ವಿಶ್ವನಾಥ್ Vs ಸಿದ್ದರಾಮಯ್ಯ ಹಿಂದಿನ ಅಸಲಿಯತ್ತು ಬೇರೆಯೇ ಇದೆ!?
Recommended Video
ಅರರೇ.. ಸರಳ, ಸೌಮ್ಯ ಸ್ವಭಾವದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಹೀಗೂ ನಿಷ್ಠುರವಾಗಿ ಮಾತನಾಡಬಲ್ಲರೇ ಎಂದು ಜನಸಾಮಾನ್ಯರ ಜೊತೆ ಮೈತ್ರಿ ಪಕ್ಷದವರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ನಡೆಯುತ್ತಿದೆ ಸದ್ಯದ ರಾಜಕೀಯ ವಿದ್ಯಮಾನ.
ವಿಶ್ವನಾಥ್ ಮತ್ತು ಸಿದ್ದರಾಮಯ್ಯ ನಡುವಣ ರಾಜಕೀಯ ಮುನಿಸಿಗೆ ದಶಕಗಳ ಇತಿಹಾಸವಿರುವುದು ಗೊತ್ತಿರುವ ವಿಚಾರ, ಆದರೆ ಮೈತ್ರಿಧರ್ಮ ಪರಿಪಾಲನೆಯ ಈ ಹೊತ್ತಿನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಿಂದಲೇ ಸಾಲುಸಾಲು ಕೆಣಕುವ ಮಾತುಗಳು ಹೊರಬೀಳುತ್ತಿರುವುದು ಗಮನಿಸಬೇಕಾದ ವಿಚಾರ.
ಈ ಆರೋಪ/ಪ್ರತ್ಯಾರೋಪದ ಮೂಲವನ್ನು ಕೆದಕಿದಾಗ, ಕಾಂಗ್ರೆಸ್ಸಿನ ಒಂದು ಬಣ, ಲೋಕಸಭಾ ಚುನಾವಣೆ ಮತ್ತು ಸಿದ್ದರಾಮಯ್ಯನವರನ್ನು ಮತ್ತೆ ಮುಖ್ಯಮಂತ್ರಿಯಾಗಬೇಕೆಂದು ನೋಡಲು ಬಯಸುತ್ತೇವೆ ಎಂದು ಯಾವಾಗ ಹೇಳಲಾರಂಭಿಸಿದರೋ, ಅಲ್ಲಿಂದ, ಜೆಡಿಎಸ್ ಪಕ್ಷದ ಮುಖಂಡರ ಹೇಳಿಕೆಗಳು ಒಂದೊಂದೇ ಬಿಲದಿಂದ ಹೊರಬರಲಾರಂಭಿಸಿತು.
ಕೈಲಾಗದವರ ಜೊತೆ ವಾದ ಇಲ್ಲ:ವಿಶ್ವನಾಥ್ಗೆ ಸಿದ್ದರಾಮಯ್ಯ ಟ್ವೀಟ್ ಏಟು
ಮೊದಲು ಜಿ ಟಿ ದೇವೇಗೌಡ ನಂತರ ಸಾ.ರಾ.ಮಹೇಶ್, ಮೈಸೂರು ಚುನಾವಣೆಯ ಬಗ್ಗೆ ಮಾತನಾಡಲಾರಂಭಿಸಿದರು. ಇದಾದ ನಂತರ ಸಿ ಎಸ್ ಪುಟ್ಟರಾಜು ಕೂಡಾ ಸರಕಾರ ಪತನವಾದರೆ ಅದಕ್ಕೆ ಸಿದ್ದರಾಮಯ್ಯನವರೇ ಕಾರಣ ಎಂದು ಬಹಿರಂಗವಾಗಿಯೇ ಹೇಳಿಕೆಯನ್ನು ನೀಡಿದರು. ಇದಾದ ನಂತರವೇ ರಂಗಪ್ರವೇಶಿಸಿದ್ದು ಎಚ್ ವಿಶ್ವನಾಥ್. ಇವರ ಹಿಂದಿನ ಸೂತ್ರಧಾರ ಯಾರಿರಬಹುದು?
