ಎಚ್ಡಿಕೆ ಜೊತೆ ಗಳಸ್ಯ ಕಂಠಸ್ಯದಂತಿದ್ದ ಎಸ್.ನಾರಾಯಣ್, ಡಿಕೆಶಿ ತೆಕ್ಕೆಗೆ
ಕನ್ನಡ ಚಿತ್ರೋದ್ಯಮದಲ್ಲಿ ಕಲಾ ಸಾಮ್ರಾಟ್ ಎಂದೇ ಬಿರುದಾಂಕಿತ ಎಸ್.ನಾರಾಯಣ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಹಳ ಆತ್ಮೀಯರು. ಇವರಿಬ್ಬರ ಕಾಂಬಿನೇಶನ್ ನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳೂ ಬಂದಿದ್ದವು.
ಬರೀ ಕುಮಾರಸ್ವಾಮಿ ಜೊತೆಗೆ ಮಾತ್ರವಲ್ಲದೇ ದೇವೇಗೌಡ್ರ ಕುಟುಂಬದ ಜೊತೆಗೂ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದ ಎಸ್.ನಾರಾಯಣ್ ಈಗ ರಾಜಕೀಯ ರಂಗಕ್ಕೆ ಪ್ರವೇಶಿಸಿದ್ದಾರೆ. ಆದರೆ, ಜೆಡಿಎಸ್ ಪಕ್ಷದೊಂದಿಗೆ ಅಲ್ಲ.
ನಿರ್ದೇಶಕ- ನಟ ಎಸ್.ನಾರಾಯಣ್, ತಿಮ್ಮಯ್ಯ ಪುರ್ಲೆ ಕಾಂಗ್ರೆಸ್ ಸೇರ್ಪಡೆ
ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಕುಮಾರಸ್ವಾಮಿ - ಎಸ್.ನಾರಾಯಣ್ ಜೋಡಿ ಮತ್ತೆ ಒಂದಾಗುವ ನಿರ್ಧಾರಕ್ಕೆ ಬಂದಿದ್ದರು. ಕನ್ನಡದ ಖ್ಯಾತ ಕಾದಂಬರಿಯನ್ನು ಸಿನಿಮಾ ಮಾಡಲು ಇವರಿಬ್ಬರು ಕೈಜೋಡಿಸಿದ್ದರು. ಆದರೆ, ಚಿತ್ರ ನಿರ್ಮಾಣದ ವಿಚಾರ ಚರ್ಚೆಯ ಹಂತದಿಂದ ಮುಂದಕ್ಕೆ ಹೋಗಲೇ ಇಲ್ಲ.
ಎಸ್. ನಾರಾಯಣ್ ಅವರು ಕುಮಾರಸ್ವಾಮಿ ಜೊತೆ ಉತ್ತಮ ಒಡನಾಟವನ್ನು ಹೊಂದಿದ್ದರೂ ಯಾವುದೇ ರಾಜಕೀಯ ಪಕ್ಷದ ಜೊತೆಗೆ ಗುರುತಿಸಿಕೊಂಡಿರಲಿಲ್ಲ. ಈಗ, ನಾರಾಯಣ್ ಅಧಿಕೃತವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ಬಾವುಟವನ್ನು ಹಿಡಿದಿದ್ದಾರೆ. ಇವರ ಜೊತೆ ಅವರ ಮಗ ಪಂಕಜ್ ಮತ್ತು ಪತ್ನಿ ಭಾಗ್ಯವತಿ ಕೂಡಾ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ.
ತಾಜ್ ವೆಸ್ಟೆಂಡ್ನಲ್ಲಿ ರಾಸಲೀಲೆ: ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ
ಎಸ್.ನಾರಾಯಣ್ ಅವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು
ಕಳೆದ ಜನವರಿ 29ರಂದು ಎಸ್.ನಾರಾಯಣ್ ಅವರು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. "ನಮ್ಮ ಪಕ್ಷದ ಸಿದ್ಧಾಂತ, ಆದರ್ಶಗಳಿಂದ ಪ್ರೇರಿತರಾದ ನಟ, ನಿರ್ದೇಶಕ ಶ್ರೀ ಎಸ್. ನಾರಾಯಣ್ ಅವರು ಇಂದು ನನ್ನನ್ನು ಭೇಟಿಯಾಗಿ ಕಾಂಗ್ರೆಸ್ ಸೇರುವ ಅಭಿಲಾಷೆ ವ್ಯಕ್ತಪಡಿಸಿದರು. ಈ ಕುರಿತು ಅವರೊಂದಿಗೆ ಮಾತುಕತೆ ನಡೆಸಿದೆ"ಎಂದು ಡಿಕೆಶಿ, ಸಾಮಾಜಿಕ ತಾಣದಲ್ಲಿ ಬರೆದುಕೊಳ್ಳುವ ಮೂಲಕ ಎಸ್. ನಾರಾಯಣ್, ಕಾಂಗ್ರೆಸ್ ಸೇರುವ ವಿಚಾರವನ್ನು ಖಚಿತ ಪಡಿಸಿದ್ದರು.
