ಅರಣ್ಯ ಪ್ರದೇಶದಲ್ಲಿ ಯಾವ ಯೋಜನೆಗೂ ಅನುಮತಿ ನೀಡಲ್ಲ: ಸಿಎಂ
ಬೆಂಗಳೂರು, ಸೆಪ್ಟೆಂಬರ್ 18: ಕರ್ನಾಟಕ ಗಡಿ ಭಾಗದ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ, ವನ್ಯಜೀವಿಧಾಮಗಳಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಕೇರಳ ಸರ್ಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದರು.
ಭಾನುವಾರ ಬೆಂಗಳೂರಿನಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಕರ್ನಾಟಕ ಮುಖ್ಯಮಂತ್ರಿ ಭೇಟಿಯಾಗಿ ಸಮಲೋಚನೆ ನಡೆಸಿದರು. ಬಳಿಕ ಭೇಟಿ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು, ದಕ್ಷಿಣ ವಲಯ ಪರಿಷತ್ತಿನ ಸಭೆಯಲ್ಲಿ ತೀರ್ಮಾನಿಸಿದಂತೆ ದ್ವಿಪಕ್ಷೀಯ ಮಾತುಕತೆ ನಡೆಸಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಆಗಮಿಸಿದ್ದರು ಎಂದರು.
Breaking; ಪಿಣರಾಯಿ ವಿಜಯನ್ ಭೇಟಿಯಾದ ಬಸವರಾಜ ಬೊಮ್ಮಾಯಿ
ಮುಖ್ಯವಾಗಿ ಕಾಞಂಗಾಡ್- ಕಾಣಿಯೂರು ರೈಲು ಮಾರ್ಗ ಸೇರಿದಂತೆ ವಿವಿಧ ರೈಲ್ವೆ ಮತ್ತು ಹೆದ್ದಾರಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಹಮತಿ ನೀಡುವಂತೆ ಕೇರಳ ಸರ್ಕಾರ ಕೋರಿತು. ಪ್ರಸ್ತಾಪಿತ ಕಾಞಂಗಾಡ್ - ಕಾಣಿಯೂರು ರೈಲು ಮಾರ್ಗವು ಕೇರಳದಲ್ಲಿ 40 ಕಿ. ಮೀ. ಹಾಗೂ ಕರ್ನಾಟಕದಲ್ಲಿ 31 ಕಿ. ಮೀ. ಮಾರ್ಗವನ್ನು ಹೊಂದಿದೆ. ಈ ಕಾಞಂಗಾಡ್- ಕಾಣಿಯೂರು ರೈಲು ಮಾರ್ಗವನ್ನು ಕೇಂದ್ರ ರೈಲ್ವೆ ಇಲಾಖೆ ತಿರಸ್ಕರಿಸಿತ್ತು. ಹೀಗಾಗಿ ಎರಡು ರಾಜ್ಯಗಳು ಪರಸ್ಪರ ಒಪ್ಪಿದರೆ ಯೋಜನೆ ಜಾರಿಗೆ ತರಬಹುದು ಎಂದು ಪ್ರಸ್ತಾಪಿಸಿದರು.
ಪಶ್ಚಿಮ ಘಟ್ಟದ ಜೀವ ವೈವಿಧ್ಯತೆಗೆ ಧಕ್ಕೆ: ಅನುಮತಿ ನೀಡಿಲ್ಲ
ಆದರೆ ಕರ್ನಾಟಕಕ್ಕೆ ಈ ರೈಲು ಮಾರ್ಗದಿಂದ ಹೆಚ್ಚಿನ ಅನುಕೂಲಗಳಿಲ್ಲ. ಅಲ್ಲದೆ ಪಶ್ಚಿಮ ಘಟ್ಟದ ಜೀವವೈವಿಧ್ಯ ಸೂಕ್ಷ್ಮ ಪ್ರದೇಶದಲ್ಲಿ ಈ ಉದ್ದೇಶಿತ ರೈಲು ಮಾರ್ಗ ಹಾದು ಹೋಗಲಿದೆ. ಇದರಿಂದ ಕಾಡುಪ್ರಾಣಿಗಳು, ಪರಿಸರಕ್ಕೆ ತೊಂದರೆಯಾಗುವ ಕಾರಣ ಈ ಈ ರೈಲು ಮಾರ್ಗದ ಯೋಜನೆಗೆ ಸಹಮತಿ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದೇವೆ ಎಂದು ಅವರು ತಿಳಿಸಿದರು.
ಬೀದರ್-ಬಳ್ಳಾರಿ ಚತುಷ್ಪಥ ಎಕ್ಸ್ಪ್ರೆಸ್ ಹೆದ್ದಾರಿ ನಿರ್ಮಾಣ; ಬಸವರಾಜ ಬೊಮ್ಮಾಯಿ
ತಲಚೇರಿ- ಮೈಸೂರು ರೈಲು ಮಾರ್ಗದಿಂದ ಅರಣ್ಯಕ್ಕೆ ತೊಂದರೆ
ಇದರೊಂದಿಗೆ ಹಳೆಯ ಯೋಜನೆಯಾದ ತಲಚೇರಿ- ಮೈಸೂರು ರೈಲು ಯೋಜನೆಯನ್ನೂ ಕೇರಳ ಮುಖ್ಯಮಂತ್ರಿ ಅವರು ಪ್ರಸ್ತಾಪಿಸಿದರು. ಆದರೆ ಈ ಯೋಜನೆಯ ರೈಲು ಮಾರ್ಗವು ಬಂಡಿಪುರ-ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮಧ್ಯಭಾಗದಲ್ಲಿ ಹಾದುಹೋಗುತ್ತದೆ. ಇದರಿಂದ ಅಲ್ಲಿನ ವನ್ಯಜೀವಿ ಸಂಪತ್ತು ಹಾಗೂ ಅರಣ್ಯಸಂಪತ್ತಿಗೆ, ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ ಹಾನಿಯಾಗುವುದು. ಆದ್ದರಿಂದ ಈ ಯೋಜನೆಗಳಿಗೆ ಸಮ್ಮತಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದೇವೆ ಎಂದು ಹೇಳಿದರು.
ಭೂಗರ್ಭ ರೈಲುಮಾರ್ಗದಿಂದಲೂ ಅರಣ್ಯ ಸಂಪತ್ತಿಗೆ ಸಮಸ್ಯೆ
ವನ್ಯಜೀವ ಸಂಪತ್ತಿಗೆ ತೊಂದರೆಯಾಗುತ್ತದೆ ಎಂದು ಹೇಳುತ್ತಿದ್ದಂತೆ ಪಿಣರಾಯಿ ವಿಜಯನ್ ಅವರು ಭೂಗತ ರೈಲು ಮಾರ್ಗ ನಿರ್ಮಿಸೋಣ. ಇದರಿಂದ ಯಾವುದೇ ತೊಂದರೆ ಆಗುವದಿಲ್ಲ ಎಂದು ಮನವೊಲಿಸಲು ಮುಂದಾದರು. ಆದರೆ ಈ ಭೂಗತ ರೈಲು ನಿರ್ಮಾನದಿಂದಲೂ, ಅದರ ಕಾಮಗಾರಿ ಚಟುವಟಿಕೆ ಸಂದರ್ಭದಲ್ಲಿ ಪರಿಸರಕ್ಕೆ ಹಾನಿಯಾಗುವುದು. ಆದ್ದರಿಂದ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿಸಿದ್ದೇನೆ ಎಂದರು.
ಪ್ರಸ್ತುತದಲ್ಲಿ ಕೇರಳಕ್ಕೆ ಬಂಡಿಪುರ ರಾಷ್ಟ್ರೀಯ ಉದ್ಯಾನದ ಮೂಲಕ ರಾತ್ರಿವೇಳೆ ಎರಡು ಬಸ್ಗಳು ಸಂಚರಿಸುತ್ತಿವೆ. ಅದನ್ನು ನಾಲ್ಕು ಬಸ್ಗಗಳಿಗೆ ಏರಿಸಬೇಕು ಎಂದು ಮನವಿ ಮಾಡಿದರು. ಆದರೆ ರಾತ್ರಿ ವೇಳೆ ಅಲ್ಲಿ ಸಂಚಾರಕ್ಕೆ ಅನುಮತಿ ಇಲ್ಲದ ಕಾರಣ ಹೀಗಾಗಿ ಆ ಮನವಿಗೂ ಅನುಮತಿ ನೀಡಿಲ್ಲ ಎಂದು ಬೊಮ್ಮಾಯಿ ತಿಳಿಸಿದರು.
ಬಿಜೆಪಿ ಪರಿಸರಕ್ಕೆ ವಿರದ್ಧದ ಯೋಜನೆಗೆ ಅನುಮತಿಸಲ್ಲ
ಇದೇ ವೇಳೆ ಪರಸರ ಸೂಕ್ಷ್ಮ ಪ್ರದೇಶ, ನಾಗರಹೊಳೆ, ಬಂಡಿಪುರ ರಾಷ್ಟ್ರೀಯ ಅಭಿಯಾರಣ್ಯ ಸೇರಿದಂತೆ ಪರಿಸರ ವಲಯದಲ್ಲಿ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಯಾವುದೇ ಸಂಸ್ಥೆಗಳು ಯೋಜನೆಗಳನ್ನು ಕೈಗೆತ್ತಿಕೊಂಡು ಬಂದರೂ ಅದಕ್ಕೆ ಅನುಮತಿ ಕೊಡುಗೆ ಪ್ರಶ್ನೆಯೇ ಉದ್ಬವಿಸಲ್ಲ. ರಾಜ್ಯ ಸರ್ಕಾರದಿಂದ ಪರಿಸರಕ್ಕೆ ಮಾರಕವಾದ ಯೋಜನೆ ಜಾರಿಗೊಳಿಸಲ್ಲ. ಇದೇ ನಿಟ್ಟಿನಲ್ಲಿ ಕೇರಳ ಸರ್ಕಾರ ಪ್ರಸ್ತಾಪಿಸಿದ ಮೂರು ಯೋಜನೆಗಳಿಗೆ ರಾಜ್ಯ ಸರ್ಕಾರದ ಸ್ಪಷ್ಟ ನಿಲುವು ಏನೆಂದು ತಿಳಿಸಿದ್ದೇವೆ ಎಂದು ಅವರು ಪುನರಚ್ಚರಿಸಿದರು.