ಅತೃಪ್ತರ ಕಾಲೆಳೆದ ದೆಹಲಿ ವಾರ್ತೆ ಜಾಹೀರಾತು, ಏನಿದರ ಹಕೀಕತ್ತು
ನವದೆಹಲಿ, ಆಗಸ್ಟ್ 23 : "ಮತ್ತೆ ಶಾಸಕರಾಗಿ ಬನ್ನಿ"....ಶುಭ ಕೋರುವವರು ಹಿತೈಷಿಗಳು ಹಾಗೂ ಮಿತ್ರರು ನವದೆಹಲಿ/ಬೆಂಗಳೂರು.
ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ವಿಸ್ತರಣೆಯಾಗುತ್ತಿದ್ದಂತೆ ದೆಹಲಿಗೆ ತೆರಳಿದ ಅನರ್ಹ ಶಾಸಕರು ಪತ್ರಿಕೆಯೊಂದರ ಜಾಹೀರಾತು ನೋಡಿ ಬೆಚ್ಚಿಬಿದ್ದಿದ್ದಾರೆ. ಕರ್ನಾಟಕ ಭವನದಲ್ಲಿ ಕನ್ನಡದ ಜಾಹೀರಾತೊಂದು ಶಾಸಕರನ್ನು ಸ್ವಾಗತಿಸಿದೆ.
ಸಂಪುಟ ವಿಸ್ತರಣೆ ಆಗುತ್ತಿದ್ದಂತೆ ದೆಹಲಿಗೆ ಅನರ್ಹ ಶಾಸಕರು
'ನವದೆಹಲಿಗೆ ಆಗಮಿಸುತ್ತಿರುವ 17 ಅನರ್ಹ ಶಾಸಕರಿಗೆ ಆದರದ ಸ್ವಾಗತ' ಎಂಬ ದೊಡ್ಡದೊಂದು ಜಾಹೀರಾತು ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿದೆ. ಇದು ಯಾವ ಪತ್ರಿಕೆ ಎಂದು ನೋಡಿ ಕೆಲವು ಶಾಸಕರು ಸಹ ಕಂಗಾಲಾಗಿದ್ದಾರೆ.
17 ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ನಲ್ಲಿ ಹಿನ್ನಡೆ
ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್ನ 14, ಜೆಡಿಎಸ್ನ ಮೂವರು ಶಾಸಕರು ದೆಹಲಿಯಲ್ಲಿದ್ದಾರೆ. ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಅವರು ಪ್ರಯತ್ನ ನಡೆಸುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ಇಬ್ಬರು ಸಚಿವರು ಸಹ ದೆಹಲಿಗೆ ಹೋಗಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಏನಿದು ಜಾಹೀರಾತು
"ಮತ್ತೆ ಶಾಸಕರಾಗಿ ಬನ್ನಿ" ಎಂದು ಆರಂಭವಾಗುವ ಜಾಹೀರಾತಿನಲ್ಲಿ "ಮಾಜಿ ಸಚಿವ ಕ್ಯಾಪ್ಟನ್ ಸಿ. ಪಿ. ಯೋಗೇಶ್ವರ್ ಹಾಗೂ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ರಾಜಧಾನಿ ನವದೆಹಲಿಗೆ ಆಗಮಿಸಿರುವ ಹದಿನೇಳು (17) ಅನರ್ಹ ಶಾಸಕರಿಗೆ ಆದರದ ಸ್ವಾಗತ" ಎಂದು ದೊಡ್ಡದಾಗಿ ಬರೆಯಲಾಗಿದೆ.
ಎಲ್ಲಾ ಶಾಸಕರ ಚಿತ್ರ
ಜಾಹೀರಾತಿನ ಹಿಂಬದಿಯಲ್ಲಿ ಸುಪ್ರೀಂಕೋರ್ಟ್ ಚಿತ್ರವಿದೆ. ಜಾಹೀರಾತಿನಲ್ಲಿ ಬಿಜೆಪಿ ನಾಯಕ, ಮಾಜಿ ಸಚಿವ ಸಿ. ಪಿ. ಯೋಗೇಶ್ವರ್ ಸೇರಿದಂತೆ 17 ಅನರ್ಹ ಶಾಸಕರ ಚಿತ್ರವಿದೆ.
"ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕೇಸಿನ ಸಂಬಂಧ ನವದೆಹಲಿಗೆ ಆಗಮಿಸಿರುವ ಎಲ್ಲಾ ಹದಿನೇಳು ಗಣ್ಯರಿಗೆ ಶೀಘ್ರದಲ್ಲಿಯೇ ಜಯ ದೊರಕಿ ಪುನಃ ಶಾಸಕರಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮಂತ್ರಿ ಮಂಡಲದಲ್ಲಿ ಎಲ್ಲರೂ ಸಚಿವರಾಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ" ಎಂದು ಕಾಲೆಳೆಯಲಾಗಿದೆ.
ಶುಭ ಕೋರುವವರು
ಅನರ್ಹ ಶಾಸಕರು ದೆಹಲಿಗೆ ಬರುತ್ತಿದ್ದಂತೆ ಈ ಜಾಹೀರಾತು ಕೊಟ್ಟವರು ಯಾರು? ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಜಾಹೀರಾತಿನ ಕೊನೆಯಲ್ಲಿ ಶುಭ ಕೋರುವವರು ಹಿತೈಷಿಗಳು ಹಾಗೂ ಮಿತ್ರರು ನವದೆಹಲಿ/ಬೆಂಗಳೂರು ಎಂದು ಮಾತ್ರವಿದೆ. ಯಾರ ಹೆಸರೂ ಸಹ ಇಲ್ಲ.
ಯಾವುದು ಈ ಪತ್ರಿಕೆ?
ಜಾಹೀರಾತು ಬಂದಿರುವುದು ಕರ್ನಾಟಕದ ಪತ್ರಿಕೆಯಲ್ಲಿ ಅಲ್ಲ. ದೆಹಲಿಯಲ್ಲಿರುವ ಕನ್ನಡದ "ದೆಹಲಿ ವಾರ್ತೆ" ಪತ್ರಿಕೆಯಲ್ಲಿ. ಈ ಪತ್ರಿಕೆ ಫೇಸ್ ಬುಕ್ ಪುಟ ನೋಡಿದರೆ. ದೆಹಲಿ ವಾರ್ತೆ ರಾಷ್ಟ್ರೀಯ ಪತ್ರಿಕೆ. ನಿಖರ, ನಿರ್ಭಿತ, ನಿರಂತರ ಸುದ್ದಿಗಾಗಿ ಓದಿ 'ದೆಹಲಿ ವಾರ್ತೆ ' ಎಂಬ ಸಂದೇಶ ಕಾಣುತ್ತದೆ.
ಯಾರ ಕೈವಾಡ?
ಅನರ್ಹಗೊಂಡಿರುವ ಶಾಸಕರನ್ನು ಲೇವಡಿ ಮಾಡಲು ಇಂತಹ ಜಾಹೀರಾತು ನೀಡಲಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣರಾದ 17 ಶಾಸಕರನ್ನು ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದಾರೆ. ಸ್ಪೀಕರ್ ಆದೇಶವನ್ನು ಶಾಸಕರು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದು, ಅರ್ಜಿಯ ವಿಚಾರಣೆ ಇನ್ನೂ ನಡೆಯಬೇಕಿದೆ.