ನಿನ್ನೆ ಕುಸ್ತಿ, ಇಂದು ದೋಸ್ತಿ: ವರಸೆ ಬದಲಿಸಿದ ಡಿಕೆಶಿ- ಎಂಬಿ ಪಾಟೀಲ್
ಬೆಂಗಳೂರು, ಆಗಸ್ಟ್ 17: ಟೆಲಿಫೋನ್ ಕದ್ದಾಲಿಕೆ ಆರೋಪದ ವಿಚಾರದಲ್ಲಿ ಶುಕ್ರವಾರ ಪರಸ್ಪರ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್, ಶನಿವಾರ ರಾಗ ಬದಲಿಸಿದ್ದಾರೆ. ತಾವಿಬ್ಬರೂ ದೋಸ್ತಿಗಳು, ತಮ್ಮ ಸ್ನೇಹವನ್ನು ಯಾರಿಗೂ ಮುರಿಯಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಡಿಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್ ಅವರ ನಡುವೆ ಫೋನ್ ಕದ್ದಾಲಿಕೆ ವಿಚಾರದಲ್ಲಿ ವಾಕ್ಸಮರ ನಡೆದಿತ್ತು. ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಎಂಬಿ ಪಾಟೀಲ್ ಖಾರವಾದ ಪ್ರತಿಕ್ರಿಯೆ ನೀಡಿದ್ದರು. ಇದರಿಂದ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿತ್ತು. ಈಗ ಇಬ್ಬರೂ ನಾಯಕರು ಅದನ್ನು ಸರಿಪಡಿಸಲು ಮುಂದಾಗಿದ್ದಾರೆ. ತಮ್ಮ ಹೇಳಿಕೆ, ಆರ್. ಅಶೋಕ್ ಅವರ ಕುರಿತಾಗಿತ್ತು ಎಂದು ಡಿಕೆ ಶಿವಕುಮಾರ್ ಸ್ಪಷ್ಟೀಕರಣ ನೀಡಿದ್ದರೆ, ಎಂಬಿ ಪಾಟೀಲ್ ಅದನ್ನು ಅನುಮೋದಿಸಿದ್ದಾರೆ.
ಎಂ.ಬಿ.ಪಾಟೀಲ್ - ನನ್ನ ನಡುವೆ ತಂದಿಡೋ ಕೆಲಸ ಯಾಕೆ? -ಡಿಕೆಶಿ
''ನಾನು ಎಂಬಿ ಪಾಟೀಲ್ ಅವರ ವಿರುದ್ಧ ಹೇಳಿಕೆ ನೀಡಿಲ್ಲ. ನಾನು ಹೇಳಿದ್ದು ಆರ್. ಅಶೋಕ್ ಅವರ ಕುರಿತು. ನಮ್ಮಿಬ್ಬರ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದಾರೆ, ನಮ್ಮ ಸ್ನೇಹ ಸಂಬಂಧವನ್ನು ಹಾಳು ಮಾಡಲು ಸಾಧ್ಯವಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಯಾವುದೇ ಫೋನ್ ಕದ್ದಾಲಿಕೆ ಮಾಡಿಲ್ಲ'' ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಅನವಶ್ಯಕವಾಗಿ ಗೊಂದಲ ಆಗಿದೆ
