ಮಿಸ್ ಮಾಡ್ಕೋಬೇಡಿ: 'ಮಿಣಿ ಮಿಣಿ ಪೌಡರ್'ನ ವೈಜ್ಞಾನಿಕ ಸತ್ಯಗಳು
ಬೆಂಗಳೂರು, ಜನವರಿ 26: ಸಾಮಾಜಿಕ ಜಾಲತಾಣಗಳಲ್ಲಿ ಈಗ 'ಮಿಣಿ-ಮಿಣಿ ಪೌಡರ್' ನದ್ದೇ ಸದ್ದು. ವಾಟ್ಸ್ಆಪ್, ಫೇಸ್ಬುಕ್, ಟಿಕ್ಟಾಕ್ಗಳಲ್ಲೆಲ್ಲಾ 'ಮಿಣಿ-ಮಿಣಿ ಪೌಡರ್' ಹೇಳಿಕೆ ಬಳಸಿ ಮಾಜಿ ಸಿಎಂ ಕುಮಾರಸ್ವಾಮಿ ಅವರ ಗೇಲಿಗೆ ತೊಡಗಿದ್ದಾರೆ.
ಹೊಳೆಯು ವಸ್ತುಗಳನ್ನು 'ಮಿಣಿ-ಮಿಣಿ' ಎಂದುಬಿಡುವುದು ದಕ್ಷಿಣ ಕರ್ನಾಟಕದ ಗ್ರಾಮ ಭಾಗದಲ್ಲಿ ರೂಢಿ. ಹಾಗಾಗಿಯೇ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಟ್ಟಿದ್ದ ಬಾಂಬ್ನಲ್ಲಿ ಪಟಾಕಿಯಲ್ಲಿ ಬಳಸುವ ಪೌಡರ್ ಅನ್ನೇ ಬಳಸಿದ್ದರು ಎಂಬುದನ್ನು ಹೇಳಲು ಕುಮಾರಸ್ವಾಮಿ ಅವರು 'ಮಿಣಿ-ಮಿಣಿ ಪೌಡರ್' ಬಳಸಿದ್ದರು ಎಂದಿದ್ದರು. ಹಾಗಿದ್ದರೆ 'ಮಿಣಿ-ಮಿಣಿ ಪೌಡರ್'ನಲ್ಲಿ ಇದ್ದುದಾದರೂ ಏನು?
ಮಂಗಳೂರು ಬಾಂಬ್ ಪ್ರಕರಣ ಮತ್ತು ಕುಮಾರಸ್ವಾಮಿಯ 'ಮಿಣಿಮಿಣಿ' ಪದ ಟ್ರೋಲ್ ಆದ ಕಥೆ
ಪಟಾಕಿಗಳ ಒಳಗೆ ಬಳಸುವ ಪೌಡರ್ ಪೊಟಾಶಿಯಂ ನೈಟ್ರೇಟ್, ಸಲ್ಫರ್, ಅಲ್ಯೂಮೀನಿಯಂ ಮತ್ತು ಬೇರಿಯಂ ಇರುತ್ತದೆ. ಇದೇ ಪಟಾಕಿ ಸಿಡಿಯಲು ಮತ್ತು ಸಿಡಿದ ನಂತರ ಬಣ್ಣ ಬರಲು ಕಾರಣವಾಗುತ್ತದೆ. (ವಿವಿಧ ಬಗೆಯ ಬಣ್ಣಕ್ಕಾಗಿ ಬೇರೆ ರಾಸಾಯನಿಕಗಳನ್ನು ಬಳಸಲಾಗುತ್ತದೆ).
ಪಟಾಕಿ ರಾಸಾಯನಿಕಗಳನ್ನೇ ಬಳಸಿದ್ದ ಆರೋಪಿ?
ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್ ಸಹ ಪಟಾಕಿಯೊಳಗೆ ಬಳಸುವ ರಾಸಾಯನಿಕಗಳನ್ನೇ ಬಳಸಿ ಬಾಂಬ್ ತಯಾರಿಸಿದ್ದ ಎನ್ನಲಾಗುತ್ತಿದೆ. ಪೊಲೀಸರು ಈವರೆಗೆ ನೀಡಿರುವ ಮಾಹಿತಿ ಸಹ ಇದಕ್ಕೆ ಪುಷ್ಟಿ ನೀಡುತ್ತಿದೆ.
