆ ಅಂತಹ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ, ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ, ಪಕ್ಷ ಅವರನ್ನು ಆಯ್ಕೆ ಮಾಡುತ್ತೆ.
ಕಲ್ಲಡ್ಕ ಪ್ರಭಾಕರ ಭಟ್ರ ಶಾಲೆಗೆ ಅನುದಾನ ನಿಲ್ಲಿಸಿದ್ದು
ಪ್ರ: ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿಂದೂ ಕಾರ್ಯಕರ್ತರ ಸಾವು, ಕಲ್ಲಡ್ಕ ಪ್ರಭಾಕರ ಭಟ್ರ ಶಾಲೆಗೆ ಅನುದಾನ ನಿಲ್ಲಿಸಿದ್ದು, ಮತದಾರರ ಮೇಲೆ ಪ್ರಭಾವ ಬೀರಲಿದೆಯಾ?
ಖಾದರ್: ಖಂಡಿತಾ ಪ್ರಭಾವ ಬೀರುವುದಿಲ್ಲ. ಬಂಟ್ವಾಳದಲ್ಲಿ ಅಶ್ರಫ್ ಎನ್ನುವವನ ಕೊಲೆಯಾಯಿತು, ಅದರ ಹಿಂದೆಯೇ ಶರತ್ ಮಡಿವಾಳನ ಸಾವಾಯಿತು. ಹರೀಶ್ ಪೂಜಾರಿ, ಬ್ರಹ್ಮಾವರದ ರಾಜೇಶ್ ಎನ್ನುವ ಸಂಘ ಪರಿವಾರದ ವ್ಯಕ್ತಿಗಳ ಸಾವಾಯಿತು. ಯಾಕೆ ಅವರೆಲ್ಲಾ ಹಿಂದೂಗಳಲ್ವಾ? 80 ವರ್ಷದ ವಿನಾಯಕ ಬಾಳಿಗ ಅವರನ್ನು ಹತ್ಯೆ ಮಾಡಲಾಯಿತು, ಬ್ರಿಗೇಡ್ ಅಂತ ಹೇಳುವವರು ಇದನ್ನು ಮಾಡುತ್ತಾರೆ. ಮನುಷ್ಯ ಇನ್ನೊಬ್ಬರನ್ನು ಮನುಷ್ಯರನ್ನಾಗಿ ಮೊದಲು ನೋಡಲಿ. ಈ ಎಲ್ಲಾ ವಿಚಾರಗಳು ಹಿಂದೆ ಭಾವನಾತ್ಮಕವಾಗಿ ಬಿಜೆಪಿಗೆ ಲಾಭವಾಗಿತ್ತು, ಈಗ ಅದೆಲ್ಲಾ ನಡೆಯುವುದಿಲ್ಲ. ಪ್ರಚೋದನಕಾರಿಯಾಗಿ ಜನರನ್ನು ಎತ್ತಿಕಟ್ಟುವುದು ಇವರೇ.., ಜನ ಈಗ ಎಲ್ಲವನ್ನೂ ಅರಿತಿದ್ದಾರೆ.