ಅಸಲಿಗೆ ರಾಜಭವನದಲ್ಲಿ ಮೋದಿ - ಬಿಎಸ್ವೈ ನಡುವೆ ನಡೆದಿದ್ದಾರೂ ಏನು?
ಪ್ರಮುಖವಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ಯಡಿಯೂರಪ್ಪ ಅಂದರೆ ಬಿಜೆಪಿ, ಬಿಜೆಪಿ ಅಂದರೆ ಯಡಿಯೂರಪ್ಪ ಎನ್ನುವುದು ಬಿಜಿಪಿ ವರಿಷ್ಠರಿಗೆ ತಡವಾಗಿ ಜ್ಞಾನೋದಯವಾಯಿತೋ ಅಥವಾ ಅಸೆಂಬ್ಲಿ ಚುನಾವಣೆಯಲ್ಲಿ ಆಗುತ್ತಿರುವ ಹಿನ್ನಡೆಯ ಕಾರಣವೋ ಏನೊ, ಒಟ್ಟಿನಲ್ಲಿ, ಪ್ರಧಾನಿಯಿಂದ ಯಡಿಯೂರಪ್ಪನವರಿಗೆ ಸಿಗುತ್ತಿರುವ ಮರ್ಯಾದೆಯ ಲೆವೆಲ್ ಇನ್ನೊಂದು ಹಂತಕ್ಕೆ ಹೋದಂತೆ ಕಾಣುತ್ತಿದೆ.
ತುಮಕೂರಿನ ರೈತರ ಸಮಾವೇಶದ ನಂತರ, ಡಿಆರ್ ಡಿಓ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರಧಾನಿ ಮೋದಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲಿಗೆ ಮುಖ್ಯಮಂತ್ರಿಗಳೂ ಬಂದಿದ್ದರು. ಕೇಂದ್ರದಿಂದ ಪರಿಹಾರ ಸಿಗಬೇಕಾದ ರಾಜ್ಯದ ಕೆಲವು ಜ್ವಲಂತ ಸಮಸ್ಯೆಗಳ ಪಟ್ಟಿಯನ್ನು ಸಿಎಂ, ಪ್ರಧಾನಿ ಬಳಿಗೆ ತಂದಿದ್ದರು.
ಮತ್ತೆ ರಾಜಭವನಕ್ಕೆ ತೆರಳಿ, ಪ್ರಧಾನಿಯನ್ನು ಭೇಟೀಯಾಗುತ್ತೇನೆಂದು ಮುಖ್ಯಮಂತ್ರಿಗಳು ಹೇಳಿದ್ದರು ಕೂಡಾ.. ಅದರಂತೇ, ಮೋದಿಯ ಬಳಿ, ಸಿಎಂ ಯಡಿಯೂರಪ್ಪ ಸುಮಾರು ಇಪ್ಪತ್ತು ನಿಮಿಷಗಳ ಕಾಲ ಚರ್ಚೆ ನಡೆಸಿದ್ದರು.
ಇಡೀ ಕರ್ನಾಟಕಕ್ಕೆ ಭೀಕರ ಪ್ರವಾಹ ಎದುರಾದಾಗ ಮೋದಿ ಬರಲಿಲ್ಲ: ಸಿದ್ದರಾಮಯ್ಯ
ಈ ವೇಳೆ, ರಾಜಭವನದಲ್ಲಿ ಅದೇನಾಯಿತೋ ಏನೋ, ಪ್ರಧಾನಿಯಿಂದ ಯಡಿಯೂರಪ್ಪನವರಿಗೆ ಸಿಗುವ ಗೌರವ ಇನ್ನೂ ಜಾಸ್ತಿಯಾದಂತೆ ಭಾಸವಾಗುತ್ತಿದ್ದಕ್ಕೆ ಕಾರಣ, ಉಲ್ಲಸಿತರಾಗಿ ಹೊರಬಂದ ಮುಖ್ಯಮಂತ್ರಿಗಳು. ತುಮಕೂರು ಸಮಾವೇಶದ ನಂತರ, ಯಡಿಯೂರಪ್ಪನವರ ಬಗ್ಗೆ, ಪ್ರಧಾನಿ ಮೋದಿಯ ಬದಲಾದ ಬಾಡಿ ಲಾಂಗ್ವೇಜ್ ಸ್ಪಷ್ಟವಾಗಿ ಕಾಣಿಸುತ್ತಿತ್ತು,
ಯಡಿಯೂರಪ್ಪ ದಿಟ್ಟತನವನ್ನು ತೋರಿದ್ದೂ ಕಾರಣವಿರಬಹುದು
ಸನ್ಮಾನ್ಯ ಪ್ರಧಾನಿಗಳು, ಯಡಿಯೂರಪ್ಪನವರ ಕೈಹಿಡಿದುಕೊಂಡು ಹೋದ ಘಟನೆಯೂ ನಡೆಯಿತು. ಇದಕ್ಕೆ, ತುಮಕೂರಿನ ಸಮಾವೇಶದ ವೇದಿಕೆಯಲ್ಲೇ 'ಪರಿಹಾರ ಬಂದಿಲ್ಲ' ಎಂದು ಹೇಳುವ ಮೂಲಕ, ಯಡಿಯೂರಪ್ಪ ದಿಟ್ಟತನವನ್ನು ತೋರಿದ್ದೂ ಕಾರಣವಿರಬಹುದು. ತೀರಾ ಅಪರೂಪ ಎನ್ನುವಂತೆ, ತಮ್ಮದೇ ಪಕ್ಷದ ಪ್ರಧಾನಿಯನ್ನು, ತುಂಬಿದ ಸಭೆಯಲ್ಲೇ ಕೇಂದ್ರದಿಂದ ನೆರವು ಬಂದಿಲ್ಲ ಎಂದು ಸಿಎಂ ಬೇಸರ ವ್ಯಕ್ತಪಡಿಸಿದ್ದರು.
ವೇದಿಕೆಯಲ್ಲೇ ಮನವಿ ಮಾಡಿದ್ದಕ್ಕೆ ಕೆಲವೊಂದು ಅಪಸ್ವರ
ವೇದಿಕೆಯಲ್ಲೇ ಮನವಿ ಮಾಡಿದ್ದಕ್ಕೆ ಕೆಲವೊಂದು ಅಪಸ್ವರವೂ ಪಕ್ಷದೊಳಗಿಂದ ಮುಖ್ಯಮಂತ್ರಿಗಳಿಗೆ ಎದುರಾಗಿದೆ. ಪರಿಹಾರವನ್ನೂ ಬಿಡುಗಡೆ ಮಾಡುವುದಿಲ್ಲ, ದೆಹಲಿಯಲ್ಲಿ ಭೇಟಿಗೆ ಸಮಯವನ್ನೂ ಕೊಡುವುದಿಲ್ಲ ಎಂದರೆ, ಮುಖ್ಯಮಂತ್ರಿಗಳಾದರೂ ಇನ್ನೇನು ಮಾಡಿಯಾರು? ಯಡಿಯೂರಪ್ಪನವರು ಮಾಡಿದ್ದು ಸರಿಯಾಗಿಯೇ ಇದೆ ಎನ್ನುವುದು ಒಟ್ಟಾರೆ ಅಭಿಪ್ರಾಯ.
ಮೋದಿ ತುಮಕೂರು ರ್ಯಾಲಿ ಜವಾಬ್ದಾರಿಯಿಂದ ಬಿಎಸ್ವೈ ಪರಮಾಪ್ತ ದೂರ..ದೂರ..
