ಕೊರಟಗೆರೆಯಲ್ಲಿ ಮುಂದಿನ ಚುನಾವಣೆಗೆ ಪರಂ ತಂತ್ರಗಾರಿಕೆ ಏನು?
ಕೊರಟಗೆರೆ, ಸೆಪ್ಟೆಂಬರ್ 2: ಕೆಪಿಸಿಸಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ಮತ್ತೆ ಸುದ್ದಿಯಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ತಮ್ಮನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಹಾಗೂ ತಾವು ಸೂಚಿಸಿದವರಿಗೆ ಯಾವುದೇ ಸ್ಥಾನ-ಮಾನ ನೀಡುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ ಎಂಬುದು ಎಲ್ಲೆಡೆ ಹರಿದಾಡುತ್ತಿರುವ ಮಾತು.
ಸಿದ್ದರಾಮಯ್ಯ-ಪರಮೇಶ್ವರ್ ನಡುವೆ ಭಿನ್ನಮತ ಸ್ಫೋಟ!
ಇದು ಒಂದು ಕಡೆಯಾದರೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅವರು ಸ್ಪರ್ಧೆ ಮಾಡುವುದಿಲ್ಲ ಎಂಬ ಮಾತು ಕಳೆದ ಬಾರಿ ಅವರು ಪ್ರತಿನಿಧಿಸಿದ್ದ ಕೊರಟಗೆರೆ ಕ್ಷೇತ್ರದಲ್ಲೇ ಸುತ್ತಾಡುತ್ತಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಏನಾದರೂ ಹೆಚ್ಚು ಕಡಿಮೆ ಆಗಿ ಪರಮೇಶ್ವರ್ ಸೋತುಬಿಟ್ಟರೆ ಕಳೆದ ಸಲದಂತೆ ಮುಖ್ಯಮಂತ್ರಿ ಪಟ್ಟ ಕೈ ತಪ್ಪಬಾರದು ಎಂಬ ಲೆಕ್ಕಾಚಾರದಲ್ಲಿ ಈ ರೀತಿಯ ತಂತ್ರ ಹೆಣೆದಿದ್ದಾರೆ ಅಂತಿವೆ ಮೂಲಗಳು.
ದಲಿತರೇ ನಿರ್ಣಾಯಕವಾಗಲಿದ್ದಾರೆ ಎಂಬ ಪರಂ ಮಾತಿನ ಅರ್ಥವೇನು?
ಏನದು ತಂತ್ರ ಅಂತೀರಾ? ಈ ಬಾರಿ ಕೊರಟಗೆರೆ ಕ್ಷೇತ್ರದಿಂದ ಪರಮೇಶ್ವರ್ ಅವರು ತಮ್ಮ ಆಪ್ತರೊಬ್ಬರನ್ನು ಚುನಾವಣೆಗೆ ನಿಲ್ಲಿಸಿ, ಅವರನ್ನು ಗೆಲ್ಲಿಸಲು ಸಕಲ ಶ್ರಮವೂ ಹಾಕುತ್ತಾರೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆ ಕಂಡುಬಂದರೆ ಮುಖ್ಯಮಂತ್ರಿ ಹುದ್ದೆಗೆ ಪ್ರಯತ್ನ ಪಡುತ್ತಾರೆ. ಆ ನಂತರ ತಮ್ಮ ಆಪ್ತರಿಂದ ರಾಜೀನಾಮೆ ಕೊಡಿಸಿ, ಕೊರಟಗೆರೆ ಕ್ಷೇತ್ರದಿಂದಲೇ ಚುನಾವಣೆಗೆ ನಿಲ್ಲುತ್ತಾರೆ ಎಂಬುದು ಒಟ್ಟಾರೆ ಯೋಜನೆಯ ತಿರುಳು.
ಪ್ರಚಾರ ತೆಗೆದುಕೊಳ್ಳುವುದಿಲ್ಲ
ಪರಮೇಶ್ವರ್ ಸಮುದಾಯದ ಕೆಲಸಗಳನ್ನು ಮಾಡುವುದರಲ್ಲಿ ಎರಡು ಮಾತಿಲ್ಲ. ಆದರೆ ಅದರ ಪ್ರಚಾರ ತೆಗೆದುಕೊಳ್ಳುವುದರಲ್ಲಿ ಹಿಂದೆ ಉಳಿಯುತ್ತಾರೆ. ಕಾರ್ಯಕರ್ತರ ಮೂಲಕ ಆ ಕೆಲಸಗಳನ್ನೂ ಪ್ರಚಾರ ಮಾಡುವುದಿಲ್ಲ ಎಂಬುದು ಪರಂ ಅವರನ್ನು ಹತ್ತಿರದಿಂದ ಕಂಡವರ ಮಾತು.
ಕನಿಷ್ಠ ನೂರು ಕಾರ್ಯಕರ್ತರ ಹೆಸರು ಹೇಳ್ತಾರೆ
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಂ ವಿರುದ್ಧ ಜಯ ಗಳಿಸಿದ ಜೆಡಿಎಸ್ ನ ಸುಧಾಕರ್ ಲಾಲ್ ತಮ್ಮ ಪಕ್ಷದ ಕನಿಷ್ಠ ನೂರು ಕಾರ್ಯಕರ್ತರನ್ನು ಹೆಸರು ಹಿಡಿದು ಮಾತನಾಡಿಸಬಲ್ಲರು. ಅಂದರೆ ಪಕ್ಷದ ಕಾರ್ಯಕರ್ತರ ಜತೆಗಿನ ನಿಕಟ ಸಂಬಂಧ ಹಾಗಿದೆ. ಆದರೆ ಪರಮೇಶ್ವರ್ ಗೆ ಸ್ಥಳೀಯವಾಗಿ ಕಾಂಗ್ರೆಸ್ ಕಾರ್ಯಕರ್ತರ ಜತೆಗೆ ಸಂವಹನವೇ ಇಲ್ಲ.
ಕೈಗೂ ಸಿಗಲ್ಲ, ಫೋನಿಗೂ ಸಿಗಲ್ಲ
ಪರಮೇಶ್ವರ್ ಅವರಿಗೆ ಆ ಪರಿಯ ಜವಾಬ್ದಾರಿಯೋ ಅಥವಾ ಮೂಲತಃ ಸ್ವಭಾವವೇ ಹಾಗೋ ಗೊತ್ತಿಲ್ಲ. ತಮ್ಮ ಕ್ಷೇತ್ರದ ಜನತೆಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಸಿಗುವುದಿಲ್ಲ. ಕನಿಷ್ಠ ಫೋನಿಗೂ ಸಿಗುವುದಿಲ್ಲ ಎಂಬುದು ದೊಡ್ಡ ಆರೋಪ.
ಕುರ್ರಂಕೋಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಸೆಪ್ಟೆಂಬರ್ 2, ಶನಿವಾರ ಕೊರಟಗೆರೆಯ ಕುರ್ರಂಕೋಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯುತ್ತಿದೆ. ಪರಂ ಆಪ್ತರೆಂದೇ ಗುರುತಿಸಿಕೊಂಡಿರುವ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮತ್ತಿತರ ಮುಖಂಡರು ಭಾಗವಹಿಸಿದ್ದಾರೆ. ಪ್ರಮುಖವಾದ ಈ ಸಭೆಯ ಬಗ್ಗೆ ಕುತೂಹಲದ ಕಣ್ಣಿದೆ. ಅಲ್ಲಿ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಎದುರು ನೋಡಲಾಗುತ್ತಿದೆ.