ಉಡುಪಿಯ ಕೃಷ್ಣ ಕನಕರ ಭಕ್ತಿಗೆ ಪಶ್ಚಿಮಕ್ಕೆ ತಿರುಗಿದ್ದು ಹೌದೆ?
Recommended Video
ಕನಕ ದಾಸರ ಭಕ್ತಿಗೆ ಒಲಿದು ಉಡುಪಿಯಲ್ಲಿನ ಕೃಷ್ಣ ಪಶ್ಚಿಮಕ್ಕೆ ತಿರುಗಿದ್ದು ಸತ್ಯ ಎಂದು ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು ಉಡುಪಿಯಲ್ಲಿ ಸೋಮವಾರ ಕನಕ ಜಯಂತಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಅದೇ ವೇಳೆ ಈ ಮಾತನ್ನು ಪ್ರಗತಿಪರರೂ ಒಪ್ಪುವುದಿಲ್ಲ ಹಾಗೂ ಸನಾತನಿಗಳು ಸಹ ಮಾನ್ಯ ಮಾಡುವುದಿಲ್ಲ ಎಂದು ಕೂಡ ಹೇಳಿದ್ದಾರೆ.
ಕನಕದಾಸರ ಭಕ್ತಿಗೆ ಒಲಿದ ಕೃಷ್ಣ ಪೂರ್ವ ದಿಕ್ಕಿಗೆ ಮುಖ ಮಾಡಿದ್ದವನು ಪಶ್ಚಿಮಕ್ಕೆ ತಿರುಗಿದ ಎಂಬ ಬಗ್ಗೆಯೇ ಹಲವು ವಾದ- ಪ್ರತಿ ವಾದಗಳಿವೆ. ಉಡುಪಿಯ ಕೃಷ್ಣ ವಿಗ್ರಹ ಇದ್ದದ್ದೇ ಪಶ್ಚಿಮ ದಿಕ್ಕಿಗೆ. ಅದರಲ್ಲಿ ತಿರುಗುವ ಮಾತೇ ಇಲ್ಲ ಎಂದು ವಾದಿಸುವವರು ಕೂಡ ಇದ್ದಾರೆ. ಒಟ್ಟಾರೆ ಕೃಷ್ಣ ವಿಗ್ರಹ ಪಶ್ಚಿಮಕ್ಕೆ ತಿರುಗಿದ ವಿಚಾರವೇ ಚರ್ಚಾ ವಸ್ತು.
ಕನಕರ ಭಕ್ತಿಗೆ ಒಲಿದು ಕೃಷ್ಣ ಪಶ್ಚಿಮಕ್ಕೆ ತಿರುಗಿದ್ದು ಸತ್ಯ: ಪೇಜಾವರ ಶ್ರೀ
ಹೀಗಿರುವಾಗ ಸೋಮವಾರ ಪೇಜಾವರ ಶ್ರೀಗಳು ನೀಡಿದ ಹೇಳಿಕೆ ಮತ್ತೆ ಚರ್ಚೆಗೆ ಕಾರಣವಾಗಿದೆ. ಅದಕ್ಕಾಗಿ ಅವರು ಯತಿಗಳಾದ ವಾದಿರಾಜರ ಹಾಡೊಂದು ಸಾಕ್ಷಿಯಾಗಿದೆ ಅಂತಲೂ ಹೇಳಿದ್ದು, ಇನ್ನು ಮುಂದೆ ಈ ಬಗ್ಗೆ ಯಾವುದೇ ವಾದ- ವಿವಾದ ಬೇಡ ಅಂತಲೂ ಸೇರಿಸಿದ್ದಾರೆ. ಆದರೆ ಈ ಬಗ್ಗೆ ಧಾರ್ಮಿಕ ಚಿಂತಕರಲ್ಲೇ ಭಿನ್ನವಾದ ಅಭಿಪ್ರಾಯ ಕೇಳಿಬಂದಿದೆ.
ಆ ಅಭಿಪ್ರಾಯಗಳನ್ನು ತಿಳಿಯಲು ಮುಂದೆ ಓದಿ.
