ರಾಜ್ಯದಲ್ಲಿ ಅರ್ಧಶತಕ ದಾಟಿದ ಕೊರೊನಾ ಕೇಸ್; ಆತಂಕ ಹೊರಹಾಕಿದ ಸಚಿವ
ಬೆಂಗಳೂರು, ಮಾರ್ಚ್ 26; ಕಳೆದ ಮೂರು ದಿನಗಳಿಂದ ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕು ಹರಡುವ ವೇಗ ಹೆಚ್ಚಾಗಿದೆ. ಈಗ ನಮಗೂ ಆತಂಕ ಶುರುವಾಗಿದೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿಕೆ ಆತಂಕ ಮೂಡಿಸಿದೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10 ವರ್ಷದ ಒಳಗಿನ ಮಕ್ಕಳು ಹಾಗೂ 60 ದಾಟಿದವರಲ್ಲಿ ಹೆಚ್ಚಿನ ಸೋಂಕು ಕಾಣುತ್ತಿದೆ. 60 ವರ್ಷ ಮೇಲ್ಪಟ್ಟ ಹಿರಿಯರು ಮನೆಯಿಂದ ಹೊರ ಬಾರದಂತೆ ನೋಡಿಕೊಳ್ಳಬೇಕಿದೆ. ಸೋಂಕಿನ ಪ್ರಮಾಣ ಇಂದು ಸಂಜೆಗೆ ಎಷ್ಟಾಗುತ್ತೋ ಎಂದು ಆತಂಕ ಹೊರ ಹಾಕಿದರು.
ರಾಜ್ಯದಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 52 ಕ್ಕೆ ಏರಿದೆ. ಇಬ್ಬರು ಮೃತರಾಗಿದ್ದಾರೆ. ಗೌರಿಬಿದನೂರಿನಲ್ಲಿ ಒಂದು ಸಾವು ಆಗಿದೆ, ಅದನ್ನ ನಾವು ಕೋವಿಡ್-19, ಅಂತಾನೇ ಭಾವಿಸಿದ್ದೇವೆ. ಅಂತಿಮ ರಿಪೋರ್ಟ್ ಬಾರದಿದ್ದರು ಕೆಲವು ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಅಂತ್ಯಕ್ರಿಯೆ ಮಾಡಲಾಗಿದೆ.
ಕೊರೊನಾ ಹರಡುತ್ತಿರುವುದನ್ನು ನೋಡಿ ಇಟಲಿ ಸರ್ಕಾರ ಕೈ ಚೆಲ್ಲಿ ಕುಳಿತಿದೆ. ರಾಜ್ಯದಲ್ಲೂ ಏರಿಕೆಯಾಗುತ್ತಿದೆ. 1.25 ಲಕ್ಷದಷ್ಟು ಅಂತರರಾಷ್ಟ್ರೀಯ ವ್ಯಕ್ತಿಗಳನ್ನ ಕ್ವಾರಂಟೈನ್ ಮಾಡ್ತಿದ್ದೇವೆ. ಪತ್ತೆ, ಪರೀಕ್ಷೆ ಮತ್ತು ಚಿಕಿತ್ಸೆ ರೂಪದಲ್ಲಿ ಕಾರ್ಯ ಆರಂಭಿಸಿದ್ದೇವೆ ಎಂದರು.