ಸುಮಲತಾ, ರಮ್ಯಾ ಬಿಜೆಪಿಗೆ ಬಂದರೆ ಸ್ವಾಗತ; ಸಚಿವ ನಾರಾಯಣ ಗೌಡ
ಮಂಡ್ಯ, ಮೇ 15: "ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಷ್ ಮತ್ತು ಮಾಜಿ ಸಂಸದೆ ರಮ್ಯಾ ಬಿಜೆಪಿಗೆ ಬಂದರೇ ಭಾರತೀಯ ಜನತಾ ಪಕ್ಷ ಸ್ವಾಗತಿಸಲು ಸಿದ್ಧವಿದೆ" ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಮತ್ತು ಕ್ರೀಡಾ ಸಚಿವ ಕೆ. ಸಿ. ನಾರಾಯಣ ಗೌಡ ಹೇಳಿದರು.
ರಮ್ಯಾ ಮತ್ತು ಸುಮಲತಾ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, "ಅವರಿಬ್ಬರು ಪಕ್ಷಕ್ಕೆ ಬಂದರೆ ಸೇರಿಸಿಕೊಳ್ಳುವುದಕ್ಕೆ ನಾವು ಸಿದ್ಧರಿದ್ದೇವೆ. ಆದರೆ ಈ ವಿಚಾರದಲ್ಲಿ ಪಕ್ಷದ ಹಿರಿಯರ ನಿರ್ಧಾರ ಅಂತಿಮ. ಅವರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನುವುದನ್ನು ಬಿಡಿಸಿ ಹೇಳುವುದಕ್ಕಾಗಲ್ಲ. ಪಕ್ಷದಲ್ಲಾಗುತ್ತಿರುವ ಬೆಳವಣಿಗೆಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ಬಿಜೆಪಿ ರಾಜ್ಯ ಮತ್ತು ಮಂಡ್ಯದಲ್ಲಿ ಭದ್ರವಾಗಿದೆ" ಎಂದರು.
ಮೈಸೂರು ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಮುಂದಾಗಿರುವ ಬಿಜೆಪಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ಗೆ ಪಕ್ಷ ಸೇರ್ಪಡೆಗೆ ಆಹ್ವಾನ ನೀಡಿದೆ ಎಂದು ಮಾಜಿ ಸಚಿವ ಸಿ. ಪಿ. ಯೋಗೇಶ್ವರ್ ಬಹಿರಂಗವಾಗಿಯೇ ಹೇಳಿದ್ದರು.
2019ರ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಗೆಲುವಿನಲ್ಲಿ ಬಿಜೆಪಿ ಕೂಡ ಶ್ರಮಿಸಿತ್ತು. ಹಾಗಾಗಿ ಅವರನ್ನು ಮೈಸೂರು ಭಾಗದಲ್ಲಿ ಬಿಜೆಪಿ ಬಲವನ್ನು ಗಟ್ಟಿಗೊಳಿಸಲು ನೆರವು ನೀಡಿ ಎಂದು ಕೇಳಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದರು.
ಘಟನಾಘಟಿಗಳ ಸೇರ್ಪಡೆ ಸುಳಿವು; ಜಿ. ಟಿ. ದೇವೇಗೌಡ ಸೇರಿದಂತೆ ಮೈಸೂರಿನ ಪ್ರಮುಖ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಬಿಜೆಪಿಗೆ ಸೇರಲು ಸಿದ್ಧರಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದ್ದರು.
ಈಗಾಗಲೇ ಹಲವು ನಾಯಕರುಗಳು ಪಕ್ಷದ ಹಿರಿಯರ ಜೊತೆ ಸಂಪರ್ಕದಲ್ಲಿದ್ದು, ಶೀಘ್ರದಲ್ಲೇ ಬಿಜೆಪಿಗೆ ಸೇರಲಿದ್ದಾರೆ. ಆದರೆ ಪ್ರಸ್ತುತ ಹೆಸರುಗಳನ್ನು ಬಹಿರಂಗಗೊಳಿಸುವುದಿಲ್ಲ ಎಂದು ಅವರು ಶನಿವಾರ ತಿಳಿಸಿದ್ದರು.
ನಟಿ ರಮ್ಯಾ ಇತ್ತೀಚೆಗೆ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸಾಮಾಜಿಕ ಜಾಲಾತಾಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರುದ್ಧ ಟೀಕೆಗಳನ್ನು ಮಾಡಿ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ನಂತರ ತಮ್ಮನ್ನು ಸಾಮಾಜಿಕ ಜಾಲಾತಾಣದಲ್ಲಿ ಟ್ರೋಲ್ ಮಾಡಲೂ ಕೆಪಿಸಿಸಿ ಕಚೇರಿಯಿಂದ ಸಂದೇಶಗಳನ್ನು ರವಾನಿಸಲಾಗುತ್ತಿದೆ ಎಂದು ಕೆಲವು ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದರು.
ಕೈ ನಾಯಕರಿಂದ ಒತ್ತಡ; ರಮ್ಯಾ ಪಕ್ಷ ಮತ್ತು ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಟ್ವೀಟ್ ಮಾಡಿದ್ದರಿಂದ ಕೆಲವು ನಾಯಕರು ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿಯೂ ಇದೆ. ಈಗಾಗಲೇ ರಮ್ಯಾ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್, ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಬಿ. ಆರ್. ನಾಯ್ಡು ವಿರುದ್ಧ ಟ್ವೀಟ್ ಮಾಡಿರುವ ಬಗ್ಗೆ ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಪಕ್ಷದ ಕೆಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಕಾಂಗ್ರೆಸ್ನ ಗೊಂದಲಗಳನ್ನು ಉಪಯೋಗಿಸಿಕೊಂಡು ಬಿಜೆಪಿ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಆಧಿಪತ್ಯ ಸಾಧಿಸಲು ಅಪರೇಷನ್ ಕಮಲ ಮಾಡುವುದಕ್ಕೆ ತಯಾರಿ ನಡೆಸುತ್ತಿದೆ. ಚುನಾವಣೆ ನಡೆಯಲು ಇನ್ನೂ ಒಂದು ವರ್ಷಗಳ ಕಾಲ ಸಮಯಾಕಾಶವಿದ್ದು, ಈಗಿನಿಂದಲೇ ಪಕ್ಷವನ್ನು ಗಟ್ಟಿಗೊಳಿಸುವ ನಿರ್ಧಾರ ಮಾಡಿದೆ.
Recommended Video