Breaking News: ಹೈಕಮಾಂಡ್ ಸಂದೇಶಕ್ಕೆ ನಾಳೆವರೆಗೂ ಕಾಯಿರಿ ಎಂದ ಸಿಎಂ!
ನವದೆಹಲಿ, ಜುಲೈ 25: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅಥವಾ ತಮ್ಮ ರಾಜೀನಾಮೆಗೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ಈವರೆಗೂ ಯಾವುದೇ ಸಂದೇಶವನ್ನು ನೀಡಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
Recommended Video
ಬೆಳಗಾವಿಯಲ್ಲಿ ನೆರೆಪೀಡಿತ ಪ್ರದೇಶಗಳ ವೀಕ್ಷಣೆ ಬಳಿಕ ಬೆಂಗಳೂರಿನ ಆಗಮಿಸಿದ ಸಿಎಂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನ ಕಾವೇರಿ ನಿವಾಸದ ಬಳಿ ಮಾತನಾಡಿದ ಅವರು, ಭಾನುವಾರ ರಾತ್ರಿ ಅಥವಾ ಸೋಮವಾರ ಬೆಳಗ್ಗೆ ಹೊತ್ತಿಗೆ ಹೈಕಮಾಂಡ್ ಈ ಕುರಿತು ಸಂದೇಶವನ್ನು ನೀಡುವ ಸಾಧ್ಯತೆಯಿದೆ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗಬೇಕೋ ಅಥವಾ ಬೇಡವೋ ಎನ್ನುವುದರ ಬಗ್ಗೆ ತಿಳಿದುಕೊಳ್ಳಲು ನಾಳೆಯವರೆಗೂ ಕಾದು ನೋಡಿರಿ. ಹೈಕಮಾಂಡ್ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಸೂಚಿಸಿದರೆ ಮುಂದುವರಿಯುತ್ತೇನೆ, ಇಲ್ಲದಿದ್ದರೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಬಿ ಎಸ್ ಯಡಿಯೂರಪ್ಪ ತಿಳಿಸಿದರು.
ಕೊನೆಯ ನಿಮಿಷದವರೆಗೂ ಕೆಲಸ ಮಾಡುತ್ತೇನೆ:
ರಾಜ್ಯದಲ್ಲಿ ಮುುಖ್ಯಮಂತ್ರಿ ಬದಲಾವಣೆ ವಿಚಾರ ಹೆಚ್ಚು ಚರ್ಚೆಯಾಗುತ್ತಿರುವುದರ ನಡುವೆ ಬಿ ಎಸ್ ಯಡಿಯೂರಪ್ಪ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿರುವುದು ಗೊತ್ತಾಗುತ್ತಿದೆ. ಇತ್ತೀಚಿಗಷ್ಟೇ ಬೆಂಗಳೂರು ನಗರ ಪ್ರದರ್ಶನ ನಡೆಸಿದ ಸಿಎಂ, ಭಾನುವಾರ ಬೆಳಗಾವಿಯಲ್ಲಿ ನೆರೆಪೀಡಿತ ಪ್ರದೇಶಗಳಲ್ಲಿ ವೀಕ್ಷಣೆ ಮಾಡಿದರು. ಈ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದು, ನಾನು ಮುಖ್ಯಮಂತ್ರಿ ಆಗಿರುವ ಕೊನೆಯ ಕ್ಷಣದವರೆಗೂ ಕೆಲಸ ಮಾಡುತ್ತಿರುತ್ತೇವೆ. ಆ ನಂತರದಲ್ಲಿ ಪಕ್ಷದ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.