ದೇಶದ ಆರೋಪಿಗಳ ಫಿಂಗರ್ ಫ್ರಿಂಟ್ ಸಂಗ್ರಹ- ಶೀಘ್ರ ಆರೋಪಿ ಪತ್ತೆಗೆ ಸಹಕಾರಿ ಹೇಗೆ?
ಬೆಂಗಳೂರು,ಆಗಸ್ಟ್ 18: ಕಳ್ಳತನವೋ, ಕೊಲೆ, ರಾಬರಿ ಸೇರಿದಂತೆ ಅಪರಾಧಗಳು ನಡೆದ ವೇಳೆ ಮೊದಲು ಪೊಲೀಸರು ಫಿಂಗರ್ ಪ್ರಿಂಟ್ ಮಾಹಿತಿಯನ್ನು ಕಲೆಹಾಕುತ್ತಾರೆ. ಆ ಮೂಲಕ ಕೃತ್ಯ ಎಸಗಿದ್ದು ಯಾರು ಎಂದು ಕಂಡು ಹಿಡಿಯಲು ಯತ್ನಿಸಲಾಗುತ್ತದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರವು ನ್ಯಾಷನಲ್ ಆಟೋಮೆಟೆಡ್ ಫಿಂಗರ್ ಪ್ರಿಂಟ್ ಐಡೆಂಟಿಫಿಕೇಷನ್ ಸಿಸ್ಟಮ್ಗೆ (ಎನ್ಎಎಫ್ಐಎಸ್) ತಂದಿದೆ. ಈ ಸಿಸ್ಟಮ್ ಬಳಕೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ.
ದೇಶದ ವಿವಿಧೆಡೆ ಅಪರಾಧ ಕೃತ್ಯವೆಸಗಿ ತಲೆಮರೆಸಿಕೊಂಡಿರುವ ಆರೋಪಿಗಳನ್ನು ತ್ವರಿತವಾಗಿ ಪತ್ತೆ ಹಚ್ಚಲು ಹಾಗೂ ದೇಶದ ಒಂದೇ ಸೂರಿನಡಿ ಅತ್ಯಾಧುನಿಕ ಬೆರಳು ಮುದ್ರೆ ಸಂಗ್ರಹಾಲಯ (ಎಫ್ ಪಿಬಿ) ಸುಧಾರಿಸಲು ಕೇಂದ್ರ ಸರ್ಕಾರವು ನ್ಯಾಷನಲ್ ಆಟೋಮೆಟೆಡ್ ಫಿಂಗರ್ ಪ್ರಿಂಟ್ ಐಡೆಂಟಿಫಿಕೇಷನ್ ಸಿಸ್ಟಮ್ಗೆ (ಎನ್ಎಎಫ್ಐಎಸ್) ತಂದಿದೆ.
ಕರ್ನಾಟಕವು ಈವರೆಗೂ ಸುಮಾರು 5 ಲಕ್ಷ ಮಂದಿ ಕ್ರಿಮಿನಲ್ಗಳ ಬೆರಳಚ್ಚು ಡೇಟಾ ಕಳುಹಿಸಿದೆ. ಇತರೆ ರಾಜ್ಯಗಳಿಗೆ ಹೋಲಿಕೆಯನ್ನು ಮಾಡಿ ನೋಡಿದರೇ ಮುಂಚೂಣಿಯಲ್ಲಿದೆ. ಬೆರಳಚ್ಚುಗಳ ಮೂಲಕ ಆರೋಪಿಗಳನ್ನು ದೇಶದ ಯಾವ ಭಾಗವರು ಎಂದು ಪತ್ತೆ ಹಚ್ಚಲು ಅನುಕೂಲವಾಗುತ್ತದೆ. ಅಪರಾಧಿಯ ಹಿನ್ನೆಲೆಯನ್ನು ಕಂಡುಹಿಡಿಯಲು, ಆರೋಪಿಯ ಪತ್ತೆಗೂ ಅನುಕೂಲವಾಗಲಿದೆ.
