ಸಿಎಂ ಕಚೇರಿಯಿಂದ ಹೊರಬಿದ್ದ ಏಕಾಏಕಿ ಆದೇಶ: ಏನಿದರ ಹಿಂದಿನ ಮರ್ಮ!
Recommended Video
ಡಿ.ಕೆ.ಶಿವಕುಮಾರ್ ಅವರ ಬಂಧನದ ನಂತರದ ರಾಜಕೀಯ ಸನ್ನಿವೇಶಗಳು ರಾಜ್ಯದಲ್ಲಿ ಯಾವರೀತಿ ಇವೆ. ಅದರಲ್ಲೂ, ಪ್ರಮುಖವಾಗಿ ಹಳೇ ಮೈಸೂರು ಭಾಗದಲ್ಲಿ? ಈ ಪ್ರಶ್ನೆ ಉದ್ಭವಾಗುತ್ತಿರುವುದಕ್ಕೆ ಕಾರಣಗಳು ಇಲ್ಲದಿಲ್ಲ..
ಡಿಕೆಶಿ ಬಂಧನ ವಿರೋಧಿಸಿ ನಡೆದ ಪ್ರತಿಭಟನೆ, ಅದಕ್ಕೆ ಕೇಂದ್ರ ಸರಕಾರ ಹೊರಡಿಸಿರುವ ಆದೇಶವನ್ನು ಅವಲೋಕಿಸಿದರೆ, ಒಂದು ಸಮುದಾಯದ ವಿಶ್ವಾಸವನ್ನು ಉಳಿಸಿಕೊಳ್ಳಲು ಬಿಜೆಪಿ ಮುಂದಾದಂತಿದೆ. ಡಿಕೆಶಿ ಬಂಧನದ ವಿಚಾರದಲ್ಲಿ, ಒಕ್ಕಲಿಗ ಸಮುದಾಯದ ನಾಯಕರು ಮಾತ್ರ ಹೇಳಿಕೆ ನೀಡಬೇಕು ಎನ್ನುವ ಫರ್ಮಾನನ್ನು ಅಮಿತ್ ಶಾ ಹೊರಡಿಸಿದ್ದರು ಎಂದು ಸುದ್ದಿಯಾಗಿತ್ತು.
ಡಿಕೆಶಿ ಪರ ನಿಂತ ಒಕ್ಕಲಿಗರು: ಆತಂಕಗೊಂಡ BSY ಯಿಂದ ಮಾಸ್ಟರ್ ಪ್ಲ್ಯಾನ್!
ರಾಜ್ಯದ ಕೆಲವು ಭಾಗಗಳಲ್ಲಿ ಒಕ್ಕಲಿಗರ ಪ್ರಾಬಲ್ಯ ಜಾಸ್ತಿ. ಡಿಕೆಶಿ ಬಂಧನದ ನಂತರ, ಆ ಸಮುದಾಯದವರು ಬಿಜೆಪಿಯನ್ನು 'ವಿಲನ್' ರೀತಿಯಲ್ಲಿ ನೋಡುತ್ತಿದ್ದಾರೆ ಎನ್ನುವ ಸಂದೇಹ ಬಿಜೆಪಿಗೆ ಬಂದಂತಿದೆ. ಇದಕ್ಕೆ ಪೂರಕ ಎನ್ನುವಂತೆ, ಏಕಾಏಕಿ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯಾಲಯದಿಂದ ಹೊರಬಿದ್ದಿರುವ ಆದೇಶ.
ಡಿಕೆಶಿ ಬಂಧನಕ್ಕೆ ಒಕ್ಕಲಿಗ ಟಚ್: ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಬಿಜೆಪಿ ಮಾಸ್ಟರ್ ಪ್ಲಾನ್
ಈ ರೀತಿಯ ದಿಢೀರ್ ಆದೇಶವನ್ನು ಸಿಎಂ ಯಡಿಯೂರಪ್ಪನವರು ಹೊರಡಿಸಿ, ಡಿಕೆಶಿ ಪ್ರಕರಣದಿಂದ ಆ ಸಮುದಾಯದವರ ಗಮನವನ್ನು ಬೇರೆಕಡೆ ತಿರುಗಿಸುವ ಮರ್ಮವೇ ಇದು ಎನ್ನುವುದು ಚರ್ಚೆಯ ವಿಷಯವಾಗಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬೃಹತ್ ಕೆಂಪೇಗೌಡರ ಪ್ರತಿಮೆ ಸ್ಥಾಪನೆ
ಇತ್ತೀಚೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಟ್ವೀಟ್ ಒಂದನ್ನು ಮಾಡಿದ್ದರು. ಅದು ಹೀಗಿದೆ, " ಬೆಂಗಳೂರು ನಿರ್ಮಾರ್ತೃ ಕೆಂಪೇಗೌಡರ ನೆನಪು ಚಿರಸ್ಥಾಯಿಯಾಗಿಸಲು ನಮ್ಮ ಸರ್ಕಾರದಿಂದ 100 ಕೋಟಿ ರೂ. ಬಿಡುಗಡೆಗೆ ನಿರ್ಧಾರ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬೃಹತ್ ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಬಿಜೆಪಿ ಸರ್ಕಾರ ಸಂಕಲ್ಪವನ್ನು ಕೈಗೊಂಡಿದೆ" ಎಂದು. ಈ ಟ್ವೀಟ್ ಈಗ ಚರ್ಚೆಯ ವಿಷಯವಾಗಿದೆ.
