ಸಿದ್ದರಾಮಯ್ಯ Vs ಕುಮಾರಸ್ವಾಮಿ: ಅವರಾ? ಇವರಾ?
ಬೆಂಗಳೂರು, ಫೆಬ್ರವರಿ 7: ವಿಧಾನಸಭೆ ಚುನಾವಣೆಯ ವೇಳೆ ಕಂಡುಬಂದಿದ್ದ ಸಿದ್ದರಾಮಯ್ಯ Vs ಎಚ್ ಡಿ ಕುಮಾರಸ್ವಾಮಿ ಮಾತಿನ ಸಮರ ಮತ್ತೆ ಮುನ್ನೆಲೆಗೆ ಬಂದಿದೆ. ಸಮ್ಮಿಶ್ರ ಸರ್ಕಾರದುದ್ದಕ್ಕೂ ಇಬ್ಬರೂ ಪರಸ್ಪರ ದೋಷಾರೋಪ ಹೊರಿಸುವುದು ಮತ್ತು ಟೀಕಿಸುವುದನ್ನು ಬಲವಂತವಾಗಿ ಹತ್ತಿಕ್ಕಿಕೊಂಡಿದ್ದರು. ಉಪ ಚುನಾವಣೆಯ ವೇಳೆಯಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮುಂದುವರಿದಿದ್ದರಿಂದ ಮಾಜಿ ಮುಖ್ಯಮಂತ್ರಿಗಳ ಕದನ ನಡೆದಿರಲಿಲ್ಲ. ಯಡಿಯೂರಪ್ಪ ಸರ್ಕಾರದೆಡೆಗೆ ಇದ್ದ ಇಬ್ಬರ ಗಮನ ಈಗ ಪರಸ್ಪರರ ಮೇಲೆಯೇ ನೆಟ್ಟಿದೆ.
ಸಿದ್ದರಾಮಯ್ಯ ಅವರು ಯಡಿಯೂರಪ್ಪ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ. ನಾನು ಮುಖ್ಯಮಂತ್ರಿಯಾಗಿ 14 ತಿಂಗಳು ಸಂಕಷ್ಟ ಅನುಭವಿಸುವಾಗ ಅವರು ಒಮ್ಮೆಯೂ ಅನುಕಂಪ ವ್ಯಕ್ತಪಡಿಸಿದ್ದನ್ನು ನೋಡಿರಲಿಲ್ಲ ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.
ಕುಮಾರಸ್ವಾಮಿಗೆ ಬಿಜೆಪಿ ಸೇರುವ ಆಸೆ ಇದ್ದರೆ ನಾನೇ ಕರೆತರುತ್ತೇನೆ: ಬಿಸಿ ಪಾಟೀಲ್
ನನಗೆ ಮತ್ತೊಮ್ಮೆ ಅಧಿಕಾರ ನೀಡಿ, ಕೆಲಸ ಮಾಡಿ ತೋರಿಸುತ್ತೇನೆ ಎಂದು ಕುಮಾರಸ್ವಾಮಿ ಜನರಿಗೆ ಕೋರಿದ್ದರು. ಇದಕ್ಕೆ ಸಿದ್ದರಾಮಯ್ಯ, ನನಗೆ ಆಶೀರ್ವಾದ ಮಾಡಿ ಎಂದು ಕೇಳಿದ ಕೂಡಲೇ ಜನರು ಕೊಡಬೇಕಲ್ಲ. 14 ತಿಂಗಳು ಸರ್ಕಾರ ಇದ್ದಾಗ ಕೆಲಸ ಮಾಡಬೇಕಿತ್ತಲ್ಲ. ಅವರು ಮತ್ತೆ ಸಿಎಂ ಆಗೋದು ಸಾಧ್ಯವಾಗದ ಮಾತು ಬಿಡಿ ಎಂದು ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಬರುತ್ತಲೇ ಇರಲಿಲ್ಲ
ನನಗೆ ಅಧಿಕಾರ ನೀಡುವುದು ಜನರೇ ವಿನಾ ಸಿದ್ದರಾಮಯ್ಯ ಅಲ್ಲ. ನಾನು ಯಾರ ಮನೆಬಾಗಿಲಿಗೂ ಹೋಗಿ ಅಧಿಕಾರ ಕೊಡಿ ಎಂದು ಕೇಳಿಲ್ಲ. ಸಿದ್ದರಾಮಯ್ಯ ಅವರಿಂದ ಸರ್ಟಿಫಿಕೇಟ್ ತೆಗೆದುಕೊಳ್ಳಬೇಕಿಲ್ಲ. ನಾನು ಸಿಎಂ ಆಗಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಆಗ ಯಡಿಯೂರಪ್ಪ ಬಿಜೆಪಿ ಬಿಡದೆ ಹೋಗಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿರಲಿಲ್ಲ. ಸಿದ್ದರಾಮಯ್ಯ ಹಿಂದಿನದ್ದೆನ್ನಲ್ಲ ನೆನಪಿಸಿಕೊಳ್ಳಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಬಾದಾಮಿಗೆ ಹಣ ಕೊಟ್ಟಿದ್ದು ನಾನು