ಆರೋಪಿಗಳ ಬೆರಳಚ್ಚು ಒಂದೇ ಸೂರಿನಡಿ
ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗ (ಎನ್ಸಿಆರ್ ಬಿ) ವತಿಯಿಂದ ದೇಶದ ಎಲ್ಲಾ ರಾಜ್ಯಗಳ ಆರೋಪಿಗಳ ಬೆರಳುಮುದ್ರೆಯನ್ನು ಒಂದೇ ಸೂರಿನಡಿ ತರಲುಎನ್ಎಎಫ್ಐಎಸ್ ನ ಸರ್ವರ್ಗೆ ಅಳವಡಿಸಲು ಉದ್ದೇಶಿಸಿದೆ. ರಾಜ್ಯ ಬೆರಳು ಮುದ್ರೆ ಸಂಗ್ರಹಾಲಯದ ರಾಜ್ಯದ ಆಟೋಮೆಟೆಡ್ ಫಿಂಗರ್ ಪ್ರಿಂಟ್ ಐಡೆಂಟಿಫಿಕೇಷನ್ ಸಿಸ್ಟಮ್ ನಲ್ಲಿದ್ದ ಸುಮಾರು 5 ಲಕ್ಷ ಆರೋಪಿಗಳ ಬೆರಳಚ್ಚುಗಳನ್ನು ಕಳುಹಿಸಿದೆ. ರಾಜ್ಯಗಳಿಗೆ ಹೋಲಿಸಿದರೆ ಬೆರಳು ಮುದ್ರೆ ಸಂಗ್ರಹಾಲಯ ಡಿಜಿಟಲೀಕರಣಕೊಂಡು ತ್ವರಿತಗತಿಯಾಗಿ ಕೇಂದ್ರದ ಸರ್ವರ್ಗೆ ಡೇಟಾ ರವಾನಿಸುವ ಮೂಲಕ ಮುಂಚೂಣಿ ಸ್ಥಾನದಲ್ಲಿದೆ. ಸದ್ಯ ಪ್ರಾಯೋಗಿಕ ಹಂತದಲ್ಲಿದ್ದು ಇನ್ನೂ ಕೆಲವೇ ತಿಂಗಳಲ್ಲಿ ಅಧಿಕೃತವಾಗಿ ಜಾರಿ ಬರಲಿದ್ದು ಎಲ್ಲಾ ರಾಜ್ಯಗಳ ಪೊಲೀಸರಿಗೆ ನೂತನ ವ್ಯವಸ್ಥೆ ಅನುಕೂಲಕರವಾಗಲಿದೆ.
70 ಲಕ್ಷ ಆರೋಪಿಗಳ ಫಿಂಗರ್ ಫ್ರಿಂಟ್
ಉತ್ತರ ಭಾರತದ ಕೆಲ ರಾಜ್ಯಗಳು ಫಿಂಗರ್ ಪ್ರಿಂಟ್ ಬ್ಯೂರೊವನ್ನು (ಎಫ್ ಪಿಬಿ) ಮ್ಯಾನುಯಲ್ ಪದ್ದತಿಯಿಂದ ಡಿಜಿಟಲಿಕರಣಗೊಳಿಸುತ್ತಿದ್ದರೆ ಇನ್ನೂ ಕೆಲ ರಾಜ್ಯಗಳು ಗಣಕೀಕರಣಗೊಂಡು ಬೆರಳು ಮುದ್ರೆ ದತ್ತಾಂಶ ರವಾನಿಸುವಲ್ಲಿ ನಿರತವಾಗಿವೆ. ಆದರೆ ಕರ್ನಾಟಕ 2003 ರಲ್ಲಿಯೇ ಎಫ್ ಪಿಬಿ ಡಿಜಿಟಲೀಕರಣಗೊಂಡು ಸಾವಿರಾರು ಪ್ರಕರಣಗಳ ಪತ್ತೆಗೆ ಸಹಕಾರಿಯಾಗಿವೆ. ದೇಶದ ಎಲ್ಲಾ ರಾಜ್ಯಗಳಿಂದ ಎನ್ಎಎಫ್ಐಎಸ್ಗೆ ಸುಮಾರು 70 ಲಕ್ಷ ಆರೋಪಿಗಳ ಫಿಂಗರ್ ಫ್ರಿಂಟ್ ಬಂದಿದೆ ಎಂದು ತಿಳಿಜು ಬಂದಿದೆ.
ಆರೋಪಿಗಳ ಬಂಧನಕ್ಕೆ ಉಪಯುಕ್ತ
ಅಪರಾಧ ನಡೆದಾಗ ಆರೋಪಿತರ ಬಗ್ಗೆ ಸುಳಿವು ನೀಡುವ ಹಾಗೂ ಕ್ರಿಮಿನಲ್ ಗಳ ಜಾತಕ ಬಯಲು ಮಾಡುವ ಮಡಿವಾಳದಲ್ಲಿರುವ ರಾಜ್ಯ ಬೆರಳಚ್ಚು ಮುದ್ರೆ ಸಂಗ್ರಹಾಲಯದಲ್ಲಿ ಸುಮಾರು 5 ಲಕ್ಷ ಕ್ರಿಮಿನಲ್ ಗಳ ಬೆರಳಚ್ಚುಗಳನ್ನ ಕೇಂದ್ರದ ಸರ್ವರ್ಗೆ ಶಿಫ್ಟ್ ಮಾಡಲಾಗಿದೆ. ರಾಜ್ಯದ ಆರೋಪಿಗಳು ದೇಶದ ವಿವಿಧ ಮೂಲೆಯಲ್ಲಿ ಅಪರಾಧವೆಸಗಿದಾಗ ತಂತ್ರಜ್ಞಾನದ ನೆರವಿನಿಂದ ಕೂಡಲೇ ಆತನ ವಿಳಾಸ, ಪ್ರಕರಣಗಳ ಹಿನ್ನೆಲೆ, ಯಾವ ರೀತಿಯ ಅಪರಾಧ ಎಸಗಿದ್ದಾನೆ ಸೇರಿದಂತೆ ಪೊಲೀಸರಿಗೆ ಬೇಕಾಗುವ ಉಪಯುಕ್ತ ಮಾಹಿತಿ ಪಡೆಯಲು ಸಹಕಾರಿಯಾಗುವುದರ ಜೊತೆಗೆ ತ್ವರಿತಗತಿಯಲ್ಲಿ ಪ್ರಕರಣ ಬೇಧಿಸಲು ನೆರವಾಗಲಿದೆ.
