ಮೈತ್ರಿ ಸರ್ಕಾರ ರಕ್ಷಣೆಗೆ ದೊಡ್ಡಗೌಡರ ಕೊನೆಯ ಕ್ಷಣದ ಪ್ಲ್ಯಾನ್ ಏನು?
Recommended Video
ಬೆಂಗಳೂರು, ಜುಲೈ 18: ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡರು ಕೊನೆಯ ಹಂತದ ಕಸರತ್ತು ನಡೆಸುತ್ತಿದ್ದಾರೆ.
ಇನ್ನೇನು ಅಧಿಕಾರ ಕೈತಪ್ಪಿ ಹೋಗುತ್ತಿದೆ ಎನ್ನುವಾಗ ದೇವೇಗೌಡರು ಸರ್ಕಾರವನ್ನು ಉಳಿಸಲು ಇನ್ನೇನೋ ಯೋಚನೆ ಮಾಡಿದಂತಿದೆ.
ಕರ್ನಾಟಕ ಬಿಕ್ಕಟ್ಟು: ವಿಶ್ವಾಸಮತ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಹಾಗಾದರೆ ಸಮ್ಮಿಶ್ರ ಸರ್ಕಾರವನ್ನು ಉಳಿಸಲು ದೇವೇಗೌಡರು ಏನು ಉಪಾಯ ಮಾಡಿರಬಹುದು. ಬಹುಮತದ ಚರ್ಚೆಯನ್ನು ಎರಡು ಮೂರು ದಿನಗಳ ಕಾಲ ಎಳೆದುಕೊಂಡು ಹೋಗುವುದು, ಈ ವೇಳೆ ಸುಪ್ರೀಂಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ವಿಪ್ ಗೊಂದಲದ ಬಗ್ಗೆ ನಿವಾರಣೆ ಮಾಡಿಕೊಳ್ಳುವುದು.
ಬಹುಮತದ ಚರ್ಚೆ ವೇಳೆ ಸಿಗಬಹುದಾದ ಸಮಯದಲ್ಲಿ ಸಾಧ್ಯವಾದಷ್ಟು ರಿವರ್ಸ್ ಆಪರೇಷನ್ ಮಾಡುವುದಕ್ಕೆ ಪ್ರಯತ್ನ ಮಾಡುವುದು. 3-4 ಜನ ಬಿಜೆಪಿ ಶಾಸಕರನ್ನು ಸೆಳೆದರೂ ಸರ್ಕಾರ ಸೇಫ್ ಆಗಬಹುದು.
ಒಂದು ವೇಳೆ ಸರ್ಕಾರ ಉಳಿಸಿಕೊಳ್ಳಲು ಆಗದೇ ಇದ್ದರೆ ಸರ್ಕಾರ ಬಿದ್ದ ನಂತರ ಬಿಜೆಪಿ ವರಿಷ್ಠರ ಜೊತೆ ಮಾತಾಡಿ ಬಿಜೆಪಿ ಬಾಹ್ಯ ಬೆಂಬಲ ನೀಡಿ ಸರ್ಕಾರದ ಭಾಗವಾಗಿ ಪಕ್ಷವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ವಿಪ್ ಉಲ್ಲಂಘಿಸಿದ್ದಕ್ಕೆ ಶಾಸಕರನ್ನು ಅನರ್ಹತೆ ಮಾಡಬಹುದು ಎಂದು ತೀರ್ಪು ನೀಡಿದರೆ ಅನರ್ಹತೆ ಅಸ್ತ್ರ ಬಳಸಿ ಕೊನೆ ಕ್ಷಣದಲ್ಲಿ ಸರ್ಕಾರವನ್ನು ರಕ್ಷಿಸಬಹುದು ಎನ್ನುವ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ.
ಒಟ್ಟು 79 ಕಾಂಗ್ರೆಸ್ ಶಾಸಕರ ಪೈಕಿ 13 ಮಂದಿ ರಾಜೀನಾಮೆ ನೀಡಿದ್ದು, ಸ್ಪೀಕರ್ ಸೇರಿ 66 ಸದಸ್ಯರ ಬಲ ಹೊಂದಿದ್ದಾರೆ. ಒಟ್ಟು 224 ಮಂದಿ ಶಾಸಕರ ಪೈಕಿ 16 ಮಂದಿ ಶಾಸಕರ ರಾಜೀನಾಮೆ ನೀಡಿದ್ದರಿಂದ ಸದನದ ಬಲ 208ಕ್ಕೆ ಕುಸಿದಿದೆ.
ಮೂರು ಮಂದಿ ಜೆಡಿಎಸ್ ಶಾಸಕರ ರಾಜೀನಾಮೆಯಿಂದ ದಳ ಶಾಸಕರ ಸಂಖ್ಯೆ 34ಕ್ಕೆ ಕುಸಿದಿದೆ. ಇಬ್ಬರು ಪಕ್ಷೇತರರ ಬೆಂಬಲದಿಂದ ಬಿಜೆಪಿ ಬಲ 107ಕ್ಕೆ ಏರಿಕೆಯಾಗಿದ್ದರೆ ಬಿಎಸ್ಪಿ ಶಾಸಕ ಎನ್ ಮಹೇಶ್ ವಿಧಾನಸಭೆಯಲ್ಲಿ ಪ್ರತ್ಯೇಕ ಸೀಟ್ ಕೇಳಿದ್ದಾರೆ. 208 ಶಾಸಕರು ಇರುವ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ 105 ಶಾಸಕರ ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ದೋಸ್ತಿಗಳಿಗೆ 99 ಶಾಸಕರ ಬೆಂಬಲವಿದೆ.
ಶಾಸಕರಾದ ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ಮತ್ತು ಚಿಕ್ಕಬಳ್ಳಾಪುರದ ಸುಧಾಕರ್ ಅವರ ಮನವೊಲಿಕೆಗೆ ಯತ್ನ ಮಾಡುವುದು. ಒಂದು ವೇಳೆ ಅತೃಪ್ತರ ಪೈಕಿ 3-4 ಜನ ಕೊನೆ ಕ್ಷಣದಲ್ಲಿ ಬೆಂಬಲ ಕೊಟ್ಟರೆ ಸರ್ಕಾರ ಭದ್ರವಾಗುತ್ತದೆ ಎಂಬ ನಂಬಿಕೆಯೂ ದೃಢವಾಗಿದೆ.