ಪ್ರಾಧಿಕಾರ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ಅಸ್ತಿತ್ವಕ್ಕೆ
ಕೆಂಪೇಗೌಡ ಅಭಿವೃದ್ದಿ ಪ್ರಾಧಿಕಾರ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ವೇಳೆ ಅಸ್ತಿತ್ವಕ್ಕೆ ಬಂದಿತ್ತು. ಹನ್ನೆರಡು ಕೋಟಿ ರೂಪಾಯಿಯನ್ನು ಆರಂಭಿಕ ಮೊತ್ತವಾಗಿ ಸಿದ್ದರಾಮಯ್ಯನವರು ಈ ಪ್ರಾಧಿಕಾರಕ್ಕೆ ನೀಡಿದ್ದರು. ಇದು, ಡಿ.ಕೆ.ಶಿವಕುಮಾರ್ ಅವರ ವಿಶೇಷ ಪ್ರಯತ್ನದಿಂದ ಆರಂಭವಾದಂತಹ ಪ್ರಾಧಿಕಾರ. ಜೊತೆಗೆ, ಈ ಪ್ರಾಧಿಕಾರಕ್ಕೆ ಡಿಕೆಶಿ ಉಪಾಧ್ಯಕ್ಷರಾಗಿದ್ದರು ಎನ್ನುವುದು ಇಲ್ಲಿ ಗಮನಿಸಬೇಕಾದ ವಿಚಾರ.
ಗುಜರಾತ್ ನಲ್ಲಿ ಸರ್ದಾರ್ ಪಟೇಲ್ ಅವರ ಪ್ರತಿಮೆಯಂತೆ
" ಗುಜರಾತ್ ನಲ್ಲಿ ಸರ್ದಾರ್ ಪಟೇಲ್ ಅವರ ಪ್ರತಿಮೆಯಂತೆ, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಲ್ಲಿಯೇ ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಲು ಸರಕಾರ ನಿರ್ಧರಿಸಿದೆ" ಎಂದು ಯಡಿಯೂರಪ್ಪ ಹೇಳಿದ್ದಾರೆ. ಇನ್ನೊಂದು ವಿಚಾರವೇನಂದರೆ, ಕೆಂಪೇಗೌಡ ಪ್ರಾಧಿಕಾರದ ಉಪಾಧ್ಯಕ್ಷರಾದ, ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರಿಗೂ, ಸಿಎಂ ಕಚೇರಿಯಿಂದ ಹೊರಬಿದ್ದ ಆದೇಶ, ಆಶ್ಚರ್ಯವನ್ನು ತಂದಿದೆ ಎನ್ನುವ ಮಾತಿದೆ.
ಡಾ. ಅಶ್ವಥ್ ನಾರಾಯಣ, ಅಶೋಕ್
ಡಿಕೆಶಿ ವಿಚಾರಕ್ಕೆ ಸಂಬಂಧಿಸಿದಂತೆ, ಸಚಿವರುಗಳಾದ ಡಾ. ಅಶ್ವಥ್ ನಾರಾಯಣ, ಅಶೋಕ್, ಸಿ.ಟಿ.ರವಿ, ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಬಚ್ಚೇಗೌಡ ಅವರನ್ನು ಈ ಪರಿಸ್ಥಿತಿಯನ್ನು ಹ್ಯಾಂಡಲ್ ಮಾಡಲು, ಇವರನ್ನೆಲ್ಲಾ ಮುಂದಕ್ಕೆ ಬಿಡಲು ಬಿಜೆಪಿ ಯೋಜನೆ ರೂಪಿಸುತ್ತಿದೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿತ್ತು.
ಡಿಕೆಶಿ ಬಂಧನಕ್ಕೂ ಬಿಜೆಪಿಗೂ ಸಂಬಂಧವಿಲ್ಲ
ಡಿಕೆಶಿ ಬಂಧನಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಒಕ್ಕಲಿಗ ಸಮದಾಯದ ವಿರುದ್ದ ನಾವಿಲ್ಲ ಎನ್ನುವ ಸಂದೇಶವನ್ನು ರವಾನಿಸಲು, ಮುಖ್ಯಮಂತ್ರಿಗಳು ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಕೆಂಪೇಗೌಡ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಯಡಿಯೂರಪ್ಪ, ಅವರ ಈ ನಡೆಯ ಹಿಂದೆ, ಯಾವ ಮರ್ವ ಅಡಗಿದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿದುಬರಲಿದೆ.