ದೇವೇಗೌಡರ ಬಗ್ಗೆ ಬಿಜೆಪಿ ಶಾಸಕ ಪ್ರೀತಂ ಗೌಡ ಹೇಳಿರುವುದೇನು?
ಬೆಂಗಳೂರು, ಫೆಬ್ರವರಿ 13: ಬಿಜೆಪಿ ಶಾಸಕ ಪ್ರೀತಂಗೌಡ ಅವರು ಜೆಡಿಎಸ್ ವರಿಷ್ಠ ದೇವೇಗೌಡ ಅವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಹಾಸನ ಜೆಡಿಎಸ್ ಕಾರ್ಯಕರ್ತರು ಪ್ರೀತಂಗೌಡ ಅವರ ಮನೆಯ ಮೇಲೆ ದಾಳಿ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.
ಅಷ್ಟಕ್ಕೂ ಶಾಸಕ ಪ್ರೀತಂಗೌಡ ದೇವೇಗೌಡರ ಬಗ್ಗೆ ಏನು ಹೇಳಿದರು, ಎಲ್ಲಿ ಹೇಳಿದರು, ಕುಮಾರಸ್ವಾಮಿ ಬಗ್ಗೆ ಪ್ರೀತಂ ಏನು ಹೇಳಿದರು? ಎಂಬುದಕ್ಕೆಲ್ಲಾ ಇಲ್ಲಿದೆ ಉತ್ತರ.
ಎಚ್ಡಿಕೆ-ರೇವಣ್ಣ ವಿರುದ್ಧ ಕೊಲೆ ಸಂಚಿನ ಆರೋಪ ಹೊರಿಸಿದ ಬಿಜೆಪಿ ಶಾಸಕ ಪ್ರೀತಂಗೌಡ
ಈಗಾಗಲೇ ರಾಜ್ಯ, ದೇಶದಲ್ಲೆಲ್ಲಾ ಚರ್ಚೆ ಆಗುತ್ತಿರುವ ಆಪರೇಷನ್ ಕಮಲ ಆಡಿಯೋದಲ್ಲಿ ಪ್ರೀತಂ ಗೌಡ ಅವರ ಧ್ವನಿಯೂ ಇದೆ ಎನ್ನಲಾಗುತ್ತಿದೆ. ಯಡಿಯೂರಪ್ಪ ಹಾಗೂ ಶರಣಗೌಡ ಅವರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಪೂರ್ಣ ಆಡಿಯೋ ಇಂದು ಬಿಡುಗಡೆ ಆಗಿದ್ದು, ಅದರಲ್ಲಿ ಶರಣಗೌಡ ಅವರೊಂದಿಗೆ ಮಾತನಾಡಿರುವ ಮೂರನೇ ವ್ಯಕ್ತಿಯ ಧ್ವನಿ ಪ್ರೀತಂ ಗೌಡ ಅವರದ್ದು ಎನ್ನಲಾಗುತ್ತಿದೆ.
ಆಪರೇಷನ್ ಕಮಲದ ವೇಳೆ ಪ್ರೀತಂಗೌಡ ಇದ್ದರು?
ಯಡಿಯೂರಪ್ಪ, ಜೆಡಿಎಸ್ ಶಾಸಕ ನಾಗನಗೌಡ ಅವರ ಮಗ ಶರಣಗೌಡ ಹಾಗೂ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಅವರ ಸಂಭಾಷಣೆ ವೇಳೆ ಅಲ್ಲಿ ಪ್ರೀತಂಗೌಡ ಅವರು ಸಹ ಇದ್ದರು ಎಂದರು ಎಂದು ಆಡಿಯೋ ಕ್ಲಿಪ್ನಿಂದ ಗೊತ್ತಾಗುತ್ತಿದೆ. ಆಡಿಯೋ ಕ್ಲಿಪ್ನಲ್ಲಿನ ಧ್ವನಿಯೊಂದು ಇವರು ಹಾಸನದ ಶಾಸಕ ಎಂದು ಪರಿಚಯ ಸಹ ಮಾಡಿಸುತ್ತಾರೆ. ಅದೇ ಸಂಭಾಷಣೆ ಮಧ್ಯದಲ್ಲಿ ಪ್ರೀತಂಗೌಡ ಅವರು ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿದ್ದಾರೆ.
ಪ್ರೀತಂ ಗೌಡ ಮನೆ ಮೇಲೆ ದಾಳಿ: ಸಿದ್ದರಾಮಯ್ಯ ಖಂಡನೆ
ದೇವೇಗೌಡ ಬಗ್ಗೆ ಪ್ರೀತಂಗೌಡ ಹೇಳಿಕೆ
ಸಂಭಾಷಣೆಯಲ್ಲಿರುವಂತೆ ಯಡಿಯೂರಪ್ಪ ಅವರು ನಿರ್ಗಮಿಸಿದ ನಂತರ ಪ್ರೀತಂಗೌಡ ಅವರು ಶರಣಗೌಡ ಅವರ ಜೊತೆ ಮಾತನಾಡುತ್ತಾ, 'ದೇವೇಗೌಡ ಅವರ ವಿಕೆಟ್ ಕೆಲವು ತಿಂಗಳಲ್ಲಿ ಉರುಳುತ್ತದೆ, ಕುಮಾರಸ್ವಾಮಿ ಆರೋಗ್ಯ ಸಹ ಸರಿ ಇಲ್ಲ, ಆಮೇಲೆ ಆ ಪಕ್ಷ ಬರ್ಖಾಸ್ತ್ ಆಗುತ್ತದೆ' ಎಂದಿದ್ದಾರೆ.
ದೇವೇಗೌಡ ಬಗ್ಗೆ ಆಕ್ಷೇಪಾರ್ಹ ಮಾತು: ಬಿಜೆಪಿ ಶಾಸಕನ ಮನೆ ಮುಂದೆ ಪ್ರತಿಭಟನೆ
ಹಣದ ಜವಾಬ್ದಾರಿ ನನಗೆ ವಹಿಸಲಾಗಿದೆ
ಮುಂದುವರೆದು ಮಾತನಾಡಿರುವ ಪ್ರೀತಂಗೌಡ, ಹಣದ ವ್ಯವಸ್ಥೆ ನನಗೆ ವಹಿಸಲಾಗಿದೆ, ಈ ಕೊಠಡಿ ಬಿಟ್ಟು ಹೊರಗೆ ಹೋಗುವ ವೇಳೆಗೆ ನಿಮಗೆ ಎಷ್ಟು ಬೇಕು ಎಂದು ಹೇಳಿ, ಪ್ರಾಪರ್ಟಿ ಮಾರಿ ಆದರೂ ಹಣದ ವ್ಯವಸ್ಥೆ ಮಾಡುತ್ತೇವೆ ಎನ್ನುತ್ತಾರೆ. ನನಗಿನ್ನೂ 35 ವರ್ಷ ಶಾಸಕ ಆಗಿದ್ದೇನೆ, ನಿನಗೂ ಕಡಿಮೆ ವಯಸ್ಸು ಇನ್ನೂ 40 ವರ್ಷ ರಾಜಕೀಯ ಮಾಡಬೇಕು, ಸರಿಯಾದ ನಿರ್ಧಾರ ಮಾಡು ಎಂದು ಶರಣಗೌಡಗೆ ಪ್ರೀತಂಗೌಡ ಹೇಳಿರುವುದು ಆಡಿಯೋನಲ್ಲಿ ದಾಖಲಾಗಿದೆ.
ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸಿದ ಮಾತುಗಳು
ಪ್ರೀತಂ ಗೌಡ ಅವರ ಈ ಮಾತುಗಳು ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸಿದೆ. ಹಿರಿಯ ನಾಯಕರೊಬ್ಬರಬ್ಬರ ಹೀಗೆ ಯುವಕರಾದವರು ಗೌರವ ಇಲ್ಲದೆ ಮಾತನಾಡಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಸಿಟ್ಟಾಗಿದ್ದಾರೆ.
ಪ್ರೀತಂಗೌಡ ಮನೆ ಮುಂದೆ ಪ್ರತಿಭಟನೆ
ಹಾಸನದ ಜೆಡಿಎಸ್ ಕಾರ್ಯಕರ್ತರು ಇಂದು ಪ್ರೀತಂಗೌಡ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಪ್ರೀತಂಗೌಡ ಅವರ ಮನೆಯ ಮೇಲೆ ಕಲ್ಲು ತೂರಾಟವೂ ನಡೆದಿದೆ. ರಾಹುಲ್ ಎಂಬ ಒಬ್ಬರಿಗೆ ಗಾಯವೂ ಆಗಿದೆ.