ಜಗತ್ತಿನ 4ನೇ ಶ್ರೀಮಂತ ಮಹಿಳೆ ಸೋನಿಯಾ ಗಾಂಧಿ ಕೋವಿಡ್ ನಿಧಿಗೆ ಸಹಾಯ ಹಸ್ತ ಚಾಚಿಲ್ಲವೇಕೆ?
ಬೆಂಗಳೂರು, ಮೇ 14: ಕೊರೊನಾ ನಿರ್ವಹಣೆಯ ವಿಚಾರದಲ್ಲಿ ಆಡಳಿತ ಪಕ್ಷ ಬಿಜೆಪಿ ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ ನಡುವೆ ಮಾತಿನ ಸಮರ ಎಲ್ಲೇ ಮೀರುತ್ತಿದೆ. ತುರ್ತು ಆರೋಗ್ಯ ವಿಚಾರ ವಿಷಯಾಂತರಗೊಳ್ಳುತ್ತಿದೆ.
ಕಾಂಗ್ರೆಸ್ ಪಕ್ಷ ತಮ್ಮ ಶಾಸಕರು, ಸಂಸದರಿಗೆ ಮಂಜೂರು ಮಾಡುವ ಕ್ಷೇತ್ರಾಭಿವೃದ್ಧಿ ನಿಧಿಯನ್ನು ಬಳಸಿಕೊಂಡು, ಲಸಿಕೆ ಖರೀದಿಗಾಗಿ ನೂರು ಕೋಟಿ ರೂಪಾಯಿಗಳನ್ನು ನೀಡುವ ಬಗ್ಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಈ ಬಗ್ಗೆ ಘೋಷಣೆಯನ್ನು ಮಾಡಿದ್ದರು.
ಕೊರೊನಾ ಲಸಿಕೆ ನೇರ ಖರೀದಿಗೆ 100 ಕೋಟಿ ರೂ. ಘೋಷಿಸಿದ ಕಾಂಗ್ರೆಸ್
ಇದಕ್ಕೆ ಖಾರವಾಗಿ ಬಿಜೆಪಿ ಪ್ರತಿಕ್ರಿಯಿಸಿದ್ದು ಹೀಗೆ, "ಉಚಿತ ಲಸಿಕೆ ಕೊಡಲು ಸರ್ಕಾರಕ್ಕೆ ಸಾಧ್ಯವಾಗದಿದ್ದರೆ ಹೇಳಲಿ, ನಾವು ಸಹಾಯ ಮಾಡುತ್ತೇವೆ ಎಂದಿರುವ @DKShivakumar ಅವರೇ, ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದಷ್ಟು ಸುಲಭವಾಗಿ ಸಹಾಯ ಮಾಡಲು ಸಾಧ್ಯವಿಲ್ಲ. ಅಷ್ಟಕ್ಕೂ ನಿಮ್ಮ ಪಾಪದ ಸಂಪಾದನೆಯಲ್ಲಿ ಲಸಿಕೆ ಹಾಕಿಸಿಕೊಳ್ಳಬೇಕಾದ ಅನಿವಾರ್ಯತೆ ರಾಜ್ಯದ ಜನತೆಗೆ ಬಂದಿಲ್ಲ"ಎಂದು ಬಿಜೆಪಿ ರಾಜ್ಯ ಘಟಕ ಟ್ವೀಟ್ ಮಾಡಿದೆ.
"ಮಾನ್ಯ @DKShivakumar ಅವರೇ, ಉಚಿತ ಲಸಿಕೆ ನೀಡಲು ನಿಮ್ಮ ಅಧಿನಾಯಕಿ ಸೋನಿಯಾ ಗಾಂಧಿ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಯೋಜನೆ ರೂಪಿಸಿದ್ದೀರಾ? ಜಗತ್ತಿನ ನಾಲ್ಕನೇ ಶ್ರೀಮಂತ ಮಹಿಳೆ ಇದುವರೆಗೆ ಕೋವಿಡ್ ಸಹಾಯ ಹಸ್ತ ಚಾಚಿಲ್ಲವೇಕೆ? ದೆಹಲಿಯಿಂದ ಗೋವಾಕ್ಕೆ ಬಂದದ್ದಾಯಿತು, ಗೋವಾದಿಂದ ಇಟಲಿಗೋ?"ಎಂದು ಬಿಜೆಪಿ ಪ್ರಶ್ನಿಸಿದೆ.
"ಸಂಕಷ್ಟದ ಸಮಯದಲ್ಲಿ ಬಿಟ್ಟಿ ಸಲಹೆ ನೀಡುವುದು, ಜನರ ದಾರಿ ತಪ್ಪಿಸುವುದು. ಇದು @INCIndia ಪಕ್ಷ ದೇಶದ ಜನರಿಗೆ ಮಾಡುತ್ತಿರುವ ದ್ರೋಹ. ಭ್ರಷ್ಟಾಧ್ಯಕ್ಷ @DKShivakumar ಅವರೇ, ನಿಮಗೆ ನಿಜಕ್ಕೂ ಸಹಾಯ ಮಾಡುವ ಮನಸಿದ್ದರೆ ಒಂದಿಷ್ಟು ಸುಮ್ಮನಿದ್ದು ಬಿಡಿ. ಪೊಳ್ಳು ಆರೋಪ ಮಾಡುವುದು ಬಿಟ್ಟು ಸುಮ್ಮನಿರುವಿರಾ?"ಎಂದು ಬಿಜೆಪಿ ಎಚ್ಚರಿಸಿದೆ.
ಕೊರೊನಾ ಅವಧಿಯಲ್ಲಿ ಕಾಂಗ್ರೆಸ್ ಈ ರೀತಿ ಮಾಡುತ್ತಿರುವುದು ಇದು 2ನೇ ಬಾರಿ
Recommended Video
"ಸರ್ಕಾರಕ್ಕೆ ಸವಾಲೆಸೆಯುವ @DKShivakumar ಅವರೇ, ರಾಜೀವ್ ಗಾಂಧಿ ಫೌಂಡೇಶನ್ ಖಾತೆಯಲ್ಲಿ ಲಕ್ಷಾಂತರ ಕೋಟಿ ಹಣ ಕೊಳೆಯುತ್ತಿದೆ. ನಿಮ್ಮ ಆದಾಯಕ್ಕೆ ಮೀರಿದ ಆಸ್ತಿಯ ತನಿಖೆ ನಡೆಯುತ್ತಿದೆ. ಇದ್ಯಾವುದೂ ನ್ಯಾಯ ಮಾರ್ಗದ ಗಳಿಕೆಯಲ್ಲ. ಸಹಾಯದ ಹೆಸರಿನಲ್ಲೂ ಕಪ್ಪು ಬಿಳುಪು ದಂಧೆಗೆ ಇಳಿದಿದ್ದೀರಾ?"ಎನ್ನುವ ಗಂಭೀರ ಆರೋಪವನ್ನು ಬಿಜೆಪಿ ಮಾಡಿದೆ.