'ಸುಧಾರಿತ ಬಾಂಬ್' ಎನಿಸಿಕೊಳ್ಳುವುದಿಲ್ಲ
ಪಟಾಕಿಗೆ ಬಳಸುವ ರಾಸಾಯನಿಕಗಳನ್ನು ಬಳಸಿ ಬಾಂಬ್ ತಯಾರಿಸಿದರೆ ಅದು ಮಂಗಳೂರು ಪೊಲೀಸರು ಹೇಳಿದಂತೆ 'ಸುಧಾರಿತ ಬಾಂಬ್' ಎನಿಸಿಕೊಳ್ಳುವುದಿಲ್ಲ. ಆ ಮಾದರಿಯ ಬಾಂಬ್ ದೊಡ್ಡ ಶಬ್ದ ಮತ್ತು ಬೆಂಕಿಯನ್ನು ಉಂಟು ಮಾಡಬಲ್ಲದು. ಒಬ್ಬಿಬ್ಬರನ್ನು ಬಲಿ ತೆಗೆದುಕೊಳ್ಳುವಷ್ಟು ಶಕ್ತಿ ಈ ಬಾಂಬ್ ಗೆ ಇರುತ್ತದೆ ಆದರೆ ರಾಸಾಯನಿಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿರಬೇಕಾಗಿರುತ್ತದೆ.
ಮಂಗಳೂರು ಬಾಂಬ್ ಪತ್ತೆ: ಶೃಂಗೇರಿಯಲ್ಲಿ ಕುಮಾರಸ್ವಾಮಿ ಸ್ಪೋಟಕ ಹೇಳಿಕೆ
ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?
'ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಕ್ಕ ಬಾಂಬ್ ಅಷ್ಟೇನೂ ಪ್ರಬಲವಾಗಿರಲಿಲ್ಲ' ಎಂದು ಕುಮಾರಸ್ವಾಮಿ ತಮ್ಮ ಅಂದಿನ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಪಟಾಕಿಯಲ್ಲಿ ಬಳಸುವ ಪೌಡರ್ ಅನ್ನು ಬಾಂಬ್ ನಲ್ಲಿ ಬಳಸಿದ್ದಾರೆ ಎಂಬುದನ್ನೇ 'ಮಿಣಿ-ಮಿಣಿ ಪೌಡರ್' ಬಳಸಿದ್ದಾರೆ ಎಂಬುದಾಗಿ ಕುಮಾರಸ್ವಾಮಿ ಹೇಳಿದ್ದರು.
ಕುಮಾರಸ್ವಾಮಿ ಅಂದು ಹೇಳಿದ್ದು ಬಹುತೇಕ ಸತ್ಯವೇ ಆಗಿತ್ತು
ಕುಮಾರಸ್ವಾಮಿ ಅವರು ಹೇಳಿದ್ದ ಇತರ ವಿಷಯಗಳನ್ನೆಲ್ಲಾ ಬದಿಗೆ ಸರಿಸಿ 'ಮಿಣಿ-ಮಿಣಿ ಪೌಡರ್' ಹಿಂದೆ ಬಿದ್ದ ನೆಟ್ಟಿಗರು ಕುಮಾರಸ್ವಾಮಿ ಅವರನ್ನು ಚೆನ್ನಾಗಿಯೇ ಟ್ರೋಲ್ ಮಾಡಿದ್ದಾರೆ. ಆದರೆ ಅಂದು ಕುಮಾರಸ್ವಾಮಿ ಹೇಳಿದ್ದೇ ಬಹುತೇಕ ಸತ್ಯವಾಗಿದೆ. ಆದಿತ್ಯ ರಾವ್ ಬಾಂಬ್ ತಯಾರಿಸಲು ಪಟಾಕಿಯಲ್ಲಿ ಬಳಸುವ 'ಮಿಣಿ-ಮಿಣಿ ಪೌಡರ್' ಅನ್ನೇ ಬಳಸಿದ್ದ ಎನ್ನಲಾಗುತ್ತಿದೆ.
'ನಿಖಿಲ್ ಎಲ್ಲಿದ್ದೀಯಪ್ಪಾ' ನಂತರ ಹೆಚ್ಚು ಟ್ರೋಲ್ ಆದ 'ಮಿಣಿ-ಮಿಣಿ'
'ಮಿಣಿ-ಮಿಣಿ ಪೌಡರ್' ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್ ಆಗುತ್ತಿದೆ. ವಿವಿಧ ಪೌಡರ್ಗಳ ಜಾಹೀರಾತುಗಳನ್ನು ಕುಮಾರಸ್ವಾಮಿ ಅವರ ಹೇಳಿಕೆಯೊಂದಿಗೆ ಸೇರಿಸಿ ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ. 'ನಿಖಿಲ್ ಎಲ್ಲಿದ್ದೀಯಪ್ಪಾ' ನಂತರ ಅತಿ ಹೆಚ್ಚಿನ ಟ್ರೋಲ್ಗೆ ಒಳಗಾಗಿರುವುದು 'ಮಿಣಿ-ಮಿಣಿ ಪೌಡರ್'.