ಕುಮಾರಸ್ವಾಮಿಯವರ ನಡುವಿನ ಸಂಬಂಧ ಹಳಸಿದೆಯಾ
ಮಾಜಿ ಸಿಎಂ ಕುಮಾರಸ್ವಾಮಿಯವರು ಸಕ್ರಿಯ ರಾಜಕೀಯಕ್ಕೆ ಬರುವ ಮುನ್ನ ಚಿತ್ರ ನಿರ್ಮಾಪಕರು/ವಿತರಕರಾಗಿದ್ದದ್ದು ಗೊತ್ತಿರುವ ವಿಚಾರ. ಎಸ್.ನಾರಾಯಣ್ ಮತ್ತು ಕುಮಾರಸ್ವಾಮಿ ಕಾಂಬಿನೇಶನ್ ನಲ್ಲಿ ಸೂರ್ಯವಂಶ, ಚಂದ್ರ ಚಕೋರಿ, ಗಲಾಟೆ ಅಳಿಯಂದ್ರು ಮುಂತಾದ ಸೂಪರ್ ಹಿಟ್ ಸಿನಿಮಾಗಳು ಬಂದಿದ್ದವು. ಕನ್ನಡದ ಖ್ಯಾತ ಸಾಹಿತಿ ವ್ಯಾಸರಾಯ ಬಲ್ಲಾಳರ ಹೆಜ್ಜೆ ಕಾದಂಬರಿಯನ್ನು ಸಿನಿಮಾ ಮಾಡಲು ಹೊರಟಿದ್ದರು. ಆದರೆ, ಅದು ಸೆಟ್ಟೇರಲಿಲ್ಲ. ಈಗ, 5D ಎನ್ನುವ ಸಿನಿಮಾ ಮಾಡಲು ಎಸ್.ನಾರಾಯಣ್ ಹೊರಟಿದ್ದಾರೆ. ಇದರ ಫಸ್ಟ್ ಲುಕ್ ಅನ್ನು ಡಿಕೆಶಿಯವರಿಂದ ನಾರಾಯಣ್ ಬಿಡುಗಡೆ ಮಾಡಿಸಿದ್ದರು.
ಹೊಸ ಚಿತ್ರದ ಫಸ್ಟ್ ಲುಕ್ ಅನ್ನು ಡಿಕೆಶಿಯವರಿಂದ ಬಿಡುಗಡೆ
ತಮ್ಮ ಹೊಸ ಚಿತ್ರದ ಫಸ್ಟ್ ಲುಕ್ ಅನ್ನು ಡಿಕೆಶಿಯವರಿಂದ ಬಿಡುಗಡೆ ಮಾಡಿಸಿದ ನಂತರ ಇವರ ಮತ್ತು ಕುಮಾರಸ್ವಾಮಿಯವರ ನಡುವಿನ ಸಂಬಂಧ ಹಳಸಿದೆಯಾ ಎನ್ನುವ ಚರ್ಚೆ ಆರಂಭವಾಗಿತ್ತು. ಇದಕ್ಕೆ ಪೂರಕ ಎನ್ನುವಂತೆ ಎಸ್.ನಾರಾಯಣ್ ಈಗ ಕಾಂಗೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಸುಮಾರು ಒಂದು ವರ್ಷ ಇರುವ ಹೊತ್ತಿನಲ್ಲಿ ಎಸ್.ನಾರಾಯಣ್ ಅವರ ಕಾಂಗ್ರೆಸ್ ಸೇರ್ಪಡೆಯಿಂದಾಗಿ, ಅವರು ಪಕ್ಷದ ಪ್ರಚಾರದ ಭಾಗವಾಗಿರುತ್ತಾರಾ ಅಥವಾ ನೇರವಾಗಿ ಕಣಕ್ಕಿಳಿಯಲಿದ್ದಾರಾ ಎನ್ನುವ ವಿಚಾರದಲ್ಲಿ ಸ್ಪಷ್ಟತೆಯಿಲ್ಲ.
ಎಸ್.ನಾರಾಯಣ್ ಅವರಿಗೆ ಕಷ್ಟ ಕಾಲದಲ್ಲಿ ಕುಮಾರಸ್ವಾಮಿ ಕೈಹಿಡಿಯಲಿಲ್ಲವೇ?
ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ಡಿನ ಯಶಸ್ವೀ ನಿರ್ದೇಶಕರಾಗಿದ್ದ ಎಸ್.ನಾರಾಯಣ್, ಮಗನಿಗಾಗಿ ಸಿನಿಮಾ ನಿರ್ಮಾಣ ಮತ್ತು ತಮಿಳು ನಟ ವಿಜಯ್ ಅವರ ಸಿನಿಮಾ ವಿತರಣೆಗೆ ದುಡ್ಡು ಚೆಲ್ಲಿ ಸಾಕಷ್ಟು ನಷ್ಟವನ್ನು ಉಂಟು ಮಾಡಿಕೊಂಡಿದ್ದರು. ಐಡಿಬಿಐ ಬ್ಯಾಂಕ್ ಸಾಲ ಮರುಪಾವತಿ ವಿಚಾರದಲ್ಲಿ ಇವರ ಬಂಧನವಾಗಿ, ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು. ಧಾರವಾಹಿಯಲ್ಲೂ ನಟಿಸಲು ಆರಂಭಿಸಿದ್ದ ಎಸ್.ನಾರಾಯಣ್ ಅವರಿಗೆ ಕಷ್ಟ ಕಾಲದಲ್ಲಿ ಕುಮಾರಸ್ವಾಮಿ ಕೈಹಿಡಿಯಲಿಲ್ಲವೇ? ಹೀಗಾಗಿಯೇ ಕಾಂಗ್ರೆಸ್ ಸೇರ್ಪಡೆಯಾದರಾ ಎನ್ನುವ ಪ್ರಶ್ನೆ ಎದುರಾಗಿದೆ.