ನಾಲ್ಕು ಬಾರಿ ಸಿಎಂ ಆದ್ರೂ ಯಡಿಯೂರಪ್ಪ ಆಳಿದ್ದು ಮಾತ್ರ ಐದು ವರ್ಷ 82 ದಿನ!
ಬೆಂಗಳೂರು, ಜು. 28: ಕರ್ನಾಟಕ ರಾಜ್ಯಕ್ಕೆ ನಾಲ್ಕು ಬಾರಿ ಮುಖ್ಯಮಂತ್ರಿಯಾದ ಏಕೈಕ ವ್ಯಕ್ತಿ ಬಿ. ಎಸ್. ಯಡಿಯೂರಪ್ಪ! ಕೇವಲ ಆರು ದಿನ ಸಿಎಂ ಕುಚಿಯಲ್ಲಿ ಕೂತವರು ಯಡಿಯೂರಪ್ಪನವರೇ . ನಾಲ್ಕು ಸಲ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ರಾಜ್ಯವನ್ನಾಳಿದ ದಿನಗಳನ್ನು ಲೆಕ್ಕ ಹಾಕಿದರೆ ಪೂರ್ಣವಾಗಿ ಒಂದು ಅವಧಿಯ ಸಿಎಂ. ಹೌದು ಯಡಿಯೂರಪ್ಪ ನಾಲ್ಕು ಬಾರಿ ಸಿಎಂ ಆಗಿ ರಾಜ್ಯದ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತಿದ್ದು ಐದು ವರ್ಷ 82 ದಿನ ಮಾತ್ರ !
ಏಳು ದಿನ ಸಿಎಂ ದರ್ಬಾರ್: ವಯೋ ಸಹಜ ಕಾರಣ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತನ್ನ ಪರಮಾಪ್ತ ಗೆಳೆಯ ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯದ ಲ್ಲಿ ಮೊದಲ ಬಾರಿಗೆ ಜೆಡಿಎಸ್ ಜತೆ ಕೈ ಜೋಡಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದರು ಯಡಿಯೂರಪ್ಪ. ಜೆಡಿಎಸ್ ಅಧಿಕಾರ ಅವಧಿ ಮುಗಿದ ಬಳಿಕ ಯಡಿಯೂರಪ್ಪ ಮೊದಲ ಬಾರಿಗೆ ಕರ್ನಾಟಕ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಜೆಡಿಎಸ್ ಬೆಂಬಲ ಹಿಂತೆಗೆದುಕೊಂಡ ಕಾರಣ ಯಡಿಯೂರಪ್ಪ ಕೇವಲ ಏಳು ದಿನದಲ್ಲಿ ಸಿಎಂ ಕುರ್ಚಿಯಿಂದ ನಿರ್ಗಮಿಸಿದರು. ಬಳಿಕ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿತ್ತು.
ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ರಚಿಸಿದ ರಾಜಾಹುಲಿ
ರಾಷ್ಟ್ರಪತಿ ಆಳ್ವಿಕೆ ಬಳಿಕ 2008 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲು ಮ್ಯಾಜಿಕ್ ನಂಬರ್ 113 ಸೀಟು ಗೆಲ್ಲಬೇಕಿತ್ತು. ಆದರೆ ಬಿಜೆಪಿ ಕೇವಲ 110 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಶತಾಯ ಗತಾಯ ಸರ್ಕಾರ ರಚನೆ ಮಾಡಲು ತಯಾರಿ ನಡೆಸಿದ ಬಿಜೆಪಿ ಪಕ್ಷ ಬಳ್ಳಾರಿ ಗಣಿ ದಣಿ ಜನಾರ್ಧನರೆಡ್ಡಿ ನೇತೃತ್ವದಲ್ಲಿ ಆಪರೇಷನ್ ಕಮಲಕ್ಕೆ ಚಾಲನೆ ನೀಡಲಾಯಿತು. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಹತ್ತು ಶಾಸಕರನ್ನು ರಾಜೀನಾಮೆ ಕೊಡಿಸಿ ಬಿಜೆಪಿಗೆ ಸೆಳೆಯಲಾಯಿತು. ಬಳಿಕ ನಡೆದ ಉಪ ಚುನಾವಣೆಯಲ್ಲಿ ಐವರನ್ನು ಗೆಲ್ಲಿಸಿಕೊಂಡು ಬಿಜೆಪಿ ಸರ್ಕಾರವನ್ನು ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ರಚನೆ ಮಾಡಲಾಗಿತ್ತು. ಆಪರೇಷನ್ ಕಮಲ ಮೂಲಕವೇ ಯಡಿಯೂರಪ್ಪ ಎರಡನೇ ಬಾರಿ ಸಿಎಂ ಆಗಿ ಮೂರು ವರ್ಷಗಳ ಕಾಲ ಅಧಿಕಾರ ನಡೆಸಿದರು.
ಯಡಿಯೂರಪ್ಪಗೆ ಕಿಕ್ ಬ್ಯಾಕ್ ಕೇಸಲ್ಲಿಜೈಲು
ಅಷ್ಟರ ವೇಳೆಗೆ ಬಳ್ಳಾರಿ ಗಣಿ ಅಕ್ರಮ ಬಗ್ಗೆ ಲೋಕಾಯುಕ್ತ ಸಂಸ್ಥೆ ಕೆಡವಿ ಕೂತಿತ್ತು. ಗಣಿ ಅಕ್ರಮ ಸಿಬಿಐ ಕೈ ಸೇರಿತು. ಜನಾರ್ಧನರೆಡ್ಡಿಗೆ ಸಂಕಷ್ಟ ಎದುರಾಯಿತು. ವಿಪರ್ಯಾಸವೆಂದರೆ ಬಿ. ಎಸ್. ಯಡಿಯೂರಪ್ಪ ಸಹ ಕಿಕ್ ಬ್ಯಾಕ್ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆಯಿಂದ ಬಂಧನಕ್ಕೆ ಒಳಗಾಗಿ ಜೈಲು ಪಾಲಾದರು. ಆಗ ತನ್ನ ನಂಬಿಕಸ್ತ ಎಂದು ಡಿ.ವಿ. ಸದಾನಂದ ಗೌಡರನ್ನು ಸಿಎಂನ್ನಾಗಿ ನೇಮಿಸಿದರು. ಯಡಿಯೂರಪ್ಪ ಸೂಚನೆಯಂತೆ ಅಧಿಕಾರ ನಡೆಸದ ಸದಾನಂದಗೌಡ ಒಂದು ವರ್ಷ ಪೂರೈಸುವ ಮುನ್ನವೇ ಅಧಿಕಾರ ಕಳೆದುಕೊಂಡರು. ಆನಂತರ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ಅಧಿಕಾರ ವಹಿಸಿಕೊಂಡಿದ್ದರು. ಬಳಿಕ ಎದುರಾದ 2013 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾಯಿತು. ಸಂಪೂರ್ಣ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷ ಚುಕ್ಕಾಣಿ ಹಿಡಿಯಿತು. ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಆಪರೇಷನ್ ಕಮಲ ಮೂಲಕ ಬಾಂಬೆ ಟೀಮ್ ರಚನೆ
2018 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಏರ್ಪಟ್ಟಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ವಹಿಸಿಕೊಂಡರೂ ಬಹುಮತ ಸಾಭೀತು ಮಾಡಲಾಗಲಿಲ್ಲ. ಹೀಗಾಗಿ ಆರು ದಿನ ಸಿಎಂ ಆಗಿದ್ದ ಯಡಿಯೂರಪ್ಪ ನವರು ಸಿಎಂ ಕುರ್ಚಿ ಯಿಂದ ಕೆಳಗೆ ಇಳಿದರು. ಈ ಮೂಲಕ ರಾಜ್ಯವನ್ನು ಕಡಿಮೆ ದಿನ ಆಳಿದ ಏಕೈಕ ಸಿಎಂ ಎಂಬ ದಾಖಲೆಯನ್ನು ತನ್ನ ಹೆಸರಿನಲ್ಲಿಯೇ ಬರೆದುಕೊಂಡಿದ್ದಾರೆ. ಕೋಮುವಾದಿ ಪಟ್ಟ ಕಟ್ಟಿ ಬಿಜೆಪಿಯನ್ನು ದೂರ ಇಡುವ ಸಮ ಉದ್ದೇಶದೊಂದಿಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಒಗ್ಗೂಡಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದರು. ಕುಮಾರಸ್ವಾಮಿ ಎರಡನೇ ಭಾರಿ ಸಿಎಂ ಆಗಿ ಅಧಿಕಾರ ವಹಿಸಿಕೊಂಡರು. ಆದರೆ ಅಂದುಕೊಂಡ ರೀತಿಯಲ್ಲಿ ಆಡಳಿತ ಸಾಗಲಿಲ್ಲ. ಸಚಿವ ಸ್ಥಾನ ಹಂಚಿಕೆಯಲ್ಲಿ ದೊಡ್ಡ ಗೊಂದಲ ಏರ್ಪಟ್ಟಿತ್ತು. ಒಂದು ವಷ ಆಡಳಿತ ನಡೆಸಿದ್ದ ಕುಮಾರಸ್ವಾಮಿ ಸರ್ಕಾರವನ್ನು ಆಪರೇಷನ್ ಕಮಲ ಕಾರ್ಯಾಚರಣೆ ಉರುಳಿಸಿಯೇ ಬಿಟ್ಟಿತು.
Recommended Video
ಆಪರೇಷನ್ ಕಮಲ ಯಶಸ್ಸು
ಕಾಂಗ್ರೆಸ್ ಹಾಗೂ ಜೆಡಿಎಸ್ ನ ಹದಿನೇಳು ಶಾಸಕರು ( ಬಾಂಬೆ ಟೀಮ್ ) ಬಾಂಬೆಗೆ ಹಾರಿದರು. ಬಿಜೆಪಿ ತೆಕ್ಕೆಗೆ ಸೇರಿಕೊಂಡರು. ಹೀಗೆ ಆಪರೇಷನ್ ಕಮಲ ಯಶಸ್ಸು ಕಂಡ ಬಳಿಕ ಬಾಂಬೆ ಟೀಮ್ ಬೆಂಬಲದೊಂದಿಗೆ ಕರ್ನಾಟಕ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿ ಅಧಿಕಾರ ವಹಿಸಿಕೊಂಡು ಯಡಿಯೂರಪ್ಪ ದಾಖಲೆ ಬರೆದರು. ಎರಡು ವರ್ಷ ಪೂರ್ಣಗೊಂಡ ಬೆನ್ನಲ್ಲೇ ಯಡಿಯೂರಪ್ಪ ಅವರನ್ನು ಅವರ ಸ್ವಂತ ಪಕ್ಷವೇ ಸಿಎಂ ಗಾದಿಯಿಂದ ಕೆಳಗೆ ಇಳಿಸಿದೆ. ಅವರ ಆಪ್ತರಾದ ಬಸವರಾಜ ಬೊಮ್ಮಾಯಿ ಅವರನ್ನು ನೂತನ ಸಿಎಂ ಆಗಿ ಪಕ್ಷ ನೇಮಕ ಮಾಡಿದೆ. ಸದ್ಯಕ್ಕೆ ವಿಜಯ ಸಂಕೇತ ಬೀರಿರುವ ಯಡಿಯೂರಪ್ಪ ಈ ಬಾರಿಯೂ ಪುರ್ಣಾವಧಿ ಮುಗಿಸಲಿಲ್ಲ. ಒಟ್ಟಾರೆ ಕರ್ನಾಟಕಕ್ಕೆ ನಾಲ್ಕು ಬಾರಿ ಸಿಎಂ ಆದರೂ ಯಡಿಯೂರಪ್ಪ ರಾಜ್ಯವನ್ನಾಳಿದ್ದು ಐದು ವರ್ಷ 2 ದಿನ ಮಾತ್ರ. ತನ್ನ ಪುತ್ರ ವಿಜಯೇಂದ್ರ ಅವರನ್ನು ಸಿಎಂ ಆಗಿಸುವ ಯಡಿಯೂರಪ್ಪ ಮುಂದೆ ಯಾವ ಹಾದಿ ತುಳಿಯುತ್ತಾರೋ ಕಾದು ನೋಡಬೇಕು.