ಅಂತೂ ನಡೆದುಹೋದ ಸಂಪುಟ ವಿಸ್ತರಣೆ: ಡಿ.ಕೆ.ಶಿವಕುಮಾರ್ ಅಂದು ನುಡಿದ ಭವಿಷ್ಯ ಠುಸ್ ಪಟಾಕಿ
ಅಂತೂ ಇಂತೂ ನೂತನ ಶಾಸಕರಲ್ಲಿ ಹತ್ತು ಜನರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾಗಿದೆ. 'ಕೊಟ್ಟ ಮಾತಿನಂತೆ ನಡೆದುಕೊಂಡ ಯಡಿಯೂರಪ್ಪ' ಎಂದು ನೂತನ ಸಚಿವರು, ಮುಖ್ಯಮಂತ್ರಿಗಳಿಗೆ ಬಿರುದು ಕೊಟ್ಟಿದ್ದಾರೆ.
ಇನ್ನೇನಿದ್ದರೂ ಖಾತೆ ಹಂಚುವುದು. ಅದನ್ನು ಕೂಡಾ ಸೋಮವಾರ (ಫೆ 10) ಮಾಡಿ ಮುಗಿಸುತ್ತೇನೆ ಎಂದು ಮುಖ್ಯಮಂತ್ರಿಗಳು ಅಭಯ ನೀಡಿದ್ದಾರೆ. ಇದಾದ ಮೇಲೆ, ನೂತನ ಸಚಿವರಿಗೆ ಏನು ಮನಸ್ತಾಪ ಇರುತ್ತದೆ ಎನ್ನುವುದು ನೋಡಬೇಕಿದೆ.
ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ? ಇಲ್ಲಿದೆ ಮಾಹಿತಿ
ಸಂಪುಟ ವಿಸ್ತರಣೆ ವಿಳಂಬವಾಗುತ್ತಿದ್ದಾಗ, ಹಿರಿಯ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ತಮ್ಮದೇ ರೀತಿಯಲ್ಲಿ ಅದನ್ನು ವ್ಯಾಖ್ಯಾನಿಸಿದ್ದರು. ಜೈಲು ಶಿಕ್ಷೆ ಅನುಭವಿಸಿ ಬಂದ ನಂತರ, ಅಳೆದುತೂಗಿ ಡಿಕೆಶಿ ಹೇಳಿಕೆಯನ್ನು ನೀಡುತ್ತಿದ್ದಾರೆ.
ಹೊಸ ಸಚಿವರಿಗೆ ಖಾತೆ ಹಂಚಿಕೆ: ದಿನಾಂಕ ನಿಗದಿಪಡಿಸಿದ ಯಡಿಯೂರಪ್ಪ
ಈ ನಡುವೆ, ಎಚ್.ಡಿ.ಕುಮಾರಸ್ವಾಮಿ ಸರಕಾರದ ಅವಿಶ್ವಾಸ ಗೊತ್ತುವಳಿಯ ವೇಳೆ, ಡಿ.ಕೆ.ಶಿವಕುಮಾರ್ ಅಸೆಂಬ್ಲಿಯಲ್ಲಿ, ಅನರ್ಹ ಶಾಸಕರ ಬಗ್ಗೆ ಆಡಿದ್ದ ಹೇಳಿಕೆ ಮತ್ತೆ ವೈರಲ್ ಆಗುತ್ತಿದೆ. ನೀವು ನುಡಿದ ಭವಿಷ್ಯ ನಿಜವಾಗಲಿಲ್ಲ ಎಂದು ಕಿಚಾಯಿಸಲಾಗುತ್ತಿದೆ.
ಅನರ್ಹ ಶಾಸಕರ ಬಗ್ಗೆ ಡಿಕೆಶಿ ನುಡಿದದ್ದು ಅಂದು ಹೇಳಿದ್ದು
"ಅಧ್ಯಕ್ಷರೇ, ಇವರಲ್ಲಿ (ಅನರ್ಹ ಶಾಸಕರು) ಒಬ್ಬರನ್ನು ನಿನ್ನೆ ರಾತ್ರಿ ಮಾತನಾಡಿಸಿದೆ. ಅಲ್ಲೇ ಇದ್ದರೆ (ಕಾಂಗ್ರೆಸ್) ಮಂತ್ರಿ ಆಗಲ್ಲ. ನಾನು ಅಲ್ಲಿಗೆ (ಬಿಜೆಪಿ) ಹೋಗಿ ಮಂತ್ರಿ ಆಗ್ತೀನಿ. ಆಮೇಲೆ ಮತ್ತೆ ಬರುತ್ತೀನಿ ಎಂದು ಹೇಳುತ್ತಾರೆ. ಮನಸ್ಸಾದಾಗ ಬರೋದು, ಮನಸ್ಸಿಲ್ಲಾದಾಗ ಇನ್ನೊಂದು ಕಡೆ ಹೋಗೋಕೆ ಇದೇನು ಮನೆ ಕೆಟ್ಟೋಯ್ತಾ ಎಂದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದೆ" - ಡಿ.ಕೆ.ಶಿವಕುಮಾರ್.
