ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿ ನಾವಿಲ್ಲ: ಎಂಬಿ ಪಾಟೀಲ್
ಬೆಂಗಳೂರು, ಮೇ.3: ಕರ್ನಾಟಕ ರಾಜ್ಯ ತಮಿಳುನಾಡಿಗೆ ಕಾವೇರಿ ನದಿಯಿಂದ ನೀರು ಬಿಡುಗಡೆ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ಕಾವೇರಿ ನದಿಯಿಂದ 4 ಟಿಎಂಸಿ ನೀರು ತಮಿಳುನಾಡಿಗೆ ಬಿಡುವಂತೆ ಸುಪ್ರೀಂಕೋರ್ಟ್ ಗುರುವಾರ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಕಾವೇರಿ ಕಣಿವೆಯಲ್ಲಿ ಬರುವ ನಾಲ್ಕು ಅಣೆಕಟ್ಟುಗಳು ಸೇರಿ ಕೇವಲ 9 ಟಿಎಂಸಿ ನೀರಿದೆ. ಆ 9 ಟಿಎಂಸಿ ನೀರು ನಮ್ಮ ಕುಡಿಯುವ ನೀರಿಗೆ ಮತ್ತು ಬೆಳೆಗಳಿಗೆ ಸಾಕಾಗುವುದಿಲ್ಲ ನಮಗೇ ಕೊರತೆ ಇದೆ.
ತಮಿಳುನಾಡಿಗೆ 4 ಟಿಎಂಸಿ ನೀರು ಬಿಡುವಂತೆ ಸುಪ್ರಿಂ ಆದೇಶ
ಈ ಜಲವರ್ಷದಲ್ಲಿ ಕರ್ನಾಟಕವು ತಮಿಳುನಾಡಿಗೆ ಹರಿಸಿರುವ ನೀರಿನ ಪ್ರಮಾಣ ಹಾಗೂ ಕರ್ನಾಟಕದ ಅಣೆಕಟ್ಟೆಗಳಲ್ಲಿ ಶೇಖರವಾಗಿರುವ ನೀರಿನ ಪ್ರಮಾಣದ ಮಾಹಿತಿಯುಳ್ಳ ಅಫಿಡವಿಟ್ ಅನ್ನು ಮುಂದಿನ ಮಂಗಳವಾರದ ಒಳಗೆ ಸಲ್ಲಿಸಲು ಸುಪ್ರಿಂ ಕೋರ್ಟ್ ಕರ್ನಾಟಕ್ಕೆ ಆದೇಶ ನೀಡಿದೆ. ಈ ಕುರಿತು ಸುಪ್ರೀಂಕೋರ್ಟ್ಗೆ ರಾಜ್ಯದಲ್ಲಿರುವ ನೀರಿನ ಸ್ಥಿತಿ ಕುರಿತು ಮನದಟ್ಟು ಮಾಡುವ ಅಗತ್ಯವಿದೆ.
ಹೀಗಿರುವಾಗ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ ಅದನ್ನು ಪಾಲನೆ ಮಾಡಲು ಸಾಧ್ಯವಿಲ್ಲ ಏಕೆಂದರೆ ನಮ್ಮ ಬಳಿ ನೀರಿಲ್ಲ. ಹೀಗಾಗಿ ನಾವು ನಮ್ಮ ರಾಜ್ಯದಲ್ಲಿರುವ ಒಟ್ಟು ನೀರಿನ ಬಗ್ಗೆ ಸುಪ್ರೀಂಕೋರ್ಟ್ಗೆ ತಿಳಿಸುತ್ತೇವೆ. ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲ.