ಸ್ಪೀಕರ್ ರಮೇಶ್ ಕುಮಾರ್ ಅವರ ಮುಂದಿರುವ ಆಯ್ಕೆಗಳೇನು?
ಬೆಂಗಳೂರು, ಜನವರಿ 16: ಅತೃಪ್ತ ಶಾಸಕರನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಉರುಳಿಸಲು ಮುಂದಾಗಿರುವ ಬಿಜೆಪಿಯ ಆಪರೇಷನ್ ಕಮಲ ಪ್ರಯತ್ನ ಇಂದು ಕೂಡಾ ಮುಂದುವರಿದಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ತನ್ನ ತಂತ್ರವನ್ನು ಹೆಣೆಯುತ್ತಿದೆ. ಲಭ್ಯ ಮಾಹಿತಿಯಂತೆ ಹತ್ತಾರು ದಿನಗಳ ಮಟ್ಟಿಗೆ ಸ್ಪೀಕರ್ ಅವರನ್ನು ವಿದೇಶಕ್ಕೆ ಕಳಿಸುವ ಯೋಜನೆಯೂ ಇದರಲ್ಲಿ ಒಂದು.
ಆಪರೇಷನ್ ಕಮಲ, ಇಬ್ಬರು ಪಕ್ಷೇತರ ಶಾಸಕರಿಂದ ಸರ್ಕಾರಕ್ಕೆ ನೀಡಿದ ಬೆಂಬಲ ವಾಪಸ್, ಸಂಕ್ರಾಂತಿ ಆಚರಣೆ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್ ಅವರು ದಿನಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ ವಿದೇಶ ಪ್ರವಾಸ: ಸಮ್ಮಿಶ್ರ ಸರ್ಕಾರ ಬಚಾವ್?
' ಶಾಸಕರಿಗೆ ಅವರವರ ಕ್ಷೇತ್ರದಲ್ಲಿ ಸಂಕ್ರಾಂತಿ ಆಚರಿಸಲು ಮನಸ್ಸಿಲ್ಲ ಅಂತ ಕಾಣುತ್ತೆ, ಅದಕ್ಕೆ ಗುರ್ ಗಾಂವ್, ಮುಂಬೈ ಅಂಥಾ ಹೋಗಿ ಹಬ್ಬ ಆಚರಿಸಿಕೊಂಡಿರಬಹುದು. ನನಗೆ ಈ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಮುಂಬೈನಲ್ಲೇ ಇದ್ದಾರೋ.. ಶ್ರೀಲಂಕಾದಲ್ಲಿ ಇದ್ದಾರೋ ಅಥವಾ ಲಂಡನ್ನಲ್ಲಿ ಇದ್ದಾರೋ.. ನನಗೇನು ಗೊತ್ತು? ಎಂದಿದ್ದಾರೆ.
ಸಮ್ಮಿಶ್ರ ಸರ್ಕಾರಕ್ಕೆ ಶಾಸಕರು ನೀಡಿರುವ ಬೆಂಬಲ ವಾಪಸ್ ಪಡೆದಿರುವುದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, 'ಅದೇನು ಆಪರೇಷನ್ನೋ, ಅದೇನು ಕಮಲನೋ, ಏನು ಸಂಪಿಗೇನೋ ನನಗಂತೂ ಒಂದೂ ಗೊತ್ತಿಲ್ಲ. ನಾನಂತೂ ಸುಭದ್ರ' ಎಂದಿದ್ದಾರೆ.
ಅತೃಪ್ತ ಶಾಸಕರ ರಾಜೀನಾಮೆ ತಡೆಯಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್
ಸರ್ಕಾರ ಅಭದ್ರಗೊಳಿಸಲು ಬಿಜೆಪಿ ಏನೇ ಹರಸಾಹಸ ಪಟ್ಟರೂ, ರಾಜ್ಯಪಾಲರು ಶಾಸಕರುಗಳ ಸರಣಿ ರಾಜೀನಾಮೆ ಅಂಗೀಕರಿಸಿದರೂ, ಬಿಜೆಪಿಯ ಸರ್ಕಾರ ರಚನೆ ಕನಸನ್ನು ಭಂಗಗೊಳಿಸುವ ಅಧಿಕಾರ ಸ್ಪೀಕರ್ ಕೈಲಿದೆ ಎಂಬ ಆಭಯದೊಂದಿಗೆ ಕಾಂಗ್ರೆಸ್ ನೆಮ್ಮದಿ ಸ್ಥಿತಿಯಲ್ಲಿದೆ.
ರಾಜೀನಾಮೆ ಅಂಗೀಕರಿಸದೆ ಸತಾಯಿಸುವುದು
ಯಾವುದೇ ಅತೃಪ್ತ ಶಾಸಕರು ರಾಜೀನಾಮೆ ನೀಡಿದರೂ ಅದನ್ನು ತಕ್ಷಣ ಅಂಗೀಕರಿಸಬೇಕೆಂದಿಲ್ಲ. ಅದು ಸ್ಪೀಕರ್ ವಿವೇಚನೆಗೆ ಬಿಟ್ಟ ವಿಚಾರ. ವೈಎಸ್ಆರ್ ಕಾಂಗ್ರೆಸ್ ಸಂಸದರು ರಾಜೀನಾಮೆ ನೀಡಿದ ಸಂದರ್ಭ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ತಕ್ಷಣ ಅಂಗೀಕರಿಸಿರಲಿಲ್ಲ. ಐದಾರು ತಿಂಗಳು ಕಳೆದರೂ ಈ ಬಗ್ಗೆ ಮುಂದಿನ ಕ್ರಮ ಜರುಗಿಸಿರಲಿಲ್ಲ.
ಕುದುರೆ ವ್ಯಾಪಾರದ ಬಗ್ಗೆ ಸೂಚನೆ
ಮಾಧ್ಯಮಗಳಲ್ಲಿ ಆಪರೇಷನ್ ಬಗ್ಗೆ ಇಷ್ಟೆಲ್ಲ ಸುದ್ದಿಗಳು ಪ್ರಸಾರ ಆಗಿರುವುದರಿಂದ ಕುದುರೆ ವ್ಯಾಪಾರ ನಡೆದಿದೆ, ಇದು ಅಕ್ರಮ ವ್ಯವಹಾರ ಈ ಬಗ್ಗೆ ಪಾರದರ್ಶಕತೆ ಮೂಡದ ಹೊರತೂ ರಾಜೀನಾಮೆ ಅಂಗೀಕಾರ ಮಾಡುವುದಿಲ್ಲ ಎನ್ನಬಹುದು. ಈ ಬಗ್ಗೆ ಸಮಜಾಯಿಷಿ ನೀಡಬೇಕೆಂದು ಕೂಡಾ ಇಲ್ಲ.
ಆಪರೇಷನ್ ಕಮಲ 2ನೇ ಹಂತ: ಎಷ್ಟು ಮಂದಿ ಅತೃಪ್ತ ಶಾಸಕರಿಂದ ರಾಜೀನಾಮೆ?
ಬಹುಮತ ಸಾಬೀತಿಗೆ ಸೂಚಿಸಿದರೆ?
ಶಾಸಕರ ರಾಜೀನಾಮೆ ಅಂಗೀಕಾರ ಆಗದಿದ್ದಲ್ಲಿ ರಾಜ್ಯಪಾಲರಿಗೆ ಅಥವಾ ನ್ಯಾಯಾಲಯದ ಮೊರೆ ಹೋದರೂ ಸ್ಪೀಕರ್ ಮೇಲೆ ಒತ್ತಡ ತರಲು ಬರುವುದಿಲ್ಲ.
ರಾಜ್ಯಪಾಲರು ಸದನದಲ್ಲಿ ಬಹುಮತ ಸಾಬೀತಿಗೆ ಸೂಚನೆ ನೀಡಬಹುದು. ಆ ಸಂದರ್ಭದಲ್ಲಿ ರಾಜೀನಾಮೆ ಅಂಗೀಕಾರ ಆಗದೆ ಇರುವ ಶಾಸಕರಿಗೂ ವಿಪ್ ಜಾರಿ ಮಾಡಬಹುದು. ಸದನದಲ್ಲಿ ವಿಪ್ ಉಲ್ಲಂಘನೆ ಮಾಡಿದರೆ ರಾಜಕೀಯ ಭವಿಷ್ಯಕ್ಕೆ ಸಂಚಕಾರ ತರುವ ಅವಕಾಶ ಸ್ಪೀಕರ್ಗೆ ಇದೆ.
ಸದಸ್ಯರ ಅಮಾನತು
ಸದನದಲ್ಲಿ ವಿಶ್ವಾಸಮತ ಯಾಚನೆ ಸಂದರ್ಭ ಬಂದರೆ, ಕಾಂಗ್ರೆಸ್ -ಜೆಡಿಎಸ್ ಶಾಸಕರು ಗದ್ದಲ ಎಬ್ಬಿಸಿ, ವಿರೋಧ ಪಕ್ಷದ ಶಾಸಕರನ್ನು ಸದನದಿಂದ ಕೆಲ ತಿಂಗಳ ಕಾಲ ಅಮಾನತು ಮಾಡಿಸಬಹುದು. ಇದೆಲ್ಲವೂ ತೀರ ವಿಕೋಪದ ಹೆಜ್ಜೆಯಾಗಿದೆ. ತಮಿಳುನಾಡಿನಲ್ಲಿ ಶಶಿಕಲಾ ಬಣದ ಎಐಎಡಿಎಂಕೆ ಸದಸ್ಯರನ್ನು ಅಮಾನತು ಮಾಡಿರುವ ಉದಾಹರಣೆ ಉಲ್ಲೇಖಿಸಬಹುದು.
ಮೇಲ್ನೋಟಕ್ಕೆ ಮಾತ್ರ ಬಿಜೆಪಿ, ಕಾಂಗ್ರೆಸ್ ಆಂತರಿಕ ಸಮಸ್ಯೆಯೇ ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣ?