ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗುತ್ತಿದ್ದಂತೇ, ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಖರ್ಗೆ ಖಡಕ್ ಮಾತು
ನಮ್ಮಲ್ಲಿ ಯಾವುದೇ ಬಣಗಳಿಲ್ಲ ನಾವೆಲ್ಲಾ ಒಂದೇ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳುತ್ತಲೇ ಬರುತ್ತಿದ್ದರೂ, ಎರಡು ಬಣಗಳಿವೆ ಎನ್ನುವ ಸಂಶಯ ಪಡುವಂತಹ ಬೆಳವಣಿಗೆಗಳು ಕಾಂಗ್ರೆಸ್ಸಿನಲ್ಲಿ ನಡೆಯುತ್ತಲೇ ಇರುತ್ತದೆ.
ಜೆಡಿಎಸ್ ವರಿಷ್ಠ ದೇವೇಗೌಡ್ರು ಹಲವು ವೇದಿಕೆಯಲ್ಲಿ ಖರ್ಗೆ ಮುಖ್ಯಮಂತ್ರಿಯಾಗಬೇಕಿತ್ತು, ಆದರೆ ಅವರ ಪಕ್ಷದವರೇ ಅದನ್ನು ತಪ್ಪಿಸಿದ್ದರು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಹೆಸರು ಹೇಳದೇ ಹೇಳಿಕೆಯನ್ನು ನೀಡಿದ್ದರು.
ರಾಜ್ಯಸಭೆ ವಿಪಕ್ಷ ನಾಯಕ ಸ್ಥಾನಕ್ಕೇರಿದ ಮಲ್ಲಿಕಾರ್ಜುನ ಖರ್ಗೆ
ಇನ್ನು, ಇತ್ತೀಚಿನ ದಿನಗಳಲ್ಲಿ ಹಲವು ಬಾರಿ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆನ್ನುವ ಆಸೆಯನ್ನು ವಿವಿಧ ಸಭೆಗಳಲ್ಲಿ ತೋಡಿಕೊಂಡಿದ್ದರು. ಇದು, ಕಾಂಗ್ರೆಸ್ಸಿನ ಒಂದು ಬಣಕ್ಕೆ ಸಹ್ಯ ಎನಿಸಿರಲಿಲ್ಲ.
ಈ ವಿಚಾರ, ರಾಜ್ಯದೆಲ್ಲಡೆ ಚರ್ಚೆಯ ವಿಷಯವಾಗುತ್ತಿರುವುದನ್ನು ಅರಿತ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಎರಡೂ ಮುಖಂಡರಿಗೆ ಪರೋಕ್ಷವಾಗಿ ಖಡಕ್ ಬುದ್ದಿಮಾತನ್ನು ಹೇಳಿದ್ದಾರೆ.
ಮೀಸಲಾತಿ ಹೋರಾಟ; ಸಿದ್ದರಾಮಯ್ಯ ಸರಣಿ ಟ್ವೀಟ್, ಬಿಜೆಪಿಗೆ ಪ್ರಶ್ನೆಗಳು!