ಗುರುವಾರದ ಕಿಸಾನ್ ಸಮ್ಮಾನ್ ಕಾರ್ಯಕ್ರಮ
ಗುರುವಾರದ (ಜ 2) ಕಿಸಾನ್ ಸಮ್ಮಾನ್ ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರು ಗಟ್ಟಿಧ್ವನಿಯಲ್ಲೇ ರಾಜ್ಯದ ಬೇಡಿಕೆಯನ್ನು ಮಂಡಿಸಿದ್ದರು. ಮೂರ್ನಾಲ್ಕು ಬಾರಿ ಮನವಿ ಸಲ್ಲಿಸಿದರೂ, ಕೇಂದ್ರದಿಂದ ಪರಿಹಾರ ಬಂದಿಲ್ಲ ಎಂದಿದ್ದರು. ಇದಾದ ನಂತರ ರಾಜಭವನದಲ್ಲೂ ಮತ್ತೆ ಮನವಿ ಸಲ್ಲಿಸಿದ್ದರು. ಕೇಂದ್ರದಿಂದ ಎಲ್ಲಾ ಸಹಕಾರ ಸಿಗಲಿದೆ, ದೆಹಲಿಗೆ ಬಂದಾಗ ವಿಸ್ಕೃತ ಚರ್ಚೆ ನಡೆಸೋಣ ಎನ್ನುವ ಭರವಸೆ ಪ್ರಧಾನಿ ಕಡೆಯಿಂದ ಬಂದಿದೆ ಎನ್ನುವ ಮಾಹಿತಿಯಿದೆ.
ಉಪಚುನಾವಣೆಯಲ್ಲಿನ ಬಿಜೆಪಿಯ ಭರ್ಜರಿ ಗೆಲುವು
ಯಡಿಯೂರಪ್ಪನವರನ್ನು ಕಡೆಗಣಿಸುತ್ತಿದ್ದ ದೆಹಲಿಯ ದೊರೆಗಳು ಈಗ ಬದಲಾಗಲು ಕಾರಣ ಏನಿರಬಹುದು ಎಂದಾಗ ಮೊದಲು ಬರುವುದು ಉಪಚುನಾವಣೆಯಲ್ಲಿನ ಬಿಜೆಪಿಯ ಭರ್ಜರಿ ಗೆಲುವು. ಇದರ ಕ್ರೆಡಿಟ್ ಏನಿದ್ದರೂ ಯಡಿಯೂರಪ್ಪನವರಿಗೆ ಸಲ್ಲಬೇಕು ಎನ್ನುವುದು ವಾಸ್ತವತೆ. ಜೊತೆಗೆ, ಮಹಾರಾಷ್ಟ್ರದ ನಂತರ ಜಾರ್ಖಂಡ್ ನಲ್ಲೂ ಪಕ್ಷ ಅಧಿಕಾರ ಕಳೆದುಕೊಂಡಿತು.
ಅಸಲಿಗೆ ರಾಜಭವನದಲ್ಲಿ ಮೋದಿ - ಬಿಎಸ್ವೈ ನಡುವೆ ನಡೆದಿದ್ದಾರೂ ಏನು?
ಸ್ಥಳೀಯ ಸಮಸ್ಯೆ, ಮುಖಂಡರಿಗೆ ಆದ್ಯತೆ ನೀಡದಿದ್ದರೆ, ಪಕ್ಷಕ್ಕೆ ಮುಂದಿನ ದಿನಗಳಲ್ಲಿ ತೊಂದರೆಯಾಗಬಹುದು ಎನ್ನುವ ಕಾರಣಕ್ಕಾಗಿಯೋ ಏನೊ, ಯಡಿಯೂರಪ್ಪನವರಿಗೆ ಮೋದಿ/ಶಾ ಕಡೆಯಿಂದ ಸಿಗುತ್ತಿರುವ ಗೌರವವೂ ಹೆಚ್ಚಾಗುತ್ತಿದೆ, ಜೊತೆಗೆ, ಯಡಿಯೂರಪ್ಪನವರು ದಿನದಿಂದ ದಿನಕ್ಕೆ ಸ್ಟ್ರಾಂಗ್ ಆಗುತ್ತಿದ್ದಾರೆ. ಯಾರು ಸ್ಟ್ರಾಂಗ್ ಆಗಲಿ, ವೀಕ್ ಆಗಲಿ, ರಾಜ್ಯಕ್ಕೆ ಬಿಡುಗಡೆಯಾಗ ಬೇಕಾಗಿರುವ ಪರಿಹಾರ ಮತ್ತು ರಾಜ್ಯದ ತೆರಿಗೆ ಪಾಲು ಸರಿಯಾದ ಸಮಯಕ್ಕೆ ಬಂದರೆ ಸಾಕು.. ಎನ್ನುವುದು ಜನಸಾಮಾನ್ಯರಲ್ಲಿ ಕೇಳಿಬರುತ್ತಿರುವ ಮಾತು.