ಅವರು ಐದು ವರ್ಷ ಆಡಳಿತ ನಡೆಸಿದಾಗ ಒಳ್ಳೆ ಕೆಲಸ ಮಾಡಿದ್ದರೆ ಕಳೆದ ಚುನಾವಣೆಯಲ್ಲಿ 78 ಸ್ಥಾನಕ್ಕೆ ಹೇಗೆ ಕುಸಿಯುತ್ತಿದ್ದರು? ಯಡಿಯೂರಪ್ಪ ಕೆಜೆಪಿ ಕಟ್ಟಿದ್ದರಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಅಭಿವೃದ್ಧಿ ವಿಚಾರದಲ್ಲಿ ನಾನು ಬಹಿರಂಗ ಚರ್ಚೆಗೆ ಸಿದ್ಧ. ಬಾದಾಮಿಯಲ್ಲಿ ಸಿದ್ದರಾಮಯ್ಯ ಕಳೆದ ಮೂರು ದಿನಗಳಿಂದ ವಿವಿಧ ಯೋಜನೆಗಳಿಗೆ ಫೌಂಡೇಷನ್ ಹಾಕಿದ್ದಾರಲ್ಲ, ಅವುಗಳಿಗೆ ಹಣ ಬಿಡುಗಡೆ ಮಾಡಿದ್ದು ನಾನು. ಹಳ್ಳಿಗಳಿಗೆ ನೀರು ಕೊಡುವ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದು ಯಾರು? ಅವುಗಳನ್ನು ಅವರು ಮನವರಿಕೆ ಮಾಡಿಕೊಳ್ಳಲಿ ಎಂದು ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದ್ದಾರೆ.
ಸಂಪುಟ ವಿಸ್ತರಣೆ; "ಮುಂದೇನಾಗುತ್ತೋ ನೋಡ್ತಿರಿ" ಎಂದ ಮಾಜಿ ಸಿಎಂ
ಏನು ಹೇಳುತ್ತಾರೋ ಅವರಿಗೇ ಗೊತ್ತಿಲ್ಲ
ಕುಮಾರಸ್ವಾಮಿ ಯಾವಾಗ ಏನು ಹೇಳುತ್ತಾರೋ ಗೊತ್ತಾಗುವುದಿಲ್ಲ. ಇದೇ ಕುಮಾರಸ್ವಾಮಿ ಮತ್ತು ದೇವೇಗೌಡರು, ಯಡಿಯೂರಪ್ಪ ಸರ್ಕಾರ ಬೀಳಲು ಬಿಡುವುದಿಲ್ಲ ಎಂದು ಹೇಳಿದ್ದರು. ಈಗ ಯಡಿಯೂರಪ್ಪ ಸರ್ಕಾರವನ್ನು ನಾನು ಉರುಳಿಸಿ ಮತ್ತೆ ಸಿಎಂ ಆಗುತ್ತೇನೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಇವರ ಸಂಖ್ಯೆ ಇಳಿದಿದ್ದು ಹೇಗೆ?
ಕಾಂಗ್ರೆಸ್ ಸರ್ಕಾರ ಸರಿಯಾಗಿ ಕೆಲಸ ಮಾಡಿದ್ದರೆ ಅವರ ಸಂಖ್ಯೆ ಇಳಿಯುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ ಇವರು ಬುದ್ಧಿವಂತರಾಗಿದ್ದರೆ 2004ರಲ್ಲಿ 59 ಸಂಖ್ಯೆ ಹೊಂದಿದ್ದವರು 2008ರಲ್ಲಿ 28ಕ್ಕೆ ಬಂದಿದ್ದು ಹೇಗೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.