ಈ ಉದ್ದೇಶದಿಂದಲೇ 2003 ರಲ್ಲಿ ರಾಜ್ಯ ಪೊಲೀಸ್ ಇಲಾಖೆಯು ಮ್ಯಾನುಯಲ್ ಪದ್ದತಿಯಿಂದ ಹಂತ- ಹಂತವಾಗಿ ಡಿಜಿಟಲೀಕರಣಕ್ಕೆ ಒತ್ತುಕೊಟ್ಟಿದ್ದರಿಂದ ಸಾವಿರಾರು ಕೇಸ್ ಗಳ ಪತ್ತೆ ಹಚ್ಚಲು ನೆರವಾಗಿದೆ. ಈ ಹಿಂದೆ ಜಿಲ್ಲಾ ಘಟಕಗಳಲ್ಲಿ ಆರೋಪಿಗಳ ಬೆರಳಚ್ಚು ಸಂಗ್ರಹಿಸಿ ಜಿಲ್ಲಾ ಸರ್ವರ್ಗಳಲ್ಲಿ ಇರುತಿತ್ತು. 2019 ರ ಬಳಿಕ ಎಫ್ಪಿಬಿಯು ಆಟೋಮೆಟೆಡ್ ಫಿಂಗರ್ ಪ್ರಿಂಟ್ ಐಡೆಂಟಿಫಿಕೇಷನ್ ಸಿಸ್ಟಮ್ ಗೆ ಸುಧಾರಿತ ಸಾಫ್ಟ್ ವೇರ್ ಅಳವಡಿಸಿಕೊಂಡು ವಿವಿಧ ಜಿಲ್ಲಾ ಸರ್ವರ್ಗಳಲ್ಲಿ ಅಡಕವಾಗಿರುವ ಆರೋಪಿಗಳ ಬೆರಳು ಮುದ್ರೆಯನ್ನು ರಾಜ್ಯದ ಒಂದೇ ಸರ್ವರ್ ನ ತೆಕ್ಕೆಗೆ ತೆಗೆದುಕೊಂಡು ಶೋಧ ನಡೆಸಲಾಗುತಿತ್ತು. ಇದೀಗ ಬೆರಳು ಮುದ್ರೆ ಸಂಗ್ರಹಾಲಯವನ್ನ ಕೇಂದ್ರಿಕೃತಗೊಳಿಸುತ್ತಿದ್ದು ಪೂರ್ಣಗೊಂಡ ಬಳಿಕ ಆರೋಪಿಗಳ ಬಂಧನಕ್ಕೆ ಉಪಯುಕ್ತವಾಗಲಿದೆ ಎಂದು ರಾಜ್ಯ ಬೆರಳು ಮುದ್ರೆ ಸಂಗ್ರಹಾಲಯದ ಪೊಲೀಸ್ ಅಧೀಕ್ಷಕ ಎಂ.ಸಿ.ಕುಮಾರಸ್ಚಾಮಿ ತಿಳಿಸಿದ್ದಾರೆ.
20 ಸಾವಿರ ಮಂದಿ ಹೊಸ ಆರೋಪಿ
ರಾಜ್ಯ ಬೆರಳು ಮುದ್ರೆ ಸಂಗ್ರಹಾಲಯಕ್ಕೆ ಎಸ್ಪಿ ಮುಖ್ಯಸ್ಥರಾಗಿದ್ದು, ವಲಯ ಮಟ್ಟದಲ್ಲಿ ಡಿವೈಎಸ್ಪಿ ಹಾಗೂ ಜಿಲ್ಲಾ ಮಟ್ಟದಲ್ಲಿ ಇನ್ ಸ್ಪೆಕ್ಟರ್ ಗಳು ಕಾರ್ಯನಿರ್ವಹಿಸುತ್ತಾರೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ ಬೆರಳು ಮುದ್ರೆ ಘಟಕಗಳಿವೆ. ಇವುಗಳಿಗೆ ಪೊಲೀಸ್ ಇನ್ ಸ್ಪೆಕ್ಟರ್ಗಳೇ ಘಟಕಾಧಿಕಾರಿಯಾಗಿರಲಿದ್ದಾರೆ. ರಾಜ್ಯದಲ್ಲಿ ಪ್ರಮುಖ ಅಪರಾಧಗಳು ನಡೆದಾಗ ಸ್ಥಳಕ್ಕೆ ಘಟಕಾಧಿಕಾರಿಗಳು ಸಿಬ್ಬಂದಿಗಳೊಂದಿಗೆ ದೌಡಾಯಿಸಿ ಆರೋಪಿತರ ಫಿಂಗರ್ ಪ್ರಿಂಟ್ ಮಾಹಿತಿ ಸಂಗ್ರಹಿಸುತ್ತಾರೆ. ಅವುಗಳನ್ನು ತಮ್ಮ ಬಳಿಯಿರುವ ಫಿಂಗರ್ ಪ್ರಿಂಟ್ ಮ್ಯಾಚ್ ಮಾಡುತ್ತಾರೆ.
ಒಂದು ವೇಳೆ ಈ ಹಿಂದೆ ಅಪರಾಧವೆಸಗಿ ಬಂಧಿತನಾಗಿ ಬೆರಳು ಮುದ್ರೆ ಡೇಟಾದಲ್ಲಿ ಆರೋಪಿವಿದ್ದರೆ ಕೂಡಲೇ ಪತ್ತೆ ಹಚ್ಚಬಹುದಾಗಿದೆ. ಘಟಕಾಧಿಕಾರಿಗಳು ನೀಡುವ ಮಾಹಿತಿ ಆಧರಿಸಿ ಸ್ಥಳೀಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲು ಅನುಕೂಲವಾಗುತ್ತದೆ. ರಾಜ್ಯದಲ್ಲಿ ವರ್ಷಕ್ಕೆ ಸರಿ ಸುಮಾರು 25ರಿಂದ 30 ಸಾವಿರ ಕ್ರಿಮಿನಲ್ಸ್ಗಳ ಬೆರಳಚ್ಚು ಸಂಗ್ರಹಿಸುವ ಎಫ್ಪಿಬಿ, ಇದರಲ್ಲಿ 5 ರಿಂದ 8 ಸಾವಿರ ಮಂದಿ ಹಳೆಯ ಆರೋಪಿಗಳಾದರೆ ಇನ್ನುಳಿದ 20 ಸಾವಿರ ಮಂದಿ ಹೊಸ ಆರೋಪಿಗಳಾಗಿದ್ದಾರೆ.
ಎಡಿಜಿಪಿ ಆರ್ ಹಿತೇಂದ್ರರಿಂದ ಮಾಹಿತಿ
ಬೆರಳು ಮುದ್ರೆಯಿಂದ ಸುಮಾರು ಪ್ರತಿ ವರ್ಷ 400 ರಿಂದ 500 ಪ್ರಕರಣ ಬೇಧಿಸಲಾಗುತ್ತದೆ. ಪ್ರಾಯೋಗಿಕ ಹಂತದಲ್ಲಿರುವ ಎನ್ಎಎಫ್ಐಎಸ್ ಮೂಲಕ ರಾಜ್ಯದಲ್ಲಿ ಸುಮಾರು 24 ಪ್ರಕರಣ ಬೇಧಿಸಲು ಸಹಕಾರಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ 5 ಲಕ್ಷ ಆರೋಪಿಗಳ ಬೆರಳು ಮುದ್ರೆಯನ್ನ ಕೇಂದ್ರದ ಸರ್ವರ್ಗೆ ರವಾನಿಸಲಾಗಿದೆ. ಇದು ನಿರಂತರ ಪ್ರಕ್ರಿಯೆಯಾಗಿರಲಿದೆ. ಒಟ್ಟಾರೆ ಪೊಲೀಸ್ ಇಲಾಖೆಯಲ್ಲಿ ಅಪರಾಧ ಪ್ರಕರಣಗಳನ್ನು ಮುಕ್ತಾಯಗೊಳಿಸುವಲ್ಲಿ ಎಫ್ಪಿಬಿ ಪ್ರಮುಖ ಪಾತ್ರ ವಹಿಸಲಿದೆ ಎಂದು ರಾಜ್ಯ ಅಪರಾಧ ಮತ್ತು ತಾಂತ್ರಿಕ ಸೇವೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ತಿಳಿಸಿದ್ದಾರೆ.
Recommended Video