ಏನಿದು ಎಚ್.ಡಿ.ಕುಮಾರಸ್ವಾಮಿಯವರ ಮಹತ್ವಾಕಾಂಕ್ಷೆಯ 'ಮಿಷನ್ 123'?
2023ರಲ್ಲಿ ನಡೆಯಬೇಕಾಗಿರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಪಾರ್ಟಿ ಈಗಾಗಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದೆ. ಮುಖಂಡರು ಮತ್ತು ಕಾರ್ಯಕರ್ತರ ಸತತ ಸಭೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡೆಸುತ್ತಿದ್ದಾರೆ.
ಅಧಿಕಾರಕ್ಕೆ ಅದೂ ಸ್ವಂತ ಬಲದಿಂದ ಏರಲು ಪೂರ್ವ ಸಿದ್ದತೆಯನ್ನು ಮಾಡಿಕೊಂಡು ಬರುತ್ತಿರುವ ಕುಮಾರಸ್ವಾಮಿ, ಪಕ್ಷದಲ್ಲಿ ಸಕ್ರಿಯರಾಗಿ ಉಳಿಯದ ಮುಖಂಡರು, ಬ್ಲಾಕ್ ಮಟ್ಟದ ಸದಸ್ಯರನ್ನು ಮೂಲೆಗುಂಪು ಮಾಡುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.
ಮಂಡ್ಯದಲ್ಲಿ ಹೊಸ ಮನೆ: ಎಚ್ಡಿಕೆ ಹೇಳಿಕೆಗೆ ಸಂಸದೆ ಸುಮಲತಾ ತಿರುಗೇಟು
''ಪಕ್ಷ ಬಿಡುವವರು ಬಿಡಲಿ, ಹೊಸಬರನ್ನು, ಉತ್ಸಾಹೀ ಯುವಕರ ಪಡೆಯನ್ನು ಕಟ್ಟುವುದಾಗಿ ಹೇಳಿರುವ ಕುಮಾರಸ್ವಾಮಿ, ನನಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೇ ಆದರ್ಶ ಎಂದಿದ್ದಾರೆ. ಅವರಂತೆಯೇ ಮೇಲೆ ಬರುತ್ತೇನೆ'' ಎಂದು ಹೇಳಿದ್ದಾರೆ.
ಮುಂದಿನ ಚುನಾವಣೆಗೆ ಸ್ಪಷ್ಟ ರೂಪುರೇಷೆಗಳನ್ನು ಹಾಕಿ, ಅಧಿಕಾರಕ್ಕೆ ಬರಲು ಕಾರ್ಯತಂತ್ರ ರೂಪಿಸುವ 'ಮಿಷನ್ 123' ರೂಪಿಸಿರುವುದಾಗಿ ಕುಮಾರಸ್ವಾಮಿಯವರು ಮಾಧ್ಯಮದವರಿಗೆ ಹೇಳಿದ್ದಾರೆ. ಏನಿದು ಮಿಷನ್ 123?
ಸ್ವಂತ ಬಲದಿಂದ ಜೆಡಿಎಸ್ ಅಧಿಕಾರಕ್ಕೆ; ಎಚ್ಡಿಕೆ ವಿಶ್ವಾಸ
ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆದು ನಾವು ಅಧಿಕಾರಕ್ಕೆ ಬರುತ್ತೇವೆ
ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆದು ನಾವು ಅಧಿಕಾರಕ್ಕೆ ಬರುತ್ತೇವೆ ಎನ್ನುವ ಖಚಿತ ವಿಶ್ವಾಸದ ಮಾತನ್ನಾಡುತ್ತಿರುವ ಎಚ್.ಡಿ.ಕುಮಾರಸ್ವಾಮಿ, "ಕೊರೊನಾ ಕಾರಣದಿಂದ ಬೀದಿಗಿಳಿದು ಹೋರಾಟ ಮಾಡುವುದಕ್ಕಾಗಲಿ, ಪಕ್ಷ ಸಂಘಟನೆ ಮಾಡುವುದಕ್ಕಾಗಿ ಆಗಿರಲಿಲ್ಲ. ಇದಕ್ಕೇ, ಕಾಂಗ್ರೆಸ್ ನಾಯಕರು ನಾನು ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಆಗಿದ್ದೇನೆ ಎನ್ನುವ ಮಾತನ್ನು ಆಡುತ್ತಿದ್ದಾರೆ. ನಾನು ಯಾರ ಜೊತೆಗಿನೂ ಸಾಫ್ಟ್ ಆಗಿಲ್ಲ, ಅದರ ಅವಶ್ಯಕತೆನೂ ನನಗಿಲ್ಲ"ಎಂದು ಎಚ್ಡಿಕೆ ಮೈಸೂರಿನಲ್ಲಿ ಹೇಳಿದ್ದಾರೆ.
'ಮಿಷನ್ 123' ಪ್ಲ್ಯಾನ್ ಪ್ರಕಾರ ಜನರ ಬಳಿ ಹೋಗಲು ನಿರ್ಧಾರ, ಕುಮಾರಸ್ವಾಮಿ
"ಮುಂದಿನ ಚುನಾವಣೆಗೆ ಈಗಿಂದಲೇ ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದೇವೆ. 123 ಸ್ಥಾನವನ್ನು ಗೆಲ್ಲುವ ಗುರಿಯನ್ನು ಇಟ್ಟುಕೊಂಡು 'ಮಿಷನ್ 123' ಪ್ಲ್ಯಾನ್ ಪ್ರಕಾರ ಜನರ ಬಳಿ ಹೋಗಲು ನಿರ್ಧರಿಸಿದ್ದೇವೆ. 102 ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಸಿದ್ದ ಪಡಿಸಿಕೊಳ್ಳಲಾಗಿದೆ. ಚುನಾವಣೆಗೆ ಬಹಳ ದಿನ ಇರುವಾಗಲೇ ಪಟ್ಟಿಯನ್ನು ಪ್ರಕಟ ಮಾಡಲಿದ್ದೇವೆ. ಆ ಮೂಲಕ, ನಮ್ಮ ಅಭ್ಯರ್ಥಿಗಳಿಗೆ ಕ್ಷೇತ್ರದಲ್ಲಿ ಸೂಕ್ತ ತಯಾರಿ ಮಾಡಿಕೊಳ್ಳಲು ಅನುಕೂಲವಾಗಲಿದೆ"ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಜಿ.ಟಿ.ದೇವೇಗೌಡ್ರು ಎರಡು ವರ್ಷದ ಹಿಂದೆನೇ ಜೆಡಿಎಸ್ ನಿಂದ ದೂರವಾಗಿದ್ದೇನೆ ಎಂದಿದ್ದರು
"ಪಕ್ಷ ಬಿಡುವವರು ಧಾರಾಳವಾಗಿ ಪಾರ್ಟಿ ತೊರೆಯಬಹುದು, ಯಾರೂ ಅಂತವರನ್ನು ಉಳಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ನಮಗೆ ಕಾರ್ಯಕರ್ತರು ಮುಖ್ಯ, ಇವರ ಬಲ ನಮಗೆ ಇರುವ ತನಕ, ನಾನು ಯಾವುದಕ್ಕೂ ತಲೆಕೆಡೆಸಿಕೊಳ್ಳುವುದಿಲ್ಲ.
ಜಿ.ಟಿ.ದೇವೇಗೌಡ್ರು ಎರಡು ವರ್ಷದ ಹಿಂದೆನೇ ಜೆಡಿಎಸ್ ನಿಂದ ಮಾನಸಿಕವಾಗಿ ದೂರವಾಗಿದ್ದೇನೆ ಎಂದು ಹೇಳಿದ್ದಾರೆ. ಅವರ ಪರಿಸ್ಥಿತಿ ನರಿ ದ್ರಾಕ್ಷಿ ಹುಳಿ ಎನ್ನುವ ಹಾಗಾಗಿದೆ"ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.
ಸಾ.ರಾ.ಮಹೇಶ್ ಮತ್ತು ನನಗೆ ನಮ್ಮ ಕ್ಷೇತ್ರಗಳಲ್ಲಿ ಸ್ವಂತ ಮನೆಯಿಲ್ಲ, ಆದರೂ ಜನಪರ ಕೆಲಸದಲ್ಲಿ ತೊಡಗಲಿಲ್ಲವೇ ಎಂದು ಸುಮಲತಾ ಮಂಡ್ಯದಲ್ಲಿ ಮನೆ ಮಾಡುತ್ತಿರುವ ವಿಚಾರದ ಬಗ್ಗೆ ಎಚ್ಡಿಕೆ ಪ್ರತಿಕ್ರಿಯೆ ನೀಡಿದರು.
ಬಸವರಾಜ ಬೊಮ್ಮಾಯಿಯವರ ಸರಕಾರ ಈಗತಾನೇ ಬಂದಿದೆ, ನೋಡೋಣ
"ಬಸವರಾಜ ಬೊಮ್ಮಾಯಿಯವರ ಸರಕಾರ ಈಗ ತಾನೇ ಬಂದಿದೆ, ಸರಕಾರ ಟೇಕ್ ಆಫ್ ಆಗಿದೆಯಾ, ಇಲ್ಲವಾ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಕೆಲವು ಸಚಿವರಂತೂ ಈಗತಾನೇ ತಮ್ಮ ಕಾರ್ಯಾಲಯದ ಬಾಗಿಲನ್ನು ತೆರೆದಿದ್ದಾರೆ.
ರಾಜ್ಯ ಬಿಜೆಪಿ ನಾಯಕರಿಗೆ ತಮ್ಮ ವರಿಷ್ಠರ ಬಳಿ ಮಾತನಾಡಲು ಧೈರ್ಯವಿಲ್ಲ, ಏನಾದರೂ ಮನಸ್ಸಿಗೆ ಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಬೇಕಾಗಿಲ್ಲ. ಬಿಜೆಪಿಯವರು ಬರೀ ಸದ್ದು ಮಾಡುತ್ತಾರೆಯೇ, ಅದರಿಂದ ಉಪಯೋಗವಾಗುವಂತದ್ದು ಏನೂ ಇಲ್ಲ.
ಉಸ್ತುವಾರಿ ಅರುಣ್ ಸಿಂಗ್ ಅವರು ಬೆಂಗಳೂರಿಗೆ ಬರುವುದೇ ಚಂದಾ ವಸೂಲಿ ಮಾಡಲು"ಎಂದು ಕುಮಾರಸ್ವಾಮಿ ಹೇಳಿದರು.
Recommended Video