ಅತ್ತ ಎಂಬಿ ಪಾಟೀಲ್ ಕೂಡ ಡಿಕೆ ಶಿವಕುಮಾರ ವಿರುದ್ಧ ತೋರಿದ್ದ ಕೋಪವನ್ನು ಮಾಧ್ಯಮದತ್ತ ಹರಿಬಿಟ್ಟಿದ್ದಾರೆ. ''ಡಿಕೆ ಶಿವಕುಮಾರ್ ಅವರು ಹೇಳಿದ್ದು, ಆರ್. ಅಶೋಕ್ ಬಗ್ಗೆಯೇ ಹೊರತು ನನಗಲ್ಲ. ಮಾಧ್ಯಮಗಳಲ್ಲಿ ಈ ಬಗ್ಗೆ ತಪ್ಪು ಮಾಹಿತಿ ಪ್ರಚಾರವಾಗಿದೆ. ನಾನು ಮತ್ತು ಡಿಕೆ ಶಿವಕುಮಾರ್ ಉತ್ತಮ ಸ್ನೇಹಿತರು. ನಮ್ಮಿಬ್ಬರ ನಡುವೆ ಆಗಾಗ ಜುಗಲ್ ಬಂದಿ ನಡೆಯುತ್ತಿರುತ್ತದೆ. ಈ ವಿಚಾರವಾಗಿ ಡಿಕೆ ಶಿವಕುಮಾರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡುತ್ತೇನೆ. ಅನವಶ್ಯಕವಾಗಿ ನಮ್ಮ ನಡುವೆ ಈ ಗೊಂದಲ ಉಂಟಾಗಿದೆ. ಮಾಧ್ಯಮದವರು ಮಾಡಿರುವ ತಪ್ಪಿನಿಂದ ಈ ರೀತಿ ಆಗಿದೆ'' ಎಂದು ಎಂಬಿ ಪಾಟೀಲ ಆರೋಪಿಸಿದ್ದಾರೆ.
ಡಿಕೆ ಶಿವಕುಮಾರ್ ಹೇಳಿದ್ದೇನು?
ಫೋನ್ ಕದ್ದಾಲಿಕೆ ಕುರಿತು ಶುಕ್ರವಾರ ಪ್ರತಿಕ್ರಿಯೆ ನೀಡಿದ್ದ ಡಿಕೆ ಶಿವಕುಮಾರ್, ಯಾವ ಫೋನ್ ಕೂಡ ಟ್ಯಾಪಿಂಗ್ ಆಗಿಲ್ಲ. ಮಾಧ್ಯಮಗಳಿಗೆ ಈ ಮಾಹಿತಿ ಹೇಗೆ ಸಿಕ್ಕಿತೋ ಗೊತ್ತಿಲ್ಲ. ಇದರ ಬಗ್ಗೆ ಯಾವ ತನಿಖೆ ಬೇಕಾದರೂ ಮಾಡಲಿ. ಫೋನ್ ಟ್ಯಾಪಿಂಗ್ ಬಗ್ಗೆ ಆರ್. ಅಶೋಕ್ ಆರೋಪ ಮಾಡಿದ್ದಾರೆ. ಹಿಂದಿನ ಗೃಹಸಚಿವರಿಗೆ ರಾಜಕಾರಣ ಬೇಕಿದೆ. ಪಾಟೀಲ್ ಸಾಹೇಬ್ರು ಈ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಮೇಲೆ ರೇಡ್ಗಳು ನಡೆದಿವೆ. ಆಗ ನಮ್ಮ ಮೇಲೆ ಸುಖಾಸುಮ್ಮನೆ ಟ್ಯಾಪಿಂಗ್ ಮಾಡಿದ್ದರಾ? ಎಂದು ಪ್ರಶ್ನಿಸಿದ್ದರು.
ಫೋನ್ ಟ್ಯಾಪಿಂಗ್ : ಸಿದ್ದರಾಮಯ್ಯ ವಿರುದ್ದ 'ಎಚ್ಡಿಕೆ - ಡಿಕೆಶಿ' ಒಂದಾದಾಗ!
ದೇವೇಗೌಡರ ಕುಟುಂಬ ಓಲೈಕೆ ಏಕೆ?