ಹಾಕುತ್ತಾರೆ ಕಣಪ್ಪಾ, ನಿಮಗೆಲ್ಲಾ ಟೊಪ್ಪಿ, ಹುಷಾರು
"ಎಲ್ಲಾ ಆಗೋಗಿ ಬಿಟ್ಟಿದೆ. ಒಬ್ಬರು ನಾನು ಡಿಸಿಎಂ ಆಗುತ್ತೇನೆ ಅಂತಾನೆ, ಇನ್ನೊಬ್ಬ, ಜಲಸಂಪನ್ಮೂಲ ಅಂತಾನೆ, ಇನ್ನೊಬ್ಬ ಪವರ್ ಅಂತಾನೆ. ನಾನು ಹೇಳಿದೆ, ಲೇ.. ಹಾಕುತ್ತಾರೆ ಕಣಪ್ಪಾ, ನಿಮಗೆಲ್ಲಾ ಟೊಪ್ಪಿ, ಹುಷಾರು.. ಸುಮ್ಮನೆ ಹಳ್ಳಕ್ಕೆ ಬೀಳಬೇಡಿ ಎಂದು ಅವರಲ್ಲಿ ಮನವಿ ಮಾಡಿದೆ" - ಡಿ.ಕೆ.ಶಿವಕುಮಾರ್ ಅಂದು ಅಸೆಂಬ್ಲಿಯಲ್ಲಿ ಹೇಳಿದ್ದ ಮಾತು.
ಈಗ ಬಾಂಬೆಗೆ ಹೋಗಿ ಕೂತಿದ್ದಾರೆ
ಮೂವತ್ತು ವರ್ಷದಿಂದ ನಮ್ಮ ಜೊತೆ ರಾಜಕೀಯ ಮಾಡುತ್ತಿದ್ದವರು, ಈಗ ಬಾಂಬೆಗೆ ಹೋಗಿ ಕೂತಿದ್ದಾರೆ. ನಮ್ಮ ಬಾಂಬೆ ಫ್ರೆಂಡ್ಸ್ ಅನ್ನು ಸಮಾಧಿ ಮಾಡಿಬಿಟ್ರಿ. ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಮಾಡಿದ್ರಿ. ಅವರಿಗೆಲ್ಲಾ ಹೇಳುತ್ತಲೇ ಬಂದಿದ್ದೇನೆ. ನಿಮ್ಮನ್ನು ಈಗ ಪಲ್ಲಕ್ಕಿಯಲ್ಲಿ ಏರಿಸಿ, ಆಮೇಲೆ, ಸಮಾಧಿ ಕಟ್ಟುತ್ತಾರೆ" - ಡಿ.ಕೆ.ಶಿವಕುಮಾರ್.
ರನ್ನಿಂಗ್ ರೇಸ್ ನಲ್ಲಿ ಬಂದ ಬೈರತಿ ಬಸವರಾಜು
"ಬೆನ್ ಜಾನ್ ಮಾಡಿಲ್ಲ, ಅಷ್ಟು ಸ್ಪೀಡ್ ರನ್ನಿಂಗ್ ರೇಸ್ ನಲ್ಲಿ ಬಂದು ಬೈರತಿ ಬಸವರಾಜು ಬಂದ. ಏನು ಕರ್ಮಾರೀ ಅವರದ್ದು. ಅದೇ ಸ್ಪೀಡ್ ನಲ್ಲಿ ಬಿಜೆಪಿಯವರು ನಿಮಗೆ ಹಳ್ಲ ತೋಡುತ್ತಾರೆ" ಎಂದು ಡಿಕೆಶಿ ಅಂದು ಅಸೆಂಬ್ಲಿಯಲ್ಲಿ ಹೇಳಿದ್ದರು. ಆದರೆ, ಸಿಎಂ ಯಡಿಯೂರಪ್ಪ ನೀಡಿದ್ದ ವಾಗ್ದಾನದಂತೆ, ಅವರನ್ನೆಲ್ಲಾ ಸಚಿವರನ್ನಾಗಿ ಮಾಡಿದ್ದಾರೆ. ಹಾಗಾಗಿ, ಅಂದು ಡಿಕೆಶಿ ನುಡಿದಿದ್ದ ಭವಿಷ್ಯ ಸುಳ್ಳಾಗಿದೆ.