ಶಿವನೇ! ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್ ನಲ್ಲಿ ಮತ್ತೆ ಶುರುವಾಯ್ತು ಲಿಂಗಾಯತ ಜಗಳ
ಉತ್ತರ ಕರ್ನಾಟಕ ಭಾಗದ ಪ್ರಭಾವಿ ಲಿಂಗಾಯತ ಮತ್ತು ಕಾಂಗ್ರೆಸ್ ಮುಖಂಡ ಶಾಮನೂರು ಶಿವಶಂಕರಪ್ಪ ನನಗೆ ತಂದೆ ಸಮಾನ ಎಂದು ಹೇಳುತ್ತಲೇ, ಗೃಹಸಚಿವ ಎಂ ಬಿ ಪಾಟೀಲ್, ಶಾಮನೂರು ಅವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಆರಂಭವಾದ ಈ ಇಬ್ಬರ ಜಗಳ, ದಾವಣಗೆರೆ ಮೂಲದ ಪ್ರತಿಷ್ಟಿತ ಬಾಪೂಜಿ ಶಿಕ್ಷಣ ಸಂಸ್ಥೆಯನ್ನು ಶಾಮನೂರು ಶಿವಶಂಕರಪ್ಪ 'ಅಡ್ಡದಾರಿ'ಯಿಂದ ಬೆಳೆಸಿದ ರೀತಿಯ ಬಗ್ಗೆ ಪಾಟೀಲ್ ವಿವರಿಸುವವರೆಗೆ ಬಂದು ನಿಂತಿದೆ.
ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಮಾನ್ಯ ಮಾಡುವಂತೆ, ಕರ್ನಾಟಕ ಸರ್ಕಾರವು ಸಲ್ಲಿಸಿದ್ದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು. ಅಲ್ಲಿಂದ, ಮತ್ತೆ ಈ ಇಬ್ಬರು ಮುಖಂಡರ ನಡುವೆ ಶೀತಲ ಸಮರ ಮುಂದುವರಿಯುತ್ತಲೇ ಇತ್ತು. ಅದು ಶನಿವಾರ-ಭಾನುವಾರದಂದು ಸ್ಫೋಟಿಸಿದೆ.
ಪ್ರತ್ಯೇಕ ಲಿಂಗಾಯತ ಧರ್ಮ ಶಿಫಾರಸ್ಸು ತಿರಸ್ಕಾರ, ಹೈಕೋರ್ಟಿಗೆ ಮಾಹಿತಿ
ಶಾಮನೂರು ಶಿವಶಂಕರಪ್ಪ ಬಹುದೊಡ್ಡ ಸ್ವಾರ್ಥಿ ಎಂದು ಎಂ ಬಿ ಪಾಟೀಲ್ ಜರಿದರೆ, ಅವನೊಬ್ಬ 'ಮಂಗ್ಯಾ' ಎಂದು ಶಾಮನೂರು ತಿರುಗೇಟು ನೀಡಿದ್ದಾರೆ. ಲಿಂಗಾಯತ ಧರ್ಮದ ಹೋರಾಟಕ್ಕೆ ಲಂಚದ ಹಣ ಬಳಕೆಯಾಗಿದೆ ಎಂದು ಶಾಮನೂರು ಟೀಕಿಸಿದ್ದರು.
ತಂದೆಯ ಸಮಾನವೆಂದು ಗೌರವಿಸುತ್ತೇನೆ
ನಾನು ಯಾವತ್ತೂ ಶಾಮನೂರು ಅವರನ್ನು ತಂದೆಯ ಸಮಾನರೆಂದು ಗೌರವಿಸುತ್ತೇನೆ. ಆದರೆ, ಅವರು ಮಾತನಾಡಿದ್ದನ್ನು ನೋಡಿದರೆ, ಅವರ ವ್ಯಕ್ತಿತ್ವವನ್ನು ಅವರೇ ಪ್ರದರ್ಶಿಸಿದ್ದಾರೆ. ಅವರ ಹೃದಯ ಸಂಕುಚಿತ ಸ್ವಭಾವದ್ದು. ಇನ್ನೊಬ್ಬರಿಗೆ ಸಹಾಯ ಮಾಡಿಲ್ಲ ಎನ್ನುವ ಶಾಮನೂರು ಅವರು ಬರೀ ತಮ್ಮ ಕುಟುಂಬವನ್ನು ಮಾತ್ರ ಬೆಳೆಸಿದವರು. ವಯಸ್ಸು ಮತ್ತು ಹಣದಲ್ಲಿ ಅವರು ಹಿರಿಯರು, ಆದರೆ ಬಹುದೊಡ್ಡ ಸ್ವಾರ್ಥಿ - ಎಂ ಬಿ ಪಾಟೀಲ್
ಸಂಪುಟ ವಿಸ್ತರಣೆ: ಕುಮಾರಸ್ವಾಮಿ ಸಂಪುಟದ ಒಟ್ಟಾರೆ ಜಾತಿ ಲೆಕ್ಕಾಚಾರ ಹೀಗಿದೆ
ಶಾಮನೂರು ಶಿವಶಂಕರಪ್ಪ
ನನ್ನ ಬೆಳವಣಿಗೆಯನ್ನು ಕಂಡು ಅವರಿಗೆ ಅಸೂಯೆ ಆಗಿದೆ. ಲಿಂಗಾಯತ ಹೋರಾಟ ಬೀದರ್ ನಲ್ಲಿ ಆರಂಭವಾದಾಗ ನಾನು ಅದರಲ್ಲಿ ಇರಲಿಲ್ಲ, ಬೆಳಗಾವಿಯಲ್ಲೂ ಇರಲಿಲ್ಲ. ಬಾಪೂಜಿ ಶಿಕ್ಷಣ ಸಂಸ್ಥೆಯ ಸೆಕ್ರೆಟರಿ ಆಗುವ ಮೊದಲು ಶಾಮನೂರು ಹೇಗಿದ್ದರು ಎನ್ನುವುದನ್ನು ಒಮ್ಮೆ ಸ್ಮರಿಸಿಕೊಳ್ಳಲಿ. ಗಿರಾಣಿ ಅಂಗಡಿ ಇಟ್ಟುಕೊಂಡು ಶಾಮನೂರು ಇದ್ದರು - ಎಂ ಬಿ ಪಾಟೀಲ್.