''ಕೆಲವು ಅಧಿಕಾರಿಗಳು ಫೋನ್ ಕದ್ದಾಲಿಕೆ ನಡೆದಿಲ್ಲ ಎಂದಿದ್ದರು, ಇನ್ನು ಕೆಲವು ಅಧಿಕಾರಿಗಳು ನಡೆದಿರುವ ಬಗ್ಗೆ ಅನುಮಾನ ಇದೆ ಎಂದಿದ್ದರು. ಹೀಗಾಗಿ ತನಿಖೆ ನಡೆಯಲಿ. ಮೂರು ತಿಂಗಳಲ್ಲಿ ವರದಿ ಕೊಡಲಿ. ಫೋನ್ ಕದ್ದಾಲಿಕೆ ನಡೆದಿದೆ ಎಂದಾದರೆ ಅವರನ್ನು ಪತ್ತೆಹಚ್ಚಲಿ. ಡಿಕೆ ಶಿವಕುಮಾರ್ ಅವರು ಯಾವ ಕಾರಣಕ್ಕೆ ದೇವೇಗೌಡರ ಕುಟುಂಬದ ಪರ ಒಲವು ತೋರಿಸುತ್ತಿದ್ದಾರೆಯೋ ಗೊತ್ತಿಲ್ಲ. ಜಾತಿ ಆಧಾರದಲ್ಲಿ ರಾಜಕಾರಣ ಮಾಡಿ ಓಲೈಕೆ ಮಾಡುತ್ತಿದ್ದಾರೆ'' ಎಂದು ಎಂಬಿ ಪಾಟೀಲ್ ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದ್ದರು.
ಸಿದ್ದರಾಮಯ್ಯ ಅವರದು ವೈಯಕ್ತಿಕ ಅಭಿಪ್ರಾಯ
''ನಾನು ಗೃಹ ಸಚಿವನಾಗಿದ್ದಾಗ ಫೋನ್ ಕದ್ದಾಲಿಕೆ ಕುರಿತು ಯಾವ ಅಧಿಕಾರಿಗಳೂ ನನ್ನೊಂದಿಗೆ ಮಾಹಿತಿ ಹಂಚಿಕೊಂಡಿಲ್ಲ. ನನ್ನ ಆಪ್ತ ಕಾರ್ಯದರ್ಶಿ ಭೀಮಾಶಂಕರ್ ಮತ್ತು ವಿಶೇಷ ಅಧಿಕಾರಿಯಾಗಿದ್ದ ಶಶಿ ಅವರ ಫೋನ್ಗಳನ್ನು ಟ್ಯಾಪ್ ಮಾಡಲಾಗಿದೆ ಎಂದು ವರದಿಯಾಗಿದೆ. ಫೋನ್ ಕದ್ದಾಲಿಕೆ ಅಷ್ಟು ಸುಲಭವಾದ ಕೆಲಸವಲ್ಲ. ಹೀಗಾಗಿ ಅದು ನಡೆದಿರಲು ಸಾಧ್ಯವಿಲ್ಲ. ನಾನು ತಪ್ಪು ಮಾಡಿದ್ದರೆ ನನಗೂ ಶಿಕ್ಷೆಯಾಗಲಿ. ಸಿದ್ದರಾಮಯ್ಯ ಅವರು ನೀಡಿರುವ ಅವರ ವೈಯಕ್ತಿಕ ಅಭಿಪ್ರಾಯ. ಸಿದ್ದರಾಮಯ್ಯ ಅವರ ಸಹಾಯಕ ವೆಂಕಟೇಶ್ ಅವರ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ತನಿಖೆಗೆ ಒತ್ತಾಯಿಸಿದ್ದಾರೆ. ಸಿಬಿಐ ತನಿಖೆ ಬಗ್ಗೆ ನನಗೆ ನಂಬಿಕೆಯಿಲ್ಲ. ರಾಜ್ಯದಲ್ಲಿಯೇ ಸಮರ್ಥ ಅಧಿಕಾರಿಗಳಿದ್ದಾರೆ. ಅವರೇ ತನಿಖೆ ನಡೆಸಲಿ'' ಎಂದು ಎಂಬಿ ಪಾಟೀಲ್ ಹೇಳಿದ್ದಾರೆ.