ರಾಜ್ಯ ರಾಜಕಾರಣದಲ್ಲಿ ಬುಧವಾರ ಏನೆಲ್ಲಾ ನಡೆಯಿತು: ಚುಟುಕು ವರದಿ
ಬೆಂಗಳೂರು, ಜುಲೈ 10: ರಾಜ್ಯ ರಾಜಕಾರಣದ ಮಟ್ಟಿಗೆ ಕಳೆದ ಶನಿವಾರದಿಂದ ಪ್ರತಿದಿನವೂ ಅತ್ಯಂತ ಪ್ರಮುಖವಾದ ದಿನಗಳು, ಶನಿವಾರ ಆರಂಭವಾದ ಸರ್ಕಾರದ ವಿರುದ್ಧ ಅಸಹನೆ ಬುಧವಾರದ ಹೊತ್ತಿಗೆ ಕುದಿಬಿಂದು ತಲುಪಿದ್ದು, ಪ್ರಸ್ತುತ ಮೈತ್ರಿ ಸರ್ಕಾರದ ನಿರ್ಗಮನಕ್ಕೆ ಕ್ಷಣಗಣನೆ ಎನ್ನುವಂತಾಗಿದೆ.
ಶನಿವಾರದಿಂದ ಮಂಗಳವಾದವರೆಗೆ 14 ಶಾಸಕರು ತಮ್ಮ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ, ಇನ್ನು ಇಬ್ಬರು ಪಕ್ಷೇತರರು ಸರ್ಕಾರಕ್ಕೆ ನೀಡಿದ್ದ ತಮ್ಮ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಬುಧವಾರವೂ ಶಾಸಕರ ರಾಜೀನಾಮೆ ಪರ್ವ ಮುಂದುವರೆದಿದೆ.
Live Updates: ದೇವೇಗೌಡ ನಿವಾಸಕ್ಕೆ ಕುಮಾರಸ್ವಾಮಿ ಧಿಡೀರ್ ಭೇಟಿ
ರಾಜ್ಯ ರಾಜಕಾರಣದ ಮಟ್ಟಿಗೆ ಬುಧವಾರ ಅತ್ಯಂತ ಮಹತ್ವದ ಹಲವು ಘಟನೆ ನಡೆದಿವೆ. ಬುಧವಾರ ಕಾಂಗ್ರೆಸ್-ಬಿಜೆಪಿ ಪಕ್ಷಗಳೂ ತಮ್ಮ ನಿಜ ಬಣ್ಣ ತೋರಿಸಿವೆ ಎಂದೇ ಹೇಳಬಹುದಾಗಿದೆ. ಬುಧವಾರ ರಾಜ್ಯ ರಾಜಕಾರಣದಲ್ಲಿ ಏನೇನು ನಡೆಯಿತು ಎಂಬುದರ ಪಕ್ಷಿ ನೋಟ ಇಲ್ಲಿದೆ.
ಬುಧವಾರ ಬೆಳಿಗ್ಗೆ ರಾಜ್ಯದ ರಾಜಕಾರಣ ಮುಂಬೈಗೆ ಶಿಫ್ಟ್ ಆಗಿತ್ತು, ಸಚಿವ ಡಿ.ಕೆ.ಶಿವಕುಮಾರ್ ಅವರು ಜೆಡಿಎಸ್ನ ಜಿ.ಟಿ.ದೇವೇಗೌಡ, ಶೀವಲಿಂಗೇಗೌಡ ಅವರನ್ನು ಕರೆದುಕೊಂಡು ಮುಂಬೈಗೆ ಹೋಗಿದ್ದರು, ಅತೃಪ್ತ ಶಾಸಕರು ತಂಗಿದ್ದ ಹೊಟೆಲ್ಗೆ ಹೋಗಿ ಅವರನ್ನು ಆಚೆ ಕರೆತರುವುದು ಅವರ ಉದ್ದೇಶವಾಗಿತ್ತು.
ಎಂಟು ಗಂಟೆ ಹೊಟೆಲ್ ಮುಂದೆ ಕಾದ ಡಿಕೆಶಿ
ಛಲದಂಕಮಲ್ಲನಂತೆ ಡಿಕೆ ಶಿವಕುಮಾರ್ ಅವರು ಮಳೆಯಲ್ಲಿಯೂ ಅತೃಪ್ತ ಶಾಸಕರು ತಂಗಿದ್ದ ಹೊಟೆಲ್ ಮುಂದೆಯೇ ಕಾದು ನಿಂತರು, ಸುಮಾರು ಎಂಟು ಗಂಟೆ ಹೊಟೆಲ್ ಹೊರಗೆ ಡಿ.ಕೆ.ಶಿವಕುಮಾರ್ ಅವರು ಕಾದು ನಿಂತಿದ್ದರು, ಆದರೆ ಪೊಲೀಸರು ಅವರನ್ನು ಒಳಗೆ ಹೋಗಲು ಬಿಡಲಿಲ್ಲ, ಕೊನೆಗೆ ಅವರನ್ನು ವಶಕ್ಕೆ ಪಡೆದು, ಬಲವಂತದಿಂದ ಬೆಂಗಳೂರಿಗೆ ವಾಪಸ್ ಕಳುಹಿಸಲಾಯಿತು.
ಡಿಕೆಶಿಯನ್ನು ಬಲವಂತವಾಗಿ ಬೆಂಗಳೂರಿಗೆ ಕಳಿಸಿದರೆ ಮುಂಬೈ ಪೊಲೀಸ್?
ಬಿಜೆಪಿ ವಿರುದ್ಧ ಸಿದ್ದರಾಮಯ್ಯ-ದೇವೇಗೌಡ ಗುಡುಗು
ಇತ್ತ ಸಿದ್ದರಾಮಯ್ಯ, ದೇವೇಗೌಡ, ಕೆ.ಸಿ.ವೇಣುಗೋಪಾಲ್, ಗುಲಾಂ ನಬಿ ಆಜಾದ್, ಈಶ್ವರ್ ಖಂಡ್ರೆ ಇನ್ನೂ ಹಲವು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದರು. ರಾಜ್ಯಪಾಲರ ಕಚೇರಿ ಮುಂದೆಯೂ ಪ್ರತಿಭಟನೆ ನಡೆಸಿದರು. ಪೊಲೀಸರು ಇವರೆನ್ನೆಲ್ಲಾ ವಶಕ್ಕೆ ಪಡೆದು ಆ ನಂತರ ಬಿಡುಗಡೆ ಮಾಡಿದರು. ಮೋದಿ ಮತ್ತು ಶಾ ಹಣದ ಬಲ ಪ್ರದರ್ಶಿಸುತ್ತಿದ್ದಾರೆ ಎಂದು ಈ ನಾಯಕರು ಆರೋಪ ಮಾಡಿದರು.
ಬಿಜೆಪಿಯಿಂದ ಸ್ಪೀಕರ್ ಮತ್ತು ಸರ್ಕಾರದ ವಿರುದ್ಧ ಪ್ರತಿಭಟನೆ
ಕುಮಾರಸ್ವಾಮಿ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕರ್ನಾಟಕ ಬಿಜೆಪಿ ಅವರು ಸಹ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಸ್ಪೀಕರ್ ವಿರುದ್ಧವೂ ಸಹ ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಅಷ್ಟೆ ಅಲ್ಲದೆ ಇಂದು ಬಿಜೆಪಿ ನಿಯೋಗವು ಸ್ಪೀಕರ್ ಅವರನ್ನು ಭೇಟಿಯಾಗಿ ಮಾತುಕತೆಯನ್ನೂ ನಡೆಸಿತು.
ಬಿಜೆಪಿಗೆ ಭಾರಿ ಹಿನ್ನಡೆ ತಂದ ಸ್ಪೀಕರ್ ರಮೇಶ್ ಕುಮಾರ್ ನಡೆ
ಇಬ್ಬರು ಶಾಸಕರ ರಾಜೀನಾಮೆ
ಆಡಳಿತ ಪಕ್ಷದ ಶಾಸಕರ ರಾಜೀನಾಮೆ ಪರ್ವ ಇಂದೂ ಸಹ ಮುಂದುವರೆದು, ಹೊಸಕೋಟೆ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜು, ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆಯನ್ನು ಸಲ್ಲಿಸಿದರು. ಇಬ್ಬರೂ ಸಹ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದವರಾಗಿದ್ದು, ಇಬ್ಬರೂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದಾರೆ.
ವಿಧಾನಸೌಧವಾಯ್ತು ರಣಾಂಗಣ
ರಾಜೀನಾಮೆ ಸಲ್ಲಿಸಿ ವಾಪಸ್ ಆಗುವಾದ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅವರು ಕಾಂಗ್ರೆಸ್ ಮುಖಂಡರ ಕೈಗೆ ಸಿಕ್ಕಿ ಬಿದ್ದರು, ಅವರನ್ನು ತರಾಟೆಗೆ ತೆಗೆದುಕೊಂಡು ಕಾಂಗ್ರೆಸ್ ಶಾಸಕರು, ಮುಖಂಡರು, ಸುಧಾಕರ್ ಅವರನ್ನು ಎಳೆದಾಡಿ, ಜಾರ್ಜ್ ಅವರ ಕೊಠಡಿಯಲ್ಲಿ ಕೂಡಿ ಹಾಕಿದರು. ಸುಧಾಕರ್ ಅವರಿಗೆ ಅಲ್ಲಿದ್ದ ಶಾಸಕರು, ಮುಖಂಡರು ಕೆಟ್ಟ ಭಾಷೆಯಲ್ಲಿ ಬೈದದ್ದೂ ನಡೆಯಿತು.
ಬಿಜೆಪಿ -ಕಾಂಗ್ರೆಸ್ ನಡುವೆ ವಿಧಾನಸೌಧದಲ್ಲಿ ಜಟಾಪಟಿ
ಸುಧಾಕರ್ ವಿಷಯ ತಿಳಿದು ಬಿಜೆಪಿ ಶಾಸಕರು ವಿಧಾನಸೌಧಕ್ಕೆ ಬಂದು ಕಾಂಗ್ರೆಸ್ ಶಾಸಕರೊಂದಿಗೆ ವಾಗ್ವಾದ ನಡೆಸಿದರು. ಈ ಸಮಯ ಸಿದ್ದರಾಮಯ್ಯ ಸಹ ಬಂದು ಸುಧಾಕರ್ ಇದ್ದ ಕೊಠಡಿಗೆ ತೆರಳಲು ಯತ್ನಿಸಿದರು, ಆಗ ಬಿಜೆಪಿ ಶಾಸಕರು ಅವರಿಗೆ ಅಡ್ಡಿ ಪಡಿಸಿ, ಘೋಷಣೆಗಳನ್ನು ಕೂಗಿದರು, ಸಿದ್ದರಾಮಯ್ಯ ಅವರು ಸುಧಾಕರ್ ಅವರೊಂದಿಗೆ ಮಾತುಕತೆ ನಡೆಸಿದರು, ಅದೇ ಕೊಠಡಿಯ ಹೊರಗೆ ಕೂತು ಬಿಜೆಪಿ ಶಾಸಕರು ಧರಣಿ ನಡೆಸಿದರು.
ಕೈ ಮುಖಂಡರ ಬಂಧನದಿಂದ ಬಿಡುಗಡೆ ಆದ ಸುಧಾಕರ್ ಹೇಳಿದ್ದೇನು?
ವಿಧಾನಸೌಧಕ್ಕೆ ನುಗ್ಗಿದ ಖಾಕಿ ಪಡೆ
ವಿಧಾನಸೌಧದಲ್ಲಿ ಗಲಭೆ ಆರಂಭವಾಗುತ್ತಿದ್ದಂತೆ ಪೊಲೀಸ್ ಪಡೆ ವಿಧಾನಸೌಧದ ಒಳಗೆ ನುಗ್ಗಿ, ಸುಧಾಕರ್ ಅವರನ್ನು ಭಾರಿ ಭದ್ರತೆಯೊಂದಿಗೆ ಹೊರ ಕರೆದುಕೊಂಡು ಬರಲಾಯಿತು, ಅವರು ವಿಧಾನಸೌಧದಿಂದ ನೇರವಾಗಿ ರಾಜ್ಯಪಾಲರ ಕಚೇರಿಗೆ ಬಂದು ರಾಜ್ಯಪಾಲರಿಗೆ ರಾಜೀನಾಮೆ ಪ್ರತಿ ಸಲ್ಲಿಸಿದರು.
ದೇವೇಗೌಡರ ನಿವಾಸಕ್ಕೆ ತೆರಳಿದ ಕಾಂಗ್ರೆಸ್ ನಾಯಕರು
ಕೆಕೆ ಗೆಸ್ಟ್ ಹೌಸ್ ನಲ್ಲಿ ಕಾಂಗ್ರೆಸ್ನ ನಾಯಕರಾದ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಕೆಸಿ.ವೇಣುಗೋಪಾಲ್, ಗುಲಾಂ ನಬಿ ಆಜಾದ್ ಅವರು ರಾತ್ರಿ 9 ಗಂಟೆ ಸುಮಾರಿಗೆ ದೀರ್ಘ ಸಭೆ ನಡೆಸಿದರು. ಸಭೆಯ ನಂತರ ಎಲ್ಲರೂ ದೇವೇಗೌಡ ಅವರ ನಿವಾಸಕ್ಕೆ ತೆರಳಿದರು. ಅಲ್ಲಿಗೆ ಕುಮಾರಸ್ವಾಮಿ ಅವರು ಬರುವವರಿದ್ದು, ಅತ್ಯಂತ ಮಹತ್ವದ ನಿರ್ಧಾರ (ಸಿಎಂ ರಾಜೀನಾಮೆ!?) ಮಾಡುವ ಸಾಧ್ಯತೆ ಇದೆ.