ಈಗ ನಡೆಯುತ್ತಿರುವ ಬೆಳವಣಿಗೆಗಳು ಬೇರೆಯೇ ಆಯಾಮದತ್ತ ಸಾಗುತ್ತಿದೆ
ಸಮ್ಮಿಶ್ರ ಸರಕಾರ ಆರಂಭದ ದಿನಗಳಲ್ಲಿ ಅಸ್ತಿತ್ವಕ್ಕೆ ಬಂದ ಸಮನ್ವಯ ಸಮಿತಿಯಲ್ಲಿ ತನ್ನನ್ನು ಸದಸ್ಯರನ್ನಾಗಿ ಮಾಡಲು ಸಿದ್ದರಾಮಯ್ಯ ಅಡ್ದಗಾಲು ಹಾಕುತ್ತಿದ್ದಾರೆ ಎನ್ನುವ ಕೋಪ ಎಚ್ ವಿಶ್ವನಾಥ್ ಅವರಿಗಿತ್ತು. ಆದರೆ, ಅದು ಅಷ್ಟೇನೂ ಬಹಿರಂಗವಾಗಿರಲಿಲ್ಲ, ಜೊತೆಗೆ ಅವರಿಗೆ ಆರೋಗ್ಯದ ಸಮಸ್ಯೆಯೂ ಎದುರಾಗಿತ್ತು. ಈ ಹಿಂದೆ ಕೂಡಾ, ಹಲವು ವೇದಿಕೆಗಳಲ್ಲಿ ಸಣ್ಣದಾಗಿ ತನ್ನ ಸಿಟ್ಟನ್ನು ಸಿದ್ದರಾಮಯ್ಯ ವಿರುದ್ದ ವಿಶ್ವನಾಥ್ ತೋರುತ್ತಿದ್ದರೂ, ಈಗ ನಡೆಯುತ್ತಿರುವ ಬೆಳವಣಿಗೆಗಳು ಬೇರೆಯೇ ಆಯಾಮದತ್ತ ಸಾಗುತ್ತಿದೆ.
'ಸಿದ್ದರಾಮಯ್ಯ ಸಿಎಂ ಆಗಲೆಂದು ಕೆಲವರು ಚಮಚಾಗಿರಿ ಮಾಡುತ್ತಿದ್ದಾರೆ'
ಶಿವರಾಮೇಗೌಡ, ಮನಬಂದಂತೆ ಸುಮಲತಾ ವಿರುದ್ದ ವಾಗ್ದಾಳಿ
ಮಂಡ್ಯ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆಯೂ ಹಾಲೀ ಜೆಡಿಎಸ್ ಸಂಸದ ಶಿವರಾಮೇಗೌಡ, ಮನಬಂದಂತೆ ಸುಮಲತಾ ವಿರುದ್ದ ವಾಗ್ದಾಳಿ ನಡೆಸುತ್ತಿದ್ದರೂ, ದೇವೇಗೌಡರಾಗಲಿ, ಕುಮಾರಸ್ವಾಮಿಯಾಗಲಿ ಎಚ್ಚರಿಸುವ ಕೆಲಸವನ್ನು ಮಾಡಿರಲಿಲ್ಲ. ದೇವೇಗೌಡರ ಅಣತಿಯಂತೆಯೇ ಶಿವರಾಮೇಗೌಡರು ಮಾತನಾಡುತ್ತಿದ್ದಾರೆಂದು ಲೀಕ್ ಆದ ವಿಡಿಯೋದಲ್ಲಿ ಅವರ ಮಗ ಹೇಳಿದ್ದು ಭಾರೀ ಸುದ್ದಿಯಾಗಿತ್ತು.
ಸಿದ್ದರಾಮಯ್ಯನವರ ವಿರುದ್ದ ತಿರುಗಿಬೀಳುತ್ತಿರುವ ಹಿಂದೆ ಗೌಡರ ಅಭಯಹಸ್ತ
ಈ ಹಿಂದೆ ಸಿದ್ದರಾಮಯ್ಯನವರೇ ನಮ್ಮ ನಾಯಕ, ಸಿಎಂ ಎಂದು ಅವರ ಆಪ್ತರ ಬಣ ಬಹಿರಂಗ ಹೇಳಿಕೆ ನೀಡಿದ್ದಾಗ, ಗರಂ ಆಗಿದ್ದ ಕುಮಾರಸ್ವಾಮಿ, ರಾಹುಲ್ ಗಾಂಧಿ ಬಳಿ ತಮ್ಮ ದೂರನ್ನು ನೀಡಿದ್ದರು. ಆಗ ಸ್ವಲ್ಪದಿನ ಅದು ತಣ್ಣಗಾಗಿತ್ತು, ಅದಾದ ನಂತರ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದ ನಂತರ ಅದು ಇನ್ನಷ್ಟು ಕ್ಷೀಣಿಸಿತ್ತು. ಆ ಕೂಗು ಈಗ ಸಿದ್ದರಾಮಯ್ಯನವರ ಆಪ್ತರಿಂದ ಮತ್ತೆ ಬರಲಾರಂಭಿಸುತ್ತಿದ್ದಂತೆಯೇ, ಜೆಡಿಎಸ್ ರಾಜ್ಯಾಧ್ಯಕ್ಷರೇ ಸಿದ್ದರಾಮಯ್ಯನವರ ವಿರುದ್ದ ತಿರುಗಿಬೀಳುತ್ತಿರುವ ಹಿಂದೆ ದೊಡ್ಡಗೌಡರ ಅಭಯಹಸ್ತವಿದೆಯಾ ಎನ್ನುವ ಪ್ರಶ್ನೆ ದಟ್ಟವಾಗಿ ಕಾಡಲಾರಂಭಿಸಿದೆ.
ದೇವೇಗೌಡರ ಅಥವಾ ಕುಮಾರಸ್ವಾಮಿಯ ಅಣತಿಯಂತೆಯೇ ಕೆಲಸ
ಜೆಡಿಎಸ್ ರಾಜ್ಯಾಧ್ಯಕ್ಷರಾದ ನಂತರ ದೇವೇಗೌಡರ ಅಥವಾ ಕುಮಾರಸ್ವಾಮಿಯ ಅಣತಿಯಂತೆಯೇ ಕೆಲಸ ಮಾಡಿಕೊಂಡು ಬರುತ್ತಿದ್ದ ಎಚ್ ವಿಶ್ವನಾಥ್, ಇಷ್ಟು ತೀಕ್ಷ್ಣವಾಗಿ ಸಿದ್ದರಾಮಯ್ಯನವರ ವಿರುದ್ದ ಕಿಡಿಕಾರುತ್ತಿದ್ದಾರೆಂದರೆ ಅವರ ಹಿಂದೆ ಇನ್ನೊಬ್ಬರಿದ್ದಾರೆ ಎನ್ನುವುದು ಎರಡು ವಲಯದಲ್ಲಿ ಕೇಳಿಬರುತ್ತಿರುವ ಮಾತು. ಅದೂ, ಸಿದ್ದರಾಮಯ್ಯನವರ ವಿರುದ್ದವೇ ವಿಶ್ವನಾಥ್ ತಿರುಗಿಬೀಳುತ್ತಿದ್ದಾರೆಂದರೆ, ಸರಕಾರ ಪತನಗೊಂಡರೂ ಓಕೆ ಎನ್ನುವ ನಿಲುವಿಗೆ ಜೆಡಿಎಸ್ ಬಂದಿದೆಯೋ ಎನ್ನುವುದು ಒಂದು ಕಾರಣ. ಇನ್ನೊಂದು..
ಎಚ್ ವಿಶ್ವನಾಥ್ ಮೂಲಕ ಸಿದ್ದರಾಮಯ್ಯನವರಿಗೆ ಎದಿರೇಟು
ಎಚ್ ವಿಶ್ವನಾಥ್ ಮೂಲಕ ಸಿದ್ದರಾಮಯ್ಯನವರಿಗೆ ಎದಿರೇಟು ನೀಡಿ, ಮುಂದಿನ ರಾಜಕೀಯ ವಿದ್ಯಮಾನಗಳನ್ನು ನೋಡೋಣ ಎನ್ನುವ ರಾಜಕೀಯ ನಿಲುವಿಗೆ ಗೌಡ್ರು-ಎಚ್ಡಿಕೆ ಬಂದಿದ್ದಾರಾ ಎನ್ನುವುದು ಇನ್ನೊಂದು ಆಯಾಮ. ಇದರಿಂದ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎನ್ನುವ ಕೂಗು ಅವರ ಆಪ್ತರಿಂದ ಕಮ್ಮಿಯಾಗಬಹುದಾ ಎನ್ನುವ ಲೆಕ್ಕಾಚಾರವೂ ಗೌಡ್ರದ್ದು ಇರಬಹುದು. ಗೌಡ್ರಾಗಲಿ, ಕುಮಾರಸ್ವಾಮಿಯಾಗಲಿ, ವಿಶ್ವನಾಥ್ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಅಥವಾ ವಿರೋಧಿಸುವ ಯಾವ ಹೇಳಿಕೆಯನ್ನು ಇದುವರೆಗೆ ಮಾಡಿಲ್ಲ.