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು : ಸಚಿವ ಸಂಪುಟದ ನಿರ್ಣಯ
ಮೋಸದಿಂದ ಬಾಪೂಜಿ ಸಂಸ್ಥೆಯನ್ನು ತಮ್ಮದಾಗಿಸಿಕೊಂಡಿದ್ದಾರೆ
ಗಿರಾಣಿ ಅಂಗಡಿ ಇಟ್ಟುಕೊಂಡಿದ್ದಾಗ, ಅಲ್ಲಿ ಕೊಟ್ರೆ ಬಸಪ್ಪ ಅನ್ನುವವರು ಇದ್ದರು, ಅವರೇ ಬಾಪೂಜಿ ಸಂಸ್ಥೆಯನ್ನು ಬೆಳೆಸಿದಂತವರು, ಸಂಸ್ಥಾಪಿಸಿದವರು. ಕೊಟ್ರೆ ಬಸಪ್ಪ ವಿದೇಶಕ್ಕೆ ಹೋದಾಗ, ಅವರು ವಾಪಸ್ ಬರುವುದಿಲ್ಲ ಎಂದು ಎಲ್ಲರ ಬಳಿ ಸಹಿ ತೆಗೆದುಕೊಂಡು ಮೋಸದಿಂದ ಬಾಪೂಜಿ ಸಂಸ್ಥೆಯನ್ನು ಶಾಮನೂರು ತಮ್ಮದಾಗಿಸಿಕೊಂಡಿದ್ದಾರೆ - ಎಂ ಬಿ ಪಾಟೀಲ್.
ಶಾಮನೂರು ಕುಟುಂಬದ ಮರ್ಯಾದೆ ಹೋಗುತ್ತದೆ
ಮೋಸದಿಂದ ಪಡೆದುಕೊಂಡ ಬಾಪೂಜಿ ಸಂಸ್ಥೆಯ ಅಧಿಕಾರ, ಹಣ, ಅಮಲು ಅವರನ್ನು ಬಾಯಿಗೆ ಬಂದಂತೆ ಮಾತನಾಡಿಸುತ್ತಿದೆ. ನನ್ನ ಮೈಮೇಲೆ ತಂದೆಯ ರಕ್ತ ಹರಿಯುತ್ತಿದೆ, ನಾನು ಇನ್ನೂ ಹೆಚ್ಚು ಮಾತನಾಡಿದರೆ, ಶಾಮನೂರು ಕುಟುಂಬದ ಮರ್ಯಾದೆ ಹೋಗುತ್ತದೆ. ಯಾರಿಗೂ ಹೆದರುವಂತಹ ಸ್ವಭಾವ ನನ್ನದಲ್ಲ ಎಂದು ಎಂ ಬಿ ಪಾಟೀಲ್ ಕಿಡಿಕಾರಿದ್ದಾರೆ.
ಎಂ ಬಿ ಪಾಟೀಲ್ ಒಬ್ಬ ಮಂಗ
ಅವನೊಬ್ಬ ಸಣ್ಣ ಹುಡುಗ, ನಾನು ಅವರ ಹೆಸರನ್ನೇ ಎತ್ತಲಿಲ್ಲ. ಅವನೊಬ್ಬ ಮಂಗ, ಶತಮಾನಗಳ ಇತಿಹಾಸವಿರುವ ಲಿಂಗಾಯತ ಧರ್ಮದ ಬಗ್ಗೆ ಅವನಿಗೇನು ಗೊತ್ತು. ನಿನ್ನೆ ಮೊನ್ನೆ ಬಂದವನು ಅವನು, ಎಂ ಬಿ ಪಾಟೀಲ್ ಎಂದು ನಾನು ಅವನ ಹೆಸರು ಹೇಳಿದ್ದರೆ, ಅದಕ್ಕೆ ಅವನು ಕಮೆಂಟ್ ಮಾಡಬೇಕಿತ್ತು.