ಸಿದ್ದರಾಮಯ್ಯ ನೀಡುತ್ತಿದ್ದ ಹೇಳಿಕೆಗೆ ಕೌಂಟರ್
"ನಾನು ಸತತವಾಗಿ ಚುನಾವಣೆಯಲ್ಲಿ ಗೆಲ್ಲುತ್ತಿದ್ದೆ, ಆದರೆ ಕಳೆದ ಬಾರಿ ನನಗೆ ಸೋಲಾಯಿತು. ನನ್ನ ಸೋಲಿನ ಹಿಂದೆ ತುಂಬಾ ಜನರ ಶ್ರಮವಿತ್ತು. ಆದರೆ, ನಾನು ಈ ಬಗ್ಗೆ ಯಾರನ್ನೂ ದೂರುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿ ಇರಬೇಕು"ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಇದು, ಪರೋಕ್ಷವಾಗಿ ಚಾಮುಂಡೇಶ್ವರಿಯಲ್ಲಿ ಸೋತಿದ್ದಕ್ಕೆ ಸಿದ್ದರಾಮಯ್ಯ ನೀಡುತ್ತಿದ್ದ ಹೇಳಿಕೆಗೆ ಕೌಂಟರ್ ಕೊಡುವ ಹೇಳಿಕೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಪಕ್ಷದ ಇಮೇಜಿಗೆ ಧಕ್ಕೆ ತರಬಾರದು, ಮಲ್ಲಿಕಾರ್ಜುನ ಖರ್ಗೆ
"ಗೆಲುವು ನನ್ನಿಂದ, ಸೋಲು ಇನ್ನೊಬ್ಬರಿಂದ ಎನ್ನುವ ಮನೋಭಾವದಿಂದ ನಾನು ಹೊರಗೆ ಬರಬೇಕು. ಸೋತರೂ, ಗೆದ್ದರೂ ಅದು ವೈಯಕ್ತಿಕಗಿಂತ ಪಕ್ಷಕ್ಕಾಗುವ ಲಾಭ ನಷ್ಟ ಎನ್ನುವುದನ್ನು ಅರಿತುಕೊಳ್ಳಬೇಕು. ಒಬ್ಬರು ಇನ್ನೊಬ್ಬರ ಮೇಲೆ ಆರೋಪ ಮಾಡಿ, ಪಕ್ಷದ ಇಮೇಜಿಗೆ ಧಕ್ಕೆ ತರಬಾರದು"ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್
"ಸಿದ್ದರಾಮಯ್ಯನವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದು ಕಾಂಗ್ರೆಸ್ಸಿನಿಂದ, ಡಿ.ಕೆ.ಶಿವಕುಮಾರ್ ಅವರು ಅಧ್ಯಕ್ಷರಾಗಿರುವುದು ಕರ್ನಾಟಕ ಕಾಂಗ್ರೆಸ್ಸಿಗೆ. ನಾವೆಲ್ಲರೂ ಒಟ್ಟಿಗೆ ಹೋಗುವುದು ಇಲ್ಲಿ ಮುಖ್ಯವಾಗುತ್ತದೆ"ಎಂದು ಖರ್ಗೆ ಹೇಳುವ ಮೂಲಕ ಶೀತಲ ಸಮರ ಬಿಡಿ ಎನ್ನುವ ಬುದ್ದಿವಾದವನ್ನು ಹೇಳಿದ್ದಾರೆ.
Recommended Video
ಒಗ್ಗಟ್ಟಾಗಿ ಬಿಜೆಪಿ ವಿರುದ್ದ ಹೋರಾಡ ಬೇಕಾದ ಅನಿವಾರ್ಯತೆ ಇದೆ
"ನಾವೆಲ್ಲರೂ ಒಗ್ಗಟ್ಟಾಗಿ ಬಿಜೆಪಿ ವಿರುದ್ದ ಹೋರಾಡ ಬೇಕಾದ ಅನಿವಾರ್ಯತೆ ಇದೆ. ಇದನ್ನು ಮೊದಲು ಎಲ್ಲರೂ ಅರಿತುಕೊಳ್ಳಬೇಕಿದೆ. ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಿಕ್ಕರೆ, ಯಾರು ಸಿಎಂ ಆಗಬೇಕು ಎನ್ನುವುದನ್ನು ಶಾಸಕಾಂಗ ಸಭೆಯಲ್ಲಿ ನಿರ್ಧರಿಸಲಾಗುತ್ತದೆ"ಎಂದು ಖರ್ಗೆ ಹೇಳುವ ಮೂಲಕ, ಸಿದ್ದರಾಮಯ್ಯಗೆ ಟಾಂಗ್ ನೀಡಿದ್ದಾರೆ.