ಸಭಾಪತಿ ಶಂಕರಮೂರ್ತಿ ಪದಚ್ಯುತಿಯಿಂದ ಕಾಂಗ್ರೆಸಿಗೆ ಏನು ಲಾಭ?
ಬೆಂಗಳೂರು, ಜೂನ್ 13: ಬಿಜೆಪಿ ಹಿನ್ನಲೆಯ ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿದೆ. 'ಅವಿಶ್ವಾಸ ನಿರ್ಣಯದಲ್ಲಿ ಸ್ಪಷ್ಟ ಕಾರಣಗಳಿಲ್ಲ ಎಂದಿರುವ ಶಂಕರಮೂರ್ತಿ ನೈತಿಕತೆ ಆಧಾರದಲ್ಲಿ ಅವಿಶ್ವಾಸ ನಿರ್ಣಯಕ್ಕೆ ಒಪ್ಪಿಕೊಂಡಿದ್ದೇನೆ,' ಎಂದಿದ್ದಾರೆ.
ಆದರೆ ಇನ್ನೂ ಮತದಾನವಾಗಿಲ್ಲ. ಒಂದೊಮ್ಮೆ ಅವಿಶ್ವಾಸ ನಿರ್ಣಯದಲ್ಲಿ ಕಾಂಗ್ರೆಸ್ ಗೆದ್ದರೆ ಆ ಪಕ್ಷಕ್ಕೆ ಹಲವು ಲಾಭಗಳಿವೆ.
ಪರಿಷತ್ ಸಭಾಪತಿ ಶಂಕರಮೂರ್ತಿ ಪದಚ್ಯುತಿಗೆ ಕಾಂಗ್ರೆಸ್ ತಂತ್ರ
ಮೊದಲನೆಯದಾಗಿ ಆ ಹುದ್ದೆಯಲ್ಲಿ ತನಗೆ ಬೇಕಾದವರನ್ನು ಕಾಂಗ್ರೆಸ್ ಗೆ ಕೂರಿಸಬಹುದು. ಇದರಿಂದ ಸದನವನ್ನು ಸುಲಭವಾಗಿ ನಿಯಂತ್ರಿಸಬಹುದು ಎಂಬುದು ಕಾಂಗ್ರೆಸ್ ಆಲೋಚನೆ.
ಉದಾಹರಣೆಗೆ ನಿನ್ನೆ ರಾಹುಲ್ ಗಾಂಧಿ ಬಂದಾಗ ವಿಧಾನಸಭೆ ಕಲಾಪವನ್ನೇ ಮುಂದೂಡಲಾಯಿತು. ತಮ್ಮದೇ ಪಕ್ಷದ ಸಭಾಪತಿಗಳಿದ್ದಾಗ ಈ ರೀತಿಯ ಸ್ವಾತಂತ್ರ್ಯ ಆಡಳಿತ ಪಕ್ಷಕ್ಕೆ ಸಿಗುತ್ತದೆ.
ಗೂಟದ ಕಾರು, ಬಂಗಲೆ
ಇನ್ನೊಂದು ಕಡೆ ಸಭಾಪತಿ ಸ್ಥಾನವೆಂದರೆ ಮತ್ತೆ ಅಧಿಕಾರ, ಗೂಟದ ಕಾರು, ಬಂಗಲೆ ಎಲ್ಲಾ ಬರುತ್ತದೆ. ಸಚಿವಾಕಾಂಕ್ಷಿ ಶಾಸಕರಲ್ಲಿ ಒಬ್ಬರಿಗೆ ಸಭಾಪತಿ ಹುದ್ದೆ ನೀಡಿ ಬಾಯಿ ಮುಚ್ಚಿಸಲು ಕಾಂಗ್ರೆಸ್ ಗೆ ಸಾಧ್ಯವಾಗುತ್ತದೆ. ಈಗಾಗಲೇ ವಿಧಾನಸಭೆಯಲ್ಲೂ ಇದೇ ಕಾರ್ಯತಂತ್ರದ ಮೂಲಕ ಸಚಿವಾಕಾಂಕ್ಷಿ ಕೆ.ಬಿ ಕೋಳಿವಾಡ್ ರಿಗೆ ಸ್ಪೀಕರ್ ಹುದ್ದೆ ನೀಡಿ ಕಾಂಗ್ರೆಸ್ ಸಮಾಧಾನಪಡಿಸಿತ್ತು.
ರೇಸ್ ನಲ್ಲಿ ಕಾಂಗ್ರೆಸ್ ನ ಕೊಂಡಯ್ಯ
ಕಾಂಗ್ರೆಸ್ ನಿಂದ ಹಿರಿಯ ರಾಜಕಾರಣಿ ಕೆಸಿ ಕೊಂಡಯ್ಯ ಸಭಾಪತಿಯಾಗುವ ಸಾಧ್ಯತೆ ಇದೆ. ಈ ಹಿಂದೆ ಎಸ್. ಆರ್ ಪಾಟೀಲ್ ಹೆಸರೂ ಸಭಾಪತಿ ರೇಸ್ ನಲ್ಲಿ ಕೇಳಿ ಬಂದಿತ್ತು. ಆದರೆ ಅವರೀಗ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿರುವುದರಿಂದ ಅವರು ಆ ಸ್ಥಾನಕ್ಕೆ ಬರಲಿಕ್ಕಿಲ್ಲ.