ಭಕ್ತ ಕನಕ ದಾಸ ಸಿನಿಮಾ ಬಿಡುಗಡೆ ನಂತರದ ವಾದ
ಉಡುಪಿಯ ಶ್ರೀಕೃಷ್ಣ ಪಶ್ಚಿಮಕ್ಕೆ ತಿರುಗಿದ ಎಂಬ ವಿಚಾರ ಆರಂಭವಾಗಿದ್ದೇ ರಾಜಕುಮಾರ್ ನಟಿಸಿದ್ದ ಭಕ್ತ ಕನಕ ದಾಸ ಸಿನಿಮಾ ಬಿಡುಗಡೆ ಆದ ಮೇಲೆ. ಮಧ್ವಾಚಾರ್ಯರ ತಂತ್ರಸಾರ ಸಂಗ್ರಹದಲ್ಲಿ ದೇವಾಲಯ ವಾಸ್ತುಗಳ ಬಗ್ಗೆ ಪ್ರಸ್ತಾಪವಾಗಿದ್ದು, ಆ ಪ್ರಕಾರ ವಿಗ್ರಹ ಇದ್ದಿದೇ ಪಶ್ಚಿಮಾಭಿಮುಖವಾಗಿ ಎಂಬುದು ಸತ್ಯ ಎನ್ನುತ್ತಾರೆ ಸಂಸ್ಕೃತ ವಿದ್ವಾಂಸರು ಹಾಗೂ ಧಾರ್ಮಿಕ ಚಿಂತಕರಾದ ಭೀಮಸೇನಾಚಾರ್ ಅತನೂರು.
ಮೇಲುಕೋಟೆಯಲ್ಲಿದ್ದರೆ ಕನಕ ದಾಸರು?
ಇನ್ನೂ ಕೆಲವರು ವಾದ ಮಾಡುವ ಪ್ರಕಾರ ಕನಕ ದಾಸರು ಇದ್ದದ್ದು ಮೇಲುಕೋಟೆಯಲ್ಲಿ. ಅವರ ಕೀರ್ತನೆಗಳು ರಚನೆಯಾದದ್ದು ಮೇಲುಕೋಟೆ ಚೆಲುವನಾರಾಯಣನ ಬಗ್ಗೆಯೇ. ಉಡುಪಿಯ ದೇವಾಲಯ ಹಾಗೂ ಕೃಷ್ಣನ ವಿಚಾರವನ್ನು ಎಳೆದು ತರಲಾಗಿದೆ ಎಂಬ ವಾದವನ್ನು ಶ್ರೀವೈಷ್ಣವರು ಮುಂದಿಡುತ್ತಾರೆ.
ಷಣ್ಮುಖ ದೇವಾಲಯ ಎಂಬ ವಾದ
ಈ ಹಿಂದೆ ಉಡುಪಿಯದು ಕೃಷ್ಣ ಮಠವೇ ಅಲ್ಲ, ಅದೊಂದು ಷಣ್ಮುಖ ದೇವಸ್ಥಾನ. ದೇವಾಲಯದ ವಾಸ್ತು ಹಾಗೂ ವಿಗ್ರಹದ ಪ್ರಮಾಣ ಎಲ್ಲವನ್ನೂ ಗಮನಿಸಿದರೆ ಷಣ್ಮುಖ ದೇವಾಲಯ ಎಂದು ತಿಳಿದುಬರುತ್ತದೆ ಎಂದು ದೇವಾಲಯ ವಾಸ್ತುಶಾಸ್ತ್ರಜ್ಞರು ಕೆಲವರು ವಾದ ಮಂಡಿಸಿದ್ದರು.
ಐತಿಹಾಸಿಕ ದಾಖಲೆ ಇದ್ದಲ್ಲಿ ಬಯಲಾಗಲಿ
ಕನಕ ದಾಸರ ಕಾಲಘಟ್ಟದಲ್ಲೇ ಇದ್ದ ಪುರಂದರ ದಾಸರಿಗೆ ಮಾನ್ಯತೆ ಸಿಕ್ಕಿತು. ಮತ್ತು ಅವರ ಪವಾಡಗಳನ್ನು ಒಪ್ಪಿಕೊಂಡಂತೆ ಕನಕರನ್ನು ಒಪ್ಪಲು ಹಿಂದೆ ಮುಂದೆ ಯೋಚಿಸುತ್ತಾರೆ ಎಂದು ಪೇಜಾವರ ಶ್ರೀಗಳೇ ಹೇಳಿದ್ದಾರೆ. ಕನಕರ ಭಕ್ತಿಗೆ ಮೆಚ್ಚಿ ಕೃಷ್ಣ ವಿಗ್ರಹ ಪಶ್ಚಿಮಕ್ಕೆ ತಿರುಗಿದ್ದು ಹೌದಾ ಎಂಬ ಬಗ್ಗೆ ಐತಿಹಾಸಿಕ ದಾಖಲೆಗಳು ಇದ್ದಲ್ಲಿ ಅದು ಬಹಿರಂಗ ಆಗಬೇಕಿದೆ. ಈ ವಿಚಾರದಲ್ಲಿ ಇನ್ನಷ್ಟು ಚರ್ಚೆಗಳು ನಡೆಯಬೇಕಿದೆ.