ಜೆಡಿಎಸ್ 'ಚಡ್ಡಿದೋಸ್ತ್'ಗಳ ಆಣೆ ಪ್ರಮಾಣದ ಪ್ರಹಸನ! ಅಕಟಕಟಾ..
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮತ್ತು ಜೆಡಿಎಸ್ ಬಂಡಾಯ ಶಾಸಕರಾದ ಜಮೀರ್ ಅಹಮದ್, ಚೆಲುವರಾಯಸ್ವಾಮಿ ನಡುವೆ ಆಣೆಪ್ರಮಾಣದ ವಾಕ್ಸಮರ ತಾರಕಕ್ಕೇರಿದೆ.
ಬಿಎಸ್ವೈ ಅಧಿಕಾರದ ಅವಧಿಯಲ್ಲಿ ಯಡಿಯೂರಪ್ಪ, ಕುಮಾರಸ್ವಾಮಿ, ಧರ್ಮಸ್ಥಳ ಮಂಜುನಾಥಸ್ವಾಮಿ, ಆಣೆಪ್ರಮಾಣ ಎನ್ನುವ ಪ್ರಹಸನ, ರಾಷ್ಟ್ರ ಮಟ್ಟದಲ್ಲಿ ರಾಜ್ಯಕ್ಕೆ ಎಂಥಾ ಭಯಂಕರ ಹೆಸರು ತಂದುಕೊಟ್ಟಿತ್ತು ಎನ್ನುವುದು ಈಗ ಇತಿಹಾಸ.
ಅಂದು ಎರಡು ಪಕ್ಷಗಳ ನಡುವೆ ನಡೆದಿದ್ದ ' ಆಣೆ ಪ್ರಮಾಣ' ಈಗ ಜೆಡಿಎಸ್ ಮತ್ತು ಆ ಪಕ್ಷದಿಂದ ಮಾನಸಿಕವಾಗಿ, ದೈಹಿಕವಾಗಿ, ಆರ್ಥಿಕವಾಗಿ ದೂರವಾಗಿರುವ ಬಂಡಾಯ ಶಾಸಕರ ನಡುವೆ ಗಿರಿಗಿಟ್ಲೆ ಆಡುತ್ತಿದೆ. ಅರ್ಥಾತ್, ಒಂದು ಕಾಲದ ಗಳಸ್ಯ ಕಂಠಸ್ಯ ಅಥವಾ ಪಕ್ಕಾ ಲೋಕಲ್ ಭಾಷೆಯಲ್ಲಿ ಹೇಳುವುದಾದರೆ ಚಡ್ಡಿದೋಸ್ತುಗಳ ನಡುವೆ. (ಬಂಡಾಯ ಶಾಸಕರ ವಿರುದ್ಧ ಎಚ್ಡಿಕೆ ವಾಗ್ದಾಳಿ)
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಜಮೀರ್ ಅಹಮದ್ ಮತ್ತು ಚೆಲುವರಾಯಸ್ವಾಮಿ ನಡುವಿನ ಬಾಂಧ್ಯವ್ಯ ಹೇಗಿತ್ತು, ಆ ಮೇಲೆ ಏನಾಯಿತು ಎನ್ನುವುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ಅಂದು ಕುಮಾರಣ್ಣನಿಗಾಗಿ ರಿಸಾರ್ಟಿಗೆ ಬಸ್ ಓಡಿಸಿದ್ದ ಜಮೀರ್ ಅವರಿಗೆ ಈಗ ಯಾವರೀತಿಯ ಸಿಟ್ಟಿದೆ ಅಂದರೆ ಬಸ್ಸನ್ನೇ ಪಕ್ಷದ ಮೇಲೆ ಹತ್ತಿಸುವಷ್ಟು.
ಅಲ್ಲಾನ ಮೇಲೆ ಪ್ರಮಾಣ ಮಾಡುತ್ತೇನೆ ಎಂದು ಒಬ್ಬರು ಹೇಳಿದರೆ, ಧರ್ಮಸ್ಥಳದ ದೇವರ ಮೇಲೆ ಪ್ರಮಾಣ ಮಾಡುತ್ತೇನೆ ಎಂದು ಇನ್ನೊಬ್ಬರು. ಜೊತೆಗೆ, ಕಾಲಭೈರವನ ಮೇಲೆ ಪ್ರಮಾಣ ಮಾಡಿ ಎಂದು ಮಗುದೊಬ್ಬರು. ಇದೆಲ್ಲವನ್ನೂ ಮೂಗಿನ ಮೇಲೆ ಬೆರಳು ಇಟ್ಟುಕೊಂಡು ನೋಡುತ್ತಿರುವ ದೊಡ್ದಗೌಡ್ರು ಸದ್ಯಕ್ಕೆ ಏನೂ ಕಾಮೆಂಟ್ ಮಾಡುತ್ತಿಲ್ಲ.
ದೇವೇಗೌಡ್ರು ನಮ್ಮ ನಾಯಕರು, ನಮ್ಮ ಸಿಟ್ಟು ಏನಿದ್ದರೂ ಕುಮಾರಸ್ವಾಮಿಯ ಮೇಲೆಯೇ ಹೊರತು ರೇವಣ್ಣನ ಮೇಲಾಗಲಿ, ಪಕ್ಷದ ಮೇಲಾಗಲಿ ಅಲ್ಲ ಎನ್ನುವ ಬಂಡಾಯ ಶಾಸಕರು ಮತ್ತು ಎಚ್ಡಿಕೆ ನಡುವೆ ಒಂದಲ್ಲಾ ಒಂದು ವಾಕ್ಸಮರಗಳು ನಡೆಯುತ್ತಲೇ ಇವೆ.
ರಾಜ್ಯಸಭಾ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಮಾಡಲು ಕುಮಾರಸ್ವಾಮಿಯೇ ಹೇಳಿದ್ದು, ಇದಕ್ಕಾಗಿ ಆಣೆ ಮಾಡಲೂ ಸಿದ್ದ ಎನ್ನುವ ಜಮೀರ್ ಹೇಳಿಕೆಯ ಮೂಲಕ 'ಆಣೆಪ್ರಮಾಣ'ದ ರಾಜಕೀಯ ಮತ್ತೊಂದು ಪುಟ ತಿರುವಿದೆ. ಮುಂದಿ ಓದಿ..
ಅಲ್ಲಾನ ಮೇಲೆ ಪ್ರಮಾಣ ಮಾಡುತ್ತೇನೆ
ರಾಜ್ಯಸಭಾ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಮಾಡಲು ಹೇಳಿದ್ದೇ ನಮಗೆ ಕುಮಾರಸ್ವಾಮಿ. ಇದಕ್ಕೆ ನಾನು ನನ್ನ ತಾಯಿಯ ಮೇಲಾಣೆ, ಅಲ್ಲಾನ ಮೇಲೂ ಪ್ರಮಾಣ ಮಾಡಲಿಕ್ಕೂ ಸಿದ್ದನಿದ್ದೇನೆ, ನೀವು ಆಣೆ ಮಾಡಲಿಕ್ಕೆ ಸಿದ್ದರಿದ್ದೀರಾ ಎಂದು ಜಮೀರ್ ಅಹಮದ್, ಎಚ್ಡಿಕೆಗೆ ಸವಾಲು ಹಾಕಿದ್ದರು.
ತಾಯಿಯ ಮೇಲೆ ನಂಬಿಕೆಯಿಲ್ಲದ ಜಮೀರ್
ಇದಕ್ಕೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ, ದೇವರ ಮೇಲೆ ಆಣೆ ಮಾಡಿ ಎನ್ನುವ ಜಮೀರ್, ಎಷ್ಟು ಸಲ ಅವರ ತಾಯಿ ಮೇಲೆ ಆಣೆ ಮಾಡಿದ್ದಾರೆ? ಅವರಿಗೆ ಹೆತ್ತ ತಾಯಿಯ ಮೇಲೆ ನಂಬಿಕೆ ಇಲ್ಲ. ಇನ್ನು ದೇವರ ಮೇಲೆ ನಂಬಿಕೆ ಬರಲು ಹೇಗೆ ಸಾಧ್ಯ. ನನ್ನನ್ನು ಹೆದರಿಸಿ ರಾಜಕೀಯ ಮಾಡುತ್ತೇನೆ ಎನ್ನುವ ಅವರ ಕನಸು ಈ ಜನ್ಮದಲ್ಲಿ ನನಸಾಗುವುದಿಲ್ಲ. ಜಮೀರ್ ರಾಜಕೀಯಕ್ಕೆ ಬಂದು ಏನೆಲ್ಲಾ ಮಾಡಿದ್ದಾರೆ, ಯಾವ ಕಾರಣಕ್ಕಾಗಿ ನನ್ನ ಜೊತೆ ಕೈ ಜೋಡಿಸಿದ್ದಾರೆ ಎನ್ನುವುದು ತಿಳಿದಿದೆ - ಕುಮಾರಸ್ವಾಮಿ.
ಚೆಲುವರಾಯಸ್ವಾಮಿ ಡಬಲ್ ಗೇಮ್
ನಾನು ಹದಿನೆಂಟು ತಿಂಗಳು ಅಧಿಕಾರದಲ್ಲಿದ್ದಾಗ, ಚೆಲುವರಾಯಸ್ವಾಮಿ ಎಷ್ಟು ಬಾರಿ ಯಡಿಯೂರಪ್ಪನವರನ್ನು ಭೇಟಿಯಾಗಿ ನನ್ನನ್ನು ಸಿಎಂ ಪಟ್ಟದಿಂದ ಕೆಳಗಿಳಿಸಲು ನೋಡಿದರು ಎನ್ನುವುದು ನನಗೆ ತಿಳಿದಿದೆ. ಚೆಲುವರಾಯಸ್ವಾಮಿ ಧರ್ಮಸ್ಥಳ ಮಂಜುನಾಥನ ಮುಂದೆ ಪ್ರಮಾಣ ಮಾಡಲು ಸಿದ್ದರಿದ್ದಾರಾ - ಕುಮಾರಸ್ವಾಮಿ ಪ್ರಶ್ನೆ.
ಎಲ್ಲಿಗೆ ಬಂದು ಬೇಕಾದರೂ ಪ್ರಮಾಣ ಮಾಡುತ್ತೇನೆ
ಇದಕ್ಕೆ ಉತ್ತರಿಸಿದ್ದ ಚೆಲುವರಾಯಸ್ವಾಮಿ, ನಾನು ಯಾವ ಕಾರಣಕ್ಕೂ ಡಬಲ್ ಗೇಂ ಆಡಿಲ್ಲ. ಇದನ್ನು ಮಂಜುನಾಥನ ಮುಂದೆ ಅಲ್ಲ, ಎಲ್ಲಿ ಬೇಕಾದರೂ ನಿಂತು ಪ್ರಮಾಣ ಮಾಡಬಲ್ಲೆ. ಬೇಕಿದ್ದಲ್ಲಿ, ಆದಿಚುಂಚನಗಿರಿ ಮಠದ ಕಾಲಭೈರವೇಶ್ವರನ ಸನ್ನಿಧಾನದಲ್ಲಿ ಕೈಯಲ್ಲಿ ಕರ್ಪೂರ ಹಿಡಿದುಕೊಂಡು ಪ್ರಮಾಣ ಮಾಡುತ್ತೇನೆ. ಕುಮಾರಸ್ವಾಮಿ ಕರೆದ ಸಮಯಕ್ಕೆ, ಸ್ಥಳಕ್ಕೆ ನಾನು ಹೋಗುತ್ತೇನೆಂದು ಚೆಲುವರಾಯಸ್ವಾಮಿ ಹೇಳಿದ್ದರು.
ಕುಮಾರಸ್ವಾಮಿ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಲಿ
ಕುಮಾರಸ್ವಾಮಿ ನನ್ನ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಲಿ. ಕುಮಾರಸ್ವಾಮಿ ಅನಾರೋಗ್ಯಕ್ಕೆ ಬಿದ್ದಾಗ ಅವರ ಜೊತೆಗೆ ಇದ್ದವನು ನಾನು. ನನ್ನ ವಿರುದ್ದ ಕುಮಾರಸ್ವಾಮಿ ಹೇಳಿಕೆ ನೀಡಿದರೆ, ಇನ್ನಷ್ಟು ಸತ್ಯವನ್ನು ಹೇಳಬೇಕಾಗುತ್ತದೆ. ನನ್ನ ತಂಟೆಗೆ ಬಂದರೆ ಕುಮಾರಸ್ವಾಮಿಗೆ ತೊಂದರೆ ಜಾಸ್ತಿ - ಚೆಲುವರಾಯಸ್ವಾಮಿ.