ಶಂಕರಮೂರ್ತಿ ವಿರುದ್ಧ ಕಾಂಗ್ರೆಸಿನಿಂದ ಅವಿಶ್ವಾಸ ನಿರ್ಣಯ
ಮೇಲ್ಮನೆಯಲ್ಲಿ ಕಾಂಗ್ರೆಸ್ ಬಲಾಬಲ
75 ಸದಸ್ಯ ಬಲದ ಮೇಲ್ಮನೆಯಲ್ಲಿ ಸದ್ಯ ಕಾಂಗ್ರೆಸ್ 32 ಶಾಸಕರನ್ನು ಹೊಂದಿದೆ. ಇನ್ನು ಬಿಜೆಪಿ 22, ಜೆಡಿಎಸ್ 13 ಹಾಗೂ 5 ಪಕ್ಷೇತರರಿದ್ದಾರೆ. ಇನ್ನು ಒಬ್ಬರು ಸಭಾಪತಿ (ಬಿಜೆಪಿ) ಹಾಗೂ 2 ಸ್ಥಾನ ಖಾಲಿ ಇದೆ. ಒಂದು ಖಾಲಿ ಹುದ್ದೆಗೆ ಸಿಎಂ ಲಿಂಗಪ್ಪ ಹೆಸರನ್ನು ರಾಜ್ಯಪಾಲರು ಒಪ್ಪಿದ್ದಾರೆ. ಅವರಿನ್ನೂ ಪ್ರಮಾಣವಚನ ಸ್ವೀಕರಿಸಬೇಕಷ್ಟೆ. ಹೀಗಾಗಿ ಸದ್ಯದಲ್ಲೇ ಒಬ್ಬರು ನಾಮ ನಿರ್ದೇಶನಗೊಳ್ಳಲಿದ್ದಾರೆ. ಆಗ ಕಾಂಗ್ರೆಸ್ ಬಲ 33 ಕ್ಕೆ ಏರಿಕೆಯಾಗಲಿದೆ.
ಪಕ್ಷೇತರರ ಬೆಂಬಲ
ಸದ್ಯ ಪಕ್ಷೇತರ ಶಾಸಕರೂ ಕಾಂಗ್ರೆಸ್ ಬೆಂಬಲಿಸುವುದರಿಂದ ಕಾಂಗ್ರೆಸ್ ಬಲ 37ಕ್ಕೆ ಏರಿಕೆಯಾಗಲಿದೆ. ಇದರಿಂದ ಸ್ಪಷ್ಟ ಬಹುಮತ ಪಡೆಯಬಹುದು. ಇನ್ನೊಂದೆಡೆ ಸದ್ಯ ಬಿಜೆಪಿ-ಜೆಡಿಎಸ್ ಒಟ್ಟಾದರೂ ಕೇವಲ 35 ಸ್ಥಾನಗಳಷ್ಟೇ ಆಗುತ್ತವೆ.
ದೇವೇಗೌಡರ ಅಭಯ
ಸ್ವತಃ ದೇವೇಗೌಡರೇ ಡಿಎಚ್ ಶಂಕರಮೂರ್ತಿಗೆ ಕರೆ ಮಾಡಿದ್ದಾರೆ. ಶಂಕರಮೂರ್ತಿ ಸಭಾಪತಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಆದರೆ ಸದ್ಯ ಬಿಜೆಪಿ-ಜೆಡಿಎಸ್ ಒಟ್ಟಾದರೂ ಕೇವಲ 35 ಸ್ಥಾನಗಳಷ್ಟೇ ಆಗುತ್ತವೆ. ಹೀಗಾಗಿ ಇಬ್ಬರು ಒಟ್ಟಾದರೂ ಶಂಕರ್ಮೂರ್ತಿ ಉಳಿಸುವುದು ಕಷ್ಟ.
ನಿರಾಯಾಸದಲ್ಲಿ ಸಭಾಪತಿ ಸ್ಥಾನ
ಇನ್ನು ಸಾವನ್ನಪ್ಪಿರುವ ಬಿಜೆಪಿ ವಿಮಲಾ ಗೌಡರ ಸ್ಥಾನವನ್ನೂ ವಿಧಾನಸಭೆಯ ಸಂಖ್ಯಾಬಲದಲ್ಲಿ ಮೇಲೆ ಕಾಂಗ್ರೆಸ್ ಗೆದ್ದುಕೊಳ್ಳಲಿದೆ. ವಿಮಲಾ ಗೌಡರ ಸ್ಥಾನ ಭರ್ತಿಯಾಗುವುದು ತಡವಾದರೂ ಸದ್ಯದ ಮಟ್ಟಿಗೆ ನಿರಾಯಾಸವಾಗಿ ಸಭಾಪತಿ ಸ್ಥಾನವನ್ನು ಕಾಂಗ್ರೆಸ್ ಗಿಟ್ಟಿಸಬಹುದಾಗಿದೆ.