ಕಾಂಗ್ರೆಸ್ ಸೇರ್ತಾರಾ ಸುದೀಪ್?; ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ: ಸತೀಶ್ ಜಾರಕಿಹೊಳಿ
ಬೆಂಗಳೂರು,ಫೆಬ್ರವರಿ3: ವಿಧಾನಸಭಾ ಚುನಾವಣೆ ಹತ್ತಿರಾಗುತ್ತಿದ್ದಂತೆರುವ ಸಂದರ್ಭದಲ್ಲಿ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನ ಸ್ಯಾಂಡಲ್ವುಡ್ನ ಬಹು ಬೇಡಿಕೆಯ ನಟ ಕಿಚ್ಚ ಸುದೀಪ್ ಭೇಟಿಯಾಗಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ ಬೆನ್ನಲ್ಲೆ ಇದೀಗ ಕಾಂಗ್ರೆಸ್ ಪಕ್ಷಕ್ಕೆ ನಟ ಸುದೀಪ್ ಬಂದರೆ ಸ್ವಾಗತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನಮ್ಮ ಸಿದ್ದಾಂತ ಒಪ್ಪಿ ಪಕ್ಷಕ್ಕೆ ಬರುವುದು ಅವರಿಗೂ ಹಾಗೂ ಹೈಕಮಾಂಡ್ಗೂ ಬಿಟ್ಟ ವಿಚಾರ. ಪಕ್ಷ ಸೇರ್ಪಡೆ ಆದರೆ ಪ್ರಚಾರದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಬಹುದು. ನಾನು ಸುದೀಪ್ ಅವರನ್ನು ಸದ್ಯ ಭೇಟಿಯಾಗಿಲ್ಲ. ಈ ಕುರಿತು ಮಾತುಕತೆ ಮಾಡಿಲ್ಲ. ರಾಜ್ಯದಲ್ಲಿ ಸಿನಿಮಾ ನಟರು ರಾಜಕೀಯಕ್ಕೆ ಬರುವುದಕ್ಕೆ ಸ್ವಲ್ಪ ಯೋಚನೆ ಮಾಡುತ್ತಾರೆ.
ಆಂಧ್ರ ತಮಿಳುನಾಡು ತೆಲಂಗಾಣದಲ್ಲಿ ಆದಂತೆ ನಮ್ಮಲ್ಲಿ ಆಗುವುದಿಲ್ಲ. ಆ ರಾಜ್ಯಗಳ ತರಹ, ಬೇರೆ ಪಕ್ಷದವರ ತರಹ ನಮ್ಮ ಪಕ್ಷ ಸ್ಟಾರ್ಗಳನ್ನು ಕರೆತಂದು ಯಾವತ್ತೂ ಪ್ರಚಾರ ಮಾಡಿಲ್ಲ. ಆದರೆ ಸುದೀಪ್ ಬಂದು ಪ್ರಚಾರದಲ್ಲಿ ತೊಡಗಿದರೆ ಸ್ವಾಗತ ಮಾಡ್ತೇವೆ ಎಂದು ಹೇಳಿದರು.
ನನ್ನ ಪ್ರಕಾರ ನಟ ಸುದೀಪ್ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ: ಸುಧಾಕರ್
ನಟ ಸುದೀಪ್, ಡಿ.ಕೆ.ಶಿವಕುಮಾರ್ ಭೇಟಿಯಾಗಿದ್ದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿರುವ ಕುರಿತು ಆಅರೋಗ್ಯ ಸಚಿವ ಸುಧಾಕರ್ ಮಾತನಾಡಿ, ನನ್ನ ಪ್ರಕಾರ ನಟ ಸುದೀಪ್ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ಸುದೀಪ್ ರಾಜ್ಯದ ಉತ್ತಮ ನಾಯಕ ನಟ. ಅವರು ಯಾವುದೇ ಪಕ್ಷ ಸೇರಿದರೂ ಆ ಪಕ್ಷಕ್ಕೆ ಒಳ್ಳೆಯದಾಗುತ್ತೆ. ನಮ್ಮೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಸುದೀಪ್ ಏನು ತೀರ್ಮಾನ ಮಾಡ್ತಾರೋ ನೋಡೋಣ ಎಂದು ಹೇಳಿದರು.
ಡಿ.ಕೆ ಶಿವಕುಮಾರ್ ಭೇಟಿಯಾಗಿ ಸುದೀಪ್ ಚರ್ಚಿಸಿದ ವಿಷಯವೇನು.?
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬೆಂಗಳೂರಿನ ಜೆಪಿ ನಗರದಲ್ಲಿರುವ ಕಿಚ್ಚ ಸುದೀಪ್ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದಾರೆ. ಅವರೊಂದಿಗೆ ಊಟವನ್ನೂ ಸವೆದಿದ್ದಾರೆ. ಈ ಸುದ್ದಿಯೂ ಹರಿದಾಡುತ್ತಿದ್ದಂತೆ ರಾಜಕೀಯ ವಲಯದಲ್ಲಿ ಹಲವಾರು ಮಾತುಗಳು ಹರಿದಾಡುತ್ತಿವೆ. ಈ ಭೇಟಿಯ ಕಾರಣವನ್ನು ಈಗ ಡಿಕೆ ಶಿವಕುಮಾರ್ ಅವರೇ ಬಹಿರಂಗಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ನಾನಾ ಚಿತ್ರರಂಗಗಳಲ್ಲಿ ಛಾಪು ಮೂಡಿಸಿ ಕರ್ನಾಟಕದ ಕೀರ್ತಿ ಹೆಚ್ಚಿಸಿದ ನಟ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದೆ. ಈ ವೇಳೆ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದೆವು. ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ಬಗೆಹರಿಸಲು ಕಾಂಗ್ರೆಸ್ ರೂಪಿಸುತ್ತಿರುವ ವಿಶೇಷ ಪ್ರಣಾಳಿಕೆಗೆ ಅವರ ಸಲಹೆಗಳನ್ನು ಪಡೆದೆ' ಎಂದು ಹೇಳಿದ್ದಾರೆ.