ಬಿಜೆಪಿ ಚಾಣಾಕ್ಯನ ಮುಂದಿನ ತಂತ್ರಗಾರಿಕೆ ಏನಿರಬಹುದು?
ಬೆಂಗಳೂರು, ಮೇ 20 : ವಿಧಾನಸಭೆಯಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸುವೆ ಎಂದು ಘೋಷಣೆ ಮಾಡಿದರು. ತಕ್ಷಣ ವಿರೋಧಿಗಳ ವಾಗ್ದಾಳಿಗೆ, ಟ್ರೋಲ್ಗಳಿಗೆ ಆಹಾರವಾದವರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ತಂತ್ರಗಾರಿಕೆಯನ್ನು ಟೀಕಿಸಿದ್ದಾಯಿತು. ಅವಮಾನಕಾರಿ ಶಬ್ದಗಳ ಮೂಲಕ ಕೆಣಕಿದ್ದಾಯಿತು. ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಗೆ ಕನ್ನಡಿಗರು ಸೊಪ್ಪು ಹಾಕುವುದಿಲ್ಲ ಎಂದು ಹೇಳಿದ್ದಾಯಿತು.
ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ನಂತರ ಯಾರು?
ಇಂತಹ ಸಂದರ್ಭದಲ್ಲಿ ಅಮಿತ್ ಶಾ ಏನು ಯೋಚಿಸುತ್ತಿರಬಹುದು?. ಬಿಜೆಪಿ ನಾಯಕರು, ಶಾಸಕರ ಪ್ರಕಾರ ಶನಿವಾರ ಬಿಎಸ್ವೈಗೆ ವಿಧಾನಸಭೆಯಲ್ಲಿ ಎದುರಾದದ್ದು ಸಣ್ಣ ಹಿನ್ನಡೆಯಷ್ಟೇ. ಅವರಿನ್ನೂ ಇನ್ನೊಂದು ಪವಾಡದ ನಿರೀಕ್ಷೆಯಲ್ಲಿದ್ದಾರೆ.
ಮೂಲಗಳ ಪ್ರಕಾರ ಎಚ್.ಡಿ.ಕುಮಾರಸ್ವಾಮಿ ಸಂಪುಟ ರಚನೆ ಬಳಿಕ ಕಾಂಗ್ರೆಸ್ನಲ್ಲಿ ಭಿನ್ನಮತ ದೊಡ್ಡ ಮಟ್ಟಿಗೆ ಭುಗಿಲೇಳುವುದು ಖಚಿತ. ಏಕೆಂದರೆ 78 ಶಾಸಕರ ಪೈಕಿ ಹೆಚ್ಚೆಂದರೆ 20 ಮಂದಿಗೆ ಮಾತ್ರ ಸಚಿವ ಸ್ಥಾನ ದೊರೆಯಲಿದೆ. ಈ ಸಂದರ್ಭದಲ್ಲಿ ಹೈಕಮಾಂಡ್ ಬಹುತೇಕ ಹಸ್ತಕ್ಷೇಪ ಮಾಡಲಿದೆ.
ಈ ಭಿನ್ನಮತವನ್ನು ಅವಲೋಕಿಸಿಕೊಂಡು ಬಿಜೆಪಿ ಮುಂದಿನ ಹೆಜ್ಜೆ ಇಡಲಿದೆ. ಪರಮೇಶ್ವರ ಅವರಿಗೆ ಡಿಸಿಎಂ ಸ್ಥಾನ ಕೊಡಲು ಕಾಂಗ್ರೆಸ್ನ ದೊಡ್ಡ ವರ್ಗವೊಂದು ವಿರೋಧ ವ್ಯಕ್ತಪಡಿಸುತ್ತಿದೆ. ಇದರ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ತಮ್ಮದೇ ತಂತ್ರಗಾರಿಕೆಯ ಮೊರೆ ಹೋಗಿದ್ದಾರೆ.
ಮೂರು ಚುನಾವಣೆಗಳತ್ತ ಕರ್ನಾಟಕ ಬಿಜೆಪಿ ನಾಯಕರ ಚಿತ್ತ
ಇದೆಲ್ಲವೂ ಪರಿಸ್ಥಿತಿಯನ್ನು ಜಟಿಲಗೊಳಿಸಿದೆ. ಈ ಕಾರಣದಿಂದ ಕಾಂಗ್ರೆಸ್ನ ಉತ್ತರ ಕರ್ನಾಟಕ ಭಾಗದ ಶಾಸಕರ ಗುಂಪೊಂದು ಪಕ್ಷ ತ್ಯಜಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಇಂತಹ ಸಂದರ್ಭ ಎದುರಾದರೆ ಅಮಿತ್ ಶಾ ಸುಮ್ಮನೆ ಕುಳಿತಿರಲಾರರು.
ಯಡಿಯೂರಪ್ಪ ಅವರು ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಮತ್ತೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮತ್ತೊಂದು ಕಡೆ ಅಮಿತ್ ಶಾ ಅವರು ಏನೇ ಆಗಲಿ ಕರ್ನಾಟಕದಲ್ಲಿ ಸರ್ಕಾರ ರಚಿಸಲೇಬೇಕು ಎನ್ನುವ ಜಿದ್ದಿಗೆ ಅಮಿತ್ ಶಾ ಬಿದ್ದಿದ್ದಾರೆ.
ಇನ್ನು ಜೆಡಿಎಸ್ನಲ್ಲಿ ಕೂಡಾ ಆಂತರಿಕವಾಗಿ ಎಲ್ಲವೂ ಸರಿಯಾಗಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಇನ್ನು ಕೆಲವೇ ದಿನಗಳಲ್ಲಿ ಇನ್ನೊಂದು ಸುತ್ತಿನ ಹೈಡ್ರಾಮವನ್ನು ಕನ್ನಡಿಗರು ನಿರೀಕ್ಷಿಸಬಹುದು.