ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಚುನಾವಣೆ; ಪರಮೇಶ್ವರ
ಬೆಂಗಳೂರು, ಜೂ.26: "ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಪಕ್ಷವು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಿದೆ" ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಹೊರಗುಳಿದಿರುವ ಬಗ್ಗೆ ಮತ್ತು ಬಿಜೆಪಿಗೆ ಸೇರಲಿದ್ದಾರೆ ಎಂಬ ಊಹಾಪೋಹಗಳನ್ನು ಡಾ. ಜಿ. ಪರಮೇಶ್ವರ ತಳ್ಳಿ ಹಾಕಿದರು. "ಯಾವಾಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆಯೋ ಆಗ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ" ಎಂದು ಸ್ಪಷ್ಟಪಡಿಸಿದರು.
ದಲಿತರ ಅಭಿವೃದ್ಧಿ: ಪರಸ್ಪರ ಕಾಲೆಳೆದುಕೊಂಡ ಬಿಜೆಪಿ-ಕಾಂಗ್ರೆಸ್
2023ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಎದುರಿಸಲಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಡಿ. ಕೆ. ಶಿವಕುಮಾರ್ ಅವರು ಸಾಮೂಹಿಕ ನಾಯಕತ್ವ ಎಂದು ಹೇಳಿದ್ದಾರೆ. ನಾವು ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ" ಎಂದರು.
ಎಂಟು ವರ್ಷಗಳ ಕಾಲ ಅಧ್ಯಕ್ಷನಾಗಿದ್ದೇನೆ
ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದಿರುವುದಕ್ಕೆ ಬೇಸರವಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, "ಇಲ್ಲ ನನಗೆ ಅಸಮಾಧಾನವಿಲ್ಲ. ನಾನು ಎಂಟು ವರ್ಷಗಳ ಕಾಲ ಸತತವಾಗಿ ಪಕ್ಷದ ಅಧ್ಯಕ್ಷನಾಗಿ ಮತ್ತು ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ. ನಾನು ಅತೃಪ್ತಿ ಅಥವಾ ಅಸಮಾಧಾನ ಹೊಂದಿಲ್ಲ" ಎಂದರು.
ಬಿಜೆಪಿ ಸೇರಬಹುದು ಎಂಬ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಮಾತುಕತೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆಪಿಸಿಸಿ ಮಾಜಿ ಅಧ್ಯಕ್ಷ ಪರಮೇಶ್ವರ್, "ನನಗೆ ಅದರ ಬಗ್ಗೆ ಗೊತ್ತಿಲ್ಲ" ಎಂದರು.
'ದಲಿತ ಸಿಎಂ' ಕನಸು ಕಾಣುವವರು ಹುಚ್ಚರು: ಎ.ನಾರಾಯಣ ಸ್ವಾಮಿ
ಕರ್ನಾಟಕದಲ್ಲಿ ದಲಿತ ಸಿಎಂ ಆಗಿಲ್ಲ
"ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ರಾಜಕೀಯ ಒಗ್ಗಟ್ಟಿನ ಬಲವಿದೆ. ಪಕ್ಷದ ಹಿರಿಯ ನಾಯಕರಿಂದ ಸಾಮೂಹಿಕ ನಾಯಕತ್ವದ ಸಂದೇಶ ಬರುತ್ತದೆ" ಎಂದರು.
ಕರ್ನಾಟಕದಲ್ಲಿ ದಲಿತ ಸಿಎಂ ಆಗಿಲ್ಲ ಎಂಬ ವಿಚಾರವನ್ನು ಹಿಂದೆ ಎತ್ತಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, "ಪರಿಸ್ಥಿತಿಗೆ ತಕ್ಕಂತೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸದ್ಯಕ್ಕೆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವುದೇ ವಿರೋಧಿ ಬಣದ ಉದ್ದೇಶ. ಮೊದಲು ಪಕ್ಷ ಅಧಿಕಾರಕ್ಕೆ ಬರಬೇಕು ಅಲ್ಲವೇ?. ಅದಕ್ಕಾಗಿ ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ" ಎಂದರು.
ಎಲ್ಲವೂ ಹೈಕಮಾಂಡ್ನಿಂದ ನಿರ್ಧರಿತ
ಕಾಂಗ್ರೆಸ್ನಲ್ಲಿ ಹಲವು ನಾಯಕರು ಮುಖ್ಯಮಂತ್ರಿ ಹುದ್ದೆಯ ರೇಸ್ನಲ್ಲಿದ್ದರೂ ಅಚ್ಚರಿಪಡಬೇಕಾಗಿಲ್ಲ. ಪಕ್ಷಕ್ಕೆ ದಶಕಗಳಿಂದ ಸೇವೆ ಸಲ್ಲಿಸಿದ ಹಲವಾರು ಹಿರಿಯ ನಾಯಕರಿದ್ದಾರೆ. ಅವರಲ್ಲಿ ಆಸೆ ಇರುವುದು ಸಹಜ. ತಮಗೂ ಅಂತಹ ಆಸೆ ಇದೆಯೇ ಎಂದು ಪ್ರಶ್ನಿಸಿದಾಗ, "ಪಕ್ಷದ ಹೈಕಮಾಂಡ್ ಅಂತಿಮವಾಗಿ ಸಿಎಂ ಯಾರು ನಿರ್ಧರಿಸುತ್ತದೆ. ಮೊದಲು ಪಕ್ಷವನ್ನು ಅಧಿಕಾರಕ್ಕೆ ತರೋಣ" ಎಂದು ಪರಮೇಶ್ವರ ಹೇಳಿದರು.
ದಲಿತ ಸಿಎಂ ಎನ್ನುವುದು ರಾಜಕೀಯ ಅಷ್ಟೇ
"ರಾಜ್ಯದಲ್ಲಿ ದಲಿತ ಸಿಎಂ ಕನಸು ಕಾಣೋನು ಹುಚ್ಚ" ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಕಳೆದ ಮೇ ನಲ್ಲಿ ಹೇಳಿದ್ದರು. ರಾಜ್ಯದಲ್ಲಿ ದಲಿತ ಸಿಎಂ ಎನ್ನುವುದು ರಾಜಕೀಯ ಅಷ್ಟೇ. ಈವರೆಗೆ ರಾಜ್ಯದಲ್ಲಿ ದಲಿತ ಸಿಎಂ ಕನಸು ಈಡೇರಿಲ್ಲ. ದೇಶದಲ್ಲಿ ಸಂವಿಧಾನ ಬರೆದ ಡಾ. ಬಿ. ಆರ್. ಅಂಬೇಡ್ಕರ್ಗೆ 5 ವರ್ಷಗಳ ಕಾಲ ಮಂತ್ರಿಯಾಗಿ ಇರಲು ಬಿಡಲಿಲ್ಲ. ಇನ್ನೂ ಬೇರೆಯವರನ್ನು ಬಿಡುತ್ತಾರೆಯೇ? ಎಂದು ಅವರು ಹೇಳಿದ್ದರು.